ದಿನದ ಸುದ್ದಿ

ಆತ್ಮ ನಿರ್ಭರ ಯೋಜನೆಯಡಿಯಲ್ಲಿ ಮೀನುಗಾರರಿಗೆ ಆರ್ಥಿಕ ನೆರವು : ಸಚಿವ ಎಸ್. ಅಂಗಾರ

Published

on

ಸುದ್ದಿದಿನ,ರಾಯಚೂರು : ಜಿಲ್ಲೆಯಲ್ಲಿ ದೊರೆಯುವ ಉತ್ತಮ ನೀರು ಬಳಸಿಕೊಂಡು ಭತ್ತ ಹಾಗೂ ಮೀನು ಕೃಷಿ ಮಾಡಿ ರೈತರು ಆರ್ಥಿಕವಾಗಿ ಸದೃಢರಾಗಬೇಕು. ಅಲ್ಲದೆ ಮೀನು ಒಂದು ಪೌಷ್ಟಿಕ ಆಹಾರವಾಗಿದ್ದು, ಇದರಿಂದ ಸುಮಾರು 19 ವಿವಿಧ ಆಹಾರ ಉತ್ಪಾದನೆಗಳನ್ನು ಮಾಡಬಹುದಾಗಿದೆಂದು ಮೀನುಗಾರಿಕೆ, ಬಂದರು, ಒಳನಾಡು ಜಲ ಸಾರಿಗೆ ಸಚಿವ ಎಸ್. ಅಂಗಾರ ಅವರು ಹೇಳಿದರು.

ಅವರು ಏ.19ರ ಮಂಗಳವಾರ ದಂದು ನಗರದ ಯರಮರಸ್ ಹೊರವಲಯದ ಸರ್ಕಿಟ್ ಹೌಸ್‌ನಲ್ಲಿ ಮೀನುಗಾರಿಕೆ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಇತ್ತೀಚೆಗೆ ಸಿರಗುಪ್ಪ ತಾಲೂಕಿನಲ್ಲಿ ಮೊದಲ ಮೀನು ಮಾರುಕಟ್ಟೆ ಪ್ರಾರಂಭಿಸಿದ್ದು, ಕೃಷಿ ಹೊಂಡ, ಮೀನಿನ ಕೆರೆ, ಬಂಜರು ಭೂಮಿ, ಸವಳು ಭೂಮಿಯಲ್ಲಿ ಭತ್ತದ ಬೆಳೆ ಜತೆ ಮೀನುಗಾರಿಕೆ ಕೃಷಿ ಅಳವಡಿಸಿಕೊಂಡರೆ ರೈತರು ಹೆಚ್ಚಿನ ಲಾಭಗಳಿಸಬಹುದಾಗಿದೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು ಆತ್ಮ ನಿರ್ಭರ ಯೋಜನೆ ಮೂಲಕ ಆನೇಕ ಗುಂಪು ರಚಿಸಿ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ನೀಡುತ್ತಿದ್ದಾರೆ. ಯುವಕರು ಸ್ವಯಂ ಉದ್ಯೋಗ ಕೈಗೊಳ್ಳಬೇಕು, ಕರಾವಳಿ ಭಾಗದ 327ಕಿ.ಮೀ, ಒಳನಾಡಿನ ಭಾಗದ ಮೀನುಗಾರರ ಸಮಸ್ಯೆ ಪರಿಶೀಲಿಸಿ ಇಲಾಖೆಯಿಂದ ಮತ್ತು ನಿಗಮದಿಂದ ಆನೇಕ ಸೌಲಭ್ಯಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಬಡವರು, ಮಧ್ಯಮ ವರ್ಗದವರು ಮೀನುಗಾರಿಕೆಯಲ್ಲಿ ತೊಡಗಿ ಬದುಕು ರೂಪಿಸಿಕೊಳ್ಳಬೇಕು. ಸುಸಜ್ಜಿತ ಮೀನು ಮಾರುಕಟ್ಟೆಯಲ್ಲಿ ಮೀನಿನ ಗುಣಮಟ್ಟ ಕಾಪಾಡಲು ಕೊಲ್ಡ್ ಸ್ಟೋರೇಜ್ ಘಟಕ, ವ್ಯಾಪಾರಿಗಳಿಗೆ ವಿಶ್ರಾಂತಿ ಘಟಕ, ಮೀನಿನ ದುರಸ್ತಿ ಘಟಕ, ಕಾಪಾಡಲು ಅಭಿವೃದ್ಧಿ ನಿಗಮದಿಂದ ಅನೇಕ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.

ಇಲಾಖೆಯ ಉದ್ದೇಶ

ಮೀನುಗಾರಿಕೆ ಇಲಾಖೆಯ ಮುಖ್ಯ ಉದ್ದೇಶ ಮೀನು ಸಂಪತ್ತನ್ನು ಅಭಿವೃದ್ಧಿ ಪಡಿಸುವುದು, ಉತ್ಪಾದಿಸಿದ ಮೀನು ಮರಿಗಳನ್ನು ಹೆಚ್ಚಿನ ನೀರಿನ ಪ್ರಮಾಣ ಇರುವ ಕೆರೆಗಳಿಗೆ ಬಿತ್ತನೆ ಮಾಡುವುದು, ಹೆಚ್ಚಿನ ಮೀನು ಉತ್ಪಾದನೆಗೆ ತಾಂತ್ರಿಕ ಸಲಹೆ ನೀಡಿ ಮೀನು ಸಾಕಾಣಿಕೆ ಮಾಡಲು ಪ್ರೇರೆಪಿಸುವುದು ಮತ್ತು ಮೀನುಗಾರರ ಸಹಕಾರ ಸಂಘಗಳ ಸದಸ್ಯರಿಗೆ ಇಲಾಖಾ ಸೌಲಭ್ಯಗಳನ್ನು ನೀಡಿ ಅವರ ಆರ್ಥಿಕ ಮಟ್ಟ ಸುಧಾರಿಸುವುದಾಗಿದ್ದು, ಜಿಲ್ಲೆಯಲ್ಲಿ 17,089 ಮೀನುಗಾರರ ಸಂಖ್ಯೆ ಇದ್ದು, ಅವರಲ್ಲಿ 4,797 ಖಾಯಂ ವೃತ್ತಿಯಲ್ಲಿ ತೊಡಗಿದ ಮೀನುಗಾರರಾಗಿದ್ದಾರೆ.

ಜಿಲ್ಲೆಯಲ್ಲಿ 23ಮೀನುಗಾರರ ಸಹಕಾರ ಸಂಘಗಳಿದ್ದು, ಸಂಘಗಳಲ್ಲಿ 3,248 ಮೀನುಗಾರರು ಸದಸ್ಯತ್ವವನ್ನು ಹೊಂದಿದ್ದಾರೆ. ಅವರಲ್ಲಿ ಪರಿಶಿಷ್ಟ ಜಾತಿ ಸದಸ್ಯರು 702 ಪರಿಶಿಷ್ಟ ಪಂಗಡ ಸದಸ್ಯರು 616 ಒಳಗೊಂಡಿದೆ ಎಂದರು.

ಜಿಲ್ಲೆಯಲ್ಲಿ 244 ಸಣ್ಣ ಕರೆಗಳು: ಜಿಲ್ಲೆಯಲ್ಲಿ ಒಟ್ಟು 244ಸಣ್ಣ ಕೆರೆಗಳಿದ್ದು, ಈ ಕೆರೆಗಳ ಜಲವಿಸ್ತೀರ್ಣ 1135.12 ಹೊಂದಿದೆ. ಕೆರೆಗಳ ಭರ್ತಿಯನ್ನು ನೋಡಿ ಮೀನುಗಾರಿಕೆ ಅಭಿವೃದ್ಧಿ ಮಾಡಲಾಗುತ್ತಿದೆ. ಮೀನು ಸಾಕಾಣಿಕೆಗಾಗಿ ದೊಡ್ಡ ಕೆರೆಗಳಲ್ಲಿ ನೀರು ಅನುಕೂಲವಾಗಿರುತ್ತದೆ. ಇನ್ನುಳಿದ ಸಣ್ಣ ಕೆರೆಗಳಲ್ಲಿ ಆರು ತಿಂಗಳ ಒಳಗಾಗಿ ನೀರಿನ ಅಭಾವದಿಂದ ಕೆರೆಗಳು ಒಣಗಿ ಹೊಗುತ್ತಿವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿಖಿಲ್, ಮೀನುಗಾರಿಕೆ ಇಲಾಖೆಯ ಅಪರ ನಿರ್ದೇಶಕ ಎಮ್.ಎಲ್.ದೊಡ್ಡಮನಿ, ಮೀನುಗಾರಿಕೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ದಿನೇಶ್, ಮೀನುಗಾರಿಕೆ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಸುಮಾ, ಸಚಿವರ ವಿಶೇಷ ಅಧಿಕಾರಿ ಎಮ್.ಮಲ್ಲಿಕಾರ್ಜುನ ಸೇರಿದಂತೆ ಇತರರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version