ಬಹಿರಂಗ
ಬಾಲಕ ಅಂಬೇಡ್ಕರರಿಗೆ ಕುಡಿಯಲು ನೀರು ಕೊಡದ ವ್ಯವಸ್ಥೆ
ಬಾಬಾಸಾಹೇಬ್ ಅಂಬೇಡ್ಕರರಿಗೆ ಅವರು ಶಾಲೆಯಲ್ಲಿ ಓದುತ್ತಿದ್ದಾಗ ಈ ದೇಶದ ವ್ಯವಸ್ಥೆ ಅವರಿಗೆ ಕುಡಿಯಲು ನೀರು ಕೊಡುತ್ತಿತ್ತೆ? ಯಾರಾದರೂ ಈ ಪ್ರಶ್ನೆ ಹಾಕಿಕೊಂಡಾಗ ಅವರಿಗೆ ದೊರೆಯುವ ಆಘಾತಕಾರಿ ಉತ್ತರ ಇಲ್ಲ ಎಂಬುದು!
ಹೌದು, ಸ್ವತಃ ಬಾಬಾಸಾಹೇಬ್ ಅಂಬೇಡ್ಕರ್ ರವರೇ ತಮ್ಮ ಆತ್ಮಕಥೆ “ವೀಸಾ ಪಡೆಯಲು ಕಾಯುತ್ತಾ ಇದ್ದೇನೆ…” ಕೃತಿಯಲ್ಲಿ ಇದನ್ನು ಹೇಳುತ್ತಾರೆ. ಬಾಬಾಸಾಹೇಬರ ಮಾತುಗಳನ್ನೆ ಇಲ್ಲಿ ದಾಖಲಿಸುವುದಾದರೆ “ನನಗೆ ತಿಳಿದಂತೆ ಶಾಲೆಯಲ್ಲಿ ನಾನು ಓದುತ್ತಿರಬೇಕಾದರೆ, ಸ್ಪೃಶ್ಯ ವರ್ಗದ ಮಕ್ಕಳಿಗೆ ಬಾಯಾರಿಕೆ ಆದಾಗ ಅವರು ಕುಡಿಯುವ ನೀರಿನ ನಲ್ಲಿ ಬಳಿ ಹೋಗಬಹುದಿತ್ತು ಮತ್ತು ನಲ್ಲಿಯನ್ನು ಓಪನ್ ಮಾಡಿ ನೀರು ಕುಡಿದು ತಮ್ಮ ಬಾಯಾರಿಕೆಯನ್ನು ತಣಿಸಿಕೊಳ್ಳಬಹುದಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಬೇಕಾಗಿದ್ದೆಂದರೆ ಶಿಕ್ಷಕರೋರ್ವರ ಅನುಮತಿಯಷ್ಟೆ”.
“ಆದರೆ ನನ್ನ ಪರಿಸ್ಥಿತಿ ಬೇರೆಯದೇ ಆಗಿತ್ತು. ನಾನು ನಲ್ಲಿಯನ್ನು ಮುಟ್ಟುವಂತಿರಲಿಲ್ಲ, ಸ್ಪೃಶ್ಯನೊಬ್ಬ ಅದನ್ನು ತೆರೆದು ನನಗೆ ಸಹಾಯ ಮಾಡಲಿಲ್ಲವೆಂದರೆ ನಾನು ನನ್ನ ಬಾಯಾರಿಕೆಯನ್ನು ತಣಿಸಿಕೊಳ್ಳಲು ಸಾಧ್ಯವೇ ಇರುತ್ತಿರಲಿಲ್ಲ. ಆದ್ದರಿಂದ(ನೀರು ಕುಡಿಯಲು) ನನ್ನ ವಿಷಯದಲ್ಲಿ ಶಿಕ್ಷಕರೋರ್ವರ ಅನುಮತಿಯಷ್ಟೇ ಸಾಲುತ್ತಿರಲಿಲ್ಲ, ಅದರ ಜೊತೆಗೆ ಶಾಲಾ ಜವಾನನು ಕೂಡ ನನ್ನ ಜೊತೆ ಇರಬೇಕಾಗುತ್ತಿತ್ತು. ಯಾಕೆಂದರೆ ಈ ಉದ್ದೇಶಕ್ಕೆ ಶಾಲಾ ಶಿಕ್ಷಕರು ಬಳಸುತ್ತಿದ್ದದ್ದು ಶಾಲಾ ಜವಾನನ್ನು ಮಾತ್ರ. ಅಕಸ್ಮಾತ್ ಶಾಲಾ ಜವಾನ ಸಿಗಲಿಲ್ಲವೆಂದರೆ ಕುಡಿಯಲು ನೀರಿಲ್ಲದೆ ನಾನು ಹಾಗೆ ಇರಬೇಕಾಗುತ್ತಿತ್ತು. ಈ ಪರಿಸ್ಥಿತಿಯನ್ನು ಒಟ್ಟಾರೆ ಒಂದು ಹೇಳಿಕೆಯಲ್ಲಿ ಹೇಳುವುದಾದರೆ “ಜವಾನ ಇಲ್ಲ, ನನಗೆ ಕುಡಿಯಲು ನೀರೇ ಇಲ್ಲ…”.
–ರಘೋತ್ತಮ ಹೊಬ
(ಆಧಾರ: ಇಂಗ್ಲಿಷ್ ಸಂ.12, ಪು.671)
ಸುದ್ದಿದಿನ.ಕಾಂ|ವಾಟ್ಸಾಪ್|9980346243