ಕ್ರೀಡೆ
ಟಿ-20 ವಿಶ್ವಕಪ್ ಪ್ರಶಸ್ತಿ ವಿಜೇತ ಭಾರತ ಕ್ರಿಕೆಟ್ ತಂಡ ಇಂದು ದೆಹಲಿಗೆ ಆಗಮನ ; ಸಂಜೆ ರೋಡ್ ಶೋ
ಸುದ್ದಿದಿನಡೆಸ್ಕ್:ಟಿ-20ವಿಶ್ವಕಪ್ ಪ್ರಶಸ್ತಿ ವಿಜೇತ ಭಾರತ ಕ್ರಿಕೆಟ್ ತಂಡ ಇಂದು ಬೆಳಗ್ಗೆ ರಾಜಧಾನಿ ದೆಹಲಿಗೆ ಆಗಮಿಸಿತು. ವಿಮಾನ ನಿಲ್ದಾಣದಲ್ಲಿ ಭಾರತದ ಆಟಗಾರರಿಗೆ ಆತ್ಮೀಯ ಸ್ವಾಗತ ಕೋರಲಾಯಿತು. ಪಂದ್ಯಾವಳಿಯ ಫೈನಲ್ ಪಂದ್ಯ ನಡೆದ ಬಾರ್ಬಡೋಸ್ನಿಂದ ತಂಡವು ಹಿಂತಿರುಗಿತು.
ಬೆರಿಲ್ ಚಂಡಮಾರುತದಿಂದಾಗಿ ಭಾರತ ತಂಡದ ಆಗಮನ ವಿಳಂಬವಾಯಿತು. ರಾಷ್ಟ್ರದ ರಾಜಧಾನಿಯಲ್ಲಿ ಭಾರತೀಯ ತಂಡವನ್ನು ಸ್ವಾಗತಿಸಲು ಕ್ರಿಕೆಟ್ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಸೇರಿದ್ದಾರೆ. ಆ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದ್ದಾರೆ. ಮುಂಬೈಗೆ ತೆರಳುವ ಮುನ್ನ ಭಾರತ ತಂಡ ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಲಿದೆ.
ಚಾಂಪಿಯನ್ ತಂಡ ಮುಂಬೈನಲ್ಲಿ ಇಂದು ಸಂಜೆ ತೆರೆದ ಬಸ್ನಲ್ಲಿ ರೋಡ್ ಶೋನಲ್ಲಿ ಭಾಗವಹಿಸಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ -ಬಿಸಿಸಿಐ ಕಾರ್ಯದರ್ಶಿ ಜೈ ಶಾ ತಿಳಿಸಿದ್ದಾರೆ.
ಸಂಜೆ 5ರಿಂದ 7ರವರೆಗೆ ನಾರಿಮನ್ ಪಾಯಿಂಟ್ನಿಂದ ವಾಂಖೆಡೆ ಕ್ರೀಡಾಂಗಣದವರೆಗೆ ವಿಜಯಯಾತ್ರೆ ನಡೆಯಲಿದೆ. ಅದರ ನಂತರ ವಾಂಖೆಡೆ ಕ್ರೀಡಾಂಗಣದಲ್ಲಿ ಸನ್ಮಾನ ಸಮಾರಂಭ ನಡೆಯಲಿದ್ದು, ಅಲ್ಲಿ ಬಿಸಿಸಿಐ ಭಾರತ ತಂಡಕ್ಕೆ ಬಹುಮಾನ ಮೊತ್ತವನ್ನು ನೀಡಲಿದೆ. ಟಿ-20 ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ರೋಡ್ ಶೋಗೆ ಪೊಲೀಸರು ವ್ಯಾಪಕ ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243