ದಿನದ ಸುದ್ದಿ

ಕೃಷ್ಣ, ಮಲಪ್ರಭಾ, ಘಟಪ್ರಭಾ ಯೋಜನೆಗಳ ಅನುಷ್ಠಾನಕ್ಕೆ ನೀರಾವರಿ ತಜ್ಞ ಎಸ್.ಜಿ.ಬಾಳೆಕುಂದ್ರಿ ಕೊಡುಗೆ ಅಪಾರ : ಎಸ್.ಬಿ.ಕೊಯಿಮತ್ತೂರ

Published

on

ಸುದ್ದಿದಿನ,ಧಾರವಾಡ : ಕಡಿಮೆ ಮಳೆ ಮತ್ತು ಭೀಕರ ಬರಪ್ರದೇಶವಾದ ಉತ್ತರ ಕರ್ನಾಟಕ ಭಾಗಕ್ಕೆ ಕೃಷಿಗೆ ನೀರಾವರಿ ಕಲ್ಪಿಸುವ ನಿಟ್ಟಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ರೂಪುರೇಷೆ ಮತ್ತು ನಾರಾಯಣಪೂರ ಜಲಾಶಯ ಸ್ಥಳ ಬದಲಾವಣೆ, ಘಟಪ್ರಭಾ ಯೋಜನೆ, ಮಲಪ್ರಭಾ ಬಲದಂಡೆ ಯೋಜನೆಗಳೊಂದಿಗೆ ಮಲಪ್ರಭಾ ಎಡದಂಡೆ ಕಾಲುವೆ ನಿರ್ಮಾಣ ಯೋಜನೆ ಅನುಷ್ಠಾನಗೊಳಿಸಿದ ಶ್ರೇಯಸ್ಸು ನೀರಾವರಿ ತಜ್ಞ ಎಸ್. ಜಿ. ಬಾಳೆಕುಂದ್ರಿ ಅವರಿಗೆ ಸಲ್ಲುತ್ತದೆ ಎಂದು ನಿವೃತ್ತ ಅಧೀಕ್ಷಕ ಅಭಿಯಂತರ ಎಸ್. ಬಿ. ಕೊಯಿಮತ್ತೂರ ಹೇಳಿದರು.

ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)ಯಲ್ಲಿ ಇತ್ತೀಚೆಗೆ (ಮೇ. 5) ನಡೆದ ನೀರಾವರಿ ತಜ್ಞ ಎಸ್. ಜಿ. ಬಾಳೆಕುಂದ್ರಿ ಜನ್ಮ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಎಸ್.ಜಿ.ಬಾಳೆಕುಂದ್ರಿಯವರೊಂದಿಗೆ ಸೇವೆ ಸಲ್ಲಿಸಿದ ತಮ್ಮ ಅನುಭವಗಳನ್ನು ಹಂಚಿಕೊಂಡ ನಿವೃತ್ತ ಅಧೀಕ್ಷಕ ಅಭಿಯಂತರ ಎಸ್.ಬಿ.ಕೊಯಿಮತ್ತೂರ ಮಾತನಾಡಿ, ವೃತ್ತಿ ಜೀವನದಲ್ಲಿ ಅವರೊಂದಿಗೆ ಕೈಗೊಂಡ ಕಾರ್ಯಗಳನ್ನು ಹೆಮ್ಮೆಯಿಂದ ವಿವರಿಸಿದರು.

ಘಟಪ್ರಭಾ ಆಣೆಕಟ್ಟು ನಿರ್ಮಿಸುವಲ್ಲಿ ಉಂಟಾದ ತಾಂತ್ರಿಕ ತೊಂದರೆಗಳನ್ನು ಆಸ್ಟ್ರೇಲಿಯಾ ಮತ್ತು ಸ್ಪೇನ್ ದೇಶಗಳಲ್ಲಿಯ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ತಾಂತ್ರಿಕ ದೋಷವನ್ನು ಸರಿಪಡಿಸಿ, ಎರಡು ವರ್ಷಗಳಿಂದ ನಿಂತುಹೋಗಿದ್ದ ಆಣೆಕಟ್ಟು ನಿರ್ಮಾಣ ಕಾರ್ಯಕ್ಕೆ ಕೇಂದ್ರ ಜಲ ಆಯೋಗದಿಂದ ಅನುಮೋದನೆ ಪಡೆದು 1970 ರಲ್ಲಿ ಆಣೆಕಟ್ಟು ನಿರ್ಮಿಸಿದ ಗೌರವ ಎಸ್.ಜಿ.ಬಾಳೆಕುಂದ್ರ ರವರಿಗೆ ಸಲ್ಲುತ್ತದೆ.

ಧಾರವಾಡದ ಇನಸ್ಟಿಟ್ಯೂಟ್ ಆಫ್ ಇಂಜಿನೀಯರ್ಸ್ ಕಟ್ಟಡಕ್ಕೆ ಬಾಳೆಕುಂದ್ರಿ ಭವನ ಎಂದು ನಾಮಕರಣ ಮಾಡಿ, ಪುತ್ಥಳಿಯನ್ನು ಸ್ಥಾಪಿಸಿ ಗೌರವ ಸಲ್ಲಿಸಿದ್ದನ್ನು ಸ್ಮರಿಸಿದರು.
ಲೋಕೋಪಯೋಗಿ ಇಲಾಖೆ ನಿವೃತ್ತ ಕಾರ್ಯದರ್ಶಿ ಜಿ.ಸಿ.ತಲ್ಲೂರ ಮಾತನಾಡಿ, ಎಸ್.ಜಿ.ಬಾಳೆಕುಂದ್ರಿ ಅವರಿಂದ ಜೀವನದ ಮೌಲ್ಯಗಳನ್ನು ಕಲಿತು. ಇಂಜನೀಯರಿಂಗ್ ವೃತ್ತಿಯ ಅನೇಕ ಅನುಭವಗಳನ್ನು ಅರಿತಿದ್ದನ್ನು ಸ್ಮರಿಸಿದರು.

ಮಲಪ್ರಭಾ ಬಲದಂಡೆ ಕಾಲುವೆ ಯೋಜನೆಯೊಂದಿಗೆ, ಮಲಪ್ರಭಾ ಎಡದಂಡೆ ಕಾಲುವೆ ಯೋಜನೆ ಕೂಡಾ ಆಗಲು ಬಾಳೆಕುಂದ್ರಿಯವರು ಶಿಫಾರಸ್ಸು ಮಾಡಿ, ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾದರು. ಈ ಕಾರಣಕ್ಕಾಗಿ ಮಲಪ್ರಭಾ ಎಡದಂಡೆ ಕಾಲುವೆಗೆ ಎಸ್.ಜಿ.ಬಾಳೆಕುಂದ್ರಿ ಕಾಲುವೆ ಎಂದು ನಾಮಕರಣ ಮಾಡಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಮಾತನಾಡಿ, ವಾಲ್ಮಿ ಸಂಸ್ಥೆಯು ಎಸ್.ಜಿ.ಬಾಳೆಕುಂದ್ರಿ ಅವರ ಜನ್ಮ ಶತಮಾನೋತ್ಸವ ಆಚರಿಸುವ ಮೂಲಕ ಅವರೊಂದಿಗೆ ಒಡನಾಟದಲ್ಲಿದ್ದ ಎಸ್.ಬಿ.ಕೊಯಿಮತ್ತೂರ ಹಾಗೂ ಜಿ.ಸಿ.ತಲ್ಲೂರ ಅವರ ಅನುಭವಗಳನ್ನು ನೇರವಾಗಿ ಪಡೆಯಲು ಸಾಧ್ಯವಾಗಿದ್ದು ಸಂತಸ ತಂದಿದೆ.

ಬಾಳೆಕುಂದ್ರಿ ಅವರು ಉತ್ತರ ಕರ್ನಾಟದಲ್ಲಿ ಅನೇಕ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವದರೊಂದಿಗೆ, ಕಾವೇರಿ ಜಲ ವಿವಾದದಲ್ಲಿ ಮಾರ್ಗದರ್ಶಕರಾಗಿ ರಾಜ್ಯಕ್ಕೆ ಅನುಪಮ ಸೇವೆ ಸಲ್ಲಿಸಿದ್ದಾರೆ. ಎಸ್.ಜಿ.ಬಾಳೆಕುಂದ್ರಿಯವರ ತಾಂತ್ರಿಕ ಪರಿಣಿತಿ ಹಾಗೂ ಸಾಮಾಜಿಕ ಧೋರಣೆಗಳು ಮತ್ತು ವೈಯಕ್ತಿಕ ನಡುವಳಿಕೆಗಳು ನಮ್ಮ ಇಂದಿನ ಪೀಳಿಗೆಯ ಅಭಿಯಂತರರ ಆತ್ಮಶಕ್ತಿಯನ್ನು ಹೆಚ್ಚಿಸುವಂತಿವೆ. ಬಾಳೆಕುಂದ್ರಿಯವರ ದಕ್ಷತೆ, ಪ್ರಾಮಾಣಿಕತೆ ಮತ್ತು ಪರಿಶ್ರಮದಂತಹ ಆದರ್ಶಗಳು ನಮ್ಮ ಇಂದಿನ ಪೀಳಿಗೆಗೆ ಮಾರ್ಗದರ್ಶನವಾಗಲಿ ಎಂದರು.

ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳ ರೈತ ಫಲಾನುಭವಿಗಳ ಪರವಾಗಿ ಶಿರೂರಿನ ದ್ಯಾಮನಗೌಡ ಬಲ್ಲರವಾಡ ಮತ್ತು ಎಸ್.ಜಿ.ಬಾಳೆಕುಂದ್ರಿ ಪ್ರಶಸ್ತಿ ಪುರಸ್ಕøತ ವಾಲ್ಮಿ ಸಹಾಯಕ ಪ್ರಾಧ್ಯಾಪಕ ಪ್ರದೀಪ ದೇವರಮನಿ ನುಡಿ ನಮನ ಸಲ್ಲಿಸಿದರು. ಮಹಾರಾಷ್ಟ್ರದ ಔರಂಗಾಬಾದಿನ ಅವಿನಾಶ ಗರುಡಕರ ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿದ್ದರು.

ರೈತರು, ಅಭಿಯಂತರು, ವಿಜ್ಞಾನಿಗಳು ವಾಲ್ಮಿ ಸಂಸ್ಥೆಯ ಬೋಧಕರು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರೊ.ಬಿ.ವೈ.ಬಂಡಿವಡ್ಡರ ಸ್ವಾಗತಿಸಿದರು, ಮಹದೇವಗೌಡ ಹುತ್ತನಗೌಡರ ಕಾರ್ಯಕ್ರಮ ನಿರೂಪಿಸಿದರು. ಪ್ರಭಾಕರ ಹಾದಿಮನಿ ವಂದಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version