ದಿನದ ಸುದ್ದಿ
ಹರಿಹರ | ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷರ ಮೇಲೆ ಹಲ್ಲೆ, ದೂರು ದಾಖಲಿಸಿಕೊಳ್ಳಲು ಪೊಲೀಸರ ಹಿಂದೇಟು ; ಸೂಕ್ತ ಕ್ರಮಕ್ಕೆ ಒತ್ತಾಯ
ಸುದ್ದಿದಿನ,ದಾವಣಗೆರೆ : ಕನ್ನಡ ಜಾಗೃತಿ ವೇದಿಕೆ ಹರಿಹರ ತಾಲೂಕು ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಕವಿತಾ ಎಸ್. ಪೇಟೆಮಠ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹರಿಹರದ ಸೈಯದ್ ತಾಜುದ್ದೀನ್ ಖಾಜಿ ಎಂಬುವರು ಗೋದಾಮಿನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಮತ್ತು ರಾಗಿ ಸಂಗ್ರಹ ಮಾಡಿದ್ದ ವಿಷಯ ಗೊತ್ತಾಗಿ ಅ. 24 ರಂದು ಗೋದಾಮಿನ ಬಳಿ ನಮ್ಮ ತಾಲೂಕು ಅಧ್ಯಕ್ಷ ಪ್ರವೀಣ್ ಕುಮಾರ್ ಹೋದಾಗ ಹಲ್ಲೆ ನಡೆಸಿದ್ದಲ್ಲದೆ ಚಾಕುವಿನಿಂದ ಕೊಲೆಗೆ ಯತ್ನಿಸಿದ್ದಾರೆ. ಅವರ ವಿರುದ್ಧ ಹರಿಹರ ನಗರ ಪೋಲೀಸ್ ಠಾಣೆಗೆ ಅ. 25 ರಂದು ದೂರು ನೀಡಿದರೂ ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಅವರ ವಿರುದ್ಧ ಸೂಕ್ತ ಕ್ರಮ ತೆಗೆದು ಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರವೀಣ್ ಕುಮಾರ್ ಮಾತನಾಡಿ, ಈ ಮೊದಲು ಅಕ್ರಮವಾಗಿ ಅಕ್ಕಿ ಸಾಗಾಣಿಕೆ ಮಾಡುತ್ತಿದ್ದನ್ನು ಪತ್ತೆ ಹಚ್ಚಲಾಗಿತ್ತು. ಆದರೂ, ಮತ್ತೆ ಅಕ್ರಮವಾಗಿ ಸಾಗಾಣಿಕೆ ಮಾಡುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ನಾನು ಸ್ಥಳಕ್ಕೆ ಹೋದಾಗ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದರು. ಆ ಬಗ್ಗೆ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದಾಗ ಬೇರೆಯವರು ನೀಡಿದ ದೂರು ದಾಖಲಿಸಿಕೊಂಡು, ಸ್ಥಳದಲ್ಲಿ ನಾನು ಇದ್ದೆ ಎಂಬುದನ್ನ ಮಾತ್ರ ತೋರಿಸಿದ್ದಾರೆ. ಹಲ್ಲೆ ನಡೆಸಿದರ ಬಗ್ಗೆ ತೋರಿಸಿಲ್ಲ. ಕೂಡಲೇ ಸಂಬಂಧಿತರ ವಿರುದ್ಧ ದೂರು ದಾಖಲಿಸಿಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ರೈತ ಸಂಘದ ಗೀತಾ, ಸಿ. ಶ್ರೀನಿವಾಸ್, ಮಹ ಮ್ಮದ್ ಗೌಸ್ ಇತರರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243