ಕ್ರೀಡೆ

ಓಟದ ರಾಣಿ ಹಿಮಾದಾಸ್ | ಅಪ್ಪನ ಗದ್ದೆಯ ಕಡೆಯ ಹಾದಿಗಳೇ ಈಕೆಯ ‘ಓಟದ ಟ್ರಾಕ್’ಗಳಾದವು

Published

on

•ಹಿಮಾದಾಸ್ ಸಾಧನೆಗೆ 10 ಲಕ್ಷ ಬಹುಮಾನ ಘೋಷಿಸಿದ ಪರಂ

ರೈತನ ಮಗಳು ಓದುತ್ತಿದ್ದ ಶಾಲೆಯ ದೈಹಿಕ ಶಿಕ್ಷಕಿಯು ಒಮ್ಮೆ ಆತನನ್ನು ಭೇಟಿ ಮಾಡಿ ‘ನಿಮ್ಮ ಮಗಳು ವಾಲಿಬಾಲ್ ಆಟದಲ್ಲಿಯೂ ಬಹಳ ಮುಂದಿದ್ದಾಳೆ ಹಾಗೆಯೇ ಓಟದಲ್ಲಿಯೂ ಕೂಡ, ಹೀಗಿದ್ದಾಗ ನೀವೇಕೆ ಈಕೆಗೆ ಅತ್ಯುತ್ತಮ ತರಬೇತಿ ಕೊಡಿಸಬಾರದು’ ಎಂಬ ಹೊಸ ಹುಳವನ್ನು ಬಿಟ್ಟಿದ್ದರು.

ಆದರೆ ಆ ಪ್ರತಿಭಾವಂತ ಮಗಳ ತಂದೆ ರೈತನಾಗಿ ಕಸುಬು ನಿರ್ವಹಿಸುತ್ತಿದ್ದ ರಂಜಿತ್ ದಾಸ್ ಎಂಬ ವ್ಯಕ್ತಿಗೆ ರೈತರಿಗೆ ಕಾಡುವ ಹಣಕಾಸಿನ ಸಮಸ್ಯೆಗಳು ಸಾಕಾಗುವಷ್ಟು ಇದ್ದವು ಜೊತೆಗೆ ಮನೆಯಲ್ಲಿದ್ದ ಆರು ಜನರನ್ನು ಸಾಕುವ ಜವಾಬ್ಧಾರಿ ಇತ್ತಾದರೂ,ಐದು ಜನ ಮಕ್ಕಳಲ್ಲಿ ಕೊನೆಯ ಪುಟಾಣಿಯಾದ ಪ್ರತಿಭಾವಂತ ಹುಡುಗಿಗೆ ತರಬೇತಿ ಕೊಡಿಸುವ ಕಡೆ ಯೋಚಿಸಿದನು ಆ ಪುಟಾಣಿ ಹುಡುಗಿಯ ಹೆಸರು ‘ಹಿಮ ದಾಸ್’.

ಮನೆಯಲ್ಲಿನ ಹಣಕಾಸಿನ ಸಮಸ್ಯೆಯಿಂದಾಗಿ ನೇರವಾಗಿ ಕೋಚ್ ಬಳಿ ಸೇರಲಾಗದೆ ಮೊದಲಿಗೆ ಅಪ್ಪನ ಗದ್ದೆಯ ಕಡೆಯ ಹಾದಿಗಳೇ ಈಕೆಯ ‘ಓಟದ ಟ್ರಾಕ್’ಗಳಾದವು,ಅವಳ ಮಿಂಚಿನ ಓಟದ ಛಾತಿಯನ್ನು ಗದ್ದೆಯ ಹಾದಿಗಳಲ್ಲಿ ನೋಡಿದ ರಂಜಿತ್ ದಾಸ್ ಗೆ ತನ್ನ ಮಗಳು ಹಿಮದಾಸ್ ಓಟದಲ್ಲಿ ಏನೋ ಒಂದನ್ನು ಸಾಧಿಸಿಯೇ ತೀರುತ್ತಾಳೆ ಎಂದೆನಿಸಿತು.

ಆ ದಿನಗಳಲ್ಲಿಯೇ ಈ ಹಿಮಾಸಿಂಗ್ ಗೌಹಾತಿಯ ಸ್ಟೇಟ್ ಚಾಂಪಿಯನ್ ಶಿಪ್ಪಿನಲ್ಲಿ ಭಾಗವಹಿಸಿ ಕಂಚಿನ ಪದಕ ಗೆದ್ದಳು.

‘ಅಯ್ಯಯ್ಯಪ್ಪಾ….ಯಾವುದೇ ಅಂತರಾಷ್ಟ್ರೀಯ ಗುಣಮಟ್ಟದ ಬೇಸಿಕ್ ತರಬೇತಿ ಇಲ್ಲದ ಅಸ್ಸಾಮಿನ ಹಳ್ಳಿ ಹುಡುಗಿ ನೋಡ್ರೀ’ ಎಂದು ತನ್ನ ಮಗಳ ಕುರಿತು ಅಲ್ಲಿದ್ದ ಹಲವರು ಮಾತನಾಡಿದ್ದು ಕೇಳಿದ ಹಿಮಾ ಸಿಂಗಳ ಅಪ್ಪನಿಗೆ ‘ಅದೆಷ್ಟೇ ಕಷ್ಟವಾದರೂ ಸರಿ ತನ್ನ ಮಗಳಿಗೆ ಉತ್ತಮ ತರಬೇತಿ ಕೊಡಿಸಲೇಬೇಕು…”ಎಂದು ನಿರ್ಧರಿಸಿಬಿಟ್ಟನು ಆ ನಂತರ ಕಷ್ಟಪಟ್ಟು ಅಲ್ಲಿ ಇಲ್ಲಿ ಹಣ ಕೂಡಿಸಿ ರೆಜಿನಾ ಸ್ಟೇಡಿಯಂ ಗ್ರೂಪ್ ಸೇರಿಸಿದನು, ಅಲ್ಲಿ ಆಕೆ ಗುಣಮಟ್ಟದ ತರಬೇತಿ ಹೊಂದಿದಳು.

ಅಲ್ಲಿ ದೊರೆತ ಅತ್ಯುತ್ತಮ ತರಬೇತಿ ಆಕೆಯನ್ನು ಮತ್ತೂ ಅತ್ಯುತ್ತಮಗೊಳಿಸುತ್ತಾ ಹಾಗೆಯೇ ಆಗಾಗ ನಡೆಯುವ ಚಾಂಪಿಯನ್ ಶಿಪ್ಪುಗಳಲ್ಲಿ ಭಾಗವಹಿಸುತ್ತಾ ಪ್ರಶಸ್ತಿ ಗೆಲ್ಲುತ್ತಾ ಸಾಗಿದಳು.

ಅಂತೂ ಇಂತೂ ಅಪ್ಪ ಬಿದ್ದ ಪಡಿಪಾಟಲಿಗೆ ತಕ್ಕುನಾದ ಮೌಲ್ಯ ದೊರಕುವ ಸಂದರ್ಭ ಬಂದೇಬಿಟ್ಟಿತು,ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಹಿಮದಾಸ್ ಟ್ರಾಕಿನ ನಾಲ್ಕನೇ ಸಾಲಿನಲ್ಲಿ ಓಡುತ್ತಿದ್ದಾಗ ಐದನೇ ಸಾಲಿನಲ್ಲಿ ರೊಮಾನಿಯಾದ ಆಂಡ್ರಿಯಾ ಮಿಕ್ಲೋಸ್ ಅವಳ ಪಕ್ಕದಲ್ಲಿ ಅಮೇರಿಕದ ಟೇಲರ್ ಮ್ಯಾಸನ್ ಓಡುತ್ತಿದ್ದಳು.

ಅಲ್ಲಿ ಹಾಜರಿದ್ದ ಓಟದ ಪಂಡಿತರೆಲ್ಲರೂ ಅಮೇರಿಕದ ಟೇಲರ್ ಮ್ಯಾಸನ್ನಳೇ ಚಿನ್ನ ಗೆಲ್ಲುತ್ತಾಳೆ ಎಂದಿದ್ದರು ಅವರ ಕವಡೆ ಭವಿಷ್ಯಕ್ಕೆ ತಕ್ಕಂತೆ ಏರ್ ಗನ್ ಢಂಮ್ಮೆಂದೊಡನೆ ಶುರುವಾದ ಓಟದಲ್ಲಿ ಅಮೇರಿಕದ ಟೇಲರ್ ಮ್ಯಾಸನ್ನಳೇ ಮುನ್ನೂರು ಮೀಟರುಗಳವರೆಗೆ ಚಿಮ್ಮೆಗರುತ್ತಾ ಮುಂದಿದ್ದಳು ಆದರೆ ಹಿಮಾಸಿಂಗ್ ಅಂದಿನ ಓಟದ ಜವಾಬ್ಧಾರಿ ನೆನೆದು ಹಠಕ್ಕೆ ಬಿದ್ದವಳಂತೆ ಮುನ್ನೂರು ಮೀಟರಿನ ನಂತರ ಕೊನೆಯಲ್ಲಂತೂ ಎಲ್ಲರನ್ನೂ ಹಿಂದಿಕ್ಕುತ್ತಾ ಟಾಪ್ ಗೇಯರಿನಲ್ಲಿ ಅತೀ ವೇಗದಿಂದ ಓಡಿಬಿಟ್ಟಳು ಅಂತೂ ಅಪ್ಪನಿಗಾಗಿ ಚಿನ್ನದ ಪದಕ ಗೆದ್ದುಬಿಟ್ಟಳು.

ಇಂದು ಬಂದ ಖ್ಯಾತಿ,ಹಣ,ಅಂತಸ್ತು ಎಲ್ಲಾ ಪಕ್ಕಕ್ಕಿಡಿ ! ಸಾಂಸಾರಿಕ ರಣಸಮಸ್ಯೆಗಳ ಹೋರಾಟದ ನಡುವೆಯೇ ಅಂತಹಾ ಹಠ ತೊಟ್ಟು ಮಗಳಿಗೆ ತರಬೇತಿ ಕೊಡಿಸಿ ಆಕೆಯನ್ನು ಈ ಮಟ್ಟಕ್ಕೇರಿಸಿದ ಖ್ಯಾತಿ,ಪ್ರೀತಿ,ಒಲುಮೆ ಇವೆಲ್ಲವೂ ಆ ಅಪ್ಪನಿಗೆ ಸೇರಬೇಕು .ಒಟ್ಟಿನಲ್ಲಿ ಅಪ್ಪನ ಕಂಗಳಲ್ಲಿ ಚಿನ್ನದ ಆನಂದಬಾಷ್ಪ ಮೂಡಿಸುವಲ್ಲಿ ಮಗಳು ಹಿಮದಾಸ್ ಯಶಸ್ವಿಯಾದಳು.

ಜಿ. ಪರಮೇಶ್ವರ್ ಬಹುಮಾನ ಘೋಷಿಸಿ ಟ್ವೀಟ್

ವಿಶ್ವ ಅಂಡರ್ 20 ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತದ ಹಿಮಾದಾಸ್ ಗೆ ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿರುವುದಾಗಿ ಟ್ಟೀಟ್ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version