ದಿನದ ಸುದ್ದಿ
ಬೆಂಗಳೂರು ಹಸಿರೀಕರಣಕ್ಕೆ ಶಾಲಾ ಮಕ್ಕಳಿಗಾಗಿ ’ಹಸಿರು ರಕ್ಷಕ’ ಅಭಿಯಾನ
ಸುದ್ದಿದಿನಡೆಸ್ಕ್: ಬೆಂಗಳೂರಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಪರಿಸರ ರಕ್ಷಣೆಯ ಹೊಣೆಗಾರಿಕೆಯನ್ನು ಮೂಡಿಸುವ ಉದ್ದೇಶದಿಂದ ಗಿಡಗಳನ್ನು ನೆಟ್ಟು ಪೋಷಿಸಲು, ’ಹಸಿರು ರಕ್ಷಕ’ ಅಭಿಯಾನವನ್ನು ರೂಪಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಬ್ರ್ಯಾಂಡ್ ಬೆಂಗಳೂರು ಹಸಿರೀಕರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ವರ್ಷ52 ಸಾವಿರ ಗಿಡಗಳನ್ನು ಶಾಲಾ ಮಕ್ಕಳೇ ನೆಟ್ಟು ಬೆಳೆಸಿದ್ದಾರೆ. ಗಿಡ ನೆಟ್ಟರೆ ಮರ, ಮರದಿಂದ ಮಳೆ, ಮಳೆ ಬಂದರೆ ನೀರು, ನೀರು ಇದ್ದರೆ ನಾವು ನೀವು ಎಂದು ಶಾಲಾ ಮಕ್ಕಳಿಗೆ ಕಿವಿ ಮಾತು ಹೇಳಿದರು.
ಬೆಂಗಳೂರು ನಗರ ಅಂದಾಜಿಗೂ ಮೀರಿ ಬೆಳೆಯುತ್ತಿದ್ದು, ಆರೋಗ್ಯ, ಶಿಕ್ಷಣ, ಕೈಗಾರಿಕೆ, ಉದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದಾಪುಗಾಲಿಡುತ್ತಿದೆ. ಒಂದು ಕಾಲದಲ್ಲಿ ಹಸಿರುನಗರ ಎಂದು ಹೆಸರುವಾಸಿಯಾಗಿದ್ದ ಬೆಂಗಳೂರಿನ ಹೆಮ್ಮೆಯನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದ್ದು, ಇದಕ್ಕಾಗಿಯೇ ಈ ಅಭಿಯಾನವನ್ನು ರೂಪಿಸಲಾಗಿದೆ ಎಂದರು.
ವಿಶ್ವ ಪರಿಸರ ದಿನಾಚರಣೆ – 2024ರ ಅಂಗವಾಗಿ ಬಿಬಿಎಂಪಿ ವತಿಯಿಂದ ಕಬ್ಬನ್ ಪಾರ್ಕ್ʼನಲ್ಲಿ ಇಂದು ಹಮ್ಮಿಕೊಂಡಿದ್ದ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಹಸಿರೀಕರಣ, "ನಾನು ಹಸಿರು ರಕ್ಷಕ" ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದೆ. ಪ್ರತಿಯೊಬ್ಬರೂ ಪರಿಸರ ದಿನದಂದು ಸಸಿ ನೆಟ್ಟು ನೀರು ಹಾಕುತ್ತಾರೆ. ಆದರೆ ಇದು ಕೇವಲ ಪರಿಸರ ದಿನಕ್ಕೆ… pic.twitter.com/27h99gPwLi
— DK Shivakumar (@DKShivakumar) June 14, 2024
ಬೆಂಗಳೂರಿನ ಹಸಿರು ಸಂರಕ್ಷಣೆಗೆ ಒಟ್ಟು 410 ಕೋಟಿ ರೂಪಾಯಿ ಹಣ ಮೀಸಲಿಡಲಾಗಿದೆ. ಕಳೆದ ವರ್ಷ 200 ಕ್ಕೂ ಹೆಚ್ಚು ತಾಲೂಕುಗಳು ಬರಗಾಲ ಎದುರಿಸಬೇಕಾಯಿತು. ಬೆಂಗಳೂರಿನಲ್ಲಿ ಹಿಂದೆಂದೂ ಕಾಣದಂತಹ ನೀರಿನ ಕೊರತೆ ಎದುರಾಯಿತು. ಅಂತಹ ಪರಿಸ್ಥಿತಿ ಮರುಕಳಿಸದಂತೆ ಎಚ್ಚರ ಅಗತ್ಯ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243