ದಿನದ ಸುದ್ದಿ
ಭಾರತೀಯ ನಾವೀನ್ಯತಾ ಸೂಚ್ಯಂಕ ವರದಿ ಪ್ರಕಟ; ಕರ್ನಾಟಕಕ್ಕೆ ಅಗ್ರ ಶ್ರೇಯಾಂಕ
ಸುದ್ದಿದಿನ ಡೆಸ್ಕ್ : ಭಾರತೀಯ ನಾವೀನ್ಯತಾ ಸೂಚ್ಯಂಕದ ಮೂರನೇ ಆವೃತಿ ಪ್ರಕಟಗೊಂಡಿದ್ದು, ಸಾಧನಾ ಶ್ರೇಯಾಂಕದಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿ ಮುಂದುವರಿದಿದೆ.
ನೀತಿ ಆಯೋಗದ ಉಪಾಧ್ಯಕ್ಷ ಸುಮನ್ ಬೇರಿ ಅವರು, ದೆಹಲಿಯಲ್ಲಿಂದು ನಾವೀನ್ಯತಾ ಸೂಚ್ಯಂಕ ವರದಿ ಬಿಡುಗಡೆ ಮಾಡಿದ್ದು, ಆಯೋಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪರಮೇಶ್ವರನ್ ಅಯ್ಯರ್, ಸದಸ್ಯ ಡಾ. ವಿ.ಕೆ. ಸಾರಸ್ವತ್ ಮತ್ತಿತರರು ಉಪಸ್ಥಿತರಿದ್ದರು.
ದೊಡ್ಡ ರಾಜ್ಯಗಳ ವಿಭಾಗದ ಸಾಧನಾ ಪಟ್ಟಿಯಲ್ಲಿ ಕರ್ನಾಟಕ ಮತ್ತೊಮ್ಮೆ ಅಗ್ರಸ್ಥಾನ ಪಡೆದಿದ್ದು, ಈಶಾನ್ಯ ರಾಜ್ಯಗಳ ವಿಭಾಗದಲ್ಲಿ ಮಣಿಪುರ ಮೊದಲ ಸ್ಥಾನದಲ್ಲಿದೆ. ಕೇಂದ್ರಾಡಳಿತ ಪ್ರದೇಶ ಮತ್ತು ನಗರ-ರಾಜ್ಯ ವಿಭಾಗದಲ್ಲಿ ಚಂಡಿಗಢ ಮುಂಚೂಣಿಯಲ್ಲಿದೆ. ಬಳಿಕ ಭಾಷಣ ಮಾಡಿದ ಸುಮನ್ ಬೇರಿ, ದೇಶದಲ್ಲಿ ನಾವೀನ್ಯತಾ ಸಂಸ್ಕೃತಿ ಮೂಡಿಸಲು ಮತ್ತು ಉತ್ತೇಜಿಸಲು ಈ ಸೂಚ್ಯಂಕ ಮಹತ್ವದ್ದಾಗಿದ್ದು, ಆರ್ಥಿಕ ಅಭಿವೃದ್ಧಿಗೆ ನೆರವಾಗಿದೆ ಎಂದರು.
ದೇಶದಲ್ಲಿ ಉತ್ಪಾದಕತೆ ಹೆಚ್ಚಳ ಮತ್ತು ನಾವೀನ್ಯತೆಯಿಂದ ಜನ-ಜೀವನ ಗುಣಮಟ್ಟ ಏರಿಸಬಹುದಾಗಿದೆ. ಅಲ್ಲದೆ ವಿವಿಧ ಪರಿಸರ ಸವಾಲುಗಳಿಗೆ ನಾವೀನ್ಯತೆ ಪರಿಹಾರೋಪಾಯವಾಗಿದೆ ಎಂದು ಅವರು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243