ಬಹಿರಂಗ
ನವ ಉದಾರ ವಿತ್ತೀಯ ಆಳ್ವಿಕೆಯ ವಿಕೃತಿ-2 : ಖಾಸಗೀಕರಣ ಎಂಬ ಬೌದ್ಧಿಕ ಅಪ್ರಾಮಾಣಿಕತೆ ಮತ್ತು ದೇಶದ್ರೋಹಿ ಕೃತ್ಯ
- ದೇಶದ ಅದೃಷ್ಟಹೀನ ಅಲ್ಪ ಸಂಖ್ಯಾತರ ಮೇಲೆ ಆರ್ಭಟಿಸುವ, ಜಬರ್ದಸ್ತು ಮಾಡುವ, ಆಡಂಬರದ ಗಂಡಸುತನ ತೋರಿಸುವ, ಆದರೆ ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳದ ವಿರುದ್ಧ ನಿಲ್ಲುವ ಎದೆಗಾರಿಕೆ ಹೊಂದಿಲ್ಲದ, ಅದೇ ಹಣಕಾಸು ಬಂಡವಾಳವು ಅರ್ಥವ್ಯವಸ್ಥೆಗೆ ಆಘಾತ ತಲುಪಿಸುವಂತಹ ಆಜ್ಞೆಗಳನ್ನು ಕೊಂಡೊಯ್ಯುವ ಕೊಳವೆಯ ಪಾತ್ರ ವಹಿಸುತ್ತಿರುವ ಮೋದಿ ಸರಕಾರ ರಾಜ್ಯಗಳನ್ನು ಆರ್ಥಿಕವಾಗಿ ಹಿಂಡಲು ಮುಂದಾಗಿರುವುದುನವ ಉದಾರ ಆಳ್ವಿಕೆಯ ಒಂದುವಿಕೃತಿಯಾದರೆಇನ್ನೊಂದು ವಿಕೃತಿಅಂದರೆ ದೇಶದ ಆಸ್ತಿಗಳ ಖಾಸಗೀಕರಣ.ತನ್ನ ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಳ್ಳುವುದರ ಬದಲಾಗಿ ಮೋದಿ ಸರ್ಕಾರವು ರಾಜ್ಯಗಳನ್ನು ಹಿಂಡುತ್ತಿರುವ ಕ್ರಮವು ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಒಡ್ಡಿದರೆ, ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸುವ ಕ್ರಮವು ದೇಶವನ್ನು ವಿದೇಶಿ ಮತ್ತು ದೇಶೀಯ ಏಕಸ್ವಾಮ್ಯ ಬಂಡವಾಳಶಾಹಿಗಳು ಕೊಳ್ಳೆ ಹೊಡೆಯಲು ಅವಕಾಶ ಕಲ್ಪಿಸುವ ದೇಶದ್ರೋಹಿ ಕೃತ್ಯವಾಗಿದೆ.
-ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ. ನಾಗರಾಜ್
ನವ ಉದಾರ ಆಳ್ವಿಕೆಯಲ್ಲಿ ಹಣ ಕಾಸಿನ ಬಿಕ್ಕಟ್ಟಿಗೆ ಒಳಗಾಗಿರುವ ಕೇಂದ್ರ ಸರ್ಕಾರವು ಅದರಿಂದ ನುಣಿಚಿಕೊಳ್ಳಲು ಕುಯುಕ್ತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಅಂತಹ ಪ್ರಯತ್ನಗಳಲ್ಲಿ ಮೊದಲನೆಯದು, ತಾನು ಹೊರಬೇಕಾಗಿರುವ ವಿತ್ತೀಯ ಭಾರವನ್ನು, ಬಲವಂತವಾಗಿ ಮತ್ತು ಸಾಂವಿಧಾನಿಕ ಹೊಣೆಗಾರಿಕೆಯನ್ನು ಉಲ್ಲಂಘಿಸಿ, ರಾಜ್ಯ ಸರ್ಕಾರಗಳ ಹೆಗಲಿಗೆ ಹೊರಿಸುವುದು. ಇನ್ನೊಂದು ಪ್ರಯತ್ನವೆಂದರೆ, ಸಾರ್ವಜನಿಕ ವಲಯವದ ಅನೇಕ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟಮಾಡುವುದು.
ಸಾರ್ವಜನಿಕ ವಲಯದ ಖಾಸಗೀಕರಣದ ಬಗ್ಗೆ ಸರ್ಕಾರವು ಒಂದಲ್ಲಾ ಒಂದು ಘೋಷಣೆ ಮಾಡದ ದಿನವೇ ಇಲ್ಲ. ಹರ್ದೀಪ್ ಪುರಿ ಎಂಬ ವಿಮಾನಯಾನ ಖಾತೆಯ ಸಚಿವರು ಏರ್ ಇಂಡಿಯಾ ಸಂಸ್ಥೆಯನ್ನು ಖಾಸಗೀಕರಿಸದಿದ್ದರೆ ಅದನ್ನು ಮುಚ್ಚಬೇಕಾಗುತ್ತದೆ ಎಂದು ಹೇಳಿದ್ದಾರೆ.
ಎರಡು ಕಾರಣಗಳಿಂದ ಈ ಹೇಳಿಕೆ ಗಮನ ಸೆಳೆಯುತ್ತದೆ: ಮೊದಲನೆಯದು, ಖಾಸಗಿ ಕೊಳ್ಳುಗನೊಬ್ಬ ಏರ್ ಇಂಡಿಯಾ ಮತ್ತೆ ಕಾರ್ಯಾಚರಿಸುವಂತೆ ಮಾಡುವುದು ಸಾಧ್ಯವಾದರೆ (ಇಲ್ಲವಾದರೆ ಅದನ್ನು ಯಾರಾದರೂ ಏಕೆ ಕೊಳ್ಳುತ್ತಾರೆ), ಸರ್ಕಾರವೇ ಅದನ್ನು ಮಾಡಬಾರದೇಕೆ? ಎರಡನೆಯದು, ಹರ್ದೀಪ್ ಪುರಿಯವರ ಹೇಳಿಕೆ ಸರಿ ಇದೆ ಎಂಬುದನ್ನು ವಾದಕ್ಕಾಗಿ ಒಪ್ಪಿಕೊಂಡರೂ ಸಹ, ಅದೊಂದು ವಿಲಕ್ಷಣವಾದ ಹೇಳಿಕೆ.
ಏಕೆಂದರೆ, ಒಬ್ಬ ಸಂಭಾವ್ಯ ಕೊಳ್ಳುಗನಿಗೆ ಹರಾಜಿನಲ್ಲಿ ಕೂಗುವ ಬೆಲೆಯನ್ನು ಇಳಿಸುವಂತೆ ಅದು ಸೂಚಿಸುತ್ತದೆ. ಟ್ರೇಡ್ ಯೂನಿಯನ್ಗಳ ಮಾತಿಗೆ ಕಿವಿಗೊಡದ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದ ಅಸನ್ಸಾಲ್-ದುರ್ಗಾಪುರ ಪ್ರದೇಶದ ಅನೇಕ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಕರಣಗೊಳಿಸುವ ಹವಣಿಕೆಯಲ್ಲಿದೆ.
ಮಾರುವ ಉದ್ದೇಶದಿಂದಲೇ ಬಿಎಸ್ಎನ್ಎಲ್ ಸಂಸ್ಥೆಯನ್ನು ನಿರ್ವೀರ್ಯಗೊಳಿಸಿ ಅದೊಂದು ಕೆಲಸಕ್ಕೆ ಬಾರದ ಸಂಸ್ಥೆ ಎನ್ನುವಂತೆ ಮಾಡಿ, ತಮಗೆ ಬೇಕಾದವರಿಗೆ ಅಗ್ಗದ ಬೆಲೆಯಲ್ಲಿ ಮಾರುವ ಸಲುವಾಗಿ ಬಿಎಸ್ಎನ್ಎಲ್ ನೌಕರರನ್ನು ಐಚ್ಛಿಕ ನಿವೃತ್ತಿ ಪಡೆಯುವಂತೆ ಒತ್ತಾಯಿಸಲಾಗಿದೆ. ಇಂತಹ ಅನೇಕ ಉದಾಹರಣೆಗಳಿವೆ.
ಸಾರ್ವಜನಿಕ ವಲಯದ ಮಹತ್ವದ ಅರಿವಿಲ್ಲದ ಮತ್ತು ಕಾರ್ಪೊರೇಟ್ ಕುಳಗಳೊಂದಿಗೆ ಒಡನಾಟ ಇಟ್ಟುಕೊಂಡಿರುವ ಬಿಜೆಪಿಯು ಸಾರ್ವಜನಿಕ ವಲಯವನ್ನು ಮಾರಲು ಉತ್ಸುಕವಾಗಿರುವುದು ಅದರ ಸಹಜ ಪ್ರವೃತ್ತಿ.
ಆರ್ಥಿಕ ಮಂದಗತಿ ಉಂಟುಮಾಡಿರುವ ಬಿಕ್ಕಟ್ಟಿನ ಹಣಕಾಸಿನ ಪರಿಸ್ಥಿತಿಯಿಂದ ಹೊರ ಬರಲು ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಮಾರಲು ಬಿಜೆಪಿ ಸರ್ಕಾರವು ತಡೆದುಕೊಳ್ಳಲಾರದಷ್ಟು ಅವಸರದಲ್ಲಿದೆ.
ಖಾಸಗೀಕರಣವನ್ನು ಚುರುಕುಗೊಳಿಸುವ ಸಲುವಾಗಿ, ಅಂತಾರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ಅದರ ನಾಯಕ ಸಂಸ್ಥೆಗಳಾದ ಐಎಂಎಫ್ ಮತ್ತು ವಿಶ್ವ ಬ್ಯಾಂಕ್ ಒಂದು ಮೋಸದ ಲೆಕ್ಕಾಚಾರಕ್ಕೆ ಇಳಿದಿದೆ.
ಅವುಗಳ ಪ್ರಕಾರ, ಸಾರ್ವಜನಿಕ ವಲಯದ ಸಂಸ್ಥೆಗಳ ಮಾರಾಟದಿಂದ ಬಂದ (ಹುಟ್ಟುವಳಿ) ಹಣವನ್ನು ವಿತ್ತೀಯ ಕೊರತೆಯ ಮೊತ್ತದಿಂದ ಕಳೆಯಲಾಗುತ್ತದೆ. ಅಂದರೆ, ವಿತ್ತೀಯ ಕೊರತೆಯ ಗಾತ್ರವು ಸಣ್ಣದಾಗಿ ಕಾಣಿಸುವ ಮೂಲಕ ವಿತ್ತೀಯ ಹೊಣೆಗಾರಿಕೆ ಶಿಸ್ತು ಪಾಲನೆಯಾಗುತ್ತದೆ.
ಆದರೆ, ಇದೊಂದು ಸಂಪೂರ್ಣ ಅನೈತಿಕ ನಡವಳಿಕೆ. ಆದರೂ ಸಹ, ಸೈದ್ಧಾಂತಿಕ ಕಾರಣಗಳಿಗಾಗಿ ಖಾಸಗೀಕರಣವನ್ನು ಜಾರಿಗೊಳಿಸಲಾಗುತ್ತಿದೆ.
ಸಾರ್ವಜನಿಕ ಸಂಸ್ಥೆಗಳ ಮಾರಾಟ ಹುಟ್ಟುವಳಿ ಹಣದ ಮೂಲಕ ವಿತ್ತೀಯ ಕೊರತೆಯ ಮಟ್ಟವನ್ನು ಇಳಿಸುವ ಕ್ರಮವು ಒಂದು ಸಂಪೂರ್ಣ ಅನೈತಿಕ ನಡವಳಿಕೆ ಹೇಗೆ ಎಂಬುದು ಸರಳವಾಗಿದೆ.
ಒಂದು ಬೇಡಿಕೆಯನ್ನು ಮಿತಗೊಳಿಸುವ ಸನ್ನಿವೇಶದಲ್ಲಿ, ಅಂದರೆ ನಿರುದ್ಯೋಗ ಮತ್ತು ಸ್ಥಾಪಿತ ಸಾಮರ್ಥ್ಯಗಳು ಬಳಕೆಯಾಗದೆ ಉಳಿದ ಸನ್ನಿವೇಶದಲ್ಲಿ, ವಿತ್ತೀಯ ಕೊರತೆಯಿಂದಾಗಿ ಅರ್ಥವ್ಯವಸ್ಥೆಯ ಮೇಲೆ, ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ವಕ್ತಾರರು ಹೇಳುವ ಹಾಗೆ, ಯಾವುದೇ ಅಡ್ಡ-ಪರಿಣಾಮಗಳು ಬೀಳುವುದಿಲ್ಲ: ವಿತ್ತೀಯ ಕೊರತೆಯ ಹೆಚ್ಚಳದಿಂದಾಗಿ ಖಾಸಗಿ ಹೂಡಿಕೆಗೆ ಜಾಗವಿಲ್ಲದಂತಾಗಿ ಅದು ಹೊರಹೋಗುವ ಪರಿಸ್ಥಿತಿಯೂ ಉಂಟಾಗುವುದಿಲ್ಲ, ಮತ್ತು, ಅದರಿಂದ ಹಣದುಬ್ಬರವೂ ಉಂಟಾಗುವುದಿಲ್ಲ.
ಏಕೆಂದರೆ, ವಾಸ್ತವವಾಗಿ ಉಳಿತಾಯಗಳ ಒಂದು ನಿಗದಿತ ಭಂಡಾರ ಎಂಬುದೇನೂ ಇರುವುದಿಲ್ಲ, ಆದ್ದರಿಂದ ಖಾಸಗಿ ಹೂಡಿಕೆಗೆ ಜಾಗವಿಲ್ಲದಾಗುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ವಿತ್ತೀಯ ಕೊರತೆಯ ಹೆಚ್ಚಳದಿಂದಾಗಿಯೇ (ಅಧಿಕ ಖರ್ಚುಗಳ ಮೂಲಕ) ಅಧಿಕವಾಗಿ ಬೇಡಿಕೆ ಸೃಷ್ಟಿಯಾಗುತ್ತದೆ. ಪರಿಣಾಮವಾಗಿ ವರಮಾನಗಳು ಹೆಚ್ಚುವುದರಿಂದ ಉಳಿತಾಯಗಳೂ ಹೆಚ್ಚುತ್ತವೆ.
ವಿತ್ತೀಯ ಕೊರತೆಯಿಂದಾಗಿ ಹಣದುಬ್ಬರ ಉಂಟಾಗುವುದಿಲ್ಲ, ಏಕೆಂದರೆ, ನಿರುದ್ಯೋಗ ಮತ್ತು ಸ್ಥಾಪಿತ ಸಾಮರ್ಥ್ಯಗಳು ಬಳಕೆಯಾಗದೆ ಉಳಿದಿರುತ್ತವೆ. ಬೇಡಿಕೆ ಅಧಿಕವಾಗಿ ಸೃಷ್ಟಿಯಾದಾಗ ವಸ್ತುಗಳ ಬೆಲೆ ಏರಿಕೆಯಾಗುವುದರ ಬದಲು ವಸ್ತುಗಳ ಉತ್ಪಾದನೆ ಹೆಚ್ಚುತ್ತದೆ.
ಒಂದು ವೇಳೆ, ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ವಕ್ತಾರರು ಹೇಳುವ ಹಾಗೆ, ವಿತ್ತೀಯ ಕೊರತೆಯಿಂದಾಗಿ ಅರ್ಥವ್ಯವಸ್ಥೆಯ ಮೇಲೆ ಅಡ್ಡ-ಪರಿಣಾಮಗಳು ಬೀಳುತ್ತವೆ ಎಂದುಕೊಂಡರೂ ಸಹ, ಸಾರ್ವಜನಿಕ ಸಂಸ್ಥೆಗಳ ಮಾರಾಟ ಹುಟ್ಟುವಳಿಯು (ಹಣ) ಅಂತಹ ಅಡ್ಡ-ಪರಿಣಾಮಗಳನ್ನೇನೂ ನಿವಾರಿಸುವುದಿಲ್ಲ.
ಒಂದು ವೇಳೆ, ಉಳಿತಾಯಗಳ ಒಂದು ನಿಗದಿತ ಭಂಡಾರ ಇದೆ ಎಂದುಕೊಂಡರೂ ಸಹ, ಉದಾಹರಣೆಯಾಗಿ ಹೇಳುವುದಾದರೆ, ಆ ಉಳಿತಾಯಗಳ ನಿಧಿಯಿಂದ ಸರ್ಕಾರವೇ ಹೆಚ್ಚು ಸಾಲ ಪಡೆದುಕೊಂಡರೆ, ಆಗ, ಖಾಸಗಿ ವಲಯಕ್ಕೆ ಹೂಡಿಕೆ ಮಾಡುವ ಹಣದ ಲಭ್ಯತೆ ಕಡಿಮೆಯಾಗಿ, ಅವನ್ನು ಹೊರತಳ್ಳುವಂತಾಗುತ್ತದೆ ಎಂದಿಟ್ಟುಕೊಂಡರೂ ಕೂಡ, ಸಾರ್ವಜನಿಕ ಸಂಸ್ಥೆಗಳ ಮಾರಾಟ ಹುಟ್ಟುವಳಿಯಿಂದ (ಹಣದಿಂದ) ಉಳಿತಾಯಗಳ ನಿಗದಿತ ನಿಧಿ ಎಳ್ಳಷ್ಟೂ ಹೆಚ್ಚುವುದಿಲ್ಲ.
ಅದೇ ರೀತಿಯಲ್ಲಿ, ವಿತ್ತೀಯ ಕೊರತೆಯ ಹೆಚ್ಚಳದಿಂದಾಗಿ ಅಧಿಕ ಬೇಡಿಕೆ ಸೃಷ್ಟಿಯಾಗುವ ಕಾರಣದಿಂದ ಹಣದುಬ್ಬರ ಉಂಟಾಗುತ್ತದೆ ಎಂದುಕೊಂಡರೂ ಸಹ, ಆಗ, ಸಾರ್ವಜನಿಕ ಸಂಸ್ಥೆಗಳ ಮಾರಾಟವು ಈ ಬೇಡಿಕೆ ಅಧಿಕವಾಗಿ ಸೃಷ್ಟಿಯಾಗುವುದನ್ನು ಎಳ್ಳಷ್ಟೂ ತಗ್ಗಿಸುವುದಿಲ್ಲ. ಏಕೆಂದರೆ, ಈ ಸಾರ್ವಜನಿಕ ಸಂಸ್ಥೆಗಳ ಕೊಳ್ಳುಗರು ತಮಗೆ ಬೇಕಾಗುವ ವಸ್ತುಗಳು ಮತ್ತು ಸೇವೆಗಳ ಮೇಲೆ ತಮ್ಮ ಬೇಡಿಕೆಯನ್ನು ತಗ್ಗಿಸುವುದಿಲ್ಲ.
ಈ ರೀತಿಯಲ್ಲಿ, ಸಾರ್ವಜನಿಕ ಸಂಸ್ಥೆಗಳ ಮಾರಾಟವು, ವಾಸ್ತವವಾಗಿ, ವಿತ್ತೀಯ ಕೊರತೆಯನ್ನು ಮುಕ್ತಾಯಗೊಳಿಸುವುದಿಲ್ಲ. ಆದಾಗ್ಯೂ, ವಿತ್ತೀಯ ಕೊರತೆಯನ್ನು ಖಂಡ ತುಂಡವಾಗಿ ವಿರೋಧಿಸುವ ಹಣಕಾಸು ಬಂಡವಾಳವು ಸಾರ್ವಜನಿಕ ಸಂಸ್ಥೆಗಳ ಮಾರಾಟವು ವಿತ್ತೀಯ ಕೊರತೆಯನ್ನು ತಗ್ಗಿಸುವ ಒಂದು ಸಾಧನ ಎಂದು ಸಂಪೂರ್ಣವಾಗಿ ಸಮರ್ಥಿಸುತ್ತದೆ. ಅಂದರೆ, ಹಣಕಾಸು ಬಂಡವಾಳವು ಸಾರ್ವಜನಿಕ ಸಂಸ್ಥೆಗಳ ಮಾರಾಟವನ್ನು ಸರ್ಕಾರ ತೆರಿಗೆ ವಿಧಿಸುವ ಕ್ರಮಕ್ಕೆ ಸರಿಸಮನಾದ ಕ್ರಮವೆಂದು ಬಗೆಯುತ್ತದೆ.
ಅರ್ಥಶಾಸ್ತ್ರದಲ್ಲಿ ಪರಿಚಲನೆ(flow) ಮತ್ತು ಸಂಗ್ರಹ (stok)ಗಳ ನಡುವಿನ ಭಿನ್ನತೆಯನ್ನು ಗುರುತಿಸಲಾಗುತ್ತದೆ. ಸರ್ಕಾರದ ವರಮಾನ(ಒಂದು ಪರಿಚಲನೆ) ಮತ್ತು ಖರ್ಚುಗಳ(ಇನ್ನೊಂದು ಪರಿಚಲನೆ) ನಡುವಿನ ವ್ಯತ್ಯಾಸವೇ ವಿತ್ತೀಯ ಕೊರತೆ.
ತೆರಿಗೆ ಆದಾಯ(ಪರಿಚಲನೆ) ಹೆಚ್ಚಿಸುವ ಮೂಲಕ ಅಥವಾ ಖರ್ಚುಗಳನ್ನು(ಪರಿಚಲನೆ) ತಗ್ಗಿಸುವ ಮೂಲಕ, ಅಂದರೆ, ಈ ಎರಡು ಪರಿಚಲನೆಯ ಅಂಶಗಳನ್ನು ಸಮನ್ವಯಗೊಳಿಸುವ ಮೂಲಕ ವಿತ್ತೀಯ ಕೊರತೆಯನ್ನು ಮುಕ್ತಾಯಗೊಳಿಸಬಹುದು.
ಇನ್ನೊಂದೆಡೆಯಲ್ಲಿ, ಸಾರ್ವಜನಿಕ ಸಂಸ್ಥೆಗಳ ಆಸ್ತಿ ಮಾರಾಟದ ಹುಟ್ಟುವಳಿಯು (ಹಣ), ಆಯ-ವ್ಯಯ ಪಟ್ಟಿಯಲ್ಲಿ(balance sheet) ಒಂದು ಸಂಗ್ರಹ ಎಂದು ಸೂಚಿತವಾಗುತ್ತದೆ. ಸಂಗ್ರಹ ಸಂಬಂಧಿತ ಈ ಆಸ್ತಿಯ ವ್ಯವಹಾರವು, ತೆರಿಗೆ ಅಥವಾ ಖರ್ಚುಗಳ ಪರಿಚಲನೆಯ ಏರು ಪೇರುಗಳಿಂದ ಉಂಟಾಗುವ ಯಾವ ಅಡ್ಡ-ಪರಿಣಾಮಗಳನ್ನು ನಿವಾರಿಸುವುದಿಲ್ಲ.
ಆದರೂ, ವಿತ್ತೀಯ ಕೊರತೆಯನ್ನು ಮುಕ್ತಾಯಗೊಳಿಸಲು ಸಾರ್ವಜನಿಕ ಸಂಸ್ಥೆಗಳ ಮಾರಾಟದ ಮೂಲಕ ಬರುವ ಹಣವು ಒಂದು ನ್ಯಾಯ ಸಮ್ಮತ ಸಾಧನವೆಂದು ಐಎಂಎಫ್ ಮತ್ತು ಇತರ ಸಂಸ್ಥೆಗಳು ಬಗೆಯುತ್ತವೆ. ಇದು ಅವರ ಅಪ್ರಮಾಣಿಕತನವನ್ನು ತೋರಿಸುತ್ತದೆ. ಅವರ ಬೌದ್ಧಿಕ ನಿಲುವು ವೈಜ್ಞಾನಿಕ ಆಲೋಚನಾ ಕ್ರಮಕ್ಕೆ ಅಧೀನವಾಗಿರುವುದರ ಬದಲು ಸಮಯ ಸಾಧಕ ಬಯಕೆಗಳಿಂದ ಕೂಡಿದ ಖಾಸಗೀಕರಣ ಸಿದ್ಧಾಂತಕ್ಕೆ ಅಧೀನವಾಗಿದೆ.
ಈ ಬೌದ್ಧಿಕ ಅಪ್ರಾಮಾಣಿಕತೆ ಅಲ್ಲಿಗೇ ನಿಲ್ಲುವುದಿಲ್ಲ. ಒಂದು ಖಾಸಗಿ ಕಂಪೆನಿಯು ಸಾರ್ವಜನಿಕ ಸಂಸ್ಥೆಯೊಂದನ್ನು ಕೊಳ್ಳುವಾಗ ಯಾರೊ ಒಬ್ಬ ಕಿರಾಣಿ ಅಂಗಡಿಯವನು ಹೊಟ್ಟೆ ಬಟ್ಟೆ ಕಟ್ಟಿ ಉಳಿಸಿಕೊಂಡ ಹಣದಿಂದ ಒಂದು ಆಸ್ತಿ ಕೊಳ್ಳುವ ರೀತಿಯಲ್ಲಿ ಹಣ ಹೊಂದಿಸಿಕೊಳ್ಳುವುದಿಲ್ಲ. ಖಾಸಗಿ ಕಂಪೆನಿಯು ಆಸ್ತಿ ಕೊಳ್ಳುವಾಗ ಸಾಲ ಮಾಡುತ್ತದೆ ಅಥವಾ ಬೇರೆ ಕೆಲವು ಸ್ವತ್ತುಗಳನ್ನು ಕೊಳ್ಳುವುದನ್ನು ಮುಂದೂಡುತ್ತದೆ.
ಆ ಕಂಪೆನಿಯ ಆಯ-ವ್ಯಯ ಪಟ್ಟಿಯಲ್ಲಿ ಈ ಎಲ್ಲ ವ್ಯವಹಾರಗಳೂ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ, ಸರ್ಕಾರದ ವಿತ್ತೀಯ ಕೊರತೆ 100ರೂ ಗಳಷ್ಟಿದೆ ಮತ್ತು ಅದನ್ನು ಸರಿದೂಗಿಕೊಳ್ಳಲು ಸರ್ಕಾರವು 100ರೂ ಗಳನ್ನು ಬ್ಯಾಂಕಿನಿಂದ ಸಾಲ ಪಡೆಯುತ್ತದೆ. ಆದರೆ, ಬ್ಯಾಂಕಿನಿಂದ ಸಾಲ ಪಡೆಯುವ ಬದಲು ಸರ್ಕಾರವು 100ರೂ ಬೆಲೆ ಬಾಳುವ ತನ್ನ ಆಸ್ತಿಯೊಂದನ್ನು ಮಾರುತ್ತದೆ.
ಆದರೆ, ಆ ಆಸ್ತಿಯನ್ನು ಕೊಳ್ಳುವ ಖಾಸಗಿ ಕಂಪೆನಿಯು ೧೦೦ರೂ ಗಳನ್ನು ಬ್ಯಾಂಕಿನಿಂದಲೇ ಸಾಲ ಪಡೆಯುತ್ತದೆ. ಇಂತಹ ಒಂದು ಸನ್ನಿವೇಶದಲ್ಲಿ, ಸರ್ಕಾರವು ವಿತ್ತೀಯ ಕೊರತೆಗೆ ಒಳಗಾದರೆ ಅರ್ಥವ್ಯವಸ್ಥೆಗೆ ಕೇಡಾಗುತ್ತದೆ; ಆದರೆ, ಸಾರ್ವಜನಿಕ ಸಂಸ್ಥೆಗಳನ್ನು ಮಾರುವುದು ಸರಿಯಾಗುತ್ತದೆ ಎಂದು ಹೇಳುವುದು ಆಷಾಢಭೂತಿತನವಾಗುತ್ತದೆ.
ತನ್ನ ಖರ್ಚುಗಳನ್ನು ಸರಿದೂಗಿಸಿಕೊಳ್ಳಲು ಸರ್ಕಾರ 100ರೂ ಗಳನ್ನು ಸಾಲ ಮಾಡಿದರೆ ಅರ್ಥವ್ಯವಸ್ಥೆಗೆ ಕೇಡಾಗುತ್ತದೆ. ಸರ್ಕಾರದ ಆಸ್ತಿ ಕೊಳ್ಳುವವನು ಅದೇ 100ರೂ ಗಳನ್ನು ಬ್ಯಾಂಕಿನಿಂದ ಸಾಲ ಪಡೆದರೆ ಅರ್ಥವ್ಯವಸ್ಥೆಯು ಚೆನ್ನಾಗಿರುತ್ತದೆ ಎಂದು ಹೇಳಿದಂತಾಗುತ್ತದೆ! ಈ ವಾದದಲ್ಲಿ ಯಾವ ಆರ್ಥಿಕ ತರ್ಕಾಧಾರವೂ ಇಲ್ಲ.
ಈ ವಿಷಯವನ್ನು ಇನ್ನೊಂದು ರೀತಿಯಲ್ಲೂ ನೋಡಬಹುದು. ವಿತ್ತೀಯ ಕೊರತೆಯಿಂದ ಸರ್ಕಾರದ ಸಾಲ ಹೆಚ್ಚುತ್ತದೆ. ಆ ಸಾಲವನ್ನು ಸರ್ಕಾರವು ಸಾಲ ಪತ್ರಗಳ ಮಾರಾಟದ ಮೂಲಕ ಪಡೆಯುತ್ತದೆ. ಸಾರ್ವಜನಿಕ ಸಂಸ್ಥೆಗಳ ಷೇರುಗಳನ್ನು ಖಾಸಗಿಯವರಿಗೆ ಮಾರುವ ಮೂಲಕ ಸರ್ಕಾರದ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತದೆ.
ಖಾಸಗೀಕರಣವು ಅಪಾಯಕಾರಿಯಲ್ಲ. ಆದರೆ, ವಿತ್ತೀಯ ಕೊರತೆ ಅಪಾಯಕಾರಿ ಎಂಬ ವಾದವು ಸರ್ಕಾರ ತನ್ನ ಷೇರುಗಳನ್ನು ಖಾಸಗಿಯವರಿಗೆ ಮಾರಿದರೆ ಅದು ಅಪಾಯಕಾರಿಯಲ್ಲ; ಸರ್ಕಾರವು ಸಾಲ ಪತ್ರಗಳನ್ನು (ಬಾಂಡುಗಳು) ಮಾರುವ ಕ್ರಮ ಮಾತ್ರ ಅಪಾಯಕಾರಿ ಎಂದು ಹೇಳಿದಂತಾಗುತ್ತದೆ. ಇದೊಂದು ಸಮರ್ಥನೀಯವೇ ಅಲ್ಲದ ವಾದ. ಇದೊಂದು ಖಾಸಗೀಕರಣವನ್ನು ಜಾರಿಗೊಳಿಸುವ ತಂತ್ರವಷ್ಟೇ.
ಬ್ಯಾಂಕ್ ಸಾಲ ಮತ್ತು ಇತರ ಸೌಲಭ್ಯಗಳು ದೊಡ್ಡ ಬಂಡವಾಳಶಾಹಿಗಳಿಗೆ ಮಾತ್ರ ಲಭಿಸುತ್ತಿದ್ದ ಪರಿಸ್ಥಿತಿಗೆ ತಡೆ ಒಡ್ಡುವ ಉದ್ದೇಶದಿಂದ ಸಾರ್ವಜನಿಕ ವಲಯವನ್ನು ಹುಟ್ಟಿಹಾಕಲಾಗಿತ್ತು. ಸಾಮ್ರಾಜ್ಯಶಾಹಿಗಳ ಹಿಡಿತದಿಂದ ಅರ್ಥವ್ಯವಸ್ಥೆಯನ್ನು ವಿಮುಕ್ತಿಗೊಳಿಸುವ ಅಜೆಂಡಾದ ಭಾಗವಾಗಿ ಸಾರ್ವಜನಿಕ ವಲಯವನ್ನು ಹುಟ್ಟಿಹಾಕಲಾಗಿತ್ತು.
ಆದರೆ, ನವ ಉದಾರ ಆಳ್ವಿಕೆಯಲ್ಲಿ ಸರ್ಕಾರಗಳು ದೊಡ್ಡ ಬಂಡವಾಳಶಾಹಿಗಳ ಓಲೈಕೆಯಲ್ಲಿ ತೊಡಗಿವೆ. ಆದಾಗ್ಯೂ, ತಮ್ಮ ಏಕಸ್ವಾಮ್ಯದ ಶಕ್ತಿಯನ್ನು ಬಳಸಿಕೊಂಡು ದೇಶದ ಸಂಪನ್ಮೂಲಗಳನ್ನು ಕಬಳಿಸುವ ದೊಡ್ಡ ಬಂಡವಾಳಶಾಹಿಗಳ ಪ್ರಭಾವವನ್ನು ಸೀಮಿತಗೊಳಿಸುವಲ್ಲಿ ಸಾರ್ವಜನಿಕ ವಲಯವು ಒಂದು ಪ್ರಮುಖ ಪಾತ್ರ ವಹಿಸಬಲ್ಲದು.
ದೇಶದ ಹಿತಾಸಕ್ತಿಗಳ ಬಗ್ಗೆ ಕಾತರ ಉಳ್ಳ ಯಾವುದೇ ಒಂದು ಸರ್ಕಾರವು, ಅದು ನವ ಉದಾರವಾದದ ಬಲೆಯಲ್ಲಿ ಸಿಕ್ಕಿದ್ದರೂ ಸಹ, ದೇಶದ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ, ವಿದೇಶಿ ಮತ್ತು ದೇಶೀಯ ಏಕಸ್ವಾಮ್ಯ ಬಂಡವಾಳವು ಕೊಳ್ಳೆ ಹೊಡೆಯುತ್ತಿರುವುದರ ವಿರುದ್ಧವಾಗಿ, ಸಾರ್ವಜನಿಕ ವಲಯವನ್ನು ಪೋಷಿಸುತ್ತದೆ.
ಆದರೆ, ತಮ್ಮ ಟೀಕಾಕಾರರನ್ನು ರಾಷ್ಟ್ರ-ವಿರೋಧಿ ಎಂದು ಆಪಾದನೆ ಹೊರಿಸುವ ನಮ್ಮ ಹಿಂದುತ್ವವಾದಿಗಳಿಗೆ ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವಿದೇಶಿ ಮತ್ತು ದೇಶೀಯ ಏಕಸ್ವಾಮ್ಯ ಬಂಡವಾಳದ ಹಿತ ರಕ್ಷಣೆ ಮಾಡುವುದೇ ಒಂದು ಪ್ರಿಯವಾದ ಕೆಲಸ. ಸಾಮ್ರಾಜ್ಯಶಾಹಿಗಳ ಭೀಕರ ವಿರೋಧವನ್ನು ಲೆಕ್ಕಿಸದೆ ಸ್ಥಾಪಿಸಿದ ಸಾರ್ವಜನಿಕ ವಲಯದ ನಾಶದ ಬಗ್ಗೆ ಅವರಿಗೆ ಸ್ವಲ್ಪವೂ ವ್ಯಥೆ ಇಲ್ಲ.
ಈ ಎಲ್ಲ ಅಂಶಗಳಿಂದ ನವ ಉದಾರ ವಿತ್ತೀಯ ನೀತಿಯ ಕಾರ್ಯವೈಖರಿ ಹೇಗಿದೆ ಎಂಬುದು ಸ್ಪಷ್ಟವಾಗುತ್ತದೆ. ನವ ಉದಾರವಾದವು ವಿತ್ತೀಯ ನೀತಿಯನ್ನು ಆವರ್ತ-ವಿರೋಧಿಯಾಗಿಸುವ ಬದಲು ಆವರ್ತ-ಪರವಾಗಿಸುತ್ತದೆ. ಅರ್ಥವ್ಯವಸ್ಥೆಯು ಇಳಿಮುಖವಾದಾಗ ಆದಾಯಗಳೂ ಇಳಿಯುತ್ತವೆ.
ಅಂತಹ ಪರಿಸ್ಥಿತಿಯಲ್ಲಿ ತನ್ನ ಖರ್ಚು ವೆಚ್ಚಗಳನ್ನು ಭರಿಸಲು ಕೇಂದ್ರ ಸರ್ಕಾರಕ್ಕೆ ದೊಡ್ಡ ದೊಡ್ಡ ಬಂಡವಾಳಶಾಹಿಗಳ ಮೇಲೆ ತೆರಿಗೆ ಹೇರಲೂ ಆಗುತ್ತಿಲ್ಲ; ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಳ್ಳಲೂ ಆಗುತ್ತಿಲ್ಲ. ಸರ್ಕಾರವು ತನ್ನ ಖರ್ಚು ವೆಚ್ಚಗಳನ್ನು ಕಡಿತಗೊಳಿಸಿದ್ದರೆ ಉಂಟಾಗುತ್ತಿದ್ದ ತೊಂದರೆಗಳಿಗೆ ಹೋಲಿಸಿದರೆ, ಬಂಡವಾಳಶಾಹಿಗಳ ಮೇಲೆ ತೆರಿಗೆ ಹೇರಿದ್ದರೆ, ಅವರ ಲಾಭಕ್ಕೆ ಯಾವ ಧಕ್ಕೆಯೂ ಆಗುತ್ತಿರಲಿಲ್ಲ.
ತನ್ನ ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಳ್ಳುವುದರ ಬದಲಾಗಿ ಕೇಂದ್ರ ಸರ್ಕಾರವು ರಾಜ್ಯಗಳನ್ನು ಹಿಂಡುತ್ತಿರುವ ಕ್ರಮವು ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಒಡ್ಡುತ್ತದೆ. ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸುವ ಕ್ರಮವು ದೇಶವನ್ನು ವಿದೇಶಿ ಮತ್ತು ದೇಶೀಯ ಏಕಸ್ವಾಮ್ಯ ಬಂಡವಾಳಶಾಹಿಗಳು ಕೊಳ್ಳೆ ಹೊಡೆಯಲು ಅವಕಾಶ ಕಲ್ಪಿಸುತ್ತದೆ.
(ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243