ದಿನದ ಸುದ್ದಿ
ಮಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟ ಹಿಂದೂ ಯುವಕ ; ಮುಸ್ಲಿಂರ ಗುಂಪು ದೇವಸ್ಥಾನ, ಆಸ್ಪತ್ರೆ, ಬಸ್, ಪೊಲೀಸರ ವಾಹನಗಳ ಮೇಲೆ ಕಲ್ಲುತೂರಾಟ : ಹುಬ್ಬಳ್ಳಿಯಲ್ಲಿ 144 ಸೆಕ್ಷನ್ ಜಾರಿ
ಸುದ್ದಿದಿನ,ಹುಬ್ಬಳ್ಳಿ: ಮಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟ ಹಿಂದೂ ಯುವಕನೊಬ್ಬ ಪೋಸ್ಟ್ ಮಾಡಿದ್ದ ಹಿನ್ನೆಲೆ ಹಳೆ ಹುಬ್ಬಳ್ಳಿಯಲ್ಲಿ ಮುಸ್ಲಿಂ ಯುವಕರು ಗಲಾಟೆ ನಡೆಸಿದ್ದಾರೆ.
ಮಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿ, ಫೋಟೋ ಎಡಿಟ್ ಮಾಡಿ ಹಿಂದೂ ಯುವಕನೋರ್ವ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದನು. ಈ ವಿವಾದಿತ ಪೋಸ್ಟ್ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಮುಸ್ಲಿಂರ ಗುಂಪು ದೇವಸ್ಥಾನ, ಆಸ್ಪತ್ರೆ, ಬಸ್, ಪೊಲೀಸರ ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ.
ದುಷ್ಕರ್ಮಿಗಳು ಹುಬ್ಬಳ್ಳಿಯ ದಿಡ್ಡಿ ಓಣಿಯ ಗುರು ಆಸ್ಪತ್ರೆ ಧ್ವಂಸಗೊಳಿಸಿದ್ದಾರೆ. ದಿಡ್ಡಿ ಹನುಮಂತ ದೇವಸ್ಥಾನದ ಕಿಟಕಿ ಗ್ಲಾಸ್ ಒಡೆದು ಪುಡಿ, ಪುಡಿಗೊಳಿಸಿದ್ದಾರೆ ಮತ್ತು ಬಸ್ಗಳ ಮೇಲೆ ಕೂಡ ಕಲ್ಲು ತೂರಾಟವನ್ನು ನಡೆಸಿದ್ದಾರೆ. ಉಪ ನಗರ ಠಾಣೆ ಇನ್ಸ್ಪೆಕ್ಟರ್ ವಾಹನ ಜಖಂಗೊಳಿಸಿದ್ದಾರೆ. ಈ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ಕೊನೆಗೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಪೂರ್ವ ಸಂಚಾರಿ ಠಾಣೆ ಇನ್ಸ್ಪೆಕ್ಟರ್ ಕಾಡದೇವರ ಮಠ ತಲೆಗೆ ಗಾಯಗೊಂಡಿದ್ದು, ವಿವಾದಿ ಫೋಟೋ ಪೋಸ್ಟ್ ಮಾಡಿದ್ದ ಹಿಂದೂ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಹುಬ್ಬಳ್ಳಿ ನಗರಾದ್ಯಂತ ಪೊಲೀಸ್ ಆಯುಕ್ತ ಲಾಬೂರಾಮ್ ಕಲಂ 144 ಸೆಕ್ಷನ್ ಜಾರಿಗೊಳಿಸಿದ್ದಾರೆ.
ಘಟನೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹಳೇ ಹುಬ್ಬಳ್ಳಿ ನಿವಾಸಿಗಳು ಗಲಾಟೆ ಮಾಡಿದವರು ನಮ್ಮ ಏರಿಯಾದವರಲ್ಲ. ನಾವು ಇಲ್ಲಿ ಅವರನ್ನು ನೋಡಿಯೇ ಇಲ್ಲ. ಕೆಲವರು ಕೇಸರಿ, ಕೆಲವರು ಹಸಿರು, ಕೆಲವರು ನೀಲಿ ಧ್ವಜ ಹಿಡಿದಿದ್ದರು. ಏಕಾಏಕಿ ಗಲಾಟೆ ಆರಂಭವಾಯಿತು. ನಂತರ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243