ದಿನದ ಸುದ್ದಿ

ನಿದ್ದೆಯಲ್ಲಿ ಕಾಣುವುದು ಕನಸಲ್ಲ, ನಿದ್ದೆಗೆಡುವಂತೆ ಮಾಡುವುದು ಕನಸು : ಡಾ. ಅಂಜಿನಪ್ಪ

Published

on

ಸುದ್ದಿದಿನ, ದಾವಣಗೆರೆ: ಮೌಲ್ಯಯುತ ಬದುಕಿನ ಶಿಕ್ಷಣ ಕಲಿಕೆಗೆ ಎನ್ ಎಸ್ ಎಸ್ ತುಂಬಾ ಅಗತ್ಯವಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಅಂಜಿನಪ್ಪ ಆಶಯ ವ್ಯಕ್ತಪಡಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಏಳುದಿನಗಳ ಕಾಲ ಹಳೇಬಿಸಲೇರಿಯಲ್ಲಿ ಏರ್ಪಡಿಸಿದ್ದ ಎನ್ ಎಸ್ ಎಸ್ ನ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನುವಹಿಸಿ ಶುಕ್ರವಾರ ಅವರು ಮಾತನಾಡಿದರು.

ವ್ಯಕ್ತಿತ್ವ ರೂಪಿಸಿಕೊಳ್ಳಲು ಪಠ್ಯ ಚಟುವಟಿಕೆಗಳು ಎಷ್ಟು ಮುಖ್ಯವೋ ಹಾಗೇಯೇ ಪಠ್ಯೇತರ ಚಟುವಟಿಗೆಳು ತುಂಬಾ ಮುಖ್ಯ. ವ್ಯಕ್ತಿತ್ವ ವಿಕಸನಕ್ಕೆ ಒಂದು ಅತ್ಯತ್ತಮ ಆಶಾಕಿರಣವಾಗಿ ಈ ಶಿಬಿರ ಕಾಣುತ್ತಿದೆ‌ ಎಂದು ಶ್ಲಾಘಿಸಿದರು.

ನಿಷ್ಕಲ್ಮಶ ಮನಸ್ಸಿನಿಂದ ಮಾಡಿದ ಕೆಲಸವನ್ನು ನಾವು ಸೇವೆ ಎನ್ನುತ್ತೇವೆ. ಮನಸ್ಸು ಸ್ವಚ್ಚವಾಗಿದ್ದರೆ ನಮ್ಮ‌ಸುತ್ತಮುತ್ತಲಿನ ಸಮಾಜವನ್ನು ಸ್ವಚ್ಚವಾಗಿಡಲು ಸಾಧ್ಯ. ಹಾಗೇ ಸಮಯ ಪ್ರಜ್ಞೆ ಇದ್ದರೆ ಅಸಾಧಾರಣವಾದುದನ್ನೂ ಸಾಧಿಸಲು ಸಾಧ್ಯ. ‘ನಿದ್ದೆಯಲ್ಲಿ ಕಾಣುವುದು ಕನಸಲ್ಲ, ನಿದ್ದೆಗೆಡುವಂತೆ ಮಾಡುವುದು ಕನಸು’ ಎಂಬ ಎಪಿಜೆ ಅದ್ಬುಲ್ ಕಲಾಂ ಅವರ ನುಡಿಮುತ್ತನ್ನು ಹೇಳುವುದರ ಮೂಲಕ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.

ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಎನ್ ಎಸ್ ಎಸ್ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಾಗೂ ಗ್ರಾಮದ ಕುಂದುರ್ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ವಕಿಯರಾದ ವೀಣಾ ಮತ್ತು ಮಂಜುಳ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಎನ್ ಎಸ್ ಎಸ್ ಶಿಬಿರಾಧಿಕಾರಿಗಳಾದ ಪ್ರೊ. ಗುರುದೇವ ಎಸ್.ಎಂ, ಡಾ.ಶಿವಕುಮಾರ್. ಕೆ, ಹಾಗೂ ಡಾ.ಗೌರಮ್ಮ ಎಂ ಎಸ್, ಪ್ರೊ. ರಾಜ್ ಕುಮಾರ್, ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೊಟ್ರಪ್ಪ, ಉಪನ್ಯಾಸಕ ವಿಶ್ವನಾಥ್, ಮುದಹದಡಿ ಗ್ರಾಮ ಪಂಚಾಯಿತಿಯ ಪಿಡಿಓ ಅಶ್ವಿನಿ, ಅಧ್ಯಕ್ಷರಾದ ಕೃಷ್ಣಮೂರ್ತಿ ಎಂ, ನಾಗರಾಜಪ್ಪ ಬಿ.ಜಿ,ಜರೇಕಟ್ಟೆ ಗ್ರಾಮದ ಯುವಮುಖಂಡ ಡಾ.ಸಾಗರ್,ಮೌನೇಶ್ವರ್ ಹಳೇಬಿಸಲೇರಿ ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version