ದಿನದ ಸುದ್ದಿ
ಗಣೇಶ ಚತುರ್ಥಿ; ಗಣೇಶ ಪ್ರತಿಷ್ಠಾಪನೆಗೆ ಸಿದ್ಧವಾಯ್ತು ಭವ್ಯವಾದ ಮಂಟಪ
ಸುದ್ದಿದಿನ ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ವಿವಿಧ ತರಹ ಗಣಪ ಮೂರ್ತಿಗಳ ಪ್ರತಿಷ್ಠಾಪನೆಗೊಂಡಿದ್ದು, ನಾಗರಿಕರ ಆಕರ್ಷಣೀಯ ಕೇಂದ್ರ ಬಿಂದುಗಳಾಗಿ ಗಮನ ಸೆಳೆದಿವೆ. ದಾವಣಗೆರೆಯ ವಿವಿಧ ಬಡಾವಣೆ, ನಗರ, ಕಾಲೊನಿಗಳಲ್ಲಿ ತರಾವರಿ ಗಣಪನ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿವೆ. ಅವುಗಳಲ್ಲಿ ಹಿಂದು ಮಹಾಸಭಾದ ಗಣಪ ವಿಶಿಷ್ಟ, ಆಕರ್ಷಣೀಯ ಕೇಂದ್ರವಾಗಿದೆ.
ಪ್ರತಿ ವರ್ಷ ರಾಂ ಆಂಡ್ ಕೋ ವೃತ್ತದಲ್ಲಿ ಪ್ರಯಿಷ್ಠಾಪನೆಗೊಳ್ಳುತ್ತಿದ್ದ ಈ ಬಾರಿ ಸ್ಥಳಾಂತರ ಗೊಂಡಿದ್ದು, ವಿಶಾಲವಾದ ಹೈಸ್ಕೂಲ್ ಮೈದಾನಕ್ಕೆ ಬಂದಿದ್ದಾನೆ. ಹಿಂದು ಮಹಾಸಭಾ ಈ ಬಾರಿ ಹೈಸ್ಕೂಲ್ ಮೈದಾನದಲ್ಲಿ ಭವ್ಯವಾದ ಮಂಟಪ ನಿರ್ಮಾಣ ಮಾಡಲಾಗಿದೆ.
60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಯ್ತು ಭವ್ಯವಾದ ಮಂಟಪ:
ಅಂದಾಜು 60 ಲಕ್ಷ ರೂ. ವೆಚ್ಚದಲ್ಲಿ 35×30 ಅಡಿ ಸುತ್ತಳತೆಯ ವೇದಿಕೆ ಹಾಗೂ 50×100 ಅಡಿ ಸುತ್ತಳತೆಯ ಭವ್ಯ ಸಭಾಂಗಣದಲ್ಲಿ ಒಡಿಶಾದ ಕೃಷ್ಣ ದೇವಾಲಯದ ಮಾದರಿಯ ಮಂಟಪ ನಿರ್ಮಾಣವಾಗಿದೆ. ಇದನ್ನು ನೋಡುವುದೇ ಕಣ್ಣುಗಳಿಗೆ ಒಂದು ಹಬ್ಬ. ಈ ಭವ್ಯವಾದ ಮಂಟಪವನ್ನು ಪಶ್ಚಿಮ ಬಂಗಾಳದ ಬರ್ದ್ವಾನ್ ಜಿಲ್ಲೆಯ ಕಟ್ವಾದ ಸತ್ಯನಾರಾಯಣದತ್ತ ಮತ್ತವರ ನಿರ್ಮಾಣ ಮಾಡಿದೆ. ಅಂದಾಜು 60 ಅಡಿ ಎತ್ತರದ ಮಂಟಪ ನಿರ್ಮಾಣಕ್ಕೆ ನಾಲ್ಕು ಸಾವಿರ ಪೋಲ್ಸುಗಳನ್ನು ಬಳಸಲಾಗಿದೆ. ಇಲ್ಲಿ 13 ಅಡಿ ಎತ್ತರದ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.
ಮೂಕಾಸುರನ ಸಂಹಾರ ರೂಪಕ ಪ್ರದರ್ಶನ:
ಪ್ರತಿ ವರ್ಷವೂ ಒಂದಿಲ್ಲೊಂದು ಕಥಾರೂಪಕ ಪ್ರದರ್ಶನ ಮಾಡುವ ಹಿಂದು ಮಹಾಸಭಾ, ಈ ಬಾರಿ ಮೂಕಾಸುರ ಸಂಹಾರ ರೂಪಕ ಪ್ರದರ್ಶನ ಏರ್ಪಡಿಸಿದೆ. ಮೂಕಾಸುರನ ಸಂಹಾರದ ಕಥೆ ಆರಾಧಾರಿತ ರೂಪಕ ಪ್ರತಿದಿನ ಸಂಜೆ 10 ನಿಮಿಷ ಪ್ರದರ್ಶನಗೊಳ್ಳಲಿದೆ. ಕಳೆದ ಬಾರಿ ರೇಣುಕಾ ಎಲ್ಲಮ್ಮ ಚರಿತ್ರೆ ಪ್ರದರ್ಶನವಾಗಿತ್ತು. ಮಂಟಪದ ಮುಂಭಾಗ ಮಕ್ಕಳಿಗೆ ಮನರಂಜನೆಗಾಗಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.