ರಾಜಕೀಯ
ಭಾರತವನ್ನು ಅಮೆರಿಕನ್ ರಥದ ಇನ್ನೊಂದು ಗಾಲಿಯಾಗಿಸುತ್ತಿರುವ ಮೋದಿ
- ಭಾರತದೊಂದಿಗೆ ಎಲ್ಲಾ ಅನುಕೂಲಗಳನ್ನು ಅಮೆರಿಕಾ ಪಡೆಯುತ್ತಿದ್ದು, ಪಾಕಿಸ್ತಾನ ವಿಷಯದಲ್ಲಿ ಮಧ್ಯಸ್ಥಿಕೆಗೆ ಭಾರತ ನಿರಂತರವಾಗಿ ಅಮೆರಿಕಾಕ್ಕೆ ಮನವಿ ಮಾಡುತ್ತಿರುವುದರಿಂದ, ಟ್ರಂಪ್ ಇದೀಗ ಭಾರತವು ಕಾಶ್ಮೀರ ವಿಚಾರವನ್ನು ಅಮೆರಿಕಾದ ಇಷ್ಟಕ್ಕೆ ತಕ್ಕಂತೆ ನಿರ್ವಹಿಸಬೇಕು ಎಂದು ಸಂಕೇತ ನೀಡುತ್ತಿದ್ದಾರೆ. ದ್ವಿಪಕ್ಷೀಯ ಸಂಬಂಧದಲ್ಲಿ ಯಾವ ವಿಚಾರಗಳನ್ನು ಎತ್ತಿಕೊಳ್ಳಬೇಕು ಮತ್ತು ಅದರ ಧಾಟಿ ಹೇಗಿರಬೇಕು ಎಂದು ಆದೇಶಿಸುವುದು ಅಮೆರಿಕಾಕ್ಕೆ ಸಾಧ್ಯವಾಗಿದೆ. ಇದರಿಂದ ಉದ್ಭವಿಸಿರುವ ದುರಹಂಕಾರದ ಫಲವೇ ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವ ಈ ಟ್ರಂಪ್ ಹೇಳಿಕೆ.
ವಾಷಿಂಗ್ಟನ್ನಲ್ಲಿ ನಡೆದ ಮಾಧ್ಯಮ ಗೋಷ್ಠಿಯೊಂದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ವಿನಂತಿಸಿಕೊಂಡಿದ್ದಾರೆ ಎಂದು ಹೇಳಲಾದ ಚಿತ್ರವು ತಳಮಳಕಾರೀ ಪರಿಣಾಮವನ್ನು ಉಂಟು ಮಾಡಿದೆ. ಗೋಷ್ಠಿಯಲ್ಲಿ ಅವರೊಂದಿಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಉಪಸ್ಥಿತರಿದ್ದರು. ಮಧ್ಯಸ್ಥಿಕೆ ವಹಿಸುವಂತೆ ಮೋದಿ ಕೇಳಿದ್ದಾರೋ ಇಲ್ಲವೋ ಎನ್ನುವುದು ಇಲ್ಲಿ ಮುಖ್ಯವಲ್ಲ. ಆದರೆ ಮೋದಿಯವರ ವಿದೇಶಾಂಗ ನೀತಿ ಎಷ್ಟು ಆಭಾಸಕಾರಿಯಾಗಿ ಪರಿಣಮಿಸಿದೆ ಎನ್ನುವುದನ್ನು ಈ ಪ್ರಕರಣ ಬಹಿರಂಗಪಡಿಸುತ್ತದೆ ಎನ್ನುವುದು ಗಮನಾರ್ಹವಾಗಿದೆ.
ಪಾಕಿಸ್ತಾನ ಕುರಿತ ಅಮೆರಿಕದ ಧೋರಣೆಯಲ್ಲಿ ಯಾವ ರೀತಿಯ ಬದಲಾವಣೆ ಉಂಟಾಗಿದೆ ಎಂಬುದನ್ನು ಇಮ್ರಾನ್ ಖಾನ್ರ ಅಮೆರಿಕ ಭೇಟಿಯು ದೃಢಪಡಿಸುತ್ತದೆ. ಅಫಘಾನಿಸ್ತಾನದಿಂದ ಅಮೆರಿಕದ ಪಡೆಗಳನ್ನು ವಾಪಸ್ ಕರೆಸಿಕೊಳ್ಳಲು ಟ್ರಂಪ್ ಬಯಸಿರುವ ಹಿನ್ನೆಲೆಯಲ್ಲಿ ತಾಲಿಬಾನ್ ಮಾತುಕತೆಗೆ ಬರುವ ವಿಚಾರದಲ್ಲಿ ಪಾಕಿಸ್ತಾನದ ಪಾತ್ರ ನಿರ್ಣಾಯಕವಾಗಲಿದೆ. ಇಮ್ರಾನ್ ಖಾನ್ರ ಭೇಟಿಯು ತಾಲಿಬಾನ್ ಜೊತೆಗೆ ಶಾಂತಿ ಮಾತುಕತೆಯಲ್ಲಿ ಆಗಿರುವ ಪ್ರಗತಿಗೆ ಸಿಕ್ಕಿರುವ ಮಾನ್ಯತೆಯಂತೆ ಆಗಿದೆ. ಇದರ ಶ್ರೇಯಸ್ಸನ್ನು ಪಾಕಿಸ್ತಾನಕ್ಕೆ ಸಲಲಿಸಲಾಗಿದೆ.. ಈ ಇಡೀ ಪ್ರಕ್ರಿಯೆಯಲ್ಲಿ ಭಾರತವನ್ನು ಹೊರಗಿಡಲಾಗಿದೆ ಎನ್ನುವುದೇ ಏಕೈಕ ಸಮಸ್ಯೆಯಾಗಿದೆ.
ತನ್ನೆಲ್ಲ ವಿಚಾರಗಳನ್ನು ಅಮೆರಿಕಕ್ಕೆ ಬಿಟ್ಟುಕೊಟ್ಟ ಮೋದಿ ಸರಕಾರ ಈಗ ಹಠಾತ್ತನೆ ಒಂದು ಮುಜುಗರದ ಪರಿಸ್ಥಿತಿಗೆ ಸಿಲುಕಿ ಕೊಂಡಿದೆ. ಟ್ರಂಪ್ಗಾದರೋ ಅಫಘಾನಿಸ್ತಾನದಿಂದ ಹೊರಹೋಗುವುದು ಮತ್ತು ಕಾಶ್ಮೀರ ಸಮಸ್ಯೆ ಒಂದಕ್ಕೊಂದು ತಳಕು ಹಾಕಿಕೊಂಡಿದೆ- ಪಾಕಿಸ್ತಾನ ಬಯಸುವುದು ಕೂಡ ಇದನ್ನೇ.
ಕಳೆದ ಐದು ವರ್ಷಗಳಲ್ಲಿ ಮೋದಿಯವರು ಒಂದೊಂದೇ ಹೆಜ್ಜೆಯಾಗಿ ಅಮೆರಿಕದ ಭೌಗೊಳಿಕ-ರಾಜಕೀಯ ಕಾರ್ಯತಂತ್ರಕ್ಕೆ ಭಾರತವನ್ನು ಜೋಡಿಸಿದ್ದರು. ಅವರು ಅಮೆರಿಕದ ಇಂಡೊ-ಪೆಸಿಫಿಕ್ ವ್ಯೂಹಕ್ಕೆ ಬಲಿಬಿದ್ದರು; ಮಿಲಿಟರಿ ಸಾಗಾಣಿಕೆ ಒಪ್ಪಂದಕ್ಕೆ ಸಹಿಹಾಕುವ ಮೂಲಕ ಅಮೆರಿಕದ ಸೇನಾ ಕಾರ್ಯಾಚರಣೆಗಳಿಗೆ ಭಾರತದ ನೆಲೆಗಳನ್ನು ಬಳಸಿಕೊಳ್ಳುವ ಹಕ್ಕನ್ನು ಅಮೆರಿಕಕ್ಕೆ ಅವರು ಕೊಟ್ಟರು. ಅಮೆರಿಕದ ದೊಡ್ಡ ರಕ್ಷಣಾ ಪಾಲುದಾರನಾಗುವ ಮೂಲಕ ಮೋದಿ ಸರಕಾರವು ಭಾರತದ ಮಿಲಿಟರಿಯು ಅಮೆರಿಕದ ಸಶಸ್ತ್ರ ಪಡೆಗಳೊಂದಿಗೆ ಸಿಲುಕಿಕೊಳ್ಳುವ ಇತರ ಒಡಂಬಡಿಕೆಗಳಿಗೂ ಸಹಿ ಹಾಕಲು ಮುಂದಾಯಿತು.
ಒಂದು ಅಡಿಯಾಳು ಮಿತ್ರನಾಗಿ ಅಮೆರಿಕಕ್ಕೆ ಭಾರತ ಬಾಲಾಕೋಟ್ನಲ್ಲಿ ನಡೆದ ತನ್ನ ಪ್ರತೀಕಾರದ ವೈಮಾನಿಕ ದಾಳಿಯ ಬಗ್ಗೆ ಮಾಹಿತಿ ಒದಗಿಸಿತು. ಭಾರತೀಯ ವಾಯುಪಡೆಯ ವಿಮಾನವನ್ನು ಹೊಡೆದುರುಳಿಸಿದ ನಂತರ ಪೈಲಟ್ ಅಭಿನಂದನ್ರನ್ನು ಬಿಡುಗಡೆ ಮಾಡಲಾಗುವುದು ಎಂದು ಮೊದಲು ಪ್ರಕಟಿಸಿದ್ದು ಟ್ರಂಪ್. ತನ್ನ ಆಡಳಿತ ತೀವ್ರ ಒತ್ತಡ ಹೇರಿದ್ದರಿಂದಲೇ ಹಫೀಜ್ ಸಯೀದ್ನನ್ನು ಬಂಧಿಸಲಾಯಿತು ಎಂದೂ ಟ್ರಂಪ್ ಹೇಳಿಕೊಂಡಿದ್ದಾರೆ.
ಈ ರೀತಿಯಾಗಿ ಭಾರತದೊಂದಿಗೆ ಎಲ್ಲಾ ಅನುಕೂಲಗಳನ್ನು ಅಮೆರಿಕಾ ಪಡೆಯುತ್ತಿದ್ದು, ಪಾಕಿಸ್ತಾನ ವಿಷಯದಲ್ಲಿ ಮಧ್ಯಸ್ಥಿಕೆಗೆ ಭಾರತ ನಿರಂತರವಾಗಿ ಅಮೆರಿಕಾಕ್ಕೆ ಮನವಿ ಮಾಡುತ್ತಿರುವುದರಿಂದ, ಟ್ರಂಪ್ ಇದೀಗ ಭಾರತವು ಕಾಶ್ಮೀರ ವಿಚಾರವನ್ನು ಅಮೆರಿಕಾದ ಇಷ್ಟಕ್ಕೆ ತಕ್ಕಂತೆ ನಿರ್ವಹಿಸಬೇಕು ಎಂದು ಸಂಕೇತ ನೀಡುತ್ತಿದ್ದಾರೆ.
ಭಾರತವು ಅಮೆರಿಕದ ಆದೇಶಗಳಿಗೆ ಮಣಿದು ಇರಾನ್ ಮತ್ತು ವೆನಿಜುವೆಲಾದಿಂದ ತೈಲ ಖರೀದಿಯನ್ನು ನಿಲ್ಲಿಸಿದೆ. ಇಷ್ಟೆಲ್ಲಾ ವಿಧೇಯತೆಯಿಂದ ಹಿಂಬಾಲಿಸಿದ ನಂತರವೂ ಅಫಘಾನಿಸ್ತಾನದಲ್ಲಿ ಪರಿವರ್ತನೆಯ ವಿಚಾರದಲ್ಲಿ ಪಾಕಿಸ್ತಾನಕ್ಕೆ ಮಹತ್ವದ ಪಾತ್ರವನ್ನು ಟ್ರಂಪ್ ವಹಿಸುತ್ತಿರುವ ದೃಶ್ಯ ನಿಜಕ್ಕೂ ಬಹಳ ನೋವಿನ ಸಂಗತಿಯಾಗಿರಬೇಕು.
ದ್ವಿಪಕ್ಷೀಯ ಸಂಬಂಧದಲ್ಲಿ ಯಾವ ವಿಚಾರಗಳನ್ನು ಎತ್ತಿಕೊಳ್ಳಬೇಕು ಮತ್ತು ಅದರ ಧಾಟಿ ಹೇಗಿರಬೇಕು ಎಂದು ಆದೇಶಿಸುವುದು ಅಮೆರಿಕಾಕ್ಕೆ ಸಾಧ್ಯವಾಗಿದೆ. ಇದರಿಂದ ಉದ್ಭವಿಸಿರುವ ದುರಹಂಕಾರದ ಫಲವೇ ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವ ಈ ಟ್ರಂಪ್ ಹೇಳಿಕೆ. ಟ್ರಂಪ್ ಹೇಳಿಕೆಯನ್ನು ಎದುರಿಸುವ ಸಲುವಾಗಿ ಭಾರತೀಯ ಅಧಿಕೃತ ಮೂಲಗಳು ಒಸಾಕಾದಲ್ಲಿ ಟ್ರಂಪ್-ಮೋದಿ ಭೇಟಿಯ ಸಂದರ್ಭದಲ್ಲಿ ಇರಾನ್, ೫ಜಿ, ವಾಣಿಜ್ಯ ಮತ್ತು ರಕ್ಷಣೆ- ಹೀಗೆ ನಾಲ್ಕು ವಿಷಯಗಳನ್ನು ಮಾತ್ರ ಚರ್ಚಿಸಲಾಗಿತ್ತು ಎಂದು ತಿಳಿಸಿವೆ. ಈ ಅಜೆಂಡಾವೇ ಸಂಬಂಧವು ಯಾವ ಕಡೆಗೆ ವಾಲಿದೆ ಎಂಬುದನ್ನು ತೋರಿಸುತ್ತದೆ-ಎಲ್ಲವೂ ಅಮೆರಿಕದ ಪರವೇ ವಾಲಿದೆ.
ಭಾರತ ತೈಲ ಆಮದು ಸೇರಿದಂತೆ ಇರಾನ್ ಜತೆಗಿನ ಎಲ್ಲಾ ವಾಣಿಜ್ಯ ಸಂಬಂಧಗಳನ್ನು ಕಡಿದುಕೊಳ್ಳಬೇಕು ಎನ್ನುವುದು ಅಮೆರಿಕದ ಬಯಕೆಯಾಗಿದೆ. ಚೀನಾ ಕಂಪೆನಿ ಹುವೆಯ್ ಅನ್ನು ಭಾರತ ಒಳಗೊಳಿಸಬಾರದು ಹಾಗೂ ಭಾರತದಲ್ಲಿ ೫ಜಿ ಜಾಲ ಅಭಿವೃದ್ಧಿ ಪಡಿಸುವಲ್ಲಿ ಅದಕ್ಕೆ ಯಾವುದೇ ಪಾತ್ರವನ್ನು ವಹಿಸಬಾರದು ಎನ್ನುವುದು ಅಮೆರಿಕದ ಇಚ್ಛೆಯಾಗಿದೆ. ವಾಣಿಜ್ಯ ವಿಚಾರದಲ್ಲಿ ಹೇಳುವುದಾದರೆ ಟ್ರಂಪ್ ಈಗಾಗಲೇ ಭಾರತದ ವಿರುದ್ಧ ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ. ಹಾಗೂ ಭಾರತವು ಸುಂಕದರಗಳನ್ನು ಇಳಿಸಬೇಕು ಮತ್ತು ಹೆಚ್ಚೆಚ್ಚು ಅಮೆರಿಕದ ವಸ್ತುಗಳನ್ನು ಖರೀದಿಸಬೇಕು ಎಂಬುದು ಅಮೆರಿಕದ ಬಯಕೆಯಾಗಿದೆ. ಅಂತಿಮವಾಗಿ, ರಕ್ಷಣಾ ಅಜೆಂಡಾವೆಂದರೆ ಅಮೆರಿಕದ ಶಸ್ತ್ರಾಸ್ತ್ರಗಳನ್ನು ಮತ್ತು ರಕ್ಷಣಾ ಸಾಮಗ್ರಿಗಳನ್ನು ಖರೀದಿಸಬೇಕೆಂದೇ ಅದರ ಅರ್ಥವಿದ್ದಿರಬೇಕು.
ಈ ಏಕಮುಖ ರಸ್ತೆಯಲ್ಲಿ ಸಾಗಿದ ಮೇಲೆ, ಭಾರತವು ಅಮೆರಿಕದ ರಥದ ಎರಡು ಚಕ್ರಗಳಲ್ಲಿ ಒಂದು ಚಕ್ರವಾಗುವ ಸಂಭವವನ್ನು ಮೋದಿ ಎದುರಿಸಬೇಕಾಗಿ ಬಂದಿದೆ. ಪಾಕಿಸ್ತಾನ ಅದರ ಇನ್ನೊಂದು ಗಾಲಿಯಾಗಿದೆ. ತಾಲಿಬಾನ್ ಅಫಘಾನಿಸ್ತಾನವನ್ನು ವಶಪಡಿಸಿಕೊಂಡ ಮೇಲೆ ಅದರ ಪ್ರತ್ಯಾಘಾತವನ್ನು ಕೂಡ ಅವರು ಎದುರಿಸಬೇಕಾಗುತ್ತದೆ.
–ಪ್ರಕಾಶ್ ಕಾರಟ್
ಅನು:ವಿಶ್ವ
(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243