ದಿನದ ಸುದ್ದಿ
ಮಹಾರಾಷ್ಟ್ರದಲ್ಲಿ ಬೀದಿವ್ಯಾಪಾರ ಮಾಡುತ್ತಿದ್ದ ಹಾವೇರಿಯ ನಾಲ್ವರಿಗೆ ಕೊರೋನಾ ಸೋಂಕು
ಸುದ್ದಿದಿನ,ಹಾವೇರಿ: ಮಾಹಾರಾಷ್ಟ್ರ ರಾಜ್ಯದಿಂದ ಸೇವಾ ಸಿಂಧು ಪಾಸ್ ಪಡೆದು ಹಾವೇರಿ ಜಿಲ್ಲೆಗೆ ಆಗಮಿಸಿದ್ದ ತುಮ್ಮಿನಕಟ್ಟೆ ಮೂಲದ ನಾಲ್ವರಿಗೆ ಇಂದು ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.
ರಾಣೇಬೆನ್ನೂರು ತಾಲೂಕು ತುಮ್ಮಿನಕಟ್ಟಿ ಗ್ರಾಮದವರಾದ 2 ವರ್ಷದ ಗಂಡು ಮಗು (P-2494 ), 34 ವರ್ಷದ ಪುರುಷ (P-2495 ), 28 ವರ್ಷದ ಮಹಿಳೆ (P-2496) ಹಾಗೂ 22 ವರ್ಷದ ಪುರುಷ (P – 2497) ಗುರುವಾರ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯ ಪಾಂಡಪಾಡ್ವಾದ ಕಲ್ವಾದಲ್ಲಿ ಬೀದಿ ವ್ಯಾಪಾರ ಮಾಡಿಕೊಂಡಿದ್ದ ಇವರು ಸೇವಾ ಸಿಂಧು ಆಪ್ನಲ್ಲಿ ನೊಂದಣಿ ಮಾಡಿಸಿಕೊಂಡು ಎರಡು ಬಸ್ಗಳಲ್ಲಿ ಮೇ 16 ರಂದು ಮಹಾರಾಷ್ಟ್ರದಿಂದ ಹೊರಟು ಮೇ 17 ರಂದು ಬೆಳಗಾವಿಯ ಕೊಂಗನೊಳ್ಳಿ ಚೆಕ್ ಪೋಸ್ಟ್ ಮಾರ್ಗದಿಂದ ಪ್ರಯಾಣ ಬೆಳೆಸಿ ರಾತ್ರಿ 9-15ಕ್ಕೆ ಹಾವೇರಿ ಜಿಲ್ಲೆ ತಡಸ ಚೆಕ್ಪೋಸ್ಟ್ಗೆ ಆಗಮಿಸಿದ್ದರು.
ಎರಡು ಬಸ್ನಲ್ಲಿದ್ದ ಎಲ್ಲ 89 ಜನರನ್ನು ತಡಸ ಚೆಕ್ಪೋಸ್ಟ್ನಲ್ಲಿ ಆರೋಗ್ಯ ತಪಾಸಣೆ ನಡೆಸಿ ನೇರವಾಗಿ ರಾಣೇಬೆನ್ನೂರು ತಾಲೂಕು ಮಾಕನೂರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 29 ಜನರನ್ನು, ಸರ್ಕಾರಿ ಗಿರಿಜನ ಆಶ್ರಮ ಶಾಲೆಯಲ್ಲಿ 19 ಜನರನ್ನು ಹಾಗೂ ಈಶ್ವರ ನಗರದ ದಿ. ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ 41 ಜನರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು.
ದಿನಾಂಕ 24-05-2020 ರಂದು ಮಾಕನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇರಿಸಿದ್ದ 29 ಜನರ ಗಂಟಲು ದ್ರವ್ಯ ಮಾದರಿಯನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ದಿನಾಂಕ 28-05-2020ರಂದು ಬೆಳಿಗ್ಗೆ 10 ಗಂಟೆಗೆ ನಾಲ್ಕು ಜನರಿಗೆ ಕೋವಿಡ್ ಸೋಂಕು ದೃಢಗೊಂಡಿರುವ ವರದಿ ಬಂದಿರುತ್ತದೆ. ನಿಗಧಿತ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ P-2495 ಮತ್ತು P-2496 ಗಂಡ, ಹೆಂಡತಿ ಹಾಗೂ P-2494 ಮಗು ಒಂದೇ ಕುಟುಂಬದವಾಗಿದ್ದಾರೆ.
ಮಾಕನೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ 100 ಮೀಟರ್ ವ್ಯಾಪ್ತಿಯನ್ನು ಕಂಟೈನ್ ಮೆಂಟ್ ಝೋನ್ ಎಂದು ಘೋಷಿಸಲಾಗಿದೆ ಹಾಗೂ ಬಫರ್ ಝೋನ್ ಎಂದು ಗುರುತಿಸಲಾಗಿದೆ. ಈ ಕಂಟೈನ್ಮೆಂಟ್ ಹಾಗೂ ಬಫರ್ ಝೋನ್ ಪ್ರದೇಶಕ್ಕೆ ಇನ್ಸಿಡೆಂಟ್ ಕಮಾಂಡರ್ ಆಗಿ ರಾಣೇಬೆನ್ನೂರ ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿ ಬಸವನಗೌಡ ಕೊಟೂರ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243