ದಿನದ ಸುದ್ದಿ
ಜಮೀನು ಮುಳುಗಡೆ: ಎಫ್ಬಿಯಲ್ಲಿ ಸದ್ದು ಮಾಡಿದ ಯುವ ರೈತನ ದನಿ
ಸುದ್ದಿದಿನ ಡೆಸ್ಕ್: ನಂಜನಗೂಡು ತಾಲೂಕಿನ ಸುತ್ತೂರಿನ ರೈತನೊಬ್ಬ ಫೇಸ್ಬುಕ್ನಲ್ಲಿ ದಿನದ ಹಿಂದಷ್ಟೆ ಶೇರ್ ಮಾಡಿರುವ ವಿಡಿಯೊ ವೈರಲ್ ಆಗಿದೆ.
ಸುತ್ತೂರಿನ ರೈತ ರವಿ ಎಂಬಾತ ತಮ್ಮ ಮುಳುಗಡೆಯಾಗಿರುವ ಜಮೀನಿನಲ್ಲಿ ಭತ್ತದ ಬೆಳೆ ಹಾಳಾಗಿರುವುದನ್ನು ವಿಡಿಯೊದಲ್ಲಿ ತೋರಿದ್ದಾರೆ. ಕಬಿನಿ ಜಲಾಶಯ ತುಂಬಿರುವುದರಿಂದ ನೀರನ್ನು ಬಿಡುಗಡೆ ಮಾಡಿದ್ದು, ಇದರ ಪರಿಣಾಮವಾಗಿ ಸತ್ತೂರಿನಲ್ಲಿರುವ ರವಿ ಅವರ ಜಮೀನು ಸೇರಿದಂತೆ ಸುತ್ತಮುತ್ತಲಿರುವ ಕೃಷಿ ಭೂಮಿ ಮುಳುಗಡೆಯಾಗಿದೆ.
ಕಳೆದ ಆರು ತಿಂಗಳಿಂದ ಕಷ್ಟ ಪಟ್ಟು ಬೆಳೆದಿದ್ದ ಭತ್ತ, ಇನ್ನು ಹತ್ತು ದಿನವಾದರೆ ರೈತರ ಕೈಗೆ ಬರುತ್ತಿತ್ತು. ಆದರೆ, ನೀರು ಬಿಡುಗಡೆ ಮಾಡಿದ ಪರಿಣಾಮ ಬೆಳೆಯೆಲ್ಲ ಸಂಪೂರ್ಣ ಹಾಳಾಗಿದೆ ಎಂದು ರವಿ ಅವರು ವಿಡಿಯೊದಲ್ಲಿ ವಿವರಿಸಿದ್ದಾರೆ. ಈ ವಿಡಿಯೊ ಸರಕಾರವನ್ನು ತಲುಪುವವರೆಗೆ ಶೇರ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.