ದಿನದ ಸುದ್ದಿ
ಗರೀಬ್ ಕಲ್ಯಾಣ್ ಸಮ್ಮೇಳನ ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ; ಅರ್ಹರೈತ ಕುಟುಂಬಗಳಿಗೆ 21 ಸಾವಿರ ಕೋಟಿ ರೂಪಾಯಿ ವರ್ಗಾವಣೆ
ಸುದ್ದಿದಿನ ಡೆಸ್ಕ್ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಶಿಮ್ಲಾದ ಐತಿಹಾಸಿಕ ರಿಡ್ಜ್ ಮೈದಾನದಲ್ಲಿ ಗರೀಬ್ ಕಲ್ಯಾಣ್ ಸಮ್ಮೇಳನದಲ್ಲಿ ಉದ್ದೇಶಿಸಿ ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ 8 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಸಮ್ಮೇಳನ ಆಯೋಜಿಸಲಾಗಿತ್ತು. ದೇಶಾದ್ಯಂತ ಎಲ್ಲ ರಾಜಧಾನಿಗಳು ಜಿಲ್ಲಾ ಮುಖ್ಯ ಕಾರ್ಯಾಲಯಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳು ಈ ಕಾರ್ಯಕ್ರಮ ಆಯೋಜಿಸಿದ್ದವು. ಪ್ರಧಾನಮಂತ್ರಿಯವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಅಡಿಯಲ್ಲಿ ಆರ್ಥಿಕ ಪ್ರಯೋಜನಗಳ 11ನೇ ಕಂತನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಮತ್ತು ದೇಶದ 10 ಕೋಟಿ ಫಲಾನುಭವಿ ರೈತ ಕುಟುಂಬಗಳಿಗೆ ಸುಮಾರು 21 ಸಾವಿರ ಕೋಟಿ ರೂಪಾಯಿ ಮೊತ್ತ ವರ್ಗಾವಣೆ ಮಾಡಿದರು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು.
ಲಡಾಖ್ನ ತಂಡೂಪ್, ಬಿಹಾರದ ಲಲಿತಾ ದೇವಿ, ಪಶ್ಚಿಮ ತ್ರಿಪುರದ ಪಂಕಜ್ ಶಾನಿ, ಕರ್ನಾಟಕದ ಕಲಬುರಗಿಯ ಸಂತೋಷಿ, ಗುಜರಾತ್ನ ಮೆಹಸಾನಾ ಅವರೊಂದಿಗೆ ವರ್ಚುವಲ್ ಮೂಲಕ ಸಂವಾದ ನಡೆಸಿದರು.
ಸಮಾರಂಭದಲ್ಲಿ ನೆರದಿದ್ದ ಭಾರಿ ಜನ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಈ ಸಂದರ್ಭದಲ್ಲಿ ತಾವು ಹಾಜರಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಪಡೆದುಕೊಂಡ 10 ಕೋಟಿ ರೈತರನ್ನು ಪ್ರಧಾನಿ ಅಭಿನಂದಿಸಿದರು.
ಈ ಯೋಜನೆಯಡಿ ದೇಶಾದ್ಯಂತ ಹಣಕಾಸು ಸೌಲಭ್ಯಗಳನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. 130 ಕೋಟಿ ಭಾರತೀಯರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿರುವುದಕ್ಕೆ ಜನತೆಗೆ ಧನ್ಯವಾದ ಅರ್ಪಿಸಿದರು. ಜನಧನ್-ಆಧಾರ್ ಮತ್ತು ಮೊಬೈಲ್ ಮೂಲಕ ಜನರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ತಲುಪುತ್ತಿದೆ ಎಂದು ಪ್ರಧಾನಿ ಹೇಳಿದರು.
ಈ ಮೊದಲು ಅಡುಗೆ ಮನೆಯ ಹೊಗೆಯಿಂದ ಕಷ್ಟಪಡುತ್ತಿದ್ದ ಮಹಿಳೆಯರು ಈಗ ಉಜ್ವಲ ಯೋಜನೆಯಡಿಯಲ್ಲಿ ಎಲ್ಪಿಜಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಬಯಲು ಬಹಿರ್ದೆಸೆಗೆ ಹೋಗುತ್ತಿದ್ದ ಬಡ ಕುಟುಂಬಗಳು ಈಗ ಶೌಚಾಲಯ ನಿರ್ಮಿಸಿಕೊಂಡಿದೆ. ಚಿಕಿತ್ಸೆಗಾಗಿ ಹಣ ಒದಗಿಸಲು ಕಷ್ಟ ಪಡುತ್ತಿದ್ದ ಕುಟುಂಬಗಳು ಈಗ ಆಯುಷ್ಮಾನ್ ಭಾರತ್ ಯೋಜನೆಯ ಬೆಂಬಲದಿಂದ ನಿಶ್ಚಿಂತವಾಗಿವೆ ಎಂದು ಪ್ರಧಾನಿ ಮೋದಿ ಹೇಳಿದರು.
ಸಾಂಕ್ರಾಮಿಕದ ಸಂದರ್ಭದಲ್ಲಿ ರಾಜ್ಯದಲ್ಲಿ ಜೈರಾಮ್ ಠಾಕೂರ್ ಸರ್ಕಾರ ಮಾಡಿದ ಉತ್ತಮ ಕೆಲಸವನ್ನು ಶ್ಲಾಘಿಸಿದ ಪ್ರಧಾನಿ ಕೋವಿಡ್-19 ಲಸಿಕೆಯ ಮೊದಲ ಹಾಗೂ 2ನೇ ಡೋಸ್ ನೀಡಿದ ಮೊದಲ ರಾಜ್ಯ ಎನಿಸಿಕೊಂಡಿರುವ ಹಿಮಾಚಲ ಪ್ರದೇಶವನ್ನು ಪ್ರಶಂಸಿಸಿದರು.
ಶಸ್ತ್ರಾಸ್ತ್ರ ಪಡೆಗಳಿಗೆ ಕೊಡುಗೆ ನೀಡಿದ ಹಿಮಾಚಲ ಪ್ರದೇಶದ ಪ್ರತಿಯೊಂದು ಕುಟುಂಬವನ್ನು ಶ್ಲಾಘಿಸಿದ ಪ್ರಧಾನಿ, 4 ದಶಕಗಳ ನಿರೀಕ್ಷೆಯ ನಂತರ ’ಒಂದು ಶ್ರೇಣಿ ಒಂದು ಪಿಂಚಣಿ’ ಜಾರಿ ಮಾಡಿ ನಿವೃತ್ತ ಯೋಧರಿಗೆ ಅರಿಯರ್ಸ್ ನೀಡಿದೆ ಎಂದು ತಿಳಿಸಿದರು. ನಮ್ಮ ದೇಶದಲ್ಲಿ ವೋಟ್ ಬ್ಯಾಂಕ್ ರಾಜಕೀಯ ಹಲವು ದಶಕಗಳಿಂದ ನಡೆದಿತ್ತು. ಮತ್ತು ಇದರಿಂದ ದೇಶಕ್ಕೆ ಸಾಕಷ್ಟು ಹಾನಿಯಾಗಿತ್ತು. ಆದರೆ ನಾವು ನವಭಾರತ ನಿರ್ಮಾಣದ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಹೊರತು ವೋಟ್ ಬ್ಯಾಂಕಿಗಾಗಿ ಅಲ್ಲ ಎಂದರು.
ಪ್ರಧಾನಮಂತ್ರಿಯವರನ್ನು ಮುಖ್ಯಮಂತ್ರಿ ಜೈರಾಮ್ ಠಾಕೂರ್ ಬರಮಾಡಿಕೊಂಡರು. ಗರೀಬ್ ಕಲ್ಯಾಣ್ ಸಮ್ಮೇಳನಕ್ಕಾಗಿ ಹಿಮಾಚಲ ಪ್ರದೇಶ ರಾಜಧಾನಿ ಶಿಮ್ಲಾ ಆಯ್ಕೆ ಮಾಡಿದ್ದಕ್ಕೆ ಪ್ರಧಾನಿಗೆ ಧನ್ಯವಾದ ಅರ್ಪಿಸಿದರು.
Addressing 'Garib Kalyan Sammelan' in Shimla. Watch. https://t.co/XEekMT4DYQ
— Narendra Modi (@narendramodi) May 31, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243