ದಿನದ ಸುದ್ದಿ
ನಾಟಿ ಮಾಡಿ ಅನ್ನದಾತರಿಗೆ ಹುರುಪು ತುಂಬಿದ ಎಚ್ಡಿಕೆ
ಸುದ್ದಿದಿನ ಡೆಸ್ಕ್
ಅನ್ನದಾತರಿಗೆ ಕೃಷಿಯ ಬಗ್ಗೆ ಇನ್ನಷ್ಟು ಹುರುಪು ತುಂಬುವ ಸಲುವಾಗಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಾಟಿ ಕಾರ್ಯ ಸಾಂಗವಾಗಿ ನೆರವೇರಿತು.
ಖುದ್ದು ಎಚ್ಡಿಕೆ ಅವರೇ ಗದ್ದೆಗಿಳಿದು ನಾಟಿ ಮಾಡುವ ಮೂಲಕ ರೈತರಲ್ಲಿ ಸ್ವಾಭಿಮಾನ ಮತ್ತು ಕೃಷಿಯ ಬಗ್ಗೆ ಆತ್ಮವಿಶ್ವಾಸ ಮೂಡಿಸಲು ನೆರವಾಯಿತು.
ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದಲ್ಲಿ ಸಿಎಂ ನಾಟಿ ಮಾಡುವ ಕಾರ್ಯ ಹನ್ನೊಂದು ಗಂಟೆಗೆ ನಿಗದಿಯಾಗಿತ್ತು. ಆದರೆ ಎರಡು ಗಂಟೆ ತಡವಾಗಿ ಬಂದ, ಸಿಎಂ ಅವರಿಗೆ ಮಳೆ ಎದುರಾಯಿತು. ಸ್ವಲ್ಪ ಹೊತ್ತು ಕಾದು ಕುಳಿತ ಸಿಎಂ ಊರಿನ ಹಿರಿಯರು, ರಾಜಕಾರಣಿಗಳ ಸಮ್ಮುಖದಲ್ಲಿ ನಾಟಿ ಮಾಡಿದರು. ಸಿಎಂ ಅವರು ಗದ್ದೆಗೆ ಇಳಿಯುತ್ತಿದ್ದಂತೆಯೇ ವರುಣನ ಆರ್ಭಟ ಇನ್ನಷ್ಟು ಹೆಚ್ಚಾಗಿ ಕಾರ್ಯಕ್ರಮ ರದ್ದಾಗುತ್ತದೆಯೇನೋ ಎಂಬ ಆತಂಕದ ಮೋಡ ಕವಿದಿತ್ತು.
ಸಿಎಂ ಅವರ ಹಿಂದೆಯೇ ಹತ್ತಾರು ವಾಹಿನಿಗಳ ವಾಹನಗಳು, ಭದ್ರತಾ ವಾಹನಗಳು, ಅತಿಥಿಗಳ ಕಾರುಗಳು ಸಾಲಾಗಿ ಬಂದವು.
ಅವರು ಬರುವ ಮುನ್ನವೇ ಹಾಜರಾಗಿದ್ದ ಜಾನಪದ ಕಲಾವಿದರು, ನಾಟಿ ಕೂಲಿ ಕಾರ್ಮಿಕರು, ಬ್ಯಾಂಡ್ಸೆಟ್ನವರು ಪ್ರಾಕ್ಟೀಸ್ ಶುರು ಮಾಡಿಬಿಟ್ಟಿದ್ದರು.
ಅರಳಕುಪ್ಪೆ-ಸೀತಾಪುರ ಗ್ರಾಮದ ಹಳೇಗದ್ದೆ ಬಯಲು ಪ್ರದೇಶದಲ್ಲಿರುವ ಮಹದೇವಮ್ಮ, ಕುಳ್ಳಮ್ಮ, ಮಾಯಮ್ಮ ಹಾಗೂ ಹೇಮಲತಾ ಎಂಬುವವರಿಗೆ ಸೇರಿದ ಸುಮಾರು 5 ಎಕರೆ ಗದ್ದೆಯನ್ನು ನಾಟಿ ಕಾರ್ಯಕ್ಕೆ ಸಜ್ಜುಗೊಳಿಸಲಾಗಿತ್ತು.
ಭತ್ತದ ನಾಟಿ ಮಾಡುವ ಮೂಲಕ ರೈತರಿಗೆ ಆತ್ಮಸ್ಥ್ತ್ರೈರ್ಯ ಬೆಳೆಸಲು ಮುಂದಾಗಿದ್ದ ಸಿಎಂ ಅವರಿಗೆ ಭಾರಿ ಭದ್ರತೆ ನೀಡಲಾಗಿತ್ತು ಎಂದು ಸಚಿವ ಸಿಎಸ್ಪುಟ್ಟರಾಜು ತಿಳಿಸಿದರು.