ಲೈಫ್ ಸ್ಟೈಲ್
ಮುದ್ರಾ ಯೋಗದಿಂದ ಆರೋಗ್ಯಭಾಗ್ಯ..!
ಈ ಬ್ರಹ್ಮಾಂಡವು ಪಂಚತತ್ವಗಳಿಂದ ಕೂಡಿದೆ. ಅವುಗಳಾವುವೆಂದರೆ ಅಗ್ನಿ, ವಾಯು, ಆಕಾಶ, ಪೃಥ್ವಿ ಮತ್ತು ಜಲ. ಅದೇ ರೀತಿ ನಮ್ಮ ಶರೀರವು ಸಹ ಪಂಚತತ್ವಗಳಿಂದಾಗಿದೆ. ಯಾವಾಗ ಈ ಪಂಚತತ್ವಗಳು ಸಮತೋಲನದಲ್ಲಿರುತ್ತವೆಯೋ ಆಗ ನಾವು ಆರೋಗ್ಯದಿಂದಿರುತ್ತೇವೆ. ಯಾವಾಗ ಸಮತೋಲನ ಕಳೆದುಕೊಳ್ಳತ್ತೇವೆಯೋ ಆಗ ನಮಗೆ ಅನಾರೋಗ್ಯದಿಂದ ರೋಗಗಳು ತಲೆದೋರುತ್ತವೆ. ಈ ಪಂಚತತ್ವಗಳನ್ನು ಸಮತೋಲನದಲ್ಲಿ ಕಾಪಾಡುವುದೇ ಮುದ್ರಾಯೋಗದ ಉದ್ದೇಶವಾಗಿದೆ.
ಮುದ್ರೆಗಳನ್ನು ಯೋಗದ ಅಂಶವೆಂದು ಪರಿಗಣಿಸಲಾಗಿದೆ. ಕೈಯ ಅಂಗುಷ್ಠದೊಂದಿಗೆ ಇತರ ಬೆರಳುಗಳನ್ನು ಸಂಯೋಜಿಸಿ ಮಾಡುವ ಭಂಗಿಗಳನ್ನು ಹಸ್ತಮುದ್ರೆಗಳೆನ್ನುವರು. ಈ ಮುದ್ರೆಗಳಿಂದ ಆರೋಗ್ಯವನ್ನು ಸಂವರ್ಧಿಸಿ, ಸಂರಕ್ಷಿಸಬಹುದಾಗಿರುತ್ತದೆ.
ನಮ್ಮ ಶರೀರದಿಂದ ಇಲೆಕ್ಟ್ರೊ ಮ್ಯಾಗ್ನೆಟಿಕ್ ಪವರ್ ಅಥವಾ ವಿದ್ಯುತ್ ಕಾಂತೀಯ ಅಲೆಗಳು, ಸತತವಾಗಿ ಹೊರಹೊಮ್ಮುತ್ತಿರುತ್ತವೆ. ಈ ಚೈತನ್ಯ ಶಕ್ತಿಯು ಕೈ ಬೆರಳುಗಳ ತುದಿ, ಮೂಗು, ತುಟಿ, ಕಿವಿ ಮತ್ತು ಕಾಲುಬೆರಳುಗಳ ತುದಿಯಿಂದ ಸದಾ ಹೊರಹೊಮ್ಮುತ್ತಿರುತ್ತವೆ. ಮುದ್ರಾಯೋಗವನ್ನು ಕೈಬೆರಳುಗಳಿಂದ ಮಾಡುವ ಮೂಲಕ, ಈ ಚೈತನ್ಯ ಶಕ್ತಿಯನ್ನು ಬಂಧಿಸಿ ಶರೀರಕ್ಕೆ ಮರುಕಳಿಸುವಂತೆ ಮಾಡಿ, ಪಂಚತತ್ವಗಳನ್ನು ಸಮತೋಲನವಾಗಿ ಇಟ್ಟುಕೊಳ್ಳಬಹುದಾಗಿರುತ್ತದೆ.
ನಮ್ಮ ಶರೀರದಲ್ಲಿರುವ ಪಂಚ ತತ್ವಗಳಾದ ಆಕಾಶ, ವಾಯು, ಅಗ್ನಿ, ಪೃಥ್ವಿ, ಜಲ ಇವುಗಳು ಇಡೀ ಶರೀರದಲ್ಲಿ ಸಂಚರಿಸುತ್ತಿದ್ದು, ಪ್ರತಿ ತತ್ವದ ಪ್ರಾಬಲ್ಯವು ವಿಶಿಷ್ಟ ಭಾಗದಲ್ಲಿವೆ.
ತತ್ವ ,ದೇಹದ ಭಾಗ, ಬೆರಳುಗಳ ಸಂಬಂಧ
• ಅಗ್ನಿ ತತ್ವ – ನಾಭಿಯಿಂದ ಎದೆಯವರೆಗೆ ಹೆಬ್ಬೆರಳು
• ವಾಯು ತತ್ವ -ಮೂಗಿನಿಂದ ಎದೆಯವರೆಗೆ – ತೋರು ಬೆರಳು
• ಆಕಾಶ ತತ್ವ – ಶಿರಸ್ಸು-ಮಧ್ಯದ ಬೆರಳು
• ಪೃಥ್ವಿ ತತ್ವ – ಅಂಗಾಲಿನಿಂದ ಮಂಡಿಗಳವರೆಗೆ- ಉಂಗುರದ ಬೆರಳು
• ಜಲ ತತ್ವ – ಮಂಡಿಗಳಿಂದ ನಾಭಿಯವರೆಗೆ – ಕಿರಿ ಬೆರಳು
ಮುದ್ರೆಗಳನ್ನು ಮಾಡುವುದು ಹೇಗೆ?
• ಹೆಬ್ಬೆರಳಿನೊಂದಿಗೆ ಇತರ ಬೆರಳುಗಳ ತುದಿಯನ್ನು ಜೋಡಿಸಿದಾಗ, ಆಯಾ ತತ್ವವು ಸಮತೋಲನದಲ್ಲಿರುತ್ತದೆ.
• ಹೆಬ್ಬೆರಳಿನ ಬುಡದ ಕೆಳಗೆ ಇತರ ಬೆರಳುಗಳ ತುದಿ ಜೋಡಿಸಿದಾಗ, ಆಯಾ ತತ್ವವು ಕಡಿಮೆ ಆಗುತ್ತದೆ.
• ಹೆಬ್ಬೆರಳಿನ ತುದಿಯು ಇತರ ಬೆರಳುಗಳ ಬುಡಕ್ಕೆ ತಾಗಿಸಿದಾಗ, ಆಯಾ ತತ್ವವು ಹೆಚ್ಚುತ್ತದೆ.
• ಮುದ್ರೆಗಳನ್ನು ಮಾಡುವಾಗ ಬೆರಳಿನ ತುದಿಭಾಗಗಳ ಸ್ಪರ್ಶ ಮಾತ್ರ ಆದರೆ ಸಾಕು. ಒತ್ತು ಕೊಡುವ ಅವಶ್ಯಕತೆ ಇಲ್ಲ. ಇತರ ಬೆರಳುಗಳನ್ನು ಸಾಕಷ್ಟು ನೇರವಾಗಿಡಬೇಕು.
• ಇದನ್ನು ಎಲ್ಲಾ ವಯಸ್ಸಿನವರು ಮಾಡಬಹುದು, ಇದನ್ನು ಮಾಡಲು ಸಮಯ, ದಿಕ್ಕು, ಆಸನಗಳ ಬಂಧನವಿಲ್ಲ.ಮುದ್ರೆ ಮಾಡುವಾಗ ಕೈಗಳನ್ನು ಮೇಲ್ಮುಖವಾಗಿಡಬೇಕು.
ಮುದ್ರೆಗಳು ವೆಚ್ಚವಿಲ್ಲದ ಚಿಕಿತ್ಸೆ, ಸ್ವತಃ ಮಾಡುವ ಚಿಕಿತ್ಸೆ. ಎಲ್ಲಾ ರೀತಿಯ ಕಾಯಿಲೆಗಳಿಗೂ ಮುದ್ರೆಗಳಿಂದ ಚಿಕಿತ್ಸೆ ಮಾತ್ರವಲ್ಲ, ನಮ್ಮಲ್ಲಿನ ರೋಗ ಪ್ರತೀಕಾರಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದೊಂದು ಔಷಧಿರಹಿತವಾದ ಚಿಕಿತ್ಸೆ. ಇದರಲ್ಲಿ ಔಷಧಿಯ ಸೈಡ್ ಎಫೆಕ್ಟ್ಗಳಿಲ್ಲದೆ ಆರೋಗ್ಯವನ್ನು ಸರಿಪಡಿಸಬಹುದು.
ಮುದ್ರಾಯೋಗವನ್ನು ಯಾರು ಬೇಕಾದರು ಮಾಡಬಹುದು, ಎಲ್ಲಾ ಪ್ರಕಾರದ ರೋಗಗಳನ್ನು ನಿವಾರಿಸಿಕೊಳ್ಳಬಹುದು. ಮುದ್ರಾ ಯೋಗ ಮಾಡುವುದರ ಜೊತೆಗೆ ನಂಬಿಕೆ, ವಿಶ್ವಾಸ ಮತ್ತು ತಾಳ್ಮೆ ಇದ್ದರೆ ಮಾತ್ರ ಪರಿಣಾಮಕಾರಿ. ಬಹು ಮುಖ್ಯವಾದ ಕೆಲವು ಮುದ್ರೆಗಳನ್ನು ಮಾಡುವ ವಿಧಾನ ಹಾಗೂ ಅದರ ಉಪಯೋಗಗಳು
1 ಜ್ಞಾನ ಮುದ್ರೆ
ಹೆಬ್ಬೆರಳಿನ ತುದಿ ಮತ್ತು ತೋರು ಬೆರಳಿನ ತುದಿಯನ್ನು ಸ್ಪರ್ಶಿಸಿದಾಗ ಜ್ಞಾನಮುದ್ರೆ ಆಗುತ್ತದೆ.ಇದು ಏಕಾಗ್ರತೆ ಹೆಚ್ಚಿಸುತ್ತದೆ, ನಿದ್ರ್ರಾಹೀನತೆ, ತಲೆನೋವು, ಕೋಪದ ಸಮಸ್ಯೆ, ಮರೆವು ಪರಿಹರಿಸುತ್ತದೆ. ಮುಖ್ಯವಾಗಿ ಮತಿಮಾಂದ್ಯತೆ ನೀಗುತ್ತದೆ (ರಾತ್ರಿ ಇಡೀ ಮುದ್ರೆಗೆ ಟೇಪ್ ಹಾಕಿಡಬೇಕು). ಸ್ಮರಣ ಶಕ್ತಿ ಚುರುಕಾಗುತ್ತದೆ.
2 ಆಕಾಶ ಮುದ್ರೆ
ಹೆಬ್ಬೆರಳಿನ ತುದಿ ಮತ್ತು ಮಧ್ಯದ ಬೆರಳಿನ ತುದಿಯನ್ನು ಸ್ಪರ್ಶಿಸಿದಾಗ ಆಕಾಶ ಮುದ್ರೆ ಆಗುತ್ತದೆ. ಹೃದಯದ ಯಾವುದೇ ಸಮಸ್ಯೆಯಿದ್ದರೂ, ಈ ಮುದ್ರೆಯಿಂದ ಶಮನವಾಗುತ್ತದೆ. ಕಿವಿಯ ತೊಂದರೆ ಸರಿಪಡಿಸುತ್ತದೆ. ಎಲುಬುಗಳನ್ನು ಗಟ್ಟಿಮುಟ್ಟಾಗಿಡುತ್ತದೆ. ಮೈಗ್ರೇನ್ ತಲೆನೋವುವನ್ನು ಸರಿಪಡಿಸುತ್ತದೆ. ಶರೀರದಲ್ಲಿನ ವಿಷದ್ರವ್ಯಗಳನ್ನು ಹೊರ ಹಾಕಿ ಶರೀರ ಶುದ್ಧವಾಗಿದುತ್ತದೆ.
3 ಪೃಥ್ವಿ ಮುದ್ರೆ
ಹೆಬ್ಬೆರಳಿನ ತುದಿ ಮತ್ತು ಬೆರಳಿನ ತುದಿ ಸ್ಪರ್ಶಿಸಿದಾಗ ಪೃಥ್ವಿ ಮುದ್ರೆ ಆಗುತ್ತದೆ.
ಜ್ವರ ಬರದಂತೆ ಕಾಪಾಡುತ್ತದೆ/ಜ್ವರ ಇದ್ದರೆ ಅದನ್ನು ಇಳಿಸುತ್ತದೆ. ಈ ಮುದ್ರೆಯು ರಕ್ತದ ಚಲನೆ ಹೆಚ್ಚಿಸುತ್ತದೆ. ಇದು ನಮ್ಮ ದೇಹದ ಎಲುಬು ಮತ್ತು ಸ್ನಾಯುಗಳ ಬಲವರ್ಧಿಸುತ್ತದೆ. ತ್ವಚೆಯ ಕಾಂತಿ ಹೆಚ್ಚುಸುತ್ತದೆ. ಬಾವು, ಹುಣ್ಣು ಸರಿಪಡಿಸುತ್ತದೆ. ತಲೆಗೂದಲು ಉದುರುತ್ತ್ತಿದ್ದರೆ, ನೆರೆಯುತ್ತಿದ್ದರೆ ಸರಿಪಡಿಸುತ್ತದೆ.
4 ವರುಣ ಮುದ್ರೆ
ಹೆಬ್ಬೆರಳಿನೊಂದಿಗೆ ಕಿರುಬೆರಳಿನ ತುದಿ ಸ್ಪರ್ಶಿಸಿದಾಗ ವರುಣ ಮುದ್ರೆ ಆಗುತ್ತದೆ.
ಈ ಮುದ್ರೆಯು ನಮ್ಮ ದೇಹದಲ್ಲಿರುವ ನೀರಿನ ಅಂಶವನ್ನು ಸಮತೋಲನದಲ್ಲಿ ಇಡುತ್ತದೆ. ನಮ್ಮ ದೇಹದ ಸೌಂದರ್ಯ ಹೆಚ್ಚಿಸುತ್ತದೆ. ನಮ್ಮ ಚರ್ಮಕ್ಕೆ ಕಾಂತಿ ನೀಡುತ್ತದೆ, ಏಕೆಂದರೆ ದೇಹದಲ್ಲಿರುವ ನೀರಿನ ಅಂಶಕ್ಕೆ ಚಾಲನೆ ನೀಡಿ ಅದು ಚರ್ಮವನ್ನು ಪೋಷಿಸುತ್ತದೆ. ಅನೀಮಿಯಾ ಆಗಿ ರಕ್ತ ಕಡಿಮೆ ಆದಾಗ ಸರಿಪಡಿಸುತ್ತದೆ. ಮೂರ್ಛೆ ರೋಗವನ್ನು ಸರಿಪಡಿಸಬಹುದಾಗಿದೆ.
ಎರಡು ಬೆಟ್ಟಿನ ಮುದ್ರೆಗಳು
5 ಆಪಾನ ಮುದ್ರೆ
ಹೆಬ್ಬೆಟ್ಟಿನ ತುದಿಯೊಂದಿಗೆ ಮಧ್ಯದ ಬೆರಳಿನ ತುದಿ ಮತ್ತು ಉಂಗುರ ಬೆರಳಿನ ತುದಿ ಸ್ಪರ್ಶ ಮಾಡಿದಾಗ ಅಪಾನ ಮುದ್ರೆ ಆಗುತ್ತದೆ.
ಹೊಟ್ಟೆಯ ನೋವು, ಉಬ್ಬರಿಸಿದರೆ ಶಮನಗೊಳ್ಳುತ್ತದೆ. ಮೂಲವ್ಯಾಧಿ, ಮಧುಮೇಹದ ಕಾಯಿಲೆ ಸರಿಪಡಿಸುತ್ತದೆ. ಕೈಕಾಲು, ಹೊಟ್ಟೆ, ಎದೆ ಉರಿಗಳನ್ನು ಶಮನಗೊಳಿಸುತ್ತದೆ. ಹಲ್ಲು ನೋವು, ವಸಡು ರೋಗಗಳನ್ನು ಗುಣಪಡಿಸುತ್ತದೆ.
6 ಪ್ರಾಣ ಮುದ್ರೆ
ಹೆಬ್ಬೆಟ್ಟಿನ ತುದಿಯೊಂದಿಗೆ ಉಂಗುರ ಬೆರಳಿನ ತುದಿ ಮತ್ತು ಕಿರಿಬೆರಳಿನ ತುದಿ ಸ್ಪರ್ಶ ಮಾಡಿದಾಗ ಪ್ರಾಣ ಮುದ್ರೆ ಆಗುತ್ತದೆ.
ಈ ಮುದ್ರೆಯು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಸುಧಾರಿಸಿ, ದೃಷ್ಟಿಯನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಆಯಾಸವನ್ನು ಹೋಗಲಾಡಿಸಿ ಹೆಚ್ಚು ಉಲ್ಲಾಸದಿಂದ ಇರಲು ನೆರವಾಗುತ್ತದೆ. ಶರೀರಕ್ಕೆ ಬೇಕಾದ ಎ, ಬಿ, ಸಿ, ಡಿ, ಇ ಮತ್ತು ಕೆ ವಿಟಾಮಿನ್ಗಳನ್ನು ಪೂರೈಸುತ್ತದೆ. ಅತ್ತಿ ಮುಖ್ಯವಾದ ವಿಷಯವೆಂದರೆ ಯಾವುದೇ ಚಿಕಿತ್ಸೆಗೋಸ್ಕರ ಮಾಡಿದ ಮುದ್ರೆಯ ಜೊತೆಗೆ ಈ ಮುದ್ರೆ ಮಾಡಿದರೆ, ಚಿಕಿತ್ಸೆ ಬಹುಬೇಗ ಫಲಿಸುತ್ತದೆ.
7 ವಾಯು ಮುದ್ರೆ
ತೋರುಬೆರಳಿನ ತುದಿಯನ್ನು ಹೆಬ್ಬೆಟ್ಟಿನ ಬುಡಕ್ಕೆ ತಾಗಿಸಿ ಹೆಬ್ಬೆಟ್ಟನ್ನು ತೋರು ಬೆರಳಿನ ಬೆನ್ನಿನ ಮೇಲೆ ಇಡಬೇಕು ಆಗ ಅದು ವಾಯು ಮುದ್ರೆ ಆಗುತ್ತದೆ. ಈ ಮುದ್ರೆಯು ನಮ್ಮ ದೇಹದಲ್ಲಿನ ಗಾಳಿಯನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಶರೀರದ ಹಲವು ಭಾಗಗಳಲ್ಲಿ ವಾಯುವು ಹೆಚ್ಚಾಗಿ ನೋವುಗಳು ಬರುತ್ತವೆ. ವಾಯು ಮುದ್ರೆ ಮಾಡುವುದರಿಂದ ಎಲ್ಲಾ ನೋವನ್ನು ಶಮನಗೊಳಿಸಿಕೊಳ್ಳಬಹುದು.
8 ಸೂರ್ಯ ಮುದ್ರೆ
ಉಂಗುರ ಬೆರಳಿನ ತುದಿಯನ್ನು ಹೆಬ್ಬೆಟ್ಟಿನ ಬುಡಕ್ಕೆ ತಾಗಿಸಿ, ಹೆಬ್ಬೆಟ್ಟನ್ನು ಉಂಗುರ ಬೆರಳಿನ ಬೆನ್ನಿನ ಮೇಲೆ ಇರಿಸಬೇಕು. ಆಗ ಅದು ಸೂರ್ಯ ಮುದ್ರೆ ಆಗುತ್ತದೆ.
ಬೊಜ್ಜು ಕರಗಿಸಬಹುದು. ರಕ್ತದಲ್ಲಿ ಕೊಲೇಸ್ಟ್ರಾಲ್ ಕಡಿಮೆಗೊಳಿಸುತ್ತದೆ. ಶರೀರದಲ್ಲಿ ಉಷ್ಣಾಂಶ ಕಡಿಮೆ ಆದಾಗ ಈ ಮುದ್ರೆ ಮಾಡುವುದರಿಂದ ದೇಹದ ಉಷ್ಣಾಂಶ ಹೆಚ್ಚುತ್ತದೆ.
ಸೌಮ್ಯ ಅಶೋಕ್
ಬೆಂಗಳೂರು