ದಿನದ ಸುದ್ದಿ
ಉದ್ಯೋಗ ಭದ್ರತೆ; ಚನ್ನಪಟ್ಟಣದ ಟೆಕ್ಕಿ ಆತ್ಮಹತ್ಯೆ
ಸುದ್ದಿದಿನ ಡೆಸ್ಕ್: ಉದ್ಯೋಗ ಭದ್ರತೆಯ ಖಿನ್ನತೆಯಿಂದ ಬಳಲುತ್ತಿದ್ದ ಚನ್ನಪಟ್ಟಣ ಮೂಲದ ಟೆಕ್ಕಿಯೊಬ್ಬರು ನಾರ್ವೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಗುರುವಾರ ನಡೆದಿದೆ.
ಶಿವಪ್ರಸಾದ್ ನೀಲಕಂಠಯ್ಯ ಸಾವಿಗೀಡಾದ ಟೆಕ್ಕಿ. ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಅವರು ನೆದರ್ಲೆಂಡ್ನ ಲಿಬರ್ಟಿ ಗ್ಲೋಬಲ್ ಎಂಬ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು.
ರಾಜಧಾನಿ ಆ್ಯಮ್ಸ್ಟರ್ಡ್ಯಾಂನಿಂದ 16 ಕಿ.ಮೀ ದೂರದಲ್ಲಿರುವ ಯುತ್ರೂನ್ ನಗರದಲ್ಲಿ ವಾಸವಿದ್ದ ಅವರು ತಾವು ವಾಸವಿದ್ದ ಮನೆಯ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೆದರ್ಲೆಂಡ್ನಲ್ಲಿ ಹಲವು ಕಂಪನಿಗಳು ಉದ್ಯೋಗಿಗಳನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳುತ್ತವೆ. ಅದೇ ರೀತಿ ಶಿವಪ್ರಸಾದ್ ಅವರೂ ಕೆಲಸ ಮಾಡುತ್ತಿದ್ದರು. ಇನ್ನೇನು ಅವರ ಕೆಲಸದ ಅವಧಿ ಮುಗಿಯುವುದರಲ್ಲಿತ್ತು. ಮುಂದೇನು ಮಾಡುವುದು ಎಂದು ಅವರು ಸದಾ ಯೋಚಿಸುತ್ತಿದ್ದರು. ಆದರೆ ಇಂಥ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಅವರ ಸ್ನೇಹಿತ ತಿಳಿಸಿದ್ದಾರೆ.
ನಾನು ಬಸ್ನಲ್ಲಿ ಕೆಲಸಕ್ಕೆ ಹೋಗುತ್ತಿದ್ದೆ. ಪೊಲೀಸರು ಕರೆ ಮಾಡಿ ಘಟನೆ ಬಗ್ಗೆ ವಿವರ ನೀಡಿ ಗುರುತು ಹಿಡಿಯಲು ಹೇಳಿದರು ಶಿವಪ್ರಸಾದ್ ಅವರನ್ನು ಗುರುತುಹಿಡಿದ ನಂತರ ಶವಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ. ಮಂಗಳವಾರ ಶವಪರೀಕ್ಷೆ ಮುಗಿಯಲಿದೆ. ಅವರು ವಾಸವಿದ್ದ ಮನೆಯ ಮಾಲೀಕರೂ ಕೂಡ ಭಾರತೀಯರು ಹಾಗಾಗಿ ಅವರೂ ಕೂಡ ದಾಖಲೆಗಳನ್ನು ಪೂರೈಸಲು ಓಡಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.