ದಿನದ ಸುದ್ದಿ
ಬಾಬಾಸಾಹೇಬ್ ಅಂಬೇಡ್ಕರ್ರವರು 1956 ಅಕ್ಟೋಬರ್14 ರಂದು ಬೌದ್ಧರಿಗೆ ಬೋಧಿಸಿದ 22 ಪ್ರತಿಜ್ಞೆಗಳು
- ಮೂಲ: ಅಂಬೇಡ್ಕರ್
- ಕನ್ನಡಕ್ಕೆ: ರಘೋತ್ತಮ ಹೊ.ಬ
1. ನಾನು ಬ್ರಹ್ಮ, ವಿಷ್ಣು, ಮಹೇಶ್ವರ ಇವರುಗಳನ್ನು ದೇವರುಗಳು ಎಂದು ನಂಬುವುದಿಲ್ಲ, ಮತ್ತು ಅವರುಗಳನ್ನು ಪೂಜಿಸುವುದಿಲ್ಲ.
2. ನಾನು ರಾಮ ಮತ್ತು ಕೃಷ್ಣ ಇವರುಗಳನ್ನು ದೇವರುಗಳು ಎಂದು ನಂಬುವುದಿಲ್ಲ, ಮತ್ತು ಅವರುಗಳನ್ನು ಪೂಜಿಸುವುದಿಲ್ಲ.
3. ನಾನು ಗಣಪತಿ ಮತ್ತು ಗೌರಿ ಇವರುಗಳನ್ನು ದೇವರುಗಳು ಎಂದು ನಂಬುವುದಿಲ್ಲ, ಮತ್ತು ಅವರುಗಳನ್ನು ಪೂಜಿಸುವುದಿಲ್ಲ.
4. ನಾನು ದೇವರ ಅವತಾರಗಳ ಸಿದ್ಧಾಂತದಲ್ಲಿ ನಂಬಿಕೆ ಇಡುವುದಿಲ್ಲ.
5. ನಾನು ಬುದ್ಧ ವಿಷ್ಣುವಿನ ಅವತಾರ ಎಂಬುದನ್ನು ನಂಬುವುದಿಲ್ಲ.
6. ನಾನು ಯಾವುದೇ ಶ್ರಾದ್ಧ ಮತ್ತು ಪಿಂಡ ದಾನಗಳನ್ನು ಮಾಡುವುದಿಲ್ಲ.
7. ನಾನು ಬೌದ್ಧ ಧರ್ಮಕ್ಕೆ ಕೇಡು ತರುವ ಯಾವುದೇ ಕ್ರಿಯೆಗಳನ್ನು ಮಾಡುವುದಿಲ್ಲ.
8. ನಾನು ಬ್ರಾಹ್ಮಣರ ಮೂಲಕ ಯಾವುದೇ ಧಾರ್ಮಿಕ ಕ್ರಿಯೆಗಳನ್ನು ನಡೆಸುವುದಿಲ್ಲ.
9. ನಾನು ಮನುಷ್ಯರೆಲ್ಲ ಸಮಾನರು ಎಂಬುದನ್ನು ನಂಬುತ್ತೇನೆ.
10. ನಾನು ಸಮಾನತೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತೇನೆ.
11. ನಾನು ಬುದ್ಧರ ಅಷ್ಟಾಂಗ ಮಾರ್ಗವನ್ನು ಪಾಲಿಸುತ್ತೇನೆ.
12. ನಾನು ಬುದ್ಧರ ದಶ ಪಾರಮಿತ ತತ್ವಗಳನ್ನು ಅನುಸರಿಸುತ್ತೇನೆ.
13. ನಾನು ಎಲ್ಲಾ ಜೀವರಾಶಿಗಳ ಮೇಲೆ ಸಹಾನುಭೂತಿ ತೋರುತ್ತೇನೆ ಮತ್ತು ಅವುಗಳ ಮೇಲೆ ದಯೆ ಇಟ್ಟು ಅವುಗಳನ್ನು ಕಾಪಾಡುತ್ತೇನೆ.
14. ನಾನು ಕಳ್ಳತನ ಮಾಡುವುದಿಲ್ಲ.
15. ನಾನು ಸುಳ್ಳು ಹೇಳುವುದಿಲ್ಲ
16. ನಾನು ವ್ಯಭಿಚಾರ ಮಾಡುವುದಿಲ್ಲ
17. ನಾನು ಮದ್ಯಪಾನ ಮಾಡುವುದಿಲ್ಲ.
18. ನಾನು ಬೌದ್ಧ ಧರ್ಮದ ಮೂರು ಮೂಲಭೂತ ತತ್ವ (ಪ್ರಜ್ಞೆ, ಕರುಣೆ ಮತ್ತು ಮೈತ್ರಿ)ಗಳ ಸಮರಸವಾದ ಸಂಯೋಜನೆಯನ್ನು ಸಾಧಿಸಲು ಜೀವನ ಪೂರ ಯತ್ನಿಸುತ್ತೇನೆ.
19. ಈ ಮೂಲಕ ನಾನು ಮನುಕುಲದ ಏಳಿಗೆಗೆ ತಡೆಯಾಗಿರುವ, ಮನುಷ್ಯ ಮನುಷ್ಯರ ನಡುವೆ ಭೇದ ಎಣಿಸುವ, ನನ್ನನ್ನು ಕೀಳು ಎಂದು ಪರಿಗಣಿಸುವ ನನ್ನ ಹಳೆಯ ಧರ್ಮ ಹಿಂದೂ ಧರ್ಮವನ್ನು ತ್ಯಜಿಸುತ್ತಿದ್ದೇನೆ.
20. ಬೌದ್ಧ ಧರ್ಮವೇ ಸದ್ಧಮ್ಮ ಎಂಬುದನ್ನು ನಾನು ಸಂಪೂರ್ಣವಾಗಿ ನಂಬುತ್ತೇನೆ.
21. ಈ ಹಿನ್ನೆಲೆಯಲ್ಲೇ ಬೌದ್ಧ ಧರ್ಮವನ್ನು ಸ್ವೀಕರಿಸುತ್ತಿದ್ದೇನೆ ಮತ್ತು ಇದರಿಂದ ನನಗಿಂದು ಮರುಜನ್ಮ ಪಡೆದಂತೆ ಆಗಿದೆ.
22. ಒಟ್ಟಾರೆ ಇನ್ನು ಮುಂದೆ ನಾನು ಬುದ್ಧರ ಬೋಧನೆಯ ಪ್ರಕಾರ ನಡೆದುಕೊಳ್ಳುತ್ತೇನೆ ಎಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇನೆ.
ಸೂಚನೆ: ಇದನ್ನು ವಿಹಾರಗಳಲ್ಲಿ ಬೌದ್ಧ ಅನುಯಾಯಿಗಳು ಪ್ರತಿ ವಾರ ಪಠಣ ಮಾಡುವುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243