ದಿನದ ಸುದ್ದಿ
ಇಂದು ಗಣೇಶ ಚತುರ್ಥಿ; ನಾಡಿನೆಲ್ಲೆಡೆ ಸಂಭ್ರಮದ ಆಚರಣೆ
ಸುದ್ದಿದಿನ ಡೆಸ್ಕ್ : ಇಂದು ಗಣೇಶ ಚತುರ್ಥಿ . ದೇಶಾದ್ಯಂತ ಸಡಗರ ಸಂಭ್ರಮದಿಂದ ಗಣೇಶ ಹಬ್ಬವನ್ನು ( Ganesha Festival ) ಆಚರಿಸಲಾಗುತ್ತಿದೆ. ಬುದ್ಧಿ, ಸಂಪತ್ತು, ಅದೃಷ್ಟ, ವಿಘ್ನ ನಿವಾರಣೆಯ ಸಂಕೇತವಾದ ಗಣೇಶ ಚತುರ್ಥಿ (Ganesha Chaturthi) ಹಬ್ಬವನ್ನು ಧಾರ್ಮಿಕ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ.
10 ದಿನಗಳ ಕಾಲ ನಡೆಯುವ ಈ ಸಂಭ್ರಮದ ಗಣೇಶೊತ್ಸವದಲ್ಲಿ ಎಲ್ಲೆಡೆ ನಾಗರಿಕರು ತಮ್ಮ ತಮ್ಮ ಮನೆಗಳಲ್ಲಿ ಗಣೇಶನ ಮಣ್ಣಿನ ವಿಗ್ರಹವನ್ನು ತಂದು ಪೂಜಿಸುತ್ತಾರೆ. ಮಹಾರಾಷ್ಟ್ರದಲ್ಲಿ ಗಣೇಶ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ವಿನಾಯಕ ಹಬ್ಬದ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ನಾಡಿನ ಜನತೆಗೆ ಶುಭಕಾಮನೆಗಳನ್ನು ತಿಳಿಸಿದ್ದಾರೆ.
ತಮ್ಮ ಸಂದೇಶದಲ್ಲಿ ಬುದ್ಧಿ, ಸಂಪತ್ತು ಮತ್ತು ಅದೃಷ್ಟದ ಸಂಕೇತವಾದ ಗಣೇಶನನ್ನು ವಿಘ್ನಹರ್ತ ಹಾಗೂ ಮಂಗಲ್ಮೂರ್ತಿ ಎಂದೂ ಕೂಡ ಪೂಜಿಸಲ್ಪಡುತ್ತಿದ್ದು, ಗಣೇಶ ನಾಡಿನಲ್ಲಿ ಸೌಹಾರ್ದತೆ ಮತ್ತು ಸಮನ್ವಯತೆಯನ್ನು ಕಾಪಾಡಲಿ ಎಂದು ಹಾರೈಸಿದ್ದಾರೆ.
ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರೂ ಸಹ ಶುಭ ಕೋರಿದ್ದಾರೆ. ಈ ಹಬ್ಬವು ದೇಶದ ಸಂಸ್ಕೃತಿಯ ಒಗ್ಗಟ್ಟಿನ ಧ್ಯೋತಕವಾಗಿದ್ದು, ಜಾತಿ, ಜನಾಂಗ, ಧರ್ಮದ ಚೌಕಟ್ಟನ್ನು ಮೀರಿ ಆಚರಿಸಲ್ಪಡುತ್ತದೆ. ಸರ್ವರಿಗೂ ವಿನಾಯಕ ಉತ್ತಮ ಆರೋಗ್ಯ, ಸಂತೋಷ ಹಾಗೂ ಸಂಪತ್ತನ್ನು ಕರುಣಿಸಲಿ ಎಂದು ಹಾರೈಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243