ದಿನದ ಸುದ್ದಿ

ಚನ್ನಗಿರಿ | ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ; ಬಹುಮಾನ ವಿತರಣೆ

Published

on

ಸುದ್ದಿದಿನ,ಚನ್ನಗಿರಿ:ಕರ್ನಾಟಕ ಏಕೀಕರಣವಾಗಿ 17 ವರ್ಷಗಳ ನಂತರ ರಾಜ್ಯದ ಮರುನಾಮಕರಣ ಮತ್ತು ಅದರ ಸ್ಮರಣೆಯ ಭಾಗವಾಗಿ ಹಲವು ವಿಚಾರಗಳ ಬಗ್ಗೆ ಮೆಲುಕು ಹಾಕಬೇಕಿದೆ ಎಂದು ಪ್ರಾಂಶುಪಾಲರಾದ ಡಾ.ಅಮೃತೇಶ್ವರ ಬಿ.ಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದು ಪಟ್ಟಣದ ಶ್ರೀ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡ ನುಡಿ ಸಂಭ್ರಮ -50ರ ಅಭಿಯಾನ ಕಾರ್ಯಕ್ರಮದಲ್ಲಿ
ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕನ್ನಡ ಪ್ರಜ್ಞೆ ಯನ್ನು ಹುಟ್ಟು ಹಾಕುವ ಪ್ರಯತ್ನ ಈಡೇರಿದೆಯೇ ಎಂಬ ಪ್ರಶ್ನೆ ಸುವರ್ಣ ಸಂಭ್ರಮ-50 ಅಂತಿಮ ಘಟ್ಟದಲ್ಲಿ ಚರ್ಚೆಯ ವಿಷಯವಾಗಿದೆ ಭಾಷಾವಾರು ಪ್ರಾಂತ ವಾಗಿ ಸುಮಾರು ಏಳು ದಶಕಗಳು ಕಳೆದರೂ ರಾಷ್ಟ್ರಪ್ರಜ್ಞೆ ಯ ಜೊತೆಗೆ ಪ್ರಾದೇಶಿಕ ಪ್ರಜ್ಞೆ ಅವಶ್ಯಕ ಎಂದರು.

ಕರ್ನಾಟಕ ಎಂದರೆ ಕನ್ನಡ ನೆಲ ಜಲ ಭಾಷೆ ಸಂಸ್ಕೃತಿಯ ಸ್ವಂತಿಕೆ ಹಾಗೂ ಶತಶತಮಾನಗಳಿಂದ ನಮ್ಮ ನೆಲದ ಭಾಗವಾಗಿರುವ ಸಹಬಾಳ್ವೆಯ ಸೌಹಾರ್ದದ ಆಶಯಗಳನ್ನು ಉಳಿಸಿಕೊಂಡೇ ಇಲ್ಲಿನ ಸಾಮಾಜಿಕ ರಾಜಕೀಯ ಮತ್ತು ಆರ್ಥಿಕತೆಯನ್ನು ಕಟ್ಟಬೇಕೆಂಬ ಛಲ ಕನ್ನಡಿಗರ ಅಂತರಾಳದಿಂದ ಮೂಡಬೇಕಿದೆ, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎನ್ನುವ ಚೆನ್ನವೀರ ಕಣವಿ ಅವರ ಮಾತು ಈ ಹಿನ್ನಲೆಯಲ್ಲಿ ಕಟ್ಟಿರುವಂತಿದೆ ಎಂದು ನುಡಿದರು.

ಕರ್ನಾಟಕದ ಮೇಲೆ ರಾಜಕೀಯವಾಗಿ ಸಾಂಸ್ಕೃತಿಕವಾಗಿ ನಿರಂತರ ದಾಳಿ ನಡೆಯುತ್ತಿದೆ ಇದಕ್ಕೆ ಪ್ರತಿರೋಧ ತೋರಿಸುವ ಇಚ್ಛಾ ಶಕ್ತಿ ಕ್ಷೀಣಿಸಿದೆ. ರಾಜ್ಯ ಮರುನಾಮಕರಣವಾದಾಗ ಅಧಿಕಾರದಲ್ಲಿದ್ದ ಅರಸು ಸರ್ಕಾರವು ದೇಶವೇ ಮೆಚ್ಚುವ ಸಾಮಾಜಿಕ ನ್ಯಾಯದ ಮಾದರಿಯನ್ನು ಜಾರಿಗೆ ತಂದಿತ್ತು ಅಂತಹ ಧೀಮಂತ ವ್ಯಕ್ತಿತ್ವದ ಪ್ರಾತಸ್ಮರಣೀಯರ ಕೊಡುಗೆಗಳನ್ನು ನೆನಪಿಸಿ ಕೊಳ್ಳುತ್ತಾ ನಾವು ಮುಂದಣ ಹೆಜ್ಜೆ ಇಡಬೇಕಿದೆ ಎಂದು ಕಿವಿಮಾತು ಹೇಳಿದರು.

ತಂತ್ರಜ್ಞಾನ ಆಧಾರಿತ ಉದ್ದಿಮೆಗಳಲ್ಲಿ ಕರ್ನಾಟಕ ಜಾಗತಿಕವಾಗಿ ಗಮನ ಸೆಳೆದಿದೆ, ಆದರೆ ಇಂತಹ ಶ್ರೀಮಂತಿಕೆ ಜನಜೀವನದ ನೆಮ್ಮದಿಗೆ ಕಾರಣವಾಗಬೇಕೆಂದರೆ ತನ್ನಂತೆ ಪರರ ಬಗೆವ ಕರ್ನಾಟಕದ ಮಣ್ಣಿನ ಮೂಲ ಆಶಯಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಕರ್ನಾಟಕದಲ್ಲಿ ಕನ್ನಡಿಗರಿಗೆ ಪೂರ್ಣ ಪ್ರಮಾಣದ ಉದ್ಯೋಗಾವಕಾಶಗಳು ಲಭಿಸಬೇಕು, ಕನ್ನಡ ಒಂದು ಶಾಸ್ತ್ರೀಯ ಭಾಷೆ ವಿಶ್ವ-ರಾಷ್ಟ್ರ ಮಟ್ಟದ ವಿದ್ಯಾಮಾನಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಕನ್ನಡಿಗರಿಗೆ ಲಭಿಸಬೇಕು ಗಡಿನಾಡ ಕನ್ನಡ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವುದು ಇಂತಹ ಜ್ವಲಾಂತ ವಿಚಾರಗಳ ಬಗ್ಗೆ ಕನ್ನಡಿಗರಿಗೆ ಅರಿವು-ಜಾಗ್ರತಿ ಮೂಡಿಸುವ ಪ್ರಯತ್ನ ಪ್ರತಿಯೊಬ್ಬ ಪ್ರಜ್ಞಾವಂತ ಕನ್ನಡಿಗರು ಕೈಗೊಳ್ಳಬೇಕು ಎಂದರು.

ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾದ ಕೆ.ಎಚ್. ಷಣ್ಮುಖಪ್ಪ ಕಾರ್ಯಕ್ರಮದಲ್ಲಿ ಸರ್ವರನ್ನು ಸ್ವಾಗತಿಸಿ ಕನ್ನಡ ರಾಜ್ಯೋತ್ಸವದ ಹಾಗೂ ನುಡಿ ಸಂಭ್ರಮ 50ರ ಆಚರಣೆಯ ಅಗತ್ಯತೆಯನ್ನು,ಕನ್ನಡಕ್ಕಿರುವ ಭವಿಷ್ಯದ ಸವಾಲುಗಳನ್ನು ಕುರಿತು ಮಾತನಾಡಿದರು.

ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಹಲವು ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನವನ್ನು ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು.

ಅಂತಿಮ ಪದವಿಯ ಶಬ್ದಮಣಿ ದರ್ಪಣ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ ಕು ಲಕ್ಷ್ಮಿ ಅವರಿಗೆ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ರವಿ ರೂ1,000 ನಗದು ಬಹುಮಾನ ಮತ್ತು ನೆನಪಿನ ಕಾಣಿಕೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಾಪಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕ ಡಾ. ಶಕೀಲ್ ಅಹಮದ ಅವರು ಕಾರ್ಯಕ್ರಮದ ನಿರೂಪಣಾ ಜವಾಬ್ದಾರಿ ವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version