ಲೈಫ್ ಸ್ಟೈಲ್
ಬೇಸಿಗೆಯಲ್ಲಿ ಉಂಟಾಗುವ ಆರೋಗ್ಯ ಪರಿಣಾಮಗಳು
ಬೇಸಿಗೆ ಬಂತೆಂದರೆ ಸಾಕು ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮನೆಯ ಅಥವಾ ಆಫೀಸ್ ಹೊರಗೆ ಕಾಲಿಡಲು ಮನಸಾಗುವುದಿಲ್ಲ. ಕಾರಣ ಇಷ್ಟೆ, ದೇಹವು ತನ್ನನ್ನು ತಾನಾಗಿಯೇ ಹೊರಗಿನ ಯಾವುದೇ ದುಷ್ಪರಿಣಾಮಿ ಶಕ್ತಿಗಳಿಂದ ರಕ್ಷಿಸಿಕೊಳ್ಳಲು ಬಯಸುತ್ತದೆ. ಇದು ದೇಹದ ಸ್ವ ರಕ್ಷಣಾ ಪರಿಕರಗಳಲ್ಲಿ ಒಂದು.
ಕೆಲವೊಮ್ಮೆ ತುರ್ತು ಪರಿಸ್ಥಿತಿಗಳಲ್ಲಿ ಎಂಥಾ ಉರಿಬಿಸಿಲೂ ಎನ್ನದೇ ಆಗಬೇಕಿರುವ ಕೆಲಸಕ್ಕೆ ಒತ್ತು ನೀಡಿ ಹೊರ ಹೋಗುತ್ತೇವೆ. ಆದರೆ ನಮ್ಮ ನಾಡಿನ ಬೆನ್ನೆಲುಬು ಆಗಿರವ ರೈತರು ಅದರಲ್ಲೂ ನೀರಾವರಿ ಹೊಂದಿರುವವರು ಇದ್ಯಾವ ಬಿಸಿಲಿಗೂ ಲೆಕ್ಕಿಸದೇ ಹೊಲಗಳಲ್ಲಿ ನಿತ್ಯ ಕೆಲಸ ಮಾಡುತ್ತಾರೆ. ಅವರಿಗೆ ನಮಸ್ಕರಿಸೋಣ. ಆದರೆ, ಬಿಸಿಲಲ್ಲಿ ಹೋದರೂ ಹೋಗದಿದ್ದರೂ ದೇಹದಲ್ಲಿ ಈ ಅವಧಿಯಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತವೆ. ಅವುಗಳಿಗೆ ಸ್ವಲ್ಪ ಮುಂಜಾಗ್ರತೆ ವಹಿಸಿದರೆ ಬೇಸಿಗೆ ಮುಗಿಯುವವರೆಗೂ ಯಾವುದೇ ಸಮಸ್ಯೆಯಿಲ್ಲದೇ ಮುಂದೆ ಸಾಗಬಹುದು.
1.ನಿರ್ಜಲೀಕರಣ
ದೇಹದಲ್ಲಿನ ನೀರಿನಾಂಶ ನಮಗೆ ಗೊತ್ತಾಗುವಂತೆ ಮತ್ತು ಗೊತ್ತಾಗದೆಯೇ ಯಾವಾಗಲೂ ಹೊರಹೋಗುತ್ತಿರುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ನೀರಿನಾಂಶವನ್ನು ಬೆವರು ಮತ್ತು ಉಸಿರಾಟಗಳಲ್ಲಿ ಹೊರಹಾಕುತ್ತೇವೆ. ಕಾರಣ ಹೊರಗಿನ ತಾಪಮಾನಕ್ಕೆ ತಕ್ಕಂತೆ ನಮ್ಮ ದೇಹದೊಳಗಿನ ತಾಪಮಾನವೂ ಹೆಚ್ಚುತ್ತದೆ. ಆಗ ಉಂಟಾಗುವುದೇ ನಿರ್ಜಲೀಕರಣ.
- ನಿರ್ಜಲೀಕರಣದಿಂದ ಕಿಡ್ನಿಗಳಿಗೆ ಮುಖ್ಯವಾಗಿ ತೊಂದರೆಯಾಗಿ ದೇಹದೊಳಗಿನ ಕಲ್ಮಶಗಳನ್ನು ಹೊರಹಾಕಲಾಗುವುದಿಲ್ಲ.
- ಕರುಳುಗಳಲ್ಲಿ ನೀರಿನಾಂಶ ಕಡಿಮೆಯಾಗಿ ಮಲವಿಸರ್ಜನೆಗೆ ತೊಂದರೆಯಾಗುತ್ತದೆ
ತುಟಿ-ನಾಲಗೆ ಒಣಗಿ ಹೋಗುತ್ತವೆ - ಮಾಂಸಖಂಡಗಳ ಸೆಳೆತವುಂಟಾಗುತ್ತದೆ
- ಚರ್ಮ ಸುಕ್ಕುಗಟ್ಟಲು ಶುರುವಾಗಿ ಕಾಂತಿ ಕಳೆದುಕೊಳ್ಳುತ್ತದೆ
2. ಶಾಖದ ಸ್ಟ್ರೋಕ್
- ದೇಹದೊಳಗೆ ಶಾಖ ಹೆಚ್ಚಾಗಿ ಜೀವಕ್ಕೇ ಅಪಾಯ ತಂದೊಡ್ಡುವ ಪರಿಸ್ಥಿತಿಯೇ ಶಾಖದ ಸ್ಟ್ರೋಕ್.
- ಇದರ ಪರಿಣಾಮ ಗಾಬರಿಗೊಳ್ಳುವುದು, ಉಸಿರಾಟ ತೊಂದರೆ, ಕ್ಷೀಣವಾದ ನಾಡಿಮಿಡಿತದಿಂದ ಮಿದುಳಿಗೆ ರಕ್ತಸಂಚಾರ ಅಗತ್ಯವಾಗಿ ಪೂರೈಕೆಯಾಗದೇ ಪ್ರಜ್ಞಾಹೀನ ಸ್ಥಿತಿಗೆ ತಲುಪಬಹುದು.
3. ಜೀರ್ಣಾಂಗವ್ಯೂಹದ ತೊಂದರೆಗಳು
- ಪ್ರವಾಸಕ್ಕೆ ಹೋದಾಗ ಆಹಾರ ತುಂಬಾ ಹೊತ್ತು ಅತಿಯಾದ ಶಾಖಕ್ಕೆ ಒಳಗಾಗುವುದರಿಂದ ಆಹಾರ ಕೆಟ್ಟು ಹೋಗುತ್ತವೆ.
- ಹೊರಗೆ ಮಾರುಕಟ್ಟೆಗಳಲ್ಲಿ ಮಾರುವ ಆಹಾರ ಪದಾರ್ಥಗಳು ಅಥವಾ ಮನೆಯಲ್ಲೇ ತಯಾರಿಸಿಟ್ಟ ಆಹಾರ ಪದಾರ್ಥಗಳು ಹೊರಗಿನ ಬಿಸಿಲಿನ ತಾಪಮಾನಕ್ಕೆ ತಮ್ಮ ಪೌಷ್ಟಿಕತೆಯನ್ನು ಕಳೆದುಕೊಳ್ಳುತ್ತವೆ.
- ಅಂತಹ ಆಹಾರವನ್ನು ಸೇವಿಸುವುದರಿಂದ ಜೀರ್ಣಾಂಗವ್ಯೂಹದ ತೊಂದರೆಗಳು ಉಂಟಾಗುವ ಸಾಧ್ಯತೆಗಳಿರುತ್ತವೆ
4. ಕಣ್ಣುಗಳಿಗೆ ತೊಂದರೆ
ಸೂರ್ಯನ ಕಿರಣಗಳಲ್ಲಿ ಇರುವ ಅತಿನೇರಳೆ ಕಿರಣಗಳು ಕಣ್ಣೊಳಗಿನ ಕಾರ್ನಿಯಾ, ಲೆನ್ಸ್, ರೆಟಿನಾ, ಹೀಗೆ ಎಲ್ಲಾ ಭಾಗಗಳನ್ನೂ ಹಾನಿಯುಂಟು ಮಾಡುವ ಗುಣ ಹೊಂದಿದ್ದು, ಮುಂದೆ ಕಣ್ಣು ಕುರುಡು ಉಂಟಾಗಬಹುದು.
5. ಸನ್ ಬನ್ರ್ಸ್
ಅತಿ ಹೆಚ್ಚು ಕಾಲ ಬಿಸಿಲಲ್ಲಿ ಇರುವುದರಿಂದ ಕೆಲವೊಮ್ಮೆ ಚರ್ಮದ ಮೇಲೆ ಸೂರ್ಯನ ಕಿರಣಗಳಿಂದ ಹಾನಿಯುಂಟಾಗಬಹುದು. ಅದಕ್ಕೆ ಸನ್ ಬನ್ರ್ಸ್ ಎಂದು ಕರೆಯುತ್ತಾರೆ.
– ಹೆಚ್ಚಾಗಿ ಇದು ಸೂಕ್ಷ್ಮ ಚರ್ಮ ಮತ್ತು ಅತಿ ಬಿಳಿ ಚರ್ಮ ಹೊಂದಿರುವವರಿಗೆ ಉಂಟಾಗುತ್ತದೆ
6. ಚರ್ಮದ ಕ್ಯಾನ್ಸರ್
- ಸನ್ ಬನ್ರ್ಸ್ ಉಂಟಾಗುವುದರ ಜೊತೆಗೆ ಚರ್ಮದೊಳಗಿನ ಕಣಗಳಲ್ಲಿನ ಡಿ ಎನ್ ಎ ದಲ್ಲಿ ವ್ಯತ್ಯಾಸ ಉಂಟಾಗಿ ಚರ್ಮದ ಕ್ಯಾನ್ಸರ್ ಗೂ ಅದು ನಾಂದಿಯಾಗಬಹುದು.
ಇದು ಸಾಮಾನ್ಯವಾಗಿ 50 ವರ್ಷ ಗಳಿಗಿಂತ ಮೇಲ್ಪಟ್ಟವರಲ್ಲಿ ಕಾಣಿಸಿಕೊಳ್ಳುತ್ತದೆ.
7. ನೀರಿನಲ್ಲಿ ಮುಳುಗುವುದು
- ಸಾಮಾನ್ಯವಾಗಿ ಬೇಸಿಗೆಯಲ್ಲಿ ಬಿಸಿಲಿನ ಧಗೆಯನ್ನು ತಾಳಲಾರದೆ ಹಳ್ಳಿಗಳಲ್ಲಿ ಊರಲ್ಲಿರುವ ಕೆರೆ ಅಥವಾ ನದಿಗಳಲ್ಲಿ ಈಜುವುದಕ್ಕಾಗಲೀ ಅಥವಾ ಸ್ನಾನ ಮಾಡುವುದಕ್ಕಾಗಲೀ ಹದಿಹರೆಯದ ಮಕ್ಕಳು ಹೊಗುವುದುಂಟು. ಇನ್ನು ಪಟ್ಟಣಗಳಲ್ಲಿ ಬಂದರೆ ಈಜು ಕೊಳಗಳಿಗೆ ಹೋಗುವುದುಂಟು.
- ಆದರೆ ಆ ಸಂದರ್ಭಗಳಲ್ಲಿ ಹತೋಟಿ ನಮ್ಮ ಕೈಮೀರಿ ಹೋದರೆ ನೀರಿನ ಅವಘಡಗಳಿಂದ ಸಾವುಗಳು ಸಂಭವಿಸುವುದುಂಟು
8. ವೆಲ್ಡಿಂಗ್ನಿಂದ ಉಂಟಾಗುವ ಹಾನಿ
- ವೆಲ್ಡಿಂಗ್ ಅಥವಾ ಬೇರೆ ಯಾವುದೇ ಬೆಂಕಿಯನ್ನು ಬಳಸಿಕೊಂಡು ನಡೆಸುವ ವೃತ್ತಿಗಳನ್ನು ಮಾಡುವವರು ಕಣ್ಣು, ಚರ್ಮಕ್ಕೆ ಬೇಸಿಗೆಯ ಧಗೆಯಲ್ಲಿ ಹಾನಿ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಮುಂಜಾಗ್ರತಾ ಕ್ರಮಗಳು
- ಸಾಮಾನ್ಯವಾಗಿ ಯಾವ ಕಾಲಕ್ಕೂ ಅನ್ವಯವಾಗುವಂತೆ ದಿನಕ್ಕೆ 2.5 ರಿಂದ 3 ಲೀ ನೀರು ಕುಡಿಯಬೇಕಾಗಿರುತ್ತದೆ. ಆದರೆ ಬೇಸಿಗೆಯಲ್ಲಿ ನಿರ್ಜಲೀಕರಣದ ಪರಿಣಾಮ 3ಲೀ ಗೂ ಹೆಚ್ಚು ನೀರು ಕುಡಿಯುವುದು ಸೂಕ್ತ.
- ಬಿಸಿಲಲ್ಲಿ ಮಾಡಬಹುದಾದ ಕೆಲಸಗಳು ನೆರಳಲ್ಲೂ ಮಾಡಬಹುದಾದರೆ ನೆರಳಲ್ಲೇ ಮಾಡುವುದು ಸೂಕ್ತ.
- ಅತೀ ಶಾಖಕ್ಕೆ ತೆರೆದಿಟ್ಟ ಆಹಾರ ಪದಾರ್ಥಗಳನ್ನು ತಿನ್ನದಿರುವುದು ಸೂಕ್ತ.
- ಹೊರಗೆ ಹೋಗುವಾಗ ಕಣ್ಣುಗಳಿಗೆ ತಂಪು ಕನ್ನಡಕಗಳನ್ನು ಬಳಕೆ ಮಾಡುವುದು.ಅದರಲ್ಲೂ ಅತಿನೇರಳೆ ಕಿರಣಗಳು ಹಾಯದ ಕನ್ನಡಕಗಳನ್ನು ಬಳಸಿದರೆ ಉತ್ತಮ.
- ಚರ್ಮ ಹಾನಿಯನ್ನು ತಪ್ಪಿಸಲು ಸನ್ಸ್ಕ್ರೀನ್ಗಳನ್ನು ಬಳಸುವುದು.
- ದೇಹದ ತಾಪಮಾನ ಈಗಾಗಲೇ ಹೆಚ್ಚಿರುವ ಸಂದರ್ಭಗಳಲ್ಲಿ ( ಉದಾ; ಜ್ವರ, ಇತ್ಯಾದಿ) ಬಿಸಿಲಿಗೆ ಹೋಗದಿರುವುದು.
- ಪ್ರತಿದಿನ ಬೆಳಗ್ಗೆ ವ್ಯಾಯಾಮ ಅಥವಾ ಜಾಗಿಂಗ್ ಗೆ ಹೋಗುವವರು ಆದಷ್ಟು ಸೂರ್ಯ ಉದಯವಾಗುವ ಸಮಯದೊಳಗೆ P ಮನೆ ಸೇರುವುದು.
- ವೆಲ್ಡಿಂಗ್ ಕೆಲಸ ಮಾಡುವವರು ಕಣ್ಣುಗಳಿಗೆ ದೃಷ್ಟಿ ಪರದೆಗಳನ್ನು ಬಳಸುವುದು.
ವಿಡಿಯೋ ಸುದ್ದಿ ನೋಡಲು ಸುದ್ದಿದಿನ Youtube channel ಗೆ subscribe ಆಗಿ: