ಕ್ರೀಡೆ
ಸಹಾಯಧನ ನೀಡಲು ಕ್ರೀಡಾಪಟುಗಳಿಂದ ಪ್ರಸ್ತಾವನೆಗಳ ಆಹ್ವಾನ
ಸುದ್ದಿದಿನ,ದಾವಣಗೆರೆ: 2020-21 ನೇ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಪ್ರತಿಭಾವಂತ ಕ್ರೀಡಾಪಟುಗಳಿಗೆ ನೋಂದಾಯಿತ ಕ್ರೀಡಾ ವಿಜ್ಞಾನ ಸಂಸ್ಥೆಗಳಲ್ಲಿ ಸೇವೆಯನ್ನು ಪಡೆಯಲು ಸಹಾಯಧನ ನೀಡಲು ಕ್ರೀಡಾಪಟುಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ.
ಪ್ರಸ್ತಾವನೆ ಸಲ್ಲಿಸಬಯಸುವ ಕ್ರೀಡಾಪಟುಗಳು(ವಿಕಲಚೇತನ ಕ್ರೀಡಾಪಟುಗಳೂ ಸೇರಿದಂತೆ) ಭಾರತೀಯ ನಾಗರೀಕರಾಗಿರಬೇಕು ಅಥವಾ ಕರ್ನಾಟಕದಲ್ಲಿ ಕನಿಷ್ಟ ಹತ್ತು ವರ್ಷಗಳ ಕಾಲ ಸಾಮಾನ್ಯ ನಿವಾಸಿಯಾಗಿದ್ದು ಹಿಂದಿನ 3 ಕ್ಯಾಲೆಂಡರ್ ವರ್ಷಗಳಲ್ಲಿ ನಿರಂತರವಾಗಿ ರಾಜ್ಯವನ್ನು ಪ್ರತಿನಿಧಿಸಿರುವ ಯುವ ಕ್ರೀಡಾಪಟುಗಳಾಗಿರಬೇಕು. ಅಂತರರಾಷ್ಟ್ರೀಯ, ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಅಥವಾ ರಾಜ್ಯ ಮಟ್ಟದ/ಅಂತರ ರಾಜ್ಯ/ಅಂತರ ವಿಶ್ವವಿದ್ಯಾನಿಲಯ/ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಗಣನೀಯ ಸಾಧನೆ ದಾಖಲಿಸಿರಬೇಕು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರುವ ಅರ್ಹ ಕ್ರೀಡಾಪಟುಗಳು ಫೆ.3 ರ ಒಳಗಾಗಿ ಪ್ರಸ್ತಾವನೆಗಳನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿಗೆ ಸಲ್ಲಿಸಬೇಕು. ನಂತರ ಬಂದ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ದಾವಣಗೆರೆ ಈ ಕಚೇರಿಯನ್ನು ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243