ದಿನದ ಸುದ್ದಿ

ನಾಳೆ ಸೂಪರ್ ಸ್ಪೇಷಾಲಿಟಿ ಟ್ರಾಮಾ ಕೇರ್‍ಗೆ ಇ-ಲೋಕಾರ್ಪಣೆ : ಸೂಪರ್ ಸ್ಪೇಷಾಲಿಟಿ ಟ್ರಾಮಾಕೇರ್ ಕೇಂದ್ರದ ಬಗೆಗಿಷ್ಟು

Published

on

ಸುದ್ದಿದಿನ,ಬಳ್ಳಾರಿ :ಪ್ರಧಾನಮಂತ್ರಿ ಸ್ವಸ್ಥ್ಯ ಸುರಕ್ಷಾ ಯೋಜನೆ ಅಡಿ ರೂ.150ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸೂಪರ್ ಸ್ಪೇಷಾಲಿಟಿ ಟ್ರಾಮಾ ಕೇರ್(ತುರ್ತು ಚಿಕಿತ್ಸಾ ಘಟಕ)ಗೆ ಇ-ಲೋಕಾರ್ಪಣೆ ಆ.31ರಂದು ಬೆಳಗ್ಗೆ 11.30ಕ್ಕೆ ನಡೆಯಲಿದೆ ಎಂದು ವಿಮ್ಸ್ ನಿರ್ದೇಶಕ ಡಾ.ದೇವಾನಂದ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಸಚಿವ ಡಾ.ಹರ್ಷವರ್ಧನ್ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆ.31ರಂದು ಬೆಳಗ್ಗೆ 11.30ಕ್ಕೆ ಎಲೆಕ್ಟ್ರಾನಿಕ್ ಉದ್ಘಾಟನೆ(ಇ-ಉದ್ಘಾಟನೆ)ಮಾಡಲಿದ್ದಾರೆ. ಕೇಂದ್ರ ಸಚಿವರಿಗೆ ಆರೋಗ್ಯ ಖಾತೆಯ ಕೇಂದ್ರ ರಾಜ್ಯ ಸಚಿವ ಅಶ್ವೀನಿಕುಮಾರ್ ಚೌಬೆ, ಸಿಎಂ ಯಡಿಯೂರಪ್ಪ ಅವರೊಂದಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಉಪಸ್ಥಿತರಿರಲಿದ್ದಾರೆ.

ಬಳ್ಳಾರಿಯ ಟ್ರಾಮಾಕೇರ್ ಕೇಂದ್ರದ ಬಳಿ ನಡೆಯಲಿರುವ ವರ್ಚುವಲ್ ಕಾರ್ಯಕ್ರಮದಲ್ಲಿ ಅರಣ್ಯ,ಪರಿಸರ,ಜೀವವೈವಿಧ್ಯತೆ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್.ಆನಂದಸಿಂಗ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಉಪಸ್ಥಿತರಿರಲಿದ್ದಾರೆ.ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಬಳ್ಳಾರಿ ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ,ಸಂಸದರಾದ ವೈ.ದೇವೇಂದ್ರಪ್ಪ,ಕರಡಿ ಸಂಗಣ್ಣ, ಸೈಯದ್ ನಾಸೀರ್ ಹುಸೇನ್, ಶಾಸಕರಾದಇ.ತುಕಾರಾಂ,ಪಿ.ಟಿ.ಪರಮೇಶ್ವರನಾಯಕ್, ಎನ್.ವೈ.ಗೋಪಾಲಕೃಷ್ಣ, ಎಲ್.ಬಿ.ಪಿ.ಭೀಮಾನಾಯಕ್, ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಜಿ.ಕರುಣಾಕರರೆಡ್ಡಿ, ಜಿ.ಸೋಮಶೇಖರ ರೆಡ್ಡಿ, ಸೋಮಲಿಂಗಪ್ಪ, ಜೆ.ಎನ್.ಗಣೇಶ, ಎಸ್.ವಿ.ರಾಮಚಂದ್ರ, ಚಂದ್ರಶೇಖರ ಪಾಟೀಲ್, ತಾಪಂ ಅಧ್ಯಕ್ಷೆ ಎಸ್.ಆರ್.ಲೀಲಾವತಿ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಸುನೀಲ್ ಶರ್ಮಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ವೈದ್ಯಕೀಯ ಶಿಕ್ಷಣ ಇಲಾಖೆಯ ಟಿ.ಕೆ.ಅನಿಲಕುಮಾರ್, ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ಸಿ.ಕೆ.ಬಾಬಾ, ಜಿಪಂ ಸಿಇಒ ಕೆ.ಆರ್.ನಂದಿನಿ, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಪಿ.ಜಿ.ಗಿರೀಶ್ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.

ಸೂಪರ್ ಸ್ಪೇಷಾಲಿಟಿ ಟ್ರಾಮಾಕೇರ್ ಕೇಂದ್ರದ ಬಗೆಗಿಷ್ಟು

ವಿಮ್ಸ್ ಸಂಸ್ಥೆಯ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗಾಗಿ ಬರುವಂತಹ ರೋಗಿಗಳಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಮತ್ತು ಇತರೆ ಸ್ಥಳಗಳಿಗೆ ಕಳುಹಿಸಲಾಗುತ್ತಿತ್ತು, ಇದರಿಂದ ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಸರ್ಕಾರವು ಈ ನಿಟ್ಟಿನಲ್ಲಿ ವಿಮ್ಸ್ ಸಂಸ್ಥೆಯನ್ನು ಏಮ್ಸ್ ಮಾದರಿಯನ್ನಾಗಿ ಪರಿವರ್ತಿಸಲು ಉನ್ನತೀಕರಣಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸಿತ್ತು.

ಈ ಪ್ರಸ್ತಾವನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಸ್ಪಂದಿಸಿ ವಿಮ್ಸ್ ಸಂಸ್ಥೆಯಲ್ಲಿ ಪ್ರಧಾನಮಂತ್ರಿ ಸ್ವಸ್ಥ್ಯ ಸುರಕ್ಷಾ-3 ಯೋಜನೆ ಅಡಿಯಲ್ಲಿ ಟ್ರಾಮಾ ಕೇರ್ ಕೇಂದ್ರ (ತುರ್ತು ಚಿಕಿತ್ಸಾ ಘಟಕವನ್ನು) ಪ್ರಾರಂಭಿಸಲು ಮತ್ತು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗೆ ಅವಶ್ಯಕವಿರುವ ಉಪಕರಣಗಳನ್ನು ಅಳವಡಿಸಲು ಅನುಮೋದನೆ ನೀಡಿತ್ತು.

ಅದರಂತೆ ವಿಮ್ಸ್ ಅಧೀನದಲ್ಲಿ ಪಿಎಂಎಸ್‍ಎಸ್‍ವೈ-3 ಯೋಜನೆ ಅಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಯೋಗದಲ್ಲಿ ರೂ.150ಕೋಟಿಗಳ ವೆಚ್ಚದಲ್ಲಿ ಸೂಪರ್ ಸ್ಪೇಷಾಲಿಟಿ ಟ್ರಾಮ ಕೇರ್ ಕೇಂದ್ರ ಕಟ್ಟಡ ಮತ್ತು ಹೈಟೆಕ್ ವೈದ್ಯಕೀಯ ಉಪಕರಣಗಳು ಒಳಗೊಂಡ ಯೋಜನೆ ರೂಪಿಸಲಾಗಿರುತ್ತದೆ.

ಕೇಂದ್ರ ಸರ್ಕಾರದ ವತಿಯಿಂದ ರೂ.120ಕೋಟಿಗಳು ಮತ್ತು ರಾಜ್ಯ ಸರ್ಕಾರದ ವತಿಯಿಂದ ರೂ.30 ಕೋಟಿಗಳು(80:20 ಅನುಪಾತದಲ್ಲಿ) ಟ್ರಾಮಾ ಕೇರ್ ಸೆಂಟರ್‍ನ ಕಟ್ಟಡ ಕಾಮಗಾರಿ, ಉಪಕರಣ ಮತ್ತು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಉಪಕರಣಗಳನ್ನು ಒದಗಿಸಲು ಹೈಟ್ಸ್ ಇವರಿಗೆ ವಹಿಸಲಾಗಿರುತ್ತದೆ. ಕಟ್ಟಡ ಕಾಮಗಾರಿಗೆ ರೂ.65ಕೋಟಿಗಳು ಮತ್ತು ಉಪಕರಣಗಳಿಗೆ ರೂ.85ಕೋಟಿಗಳು(ಟ್ರಾಮಾ ಕೇರ್ ಮತ್ತು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಉಪಕರಣಗಳು ಒಳಗೊಂಡಿರುತ್ತವೆ)
ಟ್ರಾಮಾ ಕೇರ್ ಸೆಂಟರ್ ಕಟ್ಟಡವು 49 ಸಾಮಾನ್ಯ ಹಾಸಿಗೆ, 72 ಐಸಿಯು ಹಾಸಿಗೆ ಮತ್ತು ತುರ್ತು ಚಿಕಿತ್ಸ ಘಟಕದಲ್ಲಿ 79 ಹಾಸಿಗೆಗಳು ಒಟ್ಟಾರೆ 200 ಹಾಸಿಗೆಗಳ ಸಾಮಥ್ರ್ಯವನ್ನು ಹೊಂದಿದೆ.

ಇದರ ಜೊತೆಗೆನ್ಯೂರೋ ಸರ್ಜರಿ ವಿಭಾಗ(ಅಪಘಾತದಿಂದ ತಲೆಯ ಮೇಲೆ ಪೆಟ್ಟು, ಮೆದುಳು ಹಾಗೂ ನರಹುರಿ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ), ಪ್ಲಾಸ್ಟಿಕ್ ಸರ್ಜರಿ ವಿಭಾಗ(ಸುಟ್ಟ ಗಾಯಗಳು, ಮರು ನಿರ್ಮಾಣದ ಶಸ್ತ್ರ, ಸೂಕ್ಷ್ಮ ರಕ್ತನಾಳಗಳ ಶಸ್ತ್ರಚಿಕಿತ್ಸೆ ಹಾಗೂ ಸೌಂದರ್ಯ ವರ್ಧಕ ಶಸ್ತ್ರಚಿಕಿತ್ಸೆಗಳು),ಆರ್ಥೋಪಿಡಿಕ್ಸ್ ವಿಭಾಗ(ಮೂಳೆ ಮತ್ತು ಸಂಧಿಗಳು ಸಮಸ್ಯೆಗಳು),ರೇಡಿಯೋಲಜಿ ವಿಭಾಗ(ದೇಹದ ವಿವಿಧ ಭಾಗಗಳ ಸಿ.ಟಿಸ್ಕ್ಯಾನ್ ಮತ್ತು ರೋಗ ನಿರ್ಧಾರ ಮಾಡುವ ವ್ಯವಸ್ಥೆ),ಅನಸ್ಥೇಷಿಯ ವಿಭಾಗ(ವಿಶೇಷ ಶಸ್ತ್ರಚಿಕಿತ್ಸೆಗಳಿಗೆ ಅರವಳಿಕೆ ಮದ್ದು ನೀಡುವ ವಿಭಾಗ)ಗಳನ್ನು ಹೊಂದಿರುವುದು ವಿಶೇಷ.

ವಿಮ್ಸ್ ಬಗೆಗೊಂದಿಷ್ಟು

ವಿಮ್ಸ್ ಬಳ್ಳಾರಿಯ ದಂಡು ಪ್ರದೇಶದಲ್ಲಿರುವ ಅಲ್ಲಿಪುರದಲ್ಲಿದ್ದು, 173 ಎಕರೆ ವಿಸ್ತೀರ್ಣ ಹೊಂದಿದೆ. ಈ ಹಿಂದೆ ಕಾರಾಗೃಹ ಕಟ್ಟಡವಾಗಿತ್ತು;1958ರಲ್ಲಿ ಕಾರಗೃಹವನ್ನು ಮುಚ್ಚಲಾಗಿಯಿತು. ಈ ಪ್ರದೇಶವನ್ನು ಅಂದಿನ ಸರ್ಕಾರವು ವಿಮ್ಸ್ ಸ್ಥಾಪಿಸಲು 1961ರಲ್ಲಿ ಹಸ್ತಾಂತರಿಸಿರುತ್ತದೆ. 1962 ರಲ್ಲಿ 100 ವಿದ್ಯಾರ್ಥಿಗಳ ಸಾಮಥ್ರ್ಯವನ್ನು ಹೊಂದಿದ್ದು, ಇದರ ಅಧೀನದಲ್ಲಿ ವಿದ್ಯಾರ್ಥಿಗಳ ಬೋಧನೆಗಾಗಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ಕಟ್ಟಡವು ಮೊದಲನೆ ಹಂತ ಮತ್ತು ಎರಡನೇ ಹಂತದ ಕಟ್ಟಡವು 1977 & 1981-82 ರಲ್ಲಿ ನಿರ್ಮಾಣ ಮಾಡಲಾಗಿರುತ್ತದೆ. ಸದರಿ ಆಸ್ಪತ್ರೆಯು 512 ಹಾಸಿಗೆಗಳಿಗೆ ಮಂಜೂರಾಗಿರುತ್ತದೆ.

ಬಳ್ಳಾರಿ ವೈದ್ಯಕೀಯ ಕಾಲೇಜನ್ನು 1994ನೇ ಸಾಲಿನಲ್ಲಿ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸ್ವಾಯತ್ತ ಸಂಸ್ಥೆಯನ್ನಾಗಿ ಪರಿವರ್ತಿಸಲಾಗಿರುತ್ತದೆ. ಸರ್ಕಾರವು ಸದರಿ ಸಂಸ್ಥೆಯಲ್ಲಿ ಎಂ.ಬಿ.ಬಿ.ಎಸ್ ಪ್ರವೇಶ ಮಿತಿಯನ್ನು 100 ರಿಂದ 150ಕ್ಕೆ ಹೆಚ್ಚಿಸಲು ಹಾಗೂ 2010ನೇ ಸಾಲಿನಲ್ಲಿ 1017 ಹಾಸಿಗೆಗಳ ಸಾಮಥ್ರ್ಯಕ್ಕೆ ಮಂಜೂರಾತಿಯನ್ನು ನೀಡಲಾಗಿರುತ್ತದೆ.

ಈ ಆಸ್ಪತ್ರೆಗೆ ಬಳ್ಳಾರಿ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ಮತ್ತು ನೆರೆ ರಾಜ್ಯವಾದ ಆಂಧ್ರ ಪ್ರದೇಶದ ಹಲವು ಊರುಗಳಿಗೆ ಅತ್ಯಂತ ಪ್ರಮುಖ ಆಸ್ಪತ್ರೆಯಾಗಿರುವುದರಿಂದ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಚಿಕಿತ್ಸೆಗಾಗಿ ಸಾರ್ವಜನಿಕರು ಮತ್ತು ರೋಗಿಗಳು ಬರುತ್ತಿರುತ್ತಾರೆ. ವಿಮ್ಸ್ ಆಸ್ಪತ್ರೆಯು ಬಳ್ಳಾರಿ ಜಿಲ್ಲೆ ಮತ್ತು ನೆರೆಯ ರಾಜ್ಯ ಆಂಧ್ರಪ್ರದೇಶವನ್ನು ಹಲವು ಪ್ರದೇಶಗಳಿಗೆ ಹೊಂದಿಕೊಂಡಿದ್ದು ಈ ಪ್ರದೇಶದಲ್ಲಿ ಬಳ್ಳಾರಿ ಜಿಲ್ಲೆಗೆ ಇರುವ ಏಕೈಕ ಆಸ್ಪತ್ರೆಯಾಗಿದ್ದು, ಇಲ್ಲಿ ಪ್ರಾಥಮಿಕ ಚಿಕಿತ್ಸೆ ಆರೈಕೆ ಮತ್ತು ಸ್ಪೇಷಾಲಿಟಿ ಮತ್ತು ಸೂಪರ್ ಸ್ಪೇಷಾಲಿಟಿ ಚಿಕಿತ್ಸಾ ಸೇವೆಗಳನ್ನು ಒದಗಿಸಲಾಗುತ್ತಿದೆ.

ಈ ಸಂಸ್ಥೆಯು ಸುಮಾರು 60 ವರ್ಷಗಳ ಹಳೆಯದಾಗಿದೆ. ಪ್ರಸ್ತುತ ವಿಮ್ಸ್ ಸಂಸ್ಥೆಯ ಅಧೀನದಲ್ಲಿರುವ ಆಸ್ಪತ್ರೆಗೆ ಪ್ರತಿ ದಿನ 1500 ರಿಂದ 2000 ವರೆಗೆ ಹೊರರೋಗಿಗಳು ಮತ್ತು 500 ರಿಂದ 800 ರವರೆಗೆ ಒಳರೋಗಿಗಳಾಗಿ ಚಿಕಿತ್ಸೆಗೆ ಬರುತ್ತಿರುತ್ತಾರೆ ಹಾಗೂ ಎಂ.ಬಿ.ಬಿ.ಎಸ್ 150, ಬಿಡಿಎಸ್-50, ಪಿ.ಜಿ-120, ಸೂಪರ್ ಸ್ಪೇಷಾಲಿಟಿ-05, ಪ್ಯಾರಾ ಮೇಡಿಕಲ್-150, ಬಿಎಸ್ಸಿ ನಸಿರ್ಂಗ್-100+30 ವಿದ್ಯಾರ್ಥಿಗಳ ಪ್ರವೇಶಾತಿಯ ಸಾಮರ್ಥ್ಯ ಹೊಂದಿದೆ.
ವಿಮ್ಸ್ ಸಂಸ್ಥೆಯ ಅಧೀನದಲ್ಲಿ ವೈದ್ಯಕೀಯ ಮಹಾವಿದ್ಯಾಲಯ, ದಂತ ಕಾಲೇಜು, ನಸಿರ್ಂಗ್ ಕಾಲೇಜು, ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ, ಸ.ವೆ.ಕ್ಷಯ ರೋಗ ಆಸ್ಪತ್ರೆ, ನಗರ ಆರೋಗ್ಯ ಕೇಂದ್ರ ಹೊಂದಿರುತ್ತದೆ. ಇದಲ್ಲದೇ ಈ ಹಿಂದೆ ಜಿಲ್ಲಾ ಆಸ್ಪತ್ರೆಯು ಸಹ ವಿಮ್ಸ್ ಸಂಸ್ಥೆಯ ಅಧೀನದಲ್ಲಿತ್ತು;ಅದನ್ನು ಮೂರು ವರ್ಷಗಳ ಹಿಂದಷ್ಟೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಸ್ತಾಂತರಗೊಂಡಿರುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version