ದಿನದ ಸುದ್ದಿ

ಡಾ. ಎಂ.ಎಂ. ಕಲ್ಬುರ್ಗಿಯವರು ಮಾಡಿದ ತಪ್ಪಾದರೂ ಏನು..?

Published

on

  • ಆರ್.ರಾಮಕೃಷ್ಣ

ಗಸ್ಟ್, ಸೆಪ್ಟೆಂಬರ್ ತಿಂಗಳುಗಳು ಬಂದರೆ ವೈಚಾರಿಕತೆ, ವೈಜ್ಞಾನಿಕ ಮನೋಭಾವವನ್ನು ಪ್ರತಿಪಾದಿಸುವ ಮನಸ್ಸುಗಳಲ್ಲಿ ಒಂದು ಬಗೆಯ ವಿಷಾದಭಾವ ಆವರಿಸುತ್ತದೆ. ಈ ದಿನಗಳಲ್ಲಿ ಕೆಲವು ವ್ಯಕ್ತಿಗಳನ್ನು ನೆನಪಿಸಿಕೊಳ್ಳದೇ ಇರುವುದು ಸಾಧ್ಯವೇ ಇಲ್ಲ.

ಆಗಸ್ಟ್ 20, 2019 ರಂದು ಹತ್ಯೆಯಾದ ಮಹಾರಾಷ್ಟ್ರದ ಖ್ಯಾತ ವಿಚಾರವಾದಿ ಡಾ. ನರೇಂದ್ರ ದಾಬೋಲ್ಕರ್, ಖ್ಯಾತ ಬರಹಗಾರ, ಸಾಮಾಜಿಕ ಕಾರ್ಯಕರ್ತ ಗೋವಿಂದ ಪನ್ಸಾರೆ, ಆಗಸ್ಟ್ 30, 2015 ರಂದು ಹತ್ಯೆಯಾದ ನಮ್ಮಧೇ ಕರ್ನಾಟಕದ ಘನ ವಿದ್ವಾಂಸ ಡಾ. ಎಂ.ಎಂ. ಕಲ್ಬುರ್ಗಿ, ಸೆಪ್ಟೆಂಬರ್ 5, 2017 ರಂದು ಹತ್ಯೆಯಾದ ಕೋಮು ಸೌಹಾರ್ದ ಚಳುವಳಿಯ ಕಾರ್ಯಕರ್ತೆ, ಪತ್ರಕರ್ತೆ ಗೌರಿ ಲಂಕೇಶ್ ಇವರೇ ಈ ವ್ಯಕ್ತಿಗಳು.

ಈ ನಾಲ್ವರ ಹತ್ಯೆಗಳು ಬಹುತೇಕ ಒಂದೇ ರೀತಿಯಲ್ಲಿ ಆಗಿವೆ. ಸಂಚು ಮಾಡಿ, ಹೊಂಚುಹಾಕಿ ಈ ಚಿಂತಕರ, ಸಾಮಾಜಿಕ ಕಾರ್ಯಕರ್ತರ ದೇಹಗಳಿಗೆ ಗುಂಡು ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಎಲ್ಲ ಹತ್ಯೆಗಳೂ ಬಹುತೇಕ ಒಂದೇ ರೀತಿಯ ಕಾರಣಕ್ಕೇ ಆಗಿವೆ. ಇವರೆಲ್ಲರೂ ಸಮಾಜದಲ್ಲಿ ಬೇರೂರಿರುವ ಮೌಢ್ಯ, ಕಂದಾಚಾರ, ಜಾತಿತಾರತಮ್ಯ, ಅಸ್ಪೃಶ್ಯತೆಗಳನ್ನು ವಿರೋಧಿಸುತ್ತಿದ್ದರು. ಕೋಮುದ್ವೇಷವನ್ನು ನಿವಾರಿಸಿ ಸಮಾಜದಲ್ಲಿ ಸೌಹಾರ್ಧತೆಯನ್ನು ಸ್ಥಾಪಿಸಲು ಬಯಸಿದ್ದರು.

ಇತ್ತೀಚಿನ ವರ್ಷಗಳಲ್ಲಿ ನಮ್ಮ ಸಮಾಜದಲ್ಲಿ ವೈಚಾರಿಕತೆಯ ಮೇಲೆ, ಚಿಂತಕರು, ವಿಚಾರವಾದಿಗಳ ಮೇಲೆ ಹಲ್ಲೆಗಳು ಹೆಚ್ಚುತ್ತಿವೆ. ಅಸಹನೆ ತೀವ್ರವಾಗುತ್ತಿದೆ. ನಿರುದ್ಯೋಗ-ಬಡತನ ಮುಂತಾದ ಸಮಸ್ಯೆಗಳ ಕಾರಣದಿಂದ ಜನಸಾಮಾನ್ಯರಲ್ಲಿರುವ ಹೆಚ್ಚುತ್ತಿರುವ ಅತೃಪ್ತಿ, ಅಸಮಾಧಾನಗನ್ನು ಬಳಸಿಕೊಂಡು ಈ ಸಮಸ್ಯೆಗಳಿಗೆ ತಪ್ಪು ಕಾರಣಗಳನ್ನು ಮೂಲವೆಂದು ತೋರಿಸಿ ಅನ್ಯಮತ ದ್ವೇಷವನ್ನು ಪ್ರಚೋದಿಸಿ ಹಿಂಸಾಚಾರಕ್ಕೆ ಕುಮ್ಮಕ್ಕು ಕೊಡಲಾಗುತ್ತಿದೆ.

ಪ್ರಜಾಪ್ರಭುತ್ವದ ಮೂಲ ಅಡಿಪಾಯವಾದ ಮುಕ್ತ ಚಿಂತನೆ, ವೈಚಾರಿಕತೆಯ ಮೇಲೆ ಹಲ್ಲೆಗಳನ್ನು ಪ್ರಚೋದಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸೌಹಾರ್ದತೆ, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಚಿಂತಕರ ಹತ್ಯೆಗಳು ನಡೆದಿವೆ. ಈ ಮೇಲೆ ಹೇಳಲಾದ ಎಲ್ಲ ಹತ್ಯೆಗಳೂ ಇಂತಹ ವಿಕೃತ ಪ್ರಚೋಧನೆಯ ಪರಿಣಾಮವೇ ಆಗಿವೆ.

ಪತ್ರಿಕೆಗಳು, ದೂರದರ್ಶನ ಚಾನೆಲ್ ಮುಂತಾದವು ಸೇರಿದ ಸಮೂಹ ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯಲಾಗುತ್ತದೆ. ನಮ್ಮ ದೇಶದ ಸುಧೀರ್ಘ ಸ್ವಾತಂತ್ರ್ಯ ಹೋರಾಟದಲ್ಲಿ ಬೆಳೆದು ಬಂದ ನಮ್ಮ ದೇಶದ ಪ್ರತ್ರಿಕಾ ರಂಗವು ದೇಶದಲ್ಲಿ ಸಾಮಾಜಿಕ ನ್ಯಾಯದ ಪ್ರತಿಪಾದನೆಯಲ್ಲಿ, ಮೌಢ್ಯ-ಕಂದಾಚಾರಗಳ ವಿರುದ್ಧ ವೈಜ್ಞಾನಿಕ ಮನೋಭಾವನ್ನು ಹರಡುವಲ್ಲಿ, ವೈಚಾರಿಕತೆಯನ್ನು ಬೆಳೆಸುವಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತಾ ಬಂದಿವೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಗಣನೀಯ ಭಾಗದ ಸಮೂಹ ಮಾಧ್ಯಮಗಳ ಧೋರಣೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿದಲ್ಲಿ ಇದೇ ಮಾತನ್ನು ಹೇಳುವುದು ಸಾಧ್ಯವಿಲ್ಲ. ಇದೊಂದು ದುರದೃಷ್ಟಕರ ಬೆಳವಣಿಗೆ. ಡಾ. ಎಂ.ಎಂ. ಕಲ್ಬುರ್ಗಿಯವರ ಹತ್ಯೆಯಲ್ಲಿ ನಮ್ಮ ಪತಿಕಾ ಮಾಧ್ಯಮವು ಅತ್ಯಂತ ವೈಚಾರಿಕತೆಯನ್ನು, ಮಾಧ್ಯಮ ಪಾಲಿಸಲೇ ಬೇಕಾದ ನೈತಿಕತೆಯನ್ನು ಮರೆತು ಸುದ್ದಿ-ವಿಚಾರಗಳನ್ನು ತಪ್ಪು, ತಪ್ಪಾಗಿ, ವಿಕೃತವಾಗಿ ಬಿಂಬಿಸಿದ್ದು ಒಂದು ಕಾರಣ ಎಂದು ನಾವು ಬಹಳ ವಿಷಾದದಿಂದ ಗಮನಿಸಬೇಕಾಗಿದೆ.

ಕಲ್ಬುರ್ಗಿಯವರ ಹತ್ಯೆಗೆ ಕಾರಣವಾದ ಅಂಶಗಳನ್ನೇ ನಾವು ಒಮ್ಮೆ ಪರಿಶೀಲಿಸೋಣ. ಬೆಂಗಳೂರಿನ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಭಾಂಗಣದಲ್ಲಿ ಅಖಿಲ ಕರ್ನಾಟಕ ವಿಚಾರವಾದಿಗಳ ವೇದಿಕೆಯು ಸಂಘಟಿಸಿದ್ದ, ವೈಚಾರಿಕತೆಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಕಲ್ಬುರ್ಗಿಯವರು ಡಾ.ಯು.ಆರ್. ಅನಂತ ಮೂರ್ತಿಯವರ ಬರಹದಲ್ಲಿ ಪ್ರಸ್ತಾಪವಾಗಿರುವ ವಿಚಾರವೊಂದನ್ನು ಸಾಂದರ್ಭಿಕವಾಗಿ ಪ್ರಸ್ತಾಪಿಸಿದರು.

`ಬೆತ್ತಲೆ ಫೂಜೆ ಏಕೆ ಕೂಡದು’ ಎಂಬ ಅನಂತಮೂರ್ತಿಯವರ ಪುಸ್ತಕದಲ್ಲಿ `ನನ್ನನ್ನು ಬೆಳಸಿದ ಕರ್ನಾಟಕ’ ಎಂಬ ಲೇಖನವೊಂದಿದೆ. ಅದರಲ್ಲಿ ಸ್ವಾತಂತ್ರ್ಯಪೂರ್ವದ ಆ ಕಾಲಘಟ್ಟದಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಬೆಳೆದ ಆನಂತ ಮೂರ್ತಿಯವರು ತಮ್ಮ ಬಾಲ್ಯಕಾಲದ ಸಾಮಾಜಿಕ ಪರಿಸರವನ್ನು ವಿವರಿಸುತ್ತಾ, ದಟ್ಟ ಸಾಂಪ್ರದಾಯಿಕ ಸಮಾಜದಲ್ಲಿನ ಅನುಭವಗಳು, ಅಂತಹ ಸನ್ನಿವೇಶದಲ್ಲಿ ಶಿವರಾಮ ಕಾರಂತರ ಚೋಮನದುಡಿ, ಕುವೆಂಪು ಅವರ ಸಾಹಿತ್ಯ ಕೃತಿಗಳು, ತಂದೆಯವರು ತರಿಸುತ್ತಿದ್ದ ಮಹಾತ್ಮ ಗಾಂಧಿಯವರ ಸಂಪಾದಕತ್ವದ `ಹರಿಜನ’ ಪತ್ರಿಕೆಯ ಓದು, ಶಾಂತವೇರಿ ಗೋಪಾಲಗೌಡರ ವಿಚಾರಗಳು ಮುಂತಾದ ನಾನಾ ಪ್ರಭಾವಗಳಿಂದ ಹೊಸ ಚಿಂತನೆಗೆ ಮನಸ್ಸನ್ನು ತೆರೆದುಕೊಂಡದ್ದು, ಆ ಕಾಲಘಟ್ಟದಲ್ಲಿ ಹಲವು ಬಗೆಯ ಗೊಂದಲಗಳು ಅವರನ್ನು ಕಾಡಿದ್ದು ಎಲ್ಲವನ್ನು ವಿವರಿಸುತ್ತಾರೆ.

ಕರಾವಳಿಯಿಂದ ಬಂದ ಕಲಾವಿದರ ಯಕ್ಷಗಾನ, ತುಳುವರ ಕೋಲ ಇತ್ಯಾದಿಗಳ ಮೂಲಕ ಪುರಾಣ ಕಥಾನಕಗಳನ್ನು ನೋಡುತ್ತಾ, ಕೇಳುತ್ತಾ ಬೆಳೆಯುತ್ತಿದ್ದ ಕಾಲಘಟ್ಟದಲ್ಲಿ.., ಸುತ್ತ ಮುತ್ತಲ ಮರ, ಕಲ್ಲು, ನದಿ ಎಲ್ಲವೂ ಪವಿತ್ರ ಎಂಬಂತಹ ನಂಬಿಕೆಯಿದ್ದ ಪರಿಸರದಲ್ಲಿ…. ತಮ್ಮನ್ನು ತಾವು `ನಿರ್ ಪುರಾಣೀಕರಿಸಿಕೊಳ್ಳುವ’ ನಿಟ್ಟಿನಲ್ಲಿ, `ಏನಾದರೂ ತೀರಾ ಅಸಹಜವಾದದ್ದನೋ ಮಾಡಿ, ಕಲ್ಲು ಎನ್ನುವುದು ಬರಿ ಕಲ್ಲು- ಮರ ಎಂದರೆ ಮರ ಎಂದು ನನ್ನನ್ನು ನಾನು ನಂಬಿಸಿಕೊಳ್ಳುವುದು ಆಗಬೇಕಿತ್ತು’ ಅದಕ್ಕಾಗಿ, `ಜನರು ಬಹಳ ಪ್ರಭಾವಶಾಲಿ ಎಂದು ನಂಬುತ್ತಿದ್ದ ಮರದಡಿಯ ಭೂತದ ಕಲ್ಲೊಂದರ ಮೇಲೆ ಗುಟ್ಟಾಗಿ ಮೂತ್ರ ಮಾಡಿದೆ.’ ಎಂದು ಬರೆದುಕೊಂಡಿದ್ದಾರೆ. ಆನಂತರ `ಏನು ಶಿಕ್ಷೆ ಕಾದಿದೆಯೋ ಎಂದು ದಿಗಿಲಿನಲ್ಲೇ ಹಲವಾರು ದಿನಕಳೆದೆ’ ಎಂದೂ ಅವರು ಹೇಳಿಕೊಂಡಿದ್ದಾರೆ.

ತಮ್ಮ ಬಾಲ್ಯಕಾಲದಲ್ಲಿ, ಎಲ್ಲರಿಗೂ ಸಹಜವಾದ ಅಪಕ್ವ ಮನಸ್ಥಿತಿಯಲ್ಲಿ…, ಮನಸ್ಸು ವೈಚಾರಿಕತೆಗೆ ತೆರೆದುಕೊಳ್ಳುವ ಕಾಲಘಟ್ಟದಲ್ಲಿನ ಗೊಂದಲದ ಮನಸ್ಥಿತಿಯಲ್ಲಿ ತಾವು ಮಾಡಿದ ಕೆಲಸವೊಂದರ ಬಗೆಗೆ ಅನಂತಮೂರ್ತಿಯವರು ಹೇಳಿಕೊಂಡಿದ್ದಾರೆ. ಲೇಖನದಲ್ಲಿ ಅನಂತಮೂರ್ತಿಯವರು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿಲ್ಲ. ಅವರು ಸಮರ್ಥಿಸಿಕೊಳ್ಳುವಂಥವರೂ ಅಲ್ಲ.

ಚಳುವಳಿಕಾರರು ತಮ್ಮ ಹಲವಾರು ಪ್ರತಿಭಟನೆಗಳನ್ನು ನಡೆಸುವಾಗ ಸಾಂಕೇತಿಕ ಪ್ರತಿಭಟನೆಯ ಭಾಗವಾಗಿ ಹಲವು ವ್ಯಕ್ತಿಗಳ `ಭೂತದಹನ’ ಮಾಡುವುದು ತುಂಬಾ ಸಾಮಾನ್ಯ. ಆದರೆ ಅನಂತ ಮೂರ್ತಿಯವರು ಇಂತಹ ಸಾಂಕೇತಿಕ ಭೂತದಹನವನ್ನು ಸಹ ವಿರೋಧಿಸುತ್ತಿದ್ದವರು ಎಂಬುದನ್ನು ನಾವು ಗಮನಿಸಬೇಕು. ಇನ್ನೂ ಜನಸಾಮಾನ್ಯರು ಭಕ್ತಿಯಿಂದ ಗೌರವಿಸುವ ದೇವರನ್ನು ಅಪಮಾನಿಸುವುದನ್ನ ಸಮರ್ಥಿಸುವರೇ ? ಸಾರ್ವಜನಿಕ ಸಮಾರಂಭದಲ್ಲಿ ಸಾಂದರ್ಭಿಕವಾಗಿ ಈ ವಿಚಾರವನ್ನು ಪ್ರಸ್ತಾಪಿಸಿದ ಕಲ್ಬುರ್ಗಿಯವರೂ ಸಹ ಅನಂತ ಮೂರ್ತಿಯವರ ಈ ಕೆಲಸವನ್ನು ಸಮರ್ಥಿಸಲಿಲ್ಲ ಎಂಬುದನ್ನು ಸಹ ಗಮನಿಸಬೇಕು.

ಆದರೆ ಕೆಲವು ಪತ್ರಿಕೆಗಳಲ್ಲಿ ಸಮಯ, ಸಂದರ್ಭದ ಯಾವ ಹಿನ್ನೆಲೆ ಮುನ್ನೆಲೆಯನ್ನು ಗಮನಕ್ಕೆ ತೆಗೆದುಕೊಳ್ಳದೇ, ಮಾತಿನ ಸರಿಯಾದ ಅರ್ಥವನ್ನು ಬಿಂಬಿಸದೇ, ಅನಂತಮೂರ್ತಿಯವರು ದೇವರ ಮೂರ್ತಿಯ ಮೇಲೆ ಮೂತ್ರ ಮಾಡಿದ್ದಾಗಿ ಬರೆದುಕೊಂಡಿದ್ದಾರೆ ಎಂಬಂತೆ ಮತ್ತು ಕಲ್ಬುರ್ಗಿಯವರು ಅದನ್ನು ಸಮರ್ಥಿಸಿ ಇಂಥ ಪ್ರಯೋಗ ನಡೆಸಲು ಕರೆ ನೀಡಿದ್ದಾರೆ ಎಂಬಂತೆ ಬಿಂಬಿಸಲಾಯಿತು. ಕಲ್ಬುರ್ಗಿಯವರಿಗೆ `ಹಿಂದೂ ವಿರೋಧಿ’ ಎಂಬ ಹಣೆಪಟ್ಟಿ ಹಚ್ಚಲಾಯಿತು.

ನಂತರ ನಡೆದ ದುರಂತ ಈಗ ಎಲ್ಲರಿಗೂ ತಿಳಿದದ್ದು. ಅನಂತ ಮೂರ್ತಿಯವರ ಬರಹ ವಿಚಾರವನ್ನು ನಾವು ಒಪ್ಪಬಹುದು ಅಥವಾ ಒಪ್ಪದೇ ಇರಬಹುದು. ಕಲ್ಬುರ್ಗಿಯವರ ಮಾತು, ವಿಚಾರಗಳನ್ನು ನಾವು ಒಪ್ಪಬಹುದು ಒಪ್ಪದಿರಬಹುದು. ಆದರೆ ಆ ಕಾರಣಕ್ಕಾಗಿ ಒಬ್ಬ ಘನ ವಿದ್ವಾಂಸನ ಕೊಲೆಯನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲಾಗದು. ಇದಕ್ಕೆ ಕಾರಣವಾದ ಮಾಧ್ಯಮಗಳ ಪಾತ್ರವನ್ನೂ ಮರೆಯಲಾಗದು.

ಕೊನೆಯಲ್ಲಿ ಒಂದು ವಿಷಯ ಗಮನಿಸಬೇಕು. ಕಲ್ಬುರ್ಗಿಯವರು ನಾಸ್ತಿಕರಾಗಿರಲಿಲ್ಲ. ಅವರು ಆಸ್ತಿಕರಾಗಿದ್ದರು. ದೇವರಲ್ಲಿ ನಂಬಿಕೆ ಇಟ್ಟವರಾಗಿದ್ದರು. ಮತಾಂಧತೆ, ವಿವೇಕ ಹೀನ ದ್ವೇಷ ಒಬ್ಬ ಅಪರೂಪದ ಸಂಶೋಧಕನ ಹತ್ಯೆಗೆ ಕಾರಣವಾಗಿದ್ದು ಮಾತ್ರ ದುರಂತ. ಇಂತಹ ದುರಂತಗಳು ಮತ್ತೆ ಸಂಭವಿಸದಂತಹ ಎಚ್ಚರಿಕೆಯನ್ನು ಎಲ್ಲರೂ ವಹಿಸಬೇಕು. ಭಿನ್ನಾಭಿಪ್ರಾಯಗಳಿದ್ದಲ್ಲಿ ಆರೋಗ್ಯಕರ ಟೀಕೆ-ಸಂವಾದಗಳ ಮೂಲಕ ಅದನ್ನು ಬಗೆಹರಿಸಿಕೊಳ್ಳಲು ಅವಕಾಶ ನೀಡುವ ಪ್ರಜಾಪ್ರಭುತ್ವ ಮೌಲ್ಯಗಳು ಉಳಿಯಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version