ದಿನದ ಸುದ್ದಿ

ದಾವಣಗೆರೆ | ಗೊಲ್ಲರ ಹಟ್ಟಿಗಳನ್ನು ಕಂದಾಯ ಗ್ರಾಮವಾಗಿಸುವ ಕಾರ್ಯಕ್ಕೆ ಚಾಲನೆ : ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿರುವ ಗೊಲ್ಲರಹಟ್ಟಿ, ತಾಂಡ( Gollara hatti Tanda ) ಮುಂತಾದ ದಾಖಲೆರಹಿತ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ( Revenue Village ) ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ( District commissioner Shivanand Kapashi )ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯಲ್ಲಿ 75 ದಾಖಲೆ ರಹಿತ ಗ್ರಾಮಗಳನ್ನು ಗುರ್ತಿಸಲಾಗಿದ್ದು ಅದರಲ್ಲಿ 39 ಅಂತಿಮ ಸೂಚನೆ ಹಂತಕ್ಕೆ ಬಂದಿವೆ. 25 ಗ್ರಾಮಗಳ ಸರ್ವೆ ನಂ ಬದಲಾಯಿಸಲಾಗುತ್ತಿದೆ, ಖಾಸಗಿ ಸರ್ವೆ ನಂಬರ್‍ಗಳಲ್ಲಿರುವ ಗ್ರಾಮಗಳ ಸರ್ವೆ ನಂ ಸರಿಪಡಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹಾಗೂ ಗೊಲ್ಲ ಜನಾಂಗವೂ ಸೇರಿದಂತೆ ಎಲ್ಲಾ ಜನಾಂಗಗಳಿಗೆ ಸ್ಮಶಾನ ಭೂಮಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದೆಂದರು.

ಮಹಾಭಾರತದಲ್ಲಿ ಶ್ರೀ ಕೃಷ್ಣನ ಕೊಡುಗೆ ಅಪಾರ, ಶ್ರೀಕೃಷ್ಣ ಪ್ರತಿ ಭಾರತೀಯನ ಮನಸ್ಸಿನ ಅವಿಭಾಜ್ಯ ಅಂಗ, ತನ್ನ ರಾಜತಾಂತ್ರಿಕ ನಡೆಯಿಂದ ಎಲ್ಲಾ ದಮನಿತರಿಗೂ ನ್ಯಾಯ ಒದಗಿಸಿ ಕೊಟ್ಟವನು ಶ್ರೀ ಕೃಷ್ಣ. ಅಂತಹ ಮೇರು ವ್ಯಕ್ತಿಯ ವ್ಯಕ್ತಿತ್ವ ಅನುಕರಣೀಯ ಎಂದರು.

ಇದನ್ನೂ ಓದಿ | ಸಾಮಾಜಿಕ ಸಾಮರಸ್ಯದಿಂದ ಸಮಾಜದ ಪ್ರಗತಿ : ಎಸ್.ಕೆ.ಬಿ.ಪ್ರಸಾದ್

ಜಿ.ಪಂ.ಸಿಇಒ ಡಾ.ಚೆನ್ನಪ್ಪ ಮಾತನಾಡಿ, ಭಾರತೀಯರ ಕಲ್ಪನೆಯ ಅನಕ್ಷರಸ್ಥ ಸಮಾಜದ, ಅಲಿಖಿತ ಸಂವಿಧಾನ ಭಗವಧ್ಘೀತೆ ನೀಡಿದವನು ಶ್ರೀಕೃಷ್ಣ, ಸಮಾಜವನ್ನ ಹೇಗೆ ಮುನ್ನೆಡೆಸಬೇಕೆಂಬ ಕಲ್ಪನೆ ಗೀತೆಯಲ್ಲಿದೆ. 5 ಸಾವಿರ ವರ್ಷಗಳ ಹಿಂದೆ ನೀಡಿದ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತ. ಕೃಷ್ಣನನ್ನು ನವನೀತ ಲೋಲ ಎನ್ನುತ್ತೇವೆ, ಅಂದರೆ ಬೆಣ್ಣೆ ಪ್ರಿಯ, ಬೆಣ್ಣೆ ಸಮೃದ್ದಿಯ ಸಂಕೇತ ಹಾಗಾಗಿ ಅವನು ಗೋವುಗಳ ರಕ್ಷಕ ಎನಿಸಿಕೊಂಡ. ಕೃಷ್ಣನು ಯಾವತ್ತೂ ಸುಖವಾಗಿರಲಿಲ್ಲ, ಕಷ್ಟಗಳಲ್ಲಿಯೇ ಬದುಕಿದ. ಅವನ ಕಣ್ಣ ಮುಂದೆಯೇ ಅವನ ವಂಶ ನಿರ್ವಂಶ ಆಯಿತು, ತಾನು ಕಟ್ಟಿದ ನಗರ ಅವನ ಕಣ್ಣ ಮುಂದೆಯೇ ಯಮುನಾ ನದಿಯಲ್ಲಿ ಮುಳುಗಿ ಹೋಯ್ತು, ಇಂತಹ ಕಷ್ಟಗಳ ಮಧ್ಯೆಯು ಧೃತಿಗೆಡದೆ ನಿರ್ಲಿಪ್ತನಾಗಿರುತ್ತದ್ದ ನಿನ್ನ ಗುರಿ ಮುಟ್ಟಲು ವಿಫಲವಾದರೆ ಹಿಂಜರಿಯಬೇಡ, ನಿನ್ನ ತಂತ್ರಗಾರಿಕೆ ಬದಲಾಯಿಸಿಕೋ, ಆತ್ಮ ಸಂಯಮ ಕಳೆದುಕೊಳ್ಳಬೇಡ ಎಂಬುದು ಕೃಷ್ಣನ ವಾಕ್ಯವಾಗಿದೆ ಎಂದರು.

ಉಪನ್ಯಾಸ ನೀಡಿದ ಶ್ರೀಮತಿ ಸೀತಾ ನಾರಾಯಣೆ ಮಾತನಾಡಿ, ಕೃಷಂ ವಂದೇ ಜಗದ್ಗುರು ಎಂಬಂತೆ ಕೃಷ್ಣ ವಿಶ್ವಕ್ಕೇ ಜಗದ್ಗುರು ಎನಿಸಿಕೊಂಡ, ತುಂಟಾಟಕ್ಕೆ ಚೇಷ್ಟೆಗೆ ಹೆಸರಾದವನು ಶ್ರೀ ಕೃಷ್ಣ, ಅದಕ್ಕಾಗಿ ಪೋಷಕರು ತಮ್ಮ ಮಕ್ಕಳ ಚೇಷ್ಟೆಗಳನ್ನು ಇಷ್ಟ ಪಡುತ್ತಾರೆ, ಗೋಪಿಕಾ ಸ್ತ್ರೀಯರಿಗೂ ಅವನ ಚೇಷ್ಟೆ ಇಷ್ಟ, ಅವರು ಮನೆಯಲ್ಲಿ ಚೇಷ್ಟೆ ಮಾಡಿದರೆ ಹೈನು ಸಂಪತ್ತು ವೃದ್ದಿಯಾಗುತ್ತದೆಂಬ ನಂಬಿಕೆ. ಹಾಗಾಗಿಯೇ ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ ಎಂಬ ಹಾಡು ಜನಜನಿತವಾಗಿರುವುವುದು. ಕೃಷ್ಣ ಎಂದೂ ರಾಜನಾಗಲಿಲ್ಲ ಆದರೆ ರಾಜಧರ್ಮ ಭೋದಿಸಿದ, ರಾಜತಾಂತ್ರಿಕತೆಯಿಂದ ಶತ್ರುಗಳನ್ನು, ಅಸುರರನ್ನು ಸಂಹಾರ ಮಾಡಿದ, ಭಗವಧ್ಘೀತೆ ಒಂದು ವೈಚಾರಿಕ ಗ್ರಂಥವಾಗಿದ್ದು ಜೀವನದ ಸತ್ಯ ದರ್ಶನ ಮಾಡಿಸುತ್ತದೆ ಎಂದರು.

ಯಾದವ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಮಹಾಭಾರತದಲ್ಲಿ ಶ್ರೀ ಕೃಷ್ಣನು ತಂತ್ರಗಾರಿಕೆಯ ಜೊತೆಗೆ ರಾಜಕಾರಣಿಯಾಗಿ ಧರ್ಮ ರಕ್ಷಣೆಯ ಕೆಲಸವನ್ನು ಮಾಡಿದ್ದಾರೆ. ಆದೇರೀತಿ ಜಿಲ್ಲಾಧಿಕಾರಿಗಳು ಶ್ರೀ ಕೃಷ್ಣನಂತೆ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಿ ಜಿಲ್ಲೆಯ ಎಲ್ಲಾ ಗೊಲ್ಲರ ಹಟ್ಟಿಗಳನ್ನು ಕಂದಾಯ ಗ್ರಾಮವಾಗಿ ಮಾಡಿ ಹಾಗೂ ಶವಸಂಸ್ಕಾರಕ್ಕೆ ರುದ್ರಭೂಮಿಯನ್ನು ಕಲ್ಪಿಸಿಕೊಡುವಂತೆ ಸಮಾಜ ಹಲವು ಬೇಡಿಕೆಗಳನ್ನು ಮಂಡಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಜಯಮ್ಮ ಗೋಪಿನಾಯ್ಕ, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಹುಲ್ಲುಮನಿ ತಿಮ್ಮಣ್ಣ, ಡಿವೈಎಸ್ಪಿ ಕನ್ನಿಕಾ ಸಿಕ್ರಿವಾಣಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕಿ ನಜ್ಮಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version