ದಿನದ ಸುದ್ದಿ

ಚಿತ್ರದುರ್ಗದ ತಮಟಕಲ್ಲು ಶಾಸನವು ಕನ್ನಡ ಸಾಹಿತ್ಯದ ಮೊದಲ ಪದ್ಯ : ಡಾ. ಜಯರಾಮಯ್ಯ

Published

on

ಸುದ್ದಿದಿನ,ದಾವಣಗೆರೆ : ಕನ್ನಡ ಶಾಸನಗಳನ್ನು ಡಾ.ಚಿದಾನಂದಮೂರ್ತಿಯವರು “ ಕನ್ನಡ ಸಾಹಿತ್ಯದ ತಲಕಾವೇರಿ “ಎಂದು ಕರೆಯುತ್ತಾ, ಕನ್ನಡ ಸಾಹಿತ್ಯ ಉಗಮವಾದದ್ದು ಶಾಸನಗಳಿಂದ ಎಂಬುದು ಅವರ ವಾದವಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ. ಜಯರಾಮಯ್ಯ ತಿಳಿಸಿದರು.

ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು 65ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡ ಅಂತರ್ಜಾಲ ಕನ್ನಡ ನುಡಿಹಬ್ಬ ಕಾರ್ಯಕ್ರಮದಲ್ಲಿ “ಕನ್ನಡ ಸಾಹಿತ್ಯಕ್ಕೆ ಪ್ರೇರಣೆಯಾದ ಶಾಸನಗಳು “ ಎಂಬ ವಿಷಯ ಕುರಿತು ಡಾ. ಜಯರಾಮಯ್ಯ ಶುಕ್ರವಾರ 13 ನೇ ದಿನದ ಉಪನ್ಯಾಸ ನೀಡಿದರು.

ಕ್ರಿಸ್ತಪೂರ್ವ 3ನೇ ಶತಮಾನದ ಬ್ರಹ್ಮಗಿರಿ ಶಾಸನ ಇದನ್ನು ಅಶೋಕನ ಶಾಸನ ಎಂದೇ ಕರೆಯಲಾಗುತ್ತದೆ. ಈ ಬ್ರಹ್ಮಗಿರಿ ಶಾಸನ ದಲ್ಲಿ ಕನ್ನಡದ ಮೊಟ್ಟಮೊದಲವನ್ನು ಗುರುತಿಸಬಹುದು. ಕನ್ನಡದ ಮೊಟ್ಟ ಮೊದಲ ಪದ “ ಇಸಿಲ್ಲ “‌.
ಕ್ರಿಸ್ತಪೂರ್ವ 300 ರಿಂದ 450 ರವರೆಗೆ ಹಲ್ಮಿಡಿ ಶಾಸನ ಸಿಗುವವರೆಗೂ 750 ವರ್ಷಗಳ ಇತಿಹಾಸದ ಮದ್ಯದಲ್ಲಿ ಅನೇಕ ಕನ್ನಡ ಪದಗಳನ್ನು ಗುರುತಿಸಬಹುದಾಗಿದೆ ಎಂದರು.

ಕವಿರಾಜಮಾರ್ಗ ಕೃತಿ ಸಿಗುವವರೆಗೂ ಕನ್ನಡ ಸಾಹಿತ್ಯ ರಚನೆಗೆ ಶಾಸನಗಳೇ ಪೂರಕ ದಾಖಲೆಗಳಾಗಿವೆ. ಕವಿರಾಜಮಾರ್ಗ ಲಕ್ಷಣ ಗ್ರಂಥವಾದರೆ, ವಡ್ಡಾರಾಧನೆ ಗದ್ಯಕೃತಿ. ಆದರೆ ಪಂಪನ ಆದಿಪುರಾಣ ವೇ ಕನ್ನಡದ ಮೊದಲ ಕಾವ್ಯ ಎಂದು ತಿಳಿಸಿದರು.

ಕನ್ನಡ ಸಾಹಿತ್ಯದ ದೃಷ್ಟಿಯಿಂದ ಕ್ರಿಸ್ತಪೂರ್ವ ಐದು ನೂರರ ಚಿತ್ರದುರ್ಗದ ತಮಟಕಲ್ಲು ಶಾಸನ, ಇದು ಕನ್ನಡ ಸಾಹಿತ್ಯದ ಮೊದಲ ಪದ್ಯ. ಎಂದೇ ಹೇಳಬಹುದಾಗಿದೆ.ಇದು ಕನಕಾರ್ಜುನಿವೃತ್ತ ದಲ್ಲಿರುವ ಪದವಾಗಿದ್ದು, ಗುಣಮಧುರ ಎಂಬ ವ್ಯಕ್ತಿಯನ್ನು ಹೊಗಳಿರುವ ಶಾಸನ ವಾಗಿದೆ ಎಂದು ಮಾಹಿತಿ ನೀಡಿದರು.

ಗುಣಮಧುರನ ಕುರಿತ ಪದ್ಯ ಹೀಗಿದೆ.

ಪಣಮಣಿಯಂತು ಭೋಗಿ, “ಪಣದೊಳ್ ಮಣಿ, ರಣಮುಖದೊಳ್ಳೆ ಕಾಲವನ್ ಅರಿಯುರ್ಕುಂ ಮನಿಂದೆ ಗುಣನ್ ಪ್ರಣಯಿ ಜನಕ್ಕೆ ಕಾಮನಸೀತೋತ್ಪಲವರ್ಣನವನ್ ಗುಣಮಧುರಾಂಕ ದಿವ್ಯ ಪುರುಷಮ್ ಪುರುಷ ಪ್ರವರನ್ “.

ಇದರ ಸಾರಾಂಶ ಹೀಗಿದೆ..

ಹಣೆಯಲ್ಲಿ ರತ್ನವನ್ನು ಧರಿಸಿದ ಆದಿಶೇಷ ನಂತೆ ಮಹಾಭೋಗಿಯಾದ, ಹಣೆಯಲ್ಲಿ ರತ್ನವನ್ನು ಧರಿಸಿರುವ ರಾಜನಾದರೂ ಬಿಲ್ಲಿನಂತೆ ಬಾಗುವ ವಿನಯಶಾಲಿ, ರಣರಂಗದಲ್ಲಿ ಯಮನಂತಿರುರುವವನು, ಶತ್ರುಗಳೂ ಸಹ ನಿಂದಿಸಲು ಸಾಧ್ಯವಿಲ್ಲದಂತಹ ಗುಣವುಳ್ಳವನು. ಪ್ರಣಯಿ ಗಳಿಗೆ ಮನ್ಮಥನಂತಿರುವನು, ಕಪ್ಪುಬಣ್ಣದವನೂ ಆದ ಗುಣಮಧುರಾಂಕನು ದಿವ್ಯ ಪುರುಷ ಹಾಗೂ ಪುರುಷ ಶ್ರೇಷ್ಠ ನೆಂದು ಗುಣಮಧುರನನ್ನು ಕನ್ನಡದ ಮೊದಲ ಪದ್ಯದಲ್ಲಿ ವರ್ಣಿಸಲಾಗಿದೆ ಎಂದು ತಿಳಿಸಿದರು.

ಈ ಪದ್ಯವು ಕನ್ನಡದ ಮೊಟ್ಟ ಮೊದಲ ಪ್ರಶಸ್ತಿ ಶಾಸನವು ಹೌದು.ಮೊದಲ ಶಾಸನ ಕಾವ್ಯವೂ ಹೌದು. ಕನ್ನಡದ ಮೊದಲ ಸಾಹಿತ್ಯ ಕಾವ್ಯವೂ ಹೌದು. ಕನ್ನಡದ ಮೊದಲ ಛಂದಸ್ಸಿನ ಪದ್ಯವೂ ಹೌದು. ಎಂದು ತಿಳಿಸಿದರು.
ಕಪ್ಪೆ ಅರಭಟ್ಟನ ಶಾಸನವನ್ನು ಉಲ್ಲೇಖಿಸುತ್ತ,
ಸಾಧುಗೆ ಸಾಧು, ಮಾಧುರ್ಯಂಗೆ ಮಾಧುರ್ಯಂ ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾಧವನೀತನ್ ಪೆರನಲ್ ಎಂದು ಬಣ್ಣಿಸಿದರು.

ಈ ತರಹದ ಪದ್ಯಗಳು ಮುಂದೆ ಕನ್ನಡ ಕವಿಗಳು ತಮ್ಮ ಕಾವ್ಯಗಳನ್ನು ರಚಿಸುವಲ್ಲಿ ಪ್ರೇರಣೆ ನೀಡಿವೆ ಎಂದು ಹೇಳಬಹುದಾಗಿದೆ. ಕ್ರಿಸ್ತಶಕ ಏಳುನೂರರ ನಂದಿಸೇನ ಪ್ರವರ ಮುನಿಯವರ ಪದ್ಯ, 971 ರ ಧಾರವಾಡದ ಸವಡಿ ಶಾಸನ, ಹೀಗೆ ಅನೇಕ ಶಾಸನಗಳನ್ನು ಉಲ್ಲೇಖಿಸುತ್ತಾ ಈ ಶಾಸನಗಳು ಕನ್ನಡ ಸಾಹಿತ್ಯ ರಚನೆಗೆ ಪ್ರೇರಣೆ ನೀಡುತ್ತಾ ಬಂದಿವೆ ಎಂದು ಡಾ. ಜಯರಾಮಯ್ಯ ನವರು ತಮ್ಮ ಉಪನ್ಯಾಸದ ಮೂಲಕ ತಿಳಿಸಿದರು.

ಅಧ್ಯಕ್ಷೀಯ ನುಡಿ ಗಳನ್ನಾಡಿದ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಯುತ ಬಿ. ವಾಮದೇವಪ್ಪ ನವರು, ಕನ್ನಡ ನಾಡಲ್ಲಿ ಅನೇಕ ಶಾಸನಗಳು ಪತ್ತೆಯಾಗಿವೆ. ಅದರಲ್ಲಿ ಮೊದಲಿಗೆ ಶಾತವಾಹನರು, ಕಂಚಿಯ ಪಲ್ಲವರು, ತಲಕಾಡಿನ ಸ್ಕಂದರು , ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ಹೊಯ್ಸಳರು, ವಿಜಯನಗರ ಅರಸರು, ಬಹಮನಿ ಸುಲ್ತಾನರು, ಕೆಳದಿಯ ಅರಸರು, ಹೈದರಾಲಿ ಟಿಪ್ಪೂ ಸುಲ್ತಾನರು ಅಷ್ಟೇ ಅಲ್ಲದೆ ಇನ್ನೂ ಅನೇಕರು ಆಡಳಿತ ನಡೆಸಿದ ಇತಿಹಾಸವಿದೆ.

ಅವರ ಕಾಲದಲ್ಲಿ ಅನೇಕ ಶಾಸನಗಳು ರಚನೆಯಾಗಿದ್ದು, ಶಾಸನಗಳು ಆ ಕಾಲದ ಇತಿಹಾಸವನ್ನು ತಿಳಿಯುವಲ್ಲಿ ನಮಗೆ ಸಹಕಾರಿಯಾಗಿವೆ. ಎಂದು ತಿಳಿಸುತ್ತಾ, ದಾವಣಗೆರೆ ಜಿಲ್ಲೆಯವರೇ ಆದ ಹೆಸರಾಂತ ಸಂಶೋಧಕರಾದ ಡಾ.ಚಿದಾನಂದಮೂರ್ತಿಯವರು ಸಂಶೋಧಿಸಿ ತಿಳಿಸಿದ ಶಾಸನ 7 ನೇ ಶತಮಾನದ್ದಾಗಿದ್ದು , ಬಾದಾಮಿಯ ಸಮೀಪದ ಸುತ್ತುಕೋಟೆ ಎಂಬ ಗ್ರಾಮದಲ್ಲಿ ದೊರೆತಿರುವ ಕಪ್ಪೆ ಅರಭಟ್ಟ ಶಾಸನ .

ಇನ್ನೂ ಅನೇಕ ಶಾಸನಗಳು,ನಮ್ಮ ಜಿಲ್ಲೆಯವರೇ ಆದ ಪ್ರೊ. ರಾಜಶೇಖರಪ್ಪ, ಸಂತೇಬೆನ್ನೂರಿನ ನಾಡಿಗ್, ದಾವಣಗೆರೆಯ ಡಾ. ಬುರುಡೆಕಟ್ಟೆ ಮಂಜಪ್ಪ, ಇನ್ನೂ ಅನೇಕರು ಅನೇಕ ಸಂಶೋಧನೆಗಳನ್ನು ಮಾಡಿದ್ದು, ಅವರ ಸಂಶೋಧನೆಗಳು ಕನ್ನಡ ಸಾಹಿತ್ಯಕ್ಕೆ ಬೆಳಕುಚೆಲ್ಲುವುಕ್ಕೆ ಪೂರಕವಾಗಿವೆ.

ಕನ್ನಡ ಶಾಸನಗಳು ಕನ್ನಡ ಸಾಹಿತ್ಯಕ್ಕೆ ಅನೇಕ ಕೊಡುಗೆ ಗಳನ್ನು ನೀಡಿವೆ. ಎಂದು ತಿಳಿಸುತ್ತಾ, ‘ಇತಿ’ ಎಂದರೆ ‘ಹೀಗೆ ‘ “ ಹಾಸ “ ಎಂದರೆ ‘ ಇತ್ತು ‘. ಅದರಂತೆ ಇತಿಹಾಸ ಹೇಗಿತ್ತು ಎಂದು ತಿಳಿಯುವುದೇ ಆಗಿದೆ. ಶಾಸನಗಳು ಕನ್ನಡ ಸಾಹಿತ್ಯದ ಅಧ್ಯಯನಕ್ಕೆ ಅಡಿಪಾಯ ಒದಗಿಸಿಕೊಟ್ಟಿವೆ ಎಂದರೆ ತಪ್ಪಾಗಲಾರದು. ಎಂದು ಹೇಳುತ್ತಾ ಕನ್ನಡದ ಎಲ್ಲಾ ಮನಸುಗಳಿಗೆ ಶುಭವನ್ನು ಕೋರುತ್ತಾ ತಮ್ಮ ಅಧ್ಯಕ್ಷೀಯ ನುಡಿಗಳನ್ನು ಆಡಿದರು.

ಆರಂಭದಲ್ಲಿ ಸೀತಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗ್ರಂಥಪಾಲಕ ರಾದ ಶ್ರೀಮತಿ ಅನ್ನಪೂರ್ಣ ಪಾಟೀಲ್ ರವರು ಸರ್ವರನ್ನು ಸ್ವಾಗತಿಸಿದರು.

ಸುಗಮ ಸಂಗೀತ ಕಾರ್ಯಕ್ರಮವನ್ನು ದಾವಣಗೆರೆ ನಗರದ ಜಾನಪದ ಕಲಾ ತಂಡದ ಖ್ಯಾತ ಸಂಗೀತಗಾರರು ಶ್ರೀಮತಿ ರುದ್ರಾಕ್ಷಿ ಬಾಯಿ ಪುಟ್ಟ ನಾಯಕ್ ಮತ್ತು ಸಂಗಡಿಗರು ಕನ್ನಡ ಹಾಡುಗಳನ್ನು ಹಾಡುವುದರ ಮೂಲಕವಾಗಿ ಸಂಗೀತಾಸಕ್ತರಿಗೆ, ಎಲ್ಲಾ ಕನ್ನಡ ಮನಸ್ಸುಗಳಿಗೆ ಕನ್ನಡದ ಕಂಪನ್ನು ಬೀರಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version