ದಿನದ ಸುದ್ದಿ
ಎರಡು ಸಾವಿರ ವಿದ್ಯಾರ್ಥಿಗಳಿಂದ ‘ಏಪ್ರಿಲ್ 18 ಮತದಾನ ಮಾಡಿ’ ಮಾನವ ರಚನೆ ನಿರ್ಮಾಣ
ಸುದ್ದಿದಿನ,ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ “ಏಪ್ರಿಲ್ 18 ಮತದಾನ ಮಾಡಿ” ಎಂಬ ಸಂದೇಶ ಸಾರುವ ಮಾನವ ರಚನೆಯನ್ನು 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ನಿರ್ಮಾಣ ಮಾಡಿ ವಿನೂತನವಾಗಿ ಮತದಾರರಿಗೆ ಜಾಗೃತಿ ಮೂಡಿಸಲಾಯಿತು.
ಮೈಸೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಎಸ್.ಜೆ.ಸಿ.ಇ ಇಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮತದಾನ ಮಾಡುವಂತೆ ಚುನಾವಣಾ ಪ್ರತಿಜ್ಞಾ ವಿಧಿಯನ್ನು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿಗಳಾದ ಬೆಟಸೂರಮಠ ಅವರು ಬೋಧಿಸಿ ನಂತರ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೆ ರಾಜನಾಗಿರುತ್ತಾನೆ. ನಿಮ್ಮ ಮತಕ್ಕೆ ನಿವೇ ಯಜಮಾನರು ಪ್ರಜಾಪ್ರಭಯತ್ವದ ಉಳಿವಿಗೆ ಯಾವುದೇ ಜಾತಿ, ಧರ್ಮ, ಮತ-ಪಂತಗಳಿಗೆ ಒಳಗಾಗದೇ ನಿರ್ಭೀತಿಯಿಂದ ನೈತಿಕವಾಗಿ ಮತ ಚಲಾಯಿಸಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಜ್ಯೋತಿ ಅವರು ಮಾತನಾಡಿ ಯುವ ಮತದಾರರಿಗೆ ಹೊಸ ಮತ್ತು ವಿನೂತನ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಇರುತ್ತದೆ. ಮತದಾನದಲ್ಲಿ ಯುವ ಸಮೂಹದ ಪಾತ್ರ ಬಹಳ ಮುಖ್ಯವಾಗಿರುತ್ತದೆ ಎಂದರು.
ಯುವಕರು ಕಡ್ಡಾಯವಾಗಿ ಚಿಂತಿಸಿ ಜಾಗೃತರಾಗಿ ಮತ ಚಲಾವಣೆ ಮಾಡಬೇಕು. ಜೊತೆ ಚುನಾವಣೆಯು ಪ್ರಜಾಪ್ರಭುತ್ವದ ಹಬ್ಬ ಆಗಾಗಿ ಎಲ್ಲರೂ ಭಾಗವಹಿಸಬೇಕು. ಜೊತೆಗೆ ಯುವ ಮತದಾರರು ತಮ್ಮ ಕುಟುಂಬದವರು, ನೆಂಟರು ಹಾಗೂ ನೆರೆಹೊರೆಯವರಿಗೂ ತಪ್ಪದೇ ಮತದಾನ ಮಾಡುವಂತೆ ಪ್ರೆರೇಪಿಸಬೇಕು ಎಂದು ಅವರು ತಿಳಿಸಿದರು.
ಮೈಸೂರು ಮಹಾನಗರಪಾಲಿಕೆ ಆಯುಕ್ತರಾದ ಶಿಲ್ಪಾನಾಗ್, ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ ಕುಲಪತಿ ಬಿ.ಜಿ.ಸಂಗಮೇಶ್ವರ, ಕುಲಸಚಿವ ಕೆ.ಎಸ್ ಲೋಕೇಶ್, ಪ್ರಾಂಶುಪಾಲರಾದ ಟಿ.ಎನ್. ನಾಗಭೂಷಣ್, ಮಹಾನಗರಪಾಲಿಕೆ ಹೆಚ್ಚುವರಿ ಆಯುಕ್ತರಾದ ಶಿವಾನಂದ ಮೂರ್ತಿ ಹಾಗೂ ಸ್ವೀಪ್ ಕಾರ್ಯದರ್ಶಿ ಕೃಷ್ಣ ಇನ್ನಿತರ ಆಧಿಕಾರಿಗಳು ಮತ್ತು ಕಾಲೇಜು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401