ದಿನದ ಸುದ್ದಿ
ಯೋಗ ದಿನಕ್ಕೆ ಸಾರ್ವತ್ರಿಕ ರಜೆ ಘೋಷಣೆ ಪ್ರಸ್ತಾವ
ವಿಶ್ವ ಯೋಗ ದಿನಕ್ಕೆ ಸಾಂಸ್ಕೃತಿಕ ನಗರ ಮೈಸೂರು ಸಿದ್ಧವಾಗಿದೆ. ಕಳೆದ ಬಾರಿ 56 ಸಾವಿರ ಮಂದಿಯನ್ನು ಒಂದೆಡೆ ಕಲೆಹಾಕಿ ಗಿನ್ನಿಸ್ ದಾಖಲೆ ಮಾಡಿದ್ದ ಯೋಗ ಸಂಸ್ಥೆಗಳು ಹಾಗೂ ಜಿಲ್ಲಾಡಳಿತವು ಈ ಬಾರಿ ಗರಿಷ್ಠ ಒಂದು ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಿದೆ. ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮಕ್ಕೆ ನಡೆಸಿರುವ ತಯಾರಿಗಳು, ಮೈಸೂರಿನಲ್ಲೇ ಏಕೆ ಇಷ್ಟು ದೊಡ್ಡ ಕಾರ್ಯಕ್ರಮ ನಡೆಸಬೇಕೆಂಬುದನ್ನು ಜಿಎಸ್ಎಸ್ ಯೋಗಿಕ್ ಫೌಂಡೇಶನ್ನ ಮುಖ್ಯಸ್ಥ ಶ್ರೀ ಹರಿ( ಮೊ. 98862 08000) ಅವರು ವಿವರಿಸಿದ್ದಾರೆ.
- ಮೈಸೂರು ಯೋಗದ ವಿಶೇಷತೆಗಳೇನು?
ಮೈಸೂರು ಯೋಗವನ್ನು ಒಂದು ದೊಡ್ಡ ಬ್ರಾಂಡ್ ಮಾಡುವ ಉದ್ದೇಶದಿಂದ ಈ ಹೆಸರಿಡಲಾಗಿದೆ. ಯಾರೇ ಯೋಗ ಮಾಡಿದರೂ ಒಂದೆ. ನಮ್ಮಲ್ಲಿ ಐದು ದೊಡ್ಡ ಯೋಗ ಸಂಸ್ಥೆಗಳಿವೆ. ಎಲ್ಲರೂ ಯೋಗ ಮಾಡುತ್ತಾರೆ. ಯಾರು ದೊಡ್ಡವರು ಯಾರ ಚಿಕ್ಕವರು ಎಂಬ ಮನೋಭಾವನೆ ಬರಬಾರದು ಎಂಬ ಕಾರಣಕ್ಕೆ ಮೈಸೂರು ಯೋಗವನ್ನು ನಮ್ಮೆಲ್ಲರ ಬ್ರಾಂಡ್ ಮಾಡಿಕೊಳ್ಳಲಾಗಿದೆ. ಮೈಸೂರು ಮೊದಲೇ ಯೋಗಕ್ಕೆ ಪ್ರಸಿದ್ಧಿಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಈ ಬ್ರಾಂಡ್ ಇನ್ನಷ್ಟು ಹೆಸರು ತಂದಕೊಡುತ್ತದೆ ಎಂಬುದು ಇದರ ಹಿಂದಿನ ಉದ್ದೇಶ. ಹೀಗೆ ನಾವೆಲ್ಲರೂ ಒಂದಾದ ಕಾರಣ ಕಳೆದ ವರ್ಷ ವಿಶ್ವ ಯೋಗ ದಿನದಂದು ದೊಡ್ಡ ಸಾಧನೆ ಮಾಡಲು ಸಾಧ್ಯವಾಯಿತು.
- ಯೋಗ ಮಾಡಲು ಮೈಸೂರುನಗರ ಏಕೆ ಶ್ರೇಷ್ಠ ಸ್ಥಳ ?
ಒಂದು ರೀತಿಯಲ್ಲಿ ಹೇಳುವುದಾದರೆ ಮೈಸೂರು ಒಂದು ವಿಶಾಲವಾದ ಸ್ಥಳ. ಇಲ್ಲಿನ ಹವಾಗುಣ ಎಲ್ಲರನ್ನು ಸೆಳೆಯಬಲ್ಲದು. ಅರಣ್ಯ ಸಂಪತ್ತು ಯತೇಚ್ಛವಾಗಿರುವುದರಿಂದ ನಗರದಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಾಗಿದೆ. ಯಾವಾಗ ಹೆಚ್ಚು ಆಮ್ಲಜನಕವು ದೇಹವನ್ನು ಸೇರುತ್ತದೆಯೋ ಆಗ ದೇಹ ತಾನಾಗಿಯೇ ಸ್ವಚ್ಛಗೊಳ್ಳುತ್ತದೆ. ಆಯುರ್ವೇದ, ಸಂಸ್ಕøತಿ, ಪರಂಪರೆ, ಯೋಗ ಮೊದಲಾದವುಗಳು ಮೈಸೂರಿನಲ್ಲಿ ಸಾಂಪ್ರದಾಯಿಕವಾಗಿ ಬೆಳೆದುಬಂದಂತ ವಿಷಯಗಳಾಗಿವೆ. ಇವು ಯಾವ ಕಾಲಕ್ಕೂ ತಾಜಾ ಆಗಿರುವ ವಿಷಯಗಳೇ. ವಿದೇಶಿಗರು ಇಲ್ಲಿವರೆಗೂ ಹುಡುಕಿಕೊಂಡು ಬಂದು ಯೋಗ ಕಲಿಯಲು ಅದೇ ಕಾರಣ.
ದೊಡ್ಡ ದೊಡ್ಡ ಊರುಗಳಲ್ಲಿ ಪ್ರತಿಷ್ಠೆಗಳೇ ಹೆಚ್ಚಾಗುತ್ತದೆ. ಬೆಂಗಳೂರಿನಂತ ಊರಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ಹೊಗಲು ಹೆಚ್ಚು ಸಮಯ ಬೇಕು. ಆದರೆ, ಮೈಸೂರು ಹಾಗಲ್ಲ ಎಲ್ಲವೂ ಸುಲಭವಾಗಿ ಕೈಗೆ ಸಿಗುತ್ತದೆ ಎಂಬ ಕಾರಣಕ್ಕೆ ಮೈಸೂರು ಯೋಗ ಮಾಡಲು ಸೂಕ್ತ ಸ್ಥಳ.
- ಯೋಗ ದಿನಕ್ಕೆ ಸಾರ್ವತ್ರಿಕ ರಜೆ ಘೋಷಣೆ ಸಾಧ್ಯವಿದೆಯೇ?
ಹೌದು ಇದೊಂದು ಒಳ್ಳೆಯ ಆಲೋಚನೆ. ಸರಕಾರಿ ಮತ್ತು ಖಾಸಗಿ ಶಾಲೆಗಳಿಗೆ ಅರ್ಧದಿನ ರಜೆ ಕೊಡಿ ಎಂದು ಮನವಿ ಮಾಡಿಕೊಂಡಿದ್ದೆವು ಅದಕ್ಕೆ ಅವರು ಒಪ್ಪಿದ್ದಾರೆ. ಸಾರ್ವತ್ರಿಕ ರಜೆ ಘೋಷಣೆಯಾದರೆ ಯೋಗ ದಿನಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತದೆ. ಸದ್ಯದಲ್ಲೇ ಈ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳ ಮೂಲಕ ಸಂಬಂಧಪಟ್ಟವರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇವೆ.
- ಯೋಗ ಹೆಸರಿನಲ್ಲಿ ರಾಜ್ಯದ ಜನತೆಯನ್ನು ಒಂದೆಡೆ ಸೇರಿಸಲು ಸಾಧ್ಯವಿದೆಯೇ?
ಸಾಧ್ಯ ಇದೆ ಆದರೆ, ಬಹಳ ಕಷ್ಟ ಒಬ್ಬರು, ಇಬ್ಬರು ಅಥವಾ ಒಂದೇ ಸಂಸ್ಥೆಯಿಂದ ಇದು ಸಾಧ್ಯವಾಗುವ ಕೆಲಸವಲ್ಲ. ದಸರೆಯಲ್ಲಿ ಎಲ್ಲ ರಾಜ್ಯದ ಕಲೆಗಳು ಒಂದೆಡೆ ಸೇರುವಂತೆ ಯೋಗದಿನಕ್ಕೆ ರಾಜ್ಯದ ಯೋಗಾಸಕ್ತರನ್ನು ಒಂದೆಡೆ ಸೇರಿಸಬೇಕಾದರೆ ಬಹಳಷ್ಟು ಹಣ ಖರ್ಚಾಗುತ್ತದೆ. ಸರಕಾರ ಅವರಿಗೆ ಉಳಿಯಲು ಜಾಗ, ಊಟ ತಿಂಡಿ ವ್ಯವಸ್ಥೆ ಮಾಡಿದರೆ ಖಂಡಿತವಾಗಿಯೂ ಮೈಸೂರಿನಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಬಹುದು. ಮೈಸುರು ಜಿಲ್ಲಾಡಳಿತ ಯೋಗ ಎಂದ ಕೂಡಲೇ ಅದರ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಕೇಳಿದ ಎಲ್ಲ ಸೌಲಭ್ಯಗಳನ್ನೂ ಕೊಡುತ್ತದೆ ಅದೇ ರೀತಿ ಎಲ್ಲ ಕಡೆಯೂ ಇಂಥ ಸೌಲಭ್ಯಗಳು ಸಿಕ್ಕರೆ ಮೈಸೂರಿನಲ್ಲಿ ಇಂಥ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಬಹುದಾಗಿದೆ.
- ಮೈಸೂರಿನ ಶುದ್ಧ ಯೋಗವನ್ನು ನ್ಯೂಯಾರ್ಕ್ ಟೈಮ್ಸ್ ಹಾಡಿ ಹೊಗಳಿದೆ. ಈ ಶುದ್ಧ ಯೋಗ ಎಂದರೇನು?
ಶುದ್ಧ ಯೋಗ ಎಂದರೆ ಎಲ್ಲ ಕಾಲಕ್ಕೂ ಅಪ್ಡೇಟ್ ಆಗುವ ಯೋಗ. ಇಲ್ಲಿಂದ ಕಲಿತು ಬೇರೆಡೆ ಯೋಗ ಹೇಳಿಕೊಡುವವರು ಇಲ್ಲಿಗಿಂತ ಸ್ವಲ್ಪ ಕಡಿಮೆ ಪಟ್ಟುಗಳನ್ನು ಹೇಳಿಕೊಡುತ್ತಾರೆ. ಆದರೆ, ಮೈಸೂರಿನಲ್ಲಿಹಾಗಲ್ಲ ಯೋಗ ಕುರಿತು ಅಧ್ಯಯನ, ಸಂಶೋಧನೆ ಮಾಡಿ ಅದನ್ನು ಅಪ್ಗ್ರೇಡ್ ಮಾಡುವ ಸಾಧ್ಯತೆ ಇದೆ. ಮೊನ್ನೆ ಯಾವುದೋ ಒಂದು ಯೋಗಕ್ಕೆ ಈ ಹೆಸರು ಇಡಬಹುದೇ ಎಂದು ಕೆಲವರು ಸೂಚಿಸಿದರು ಅದನ್ನು ನಾವು ಒಪ್ಪಿಕೊಂಡೆವು ಆ ರೀತಿಯ ಸ್ವೀಕೃತ ಮನೋಭಾವನೆ ಇಲ್ಲಿನ ಯೋಗಕ್ಕಿದೆ. ಇದೊಂದು ವೈಜ್ಞಾನಿಕ ಚಿಂತನೆಯಾಗಿದೆ ಅದೇ ಶುದ್ಧಯೋಗ. ಈಗ ಆರ್ಟ್ ಯೋಗ, ಮ್ಯೂಸಿಕ್ ಯೋಗ, ಮಾರ್ಷಲ್ ಆರ್ಟ್ ಯೋಗ ಸ್ಪೋಟ್ಸ್ ಯೋಗ ಮಾಡಲು ಹೊರಟಿದ್ದೇವೆ ಇವೆಲ್ಲದರ ಜತೆ ಯೋಗವನ್ನು ಮಿಶ್ರಣ ಮಾಡುತ್ತೇವೆ. ಯೋಗವನ್ನು ಒಂದು ವೈಜ್ಞಾನಿಕ ವ್ಯಾಯಾಮವನ್ನಾಗಿ ಮಾಡುತ್ತೇವೆ.
- ಯೋಗ ಒಂದು ಚೌಕಟ್ಟಿನಿಂದ ಹೊರಬರುತ್ತಲ್ಲ ಇನ್ನು ಅಪ್ಗ್ರೇಡ್ ಆಗುವ ಸಾಧ್ಯತೆ ಎಲ್ಲಿ?
ಹಾಗೆ ಅಂದುಕೊಳ್ಳುವುದೇ ತಪ್ಪು, ಯಾರು ಪೂರ್ಣ ಪ್ರಮಾಣದಲ್ಲಿ ಯೋಗ ಕಲಿತಿರುತ್ತಾರೋ ಅದವರು ಒಂದು ಸ್ವೀಕೃತ ಮನೋಭಾವನೆ ಹೊಂದಿರುತ್ತಾರೆ. ಒಂದೇ ಚೌಕಟ್ಟಿನೊಳಗೆ ಯೋಗ ಮಾಡುವುದು ಒಳ್ಳೆಯದಲ್ಲ.
- ಮೈಸೂರಿನಲ್ಲಿ ಯೋಗ ಎಂಬುದು ಬಹಳ ದುಬಾರಿಯಾಗಿದೆ ಹೌದೆ?
ಖಂಡಿತವಾಗಿಯೂ ಹೌದು. ಆದರೆ, ಅಗತ್ಯಕ್ಕಿಂತ ಹೆಚ್ಚು ಶುಲ್ಕ ವಿಧಿಸುವುದು ಸರಿಯಲ್ಲ. ಎಲ್ಲದಕ್ಕೂ ಒಂದೊಂದು ಸ್ಟಾಂಡರ್ಡ್ ಇರುತ್ತದೆ. ವಿದೇಶಿಗರಿಗೆ ಯೋಗ ಹೇಳಿಕೊಡಬೇಕಾದರೆ ಅವರ ದೇಹಕ್ಕೆ ಒಗ್ಗುವಂತಹ ಅಡಿಗೆ ಮಾಡಿಸಬೇಕು. ಅದಕ್ಕಾಗಿ ವಿಶೇಷ ಬಾಣಸಿಗರು ಬೇಕು. ಅವರು ಉಳಿಯಲು ಒಳ್ಳೆಯ ಜಾಗಗಳೇ ಬೇಕು. ಅದಕ್ಕಾಗಿ ಹೆಚ್ಚು ಹಣ ಖರ್ಚಾಗುತ್ತದೆ. ಹಾಗಾಗಿ ಯೋಗ ಕಲಿಯಲು ಹೆಚ್ಚುಹಣವೂ ಖರ್ಚಾಗುತ್ತದೆ. ಒಂದು ರೀತಿ ಹೇಳುವುದಾದರೆ ಯಾರ್ಯಾರ ಬಂಡವಾಳ ಎಷ್ಟಿರುತ್ತದೆಯೋ ಅದಕ್ಕೆ ತಕ್ಕಂತೆ ಹಣ ವ್ಯಯ ಮಾಡಬೇಕಾಗುತ್ತದೆ.
- ಶಾಲೆಗಳಲ್ಲಿ ಯೋಗವನ್ನು ಕಡ್ಡಾಯ ಮಾಡಬೇಕೆಂಬ ಪ್ರಸ್ತಾವನೆ ಇತ್ತು. ಅದು ಏಕೆ ಸಾಧ್ಯವಾಗಲಿಲ್ಲ?
ಮಾಡಿದರೆ ತುಂಬ ಒಳ್ಳೆಯದು. ಯೋಗವನ್ನು ಒಂದು ಧರ್ಮ, ಒಂದು ಪಕ್ಷವಾಗಿ ಗುರುತಿಸಿದ್ದರಿಂದ ಅದು ಸಾಧ್ಯವಾಗಲಿಲ್ಲ. ಯೋಗವು ಅದನ್ನೆಲ್ಲ ಮೀರಿದ ಒಂದು ಕಲೆ. ಅದಕ್ಕೆ ರಾಜಕೀಯ ಸೋಂಕು ಅಂಟಿಸುವುದು ಸರಿಯಲ್ಲ. ಇದರಿಂದಾಗಿಯೇ ಯೋಗವು ಶಾಲೆಗಳ ಪಠ್ಯ ಕ್ರಮ ಸೇರುವ ಒಂದು ಅಮೂಲ್ಯ ಅವಕಾಶ ಇಲ್ಲದಂತಾಗಿದೆ. ಯೋಗವನ್ನು ಒಂದು ಧರ್ಮ, ಒಬ್ಬ ವ್ಯಕ್ತಿಯಾಗಿ ಗುರಿತಿಸುವುದು ದೊಡ್ಡ ತಪ್ಪು.
- ಯೋಗ ಮತ್ತು ಆಯುರ್ವೇದ ನಡುವಿನ ನಂಟಿನಿಂದ ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆಯೇ?
ಎರಡಕ್ಕೂ ಶೇ. 30ರಷ್ಟು ನಂಟಿರುವುದು ನಿಜ. ಇವೆರಡೂ ವಿಷಯಗಳು ವೈಜ್ಞಾನಿಕವಾಗಿ ದೃಢಪಟ್ಟಿರುವ ಹಳೇ ವಿಷಯಗಳು. ಎರಡೂ ಕೂಡ ಒಂದನ್ನೊಂದು ಅವಲಂಬಿಸಿದೆ. ಆಲೋಪತಿಕ್ ವೈದ್ಯರ ಬಳಿ ಹೋಗಿ ಬೆನ್ನು ನೋವು ಎಂದರೆ ಒಂದು ಚಿಕಿತ್ಸೆ ಪಡೆಯಬೇಕು ಅಥವಾ ಯೋಗ ಮಾಡಬೇಕು ಎಂ ಸಲಹೆ ನೀಡುತ್ತಾರೆ. ಮೈಸೂರು ಯೋಗದ ಜತೆ ಆಯುರ್ವೇದಕ್ಕೂ ಹೆಚ್ಚು ಪ್ರಸಿದ್ಧಿಪಡೆದಿದೆ. ಹಾಗಾಗಿ ಎರಡೂ ವಿಷಯಗಳನ್ನು ಮುನ್ನೆಲೆಯಾಗಿಸಿಕೊಂಡು ಪ್ರವಾಸೋದ್ಯಮವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಬಹುದು.
- ಯಾವ್ಯವಾವ ವರ್ಗಕ್ಕೆ ಯೋಗ ಅಗತ್ಯವಾಗಿದೆ?
ಐಟಿ ಬಿಟಿ ಕ್ಷೇತ್ರದಲ್ಲಿರುವವರು ಸಾಮಾನ್ಯವಾಗಿ ಮಹಾ ನಗರಗಳಲ್ಲಿರುತ್ತಾರೆ ಅಲ್ಲಿನ ವಾತಾವರಣ ಕಲುಷಿ ತವಾಗಿರುತ್ತದೆ. ಜತೆಗೆ ಅವರು ಒತ್ತಡದಲ್ಲಿ ಬದುಕುತ್ತಿರುತ್ತಾರೆ ಅವರಿಗೆ ಯೋಗ ಅತಿ ಮುಖ್ಯ. ವಾಹನಗಳ ಹೊಗೆಯ ಮಧ್ಯೆಯೇ ಕೆಲಸ ಮಾಡುವ ಟ್ರಾಫಿಕ್ ಪೊಲೀಸರು, ಕಸ ವಿಲೇವಾರಿ ಮಾಡುವ ಪಾಲಿಕೆ ಸಿಬ್ಬಂದಿ ಇವರೆಲ್ಲರ ಮೇಲಧಿಕಾರಿಗಳು ಯೋಗವನ್ನು ಈ ವರ್ಗದವರಿಗೆ ಒಳ್ಳೆಯದು.
- ಈ ವರ್ಷ ಹಮ್ಮಿಕೊಂಡಿರುವ ಯೋಗ ಕಾರ್ಯಕ್ರಮಗಳು ಯಾವುವು?
ಮೂರು ವರ್ಷಗಳ ಹಿಂದೆ ಫಿಟ್ ಇಂಡಿಯಾ ಮೂವ್ಮೆಂಟ್ ಎಂಬ ಅಭಿಯಾನದ ಹೆಸರಿಟ್ಟಿದ್ದೆವು. ಅದನ್ನೇ ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪಿ ಆಂದೋಲನ ಆರಂಭಿಸಿದ್ದಾರೆ. ಈ ವರ್ಷ ಮನೆ ಮನೆ ಯೋಗ, ಮನ ಮನ ಯೋಗ ಎಂಬ ಯೋಗವನ್ನು ಆರಂಭಿಸಲಿದ್ದೇವೆ. ಈ ಮೂಲಕ ಯೋಗವ್ನು ಪ್ರತಿ ಮನೆಗೆ ತಲುಪಿಸುವ ಉದ್ದೇಶವಿದೆ.