ದಿನದ ಸುದ್ದಿ
ಹೆಚ್.ಡಿ. ದೇವೇಗೌಡರಿಂದ ಹಾಸನಾಂಬೆ ದೇವಿ ದರ್ಶನ
ಸುದ್ದಿದಿನ,ಹಾಸನ : ಅಧಿದೇವತೆ ಹಾಸನಾಂಬೆ ದೇವಾಲಯಕ್ಕೆಂದು ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ. ದೇವೇಗೌಡ ಅವರು ಪತ್ನಿ ಚೆನ್ನಮ್ಮ, ಸೊಸೆ ಭವಾನಿ, ಮೊಮ್ಮಗ ಸೂರಜ್ ರೇವಣ್ಣ ಸೇರಿದಂತೆ ಇತರರೊಂದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ದೇವಿಯ ದರ್ಶನ ಪಡೆದರು.
ಹಾಸನಾಂಬ ದೇವಿ ಹಾಗೂ ಸಿದ್ದೇಶ್ವರಸ್ವಾಮಿ ದರ್ಶನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವು ಕೂಡ ಹಾಸನಾಂಬೆ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಬಂದು ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.
ಈ ಬಾರಿ ಕೋರೊನ ಇರುವುದರಿಂದ ಸಂದರ್ಭವನ್ನು ಅರ್ಥ ಮಾಡಿಕೊಂಡು ಜಿಲ್ಲಾಡಳಿತ ಕೋರೊನ ನಡುವೆಯೂ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿ ಕ್ರಮಬದ್ಧವಾಗಿ ವ್ಯವಸ್ಥೆ ಮಾಡಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತಿಳಿಸಿದರು.
ಪ್ರತಿ ವರ್ಷ ಲಕ್ಷಾಂತರ ಜನ ದೇವಿಯ ದರ್ಶನಕ್ಕೆ ಬರುತ್ತಿದ್ದರು. ಆದರೆ ಈ ವರ್ಷ ಕೋರೊನ ಹಿನ್ನೆಲೆಯಲ್ಲಿ ಅವಕಾಶವಿಲ್ಲ ಎಂದರು.
ದೀಪಾವಳಿಯ ದಿನದ ಮಾರನೆ ದಿನ ದೇವಾಲಯದಲ್ಲಿ ದೀಪ ಹಚ್ಚಿ ಬಾಗಿಲು ಹಾಕಲಾಗುತ್ತದೆ. ವರ್ಷ ಪೂರ್ತಿ ದೇವಿಯ ದೀಪ ಉರಿಯುತ್ತಿರುತ್ತದೆ ಎಂಬ ನಂಬಿಕೆ ಇದೆ.
ಜನ ಸಾಮಾನ್ಯರಿಗೆ ದೇವಿಯ ಬಗ್ಗೆ ಅಪಾರ ನಂಬಿಕೆ ವಿಶ್ವಾಸವಿದ್ದ ಕಾರಣ ಕೊರೋನ ಪರಿಸ್ಥಿತಿಯನ್ನು ಜಿಲ್ಲೆ ಸಮರ್ಪಕವಾಗಿ ಎದುರಿಸಲು ಸಾಧ್ಯವಾಯಿತು ಎಂದು ಮಾಜಿ ಪ್ರಧಾನಿ ನುಡಿದರು.
ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತ ಕೂಡ ಅಚ್ಚುಕಟ್ಟಾಗಿ ಕಾರ್ಯಕ್ರಮ ರೂಪಿಸಿದ್ದು, ಜಿಲ್ಲಾಡಳಿತಕ್ಕೆ ತಾವು ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಎಲ್ಲರಿಗೂ ಹಾಸನಾಂಬೆ ತಾಯಿ ಆರೋಗ್ಯ, ಆಯುಸ್ಸು ನೀಡಲಿ ಮತ್ತು ಕೊರೋನದಿಂದ ಮುಕ್ತವಾಗಲಿ ಎಂದು ಬೇಡಿರುವುದಾಗಿ ಹೇಳಿದ ಅವರು ಕೊನೆಗಾಲದಲ್ಲಿ ನಾನು ರಾಜ್ಯಸಭಾ ಸದಸ್ಯನಾಗಿದ್ದೇನೆ. ನನ್ನ ಕೈಲಾದಷ್ಟು ಜನರ ಸೇವೆ ಮಾಡುವುದು ನನ್ನ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243