ನೆಲದನಿ

ದಮನಿತರ ಬದುಕಿನ ಆಶಾಕಿರಣ ಮಂಜಮ್ಮ ಜೋಗತಿಯ ಕಲಾ ಬದುಕು

Published

on

ಜಾನಪದ ಸಿರಿವಂತಿಕೆ ಎಂಬುದು ಒಂದು ನಾಡಿನ ಪ್ರಾದೇಶಿಕ ವೈಶಿಷ್ಟ್ಯತೆಯ ಪ್ರತೀಕವಾಗಿರುತ್ತದೆ. ಇಂತಹ ಜಾನಪದವು ಪ್ರಾದೇಶಿಕ ಸತ್ವವನ್ನು ಅರಿಯುವುದಕ್ಕೆ, ಗುರುತಿಸುವುದಕ್ಕೆ ಸಹಕಾರಿಯಾಗುತ್ತದೆ. ಒಂದು ನಾಡಿನ ಜನರ ಜೀವಂತ ಸಾಹಿತ್ಯವಾಗಿರುವ ಜನಪದವು ಸಾಮಾನ್ಯರ ಬದುಕಿನೊಂದಿಗೆ ಬೆರೆತುಕೊಂಡಿರುತ್ತದೆ. ಇಂತಹ ಜಾನಪದಕ್ಕೂ ಬಡತನದ ಬದುಕಿಗೂ ಅವಿನಾಭಾವ ಸಂಬಂಧವಿದೆ. ಜಾನದಪ ಕಲೆಗಳು ಇಂದಿಗೂ ಜೀವಂತವಾಗಿರುವುದು ಬಡವರ ಗುಡಿಸಲುಗಳಲ್ಲೆ. ಹೀಗಾಗಿ ಜಾನಪದ ಸಿರಿವಂತಿಕೆಗೆ ಆಶ್ರಯ ತಾಣಗಳಾಗಿರುವುದು ಬಡವರ ಗುಡಿಸಲುಗಳೆ. ಆದ್ದರಿಂದ ಜಾನಪದಕ್ಕೂ ಬಡತನದ ಬದುಕಿಗೂ ಬಿಡಿಸಲಾರದ ಬಂಧವೊಂದಿದೆ. ಈ ಬಂಧವು ಚರಿತೆಯುದ್ಧಕ್ಕೂ ತನ್ನ ನಿರಂತರವಾದ ಪಯಣವನ್ನು ಮುಂದುವರೆಸಿಕೊಂಡು ಬಂದಿದೆ.

ಇಂತಹ ನಾಡಿನ ಜೀವನಾಡಿಯಾದ ಜಾನಪದ ಕಲೆಯನ್ನು ತಮ್ಮ ಬದುಕಿನ ಭಾಗವಾಗಿ ಕಾಪಾಡಿಕೊಂಡು ಬಂದವರಲ್ಲಿ ಮಂಜಮ್ಮ ಜೋಗತಿಯವರು ಒಬ್ಬರಾಗಿದ್ದಾರೆ. ಇವರು ಜಾನಪದದ ವಿವಿಧ ಪ್ರಕಾರಗಳಲ್ಲಿ ಒಂದಾಗಿರುವ ಜೋಗತಿ ನೃತ್ಯ ಹಾಗೂ ಹಾಡುಗಾರಿಕೆ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದು ಮಾತ್ರವಲ್ಲದೆ ಈ ಸಾಹಿತ್ಯ ಪ್ರಕಾರದ ಉಳಿವಿಗಾಗಿ ಅವಿರತ ಶ್ರಮವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮಂಜಮ್ಮ ಜೊಗತಿಯು ನಾಡು ಕಂಡ ‘ಜೋಗತಿ ಸಿರಿ’ಯಾಗಿ ಕಂಡುಬರುತ್ತಾರೆ. ಇಂತಹ ಜಾನಪದ ಸಿರಿಯ ಕಲಾ ಬದುಕಿನ ಸುತ್ತ ಅಂತರ್ಗತವಾಗಿರುವ ಸಂಕಥನವನ್ನು ಗುರುತಿಸುವ ಉದ್ಧೇಶವನ್ನು ಪ್ರಸ್ತುತ ಲೇಖನವು ಒಳಗೊಂಡಿದೆ.

ಜಗತ್ತಿನ ಪ್ರತಿಯೊಂದು ಕುಟುಂಬಗಳಲ್ಲಿ ತಂದೆ ತಾಯಂದಿರು ಕೂಡ ತಮ್ಮ ಮಕ್ಕಳು ಒಳ್ಳೆಯ ವಿದ್ಯಾವಂತರಾಗಬೇಕು, ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕು. ಯಾರ ಮುಂದೆಯೂ ತಗ್ಗಿ ನಡೆಯುವಂತಾಗಬಾರದು ಎಂದೆಲ್ಲ ಕನಸು ಕಟ್ಟಿರುತ್ತಾರೆ. ತಮ್ಮ ಮಕ್ಕಳು ಸಮಾಜ ಘಾತುಕರಿರಲಿ, ಬರೀ ಸುಳ್ಳು ಹೇಳಿದರೂ ತಂದೆ ತಾಯಿಗಳು ಸಹಿಸಿಕೊಳ್ಳುವುದಿಲ್ಲ. ವಾಸ್ತವ ಹೀಗಿರುವಾಗ ತಮ್ಮ ವಂಶವನ್ನು ಬೆಳಗಬೇಕಾದ ಗಂಡು ಮಗ ಹೆಣ್ಣಾಗಿ ವರ್ತಿಸುತ್ತಿದ್ದಾನೆ, ಇಲ್ಲವೇ ಹೆಣ್ಣಾಗಿ ಪರಿವರ್ತನೆಯಾಗುತ್ತಾನೆ ಎಂದರೆ ಯಾರು ತಾನೇ ಸಹಿಸಿಕೊಳ್ಳಲು ಸಾಧ್ಯ. ಅದೂ ಭಾರತದಂತಹ ಸಾಂಪ್ರದಾಯಿಕ ನಾಡಿನಲ್ಲಿ ಊಹಿಸಿಕೊಳ್ಳುವುದು ಕಷ್ಟವೆ. ಇಂತಹ ಸಂಕಷ್ಟವೊಂದು ಬಾಲ್ಯದ ದಿನಗಳಲ್ಲಿ ಮಂಜಮ್ಮ ಜೋಗತಿಯ ಕುಟುಂಬವನ್ನು ಪ್ರವೇಶಿಸಿತು. ಮಂಜಮ್ಮನ ದೈಹಿಕ ಕ್ರಿಯೆಯಲ್ಲಾದ ಈ ಬದಲಾವಣೆಯು ಜೈವಿಕ ಕ್ರಿಯೆಯಾಗಿರಬಹುದು. ಆದರೆ ಸಾಂಪ್ರದಾಯಿಕ ಸಮಾಜದಲ್ಲಿ ಇದನ್ನು ನೋಡುವ ದೃಷ್ಟಿಕೋನ ತುಂಬಾ ತಮ್ಮ ಕೆಳ ಮಟ್ಟದ್ದಾಗಿರುತ್ತದೆ. ಮಂಜುನಾಥ ತನ್ನ ಜೈವಿಕ ಒತ್ತಡಗಳಿಂದ ಮಂಜಮ್ಮನಾಗುವ ಸನ್ನವೇಶದಲ್ಲಿ ಅನುಭವಿಸಿದ ಯಾತನೆಗಳು ತುಂಬಾ ತ್ರಾಸದಾಯಕವಾಗಿದ್ದವು. ಇಲ್ಲಿ ಮಂಜಮ್ಮನನ್ನು ಕಾಡಿದ, ಸಂಕಷ್ಟಕ್ಕೆ ದೂಡಿದ ಘಟನೆಗಳಿಗೆ ಮಂಜಮ್ಮನ್ನ ಕುಟುಂಬ ನೇರ ಹೊಣೆಯಲ್ಲ. ಮಂಜುನಾಥ ತನ್ನ ಸಹಜ ಜೈವಿಕ ಸ್ವಭಾವಗಳಲ್ಲಿ ಹೆಣ್ಣಾಗಿ ಪರಿವರ್ತನೆಯಾಗುವುದನ್ನು ತಡೆಯಲು ಸಾಧ್ಯವಿಲ್ಲ ಎಂಬುದು ತನ್ನ ಕುಟುಂಬಕ್ಕೆ ಸಂಪೂರ್ಣವಾದ ಅರಿವಿದೆ. ಆದರೆ ತನ್ನ ಕುಟುಂಬದ ಸುತ್ತಮುತ್ತಲಿನ ಸಮಾಜದಲ್ಲಿ ಅಪಮಾನಕ್ಕೆ ಗುರಿಯಾಗಬೇಕಾದ ಒತ್ತಡಗಳಲ್ಲಿ ಉಂಟಾದ ಸಂಘರ್ಷವೇ ಮಂಜಮ್ಮನನ್ನು ಗಂಡಸ್ಸಾಗಿಯೇ ಉಳಿಯುವಂತೆ ಒತ್ತಾಯ ನಡೆದಿವೆ. ಈ ಒತ್ತಾಯದ ಭಾಗವಾದ ಹಿಂಸೆ ಮತ್ತು ಅವಮಾನಗಳು ಅವರ ಬದುಕಿನಲ್ಲಿ ಹಲವಾರು ತಲ್ಲಣಗಳನ್ನು ಮೂಡಿಸಿವೆ.

ಜೋಗತಿ ಮಂಜಮ್ಮಅವರೊಂದಿಗೆ ಲೇಖಕರು

ಮಂಜಮ್ಮ ಜೋಗತಿಯು ಶ್ರೀ ಹನುಮಂತಯ್ಯ ಶೆಟ್ಟಿ, ಶ್ರೀಮತಿ ಜಯಲಕ್ಷ್ಮೀಯವ ಪುತ್ರನಾಗಿ ಬಳ್ಳಾರಿ ಜಿಲ್ಲೆಯ ಕಲ್ಲುಕಂಬ ಗ್ರಾಮದಲ್ಲಿ ಜನಿಸಿದವರು. ಇವರ ತಂದೆ ತಾಯಿಗೆ ಇಪ್ಪತ್ತೊಂದು ಜನ ಮಕ್ಕಳಲ್ಲಿ ಮಂಜಮ್ಮ ಜೋಗತಿಯು ಒಬ್ಬರಾಗಿದ್ದರು. ಈ ಇಪ್ಪತ್ತೊಂದು ಜನ ಮಕ್ಕಳಲ್ಲಿ ಉಳಿದುಕೊಂಡಿದ್ದು ಮಾತ್ರ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು ಮಾತ್ರ. ಈ ಇಬ್ಬರು ಗಂಡು ಸಂತಾನಗಳಲ್ಲಿ ಮಂಜಮ್ಮ (ಮಂಜುನಾಥ) ಒಬ್ಬರಾಗಿದ್ದರು. ಆದ್ದರಿಂದ ಇಲ್ಲಿ ಉಳಿದ ಎರಡು ಗಂಡು ಸಂತಾನಗಳಲ್ಲಿ ಒಬ್ಬರಾಗಿರುವ ಮಂಜುನಾಥ ಕೃಷ್ಣನಂತಾಗಿ ತಮ್ಮ ವಂಶವನ್ನು ಬೆಳಗುತ್ತಾನೆ ಎಂಬುದು ತಂದೆ ತಾಯಿಗಳ ಆದಮ್ಯ ಬಯಕೆಯಾಗಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಕೃಷ್ಣನಂತಾಗಿ ವಂಶ ಬೆಳಗಬೇಕಾದ ಮಗ ಬೃಹನ್ನಳೆಯಂತಾದಾಗ ತಂದೆ ತಾಯಿಗಳಿಗೆ ತೀವ್ರತರವಾದ ಆಘಾತವನ್ನು ಮೂಡಿತ್ತು. ತಮ್ಮ ಬಾಲ್ಯದ ದಿನಗಳಿಂದಲೆ ಮಂಜಮ್ಮ ಗಂಡು ಹುಡುಗರ ಜೊತೆಯಲ್ಲಿ ಬೆರೆಯದೆ ಹೆಚ್ಚಾಗಿ ಹುಡುಗಿಯರೊಂದಿಗೆ ಬೆರೆಯುತ್ತಿದ್ದರು. ಹೆಂಗಸರು ಮಾಡುವ ಕೆಲಸಗಳಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಸಮಾಜದ ಜನರಿಂದ ಹಲವಾರು ಕುಹಕದ ಮಾತುಗಳು ಹೊರಬಿದ್ದು, ಮಂಜಮ್ಮನ ಮನಸ್ಸನ್ನು ಘಾಸಿಗೊಳಿಸುತ್ತಿದ್ದವು. ಕೆಲವು ಹೆಣ್ಣು ಮಕ್ಕಳು “ಅವನ್ಯಾಕೆ ನಮ್ಮ ಜತೆ ಬರುತ್ತಾನೆ? ಈ ವಯಸ್ಸಿಗೆ ಅವನಿಗೇನು ಚಪಲ. ನೋಡೋಕೆ ಹೆಣ್ಣಿನಂಗಾಡ್ತಾನೆ, ಹೆಣ್ಣಿನ ಚಪಲ ಬ್ಯಾರೆ” ಎಂದೆಲ್ಲ ನೇರವಾಗಿ ನಿಂದಿಸುತ್ತಿದ್ದರು. ಆದರೆ ವಾಸ್ತವವಾಗಿ ಮಂಜುನಾಥನಲ್ಲಿ ಮಂಜವ್ವ ಒಡಮೂಡುತ್ತಿದ್ದಳು. ಆದರೆ ಈ ಸೂಕ್ಷ್ಮ ಅಳಲನ್ನು ಅರ್ಥೈಸುವ ಮನಸ್ಥಿತಿಯು ಯಾರಿಗೂ ಇರಲಿಲ್ಲ. ಇಂತಹ ಸಂದರ್ಭದಲ್ಲಿ ತನ್ನೆಲ್ಲ ನೋವುಗಳನ್ನು ತಾನೆ ನುಂಗಿಕೊಂಡು ಬದುಕಿನ ಹಾದಿಯನ್ನು ಕಂಡುಕೊಳ್ಳುವ ಸಾಹಸಮಯ ಬದುಕಿಗಾಗಿ ಮಂಜಮ್ಮ ತವಕಿಸಿದ್ದಾರೆ.

ಮಂಜಮ್ಮ ತನ್ನಲ್ಲಿ ಮೂಡಿದ ಹೆಣ್ತನವನ್ನು ಹೊತ್ತು ನಡೆಸಿದ ಹೋರಾಟದಲ್ಲಿ ಅವಮಾನಗಳೆ ಹೆಚ್ಚು. ಮಂಜಮ್ಮನ ದೇಹದಲ್ಲಿ ಒಡಮೂಡಿದ್ದು ಜೈವಿಕ ಕ್ರಿಯೆ. ಈ ಜೈವಿಕವಾದ ಬದಲಾವಣೆಯ ಒತ್ತಡದ ಭಾಗವಾಗಿ ಮಂಜಮ್ಮ ತಮ್ಮ ಹೆಣ್ತನವನ್ನು ಪ್ರದರ್ಶಿಸಿದರು. ಆದರೆ ಈ ಸಮಾಜದ ಕಣ್ಣಿಗೆ ಅದು ಸಹಜವಾದ ಜೈವಿಕ ಬದಲಾವಣೆಯಾಗಿರಲಿಲ್ಲ. ಅದನ್ನು ದೇವರಿಗೆ ಆರೋಪಿಸಲಾಯಿತು. ‘ಶೆಟ್ರು ಹುಡುಗ ಮಂಜುನಾಥನ ಮೈಯಾಗೆ ಹುಲಿಗೆಮ್ಮ ಬರಕತ್ಯಾಳೆ’ ಎಂದು ಆರೋಪಿಸಿದರು. ಆದರೆ ಇದರಿಂದ ಮಂಜಮ್ಮನ ಮೇಲೆ ಕುಟುಂಬದವರಿಂದ ಒತ್ತಡಗಳು ತೀವ್ರವಾದಾಗ ಮಂಜಮ್ಮ ಈ ಜೀವದ ಅಂತ್ಯಕ್ಕೆ ನಾಂದಿ ಹಾಡಲು ಮುಂದಾಗಿ ವಿಷ ಸೇವನೆ ಮಾಡಿದರು. ಆದರೆ ಅದೃಷ್ಟವಶತ್ ಇವರನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸಿದ ಪರಿಣಾಮವಾಗಿ ಬದುಕುಳಿದರು. ದಾವಣಗೆರೆಯ ಸರ್ಕಾರಿ ಆಸ್ಪತ್ರೆಗೆ ಇವರನ್ನು ಸೇರಿಸಿದ ನಂತರ ಇವರ ಯೋಗಕ್ಷೇಮ ನೋಡಿಕೊಳ್ಳಲು ಯಾರು ಮುಂದೆ ಬರುವುದಿಲ್ಲ. ಇಂತಹ ಸಂದಿಗ್ಧ ಸಂದರ್ಭದಲ್ಲಿ ತನ್ನ ಜೀವನ ಹಾಗೂ ಹಸಿವನ್ನು ಪೂರೈಸಿಕೊಳ್ಳುವುದಕ್ಕಾಗಿ ಆಸ್ಪತ್ರೆಯ ರೋಗಿಗಳ ಎದುರು ದೇವಿಯ ಹಾಡು ನೃತ್ಯ ಮಾಡಿ ಜೀವನವನ್ನು ಸಾಗಿಸಿದರು. ನಂತರದಲ್ಲಿ ಸಂಪ್ರದಾಯದಂತೆ ದೇವಿಯ ದೀಕ್ಷೆ ತೆಗೆದುಕೊಂಡು ಮನೆಯಿಂದ ಹೊರ ನಡೆದ ಮಂಜವ್ವ ದಾವಣಗೆರೆಯಲ್ಲಿ ಪ್ರತ್ಯೇಕವಾದ ವಾಸ್ತವ್ಯ ಹೂಡಿದರು. ಹಲವು ಕಡೆ ನಡೆಯುವ ಸಂತೆ, ಜಾತ್ರೆಗಳಲ್ಲಿ ದೇವಿಯನ್ನು ಹೊತ್ತೊಯ್ದು ತನ್ನ ಜೀವನ ನಿರ್ವಹಣೆಗೆ ಮುಂದಾದರು.


ಮನೆಯಿಂದ ಹೊರಬಂದ ಮಂಜಮ್ಮ ತನ್ನ ಜೀವನವನ್ನು ತಾನು ಸಾಗಿಸಿಕೊಂಡು ಸ್ವಲ್ಪ ನೆಮ್ಮದಿಯನ್ನು ಕಂಡುಕೊಳ್ಳುವ ಸಂದರ್ಭದಲ್ಲಿ ಇವರ ಬದುಕನ್ನು ಘಾಸಿಗೊಳಿಸುವಂತಹ ಘಟನೆಯೊಂದು ನಡೆದು ಹೋಗಿತ್ತು. ತಾನು ಸಂಗ್ರಹಿಸಿದ ಹಣವನ್ನೆಲ್ಲ ಕೂಡಿಟ್ಟುಕೊಂಡು ಮನೆ ಬಾಡಿಗೆ ಕಟ್ಟಲು ಸಿದ್ಧ ಮಾಡಿಕೊಂಡು ಬರುವಾಗ ದಾವಣಗೆರೆಯ ಹೈಸ್ಕೂಲು ಮೈದಾನದಲ್ಲಿ ಇವರ ಮೇಲೆ ಪುಢಾರಿಗಳ ಗುಂಪೊಂದು ಅತ್ಯಾಚಾರಕ್ಕೆ ಮುಂದಾಗಿ, ಸೀರೆ ಉಟ್ಟ ಗಂಡು ದೇಹದ ಮೇಲೆ ದೌರ್ಜನ್ಯವೆಸಗಿ, ಇವರ ಬಳಿಯಿದ್ದ ಹಣವನ್ನೆಲ್ಲ ಕಸಿದುಕೊಳ್ಳುತ್ತಾರೆ. ಈ ಘಟನೆಯಿಂದ ಇವರಲ್ಲಿ ತೀವ್ರ ಮುಜುಗರ ಉಂಟಾಗುತ್ತದೆ. ಈ ಎಲ್ಲಾ ಘಟನೆಗಳನ್ನು ಮೆಟ್ಟಿನಿಂತ ಮಂಜಮ್ಮ ಸಾಧಿಸುವ ಛಲವೊತ್ತು ಮುನ್ನಡೆಯುತ್ತಾರೆ.

ಮಂಜಮ್ಮ ನಿರಂತರವಾಗಿ ತನ್ನ ಬದುಕಿನ ಹೋರಾಟವನ್ನು ಮುಂದುವರೆಸಿಕೊಂಡು ಬಂದವರು. ಇವರು ದೇವತೆಯ ದೀಕ್ಷೆ ಪಡೆದು ಮನೆಯಿಂದ ಹೊರಬಂದ ಸಂದರ್ಭದಲ್ಲಿ ಜೀವನವು ತುಂಬಾ ದುಸ್ತರವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಮಂಜಮ್ಮ ಆಯ್ದುಕೊಂಡಿದ್ದು ಸ್ವಾಭಿಮಾನದ ಬದುಕಿಗೆ ಪೂರಕವಾದ ಕಲೆಯನ್ನು. ಆರಂಭಿಕ ಹಂತದ ಈ ಕಲೆಗೆ ಪ್ರಚೋದಕ ಶಕ್ತಿಯಾದವರು ಬಸಪ್ಪನವರು. ಈ ಗುರುವಿನ ಆಶ್ರಯ ಪಡೆದು, ಅವರ ಶಿಷ್ಯಳಾಗಿ ಶಿರಸಾವಹಿಸಿ ದುಡಿದ ಮಂಜಮ್ಮ ನಂತರ ದಿನಗಳಲ್ಲಿ ಈ ಕಲೆಯೊಂದಿಗೆ ತನ್ನ ನಿರಂತದ ಬಂಧವನ್ನು ಕಾಯ್ದುಕೊಳ್ಳುತ್ತಾರೆ. ನಂತರದ ದಿನಗಳಲ್ಲಿ ಹಲವಾರು ಏಳುಬೀಳುಗಳನ್ನು ಅನುಭವಿಸಿದ ಮಂಜಮ್ಮ ಜೋಗತಿ ಮುಂದೆ ಕಾಳವ್ವ ಜೋಗತಿಯನ್ನು ಗುರುವಾಗಿ ಪಡೆಯುತ್ತಾಳೆ. ಈ ಕಾಳವ್ವ ಜೋಗತಿಯು ಮಂಜವ್ವನಿಗೆ ಕೇವಲ ಗುರುವಾಗಿರುವುದಿಲ್ಲ. ಅದರಾಚೆ ತಂದೆ ತಾಯಿ, ಬಂಧು ಬಳಗ ಮತ್ತು ಸರ್ವಸ್ವವಾಗಿಯೂ ಮಂಜವ್ವನಿಗೆ ಅಭಯ ನೀಡುತ್ತಾರೆ. ಕಾಳವ್ವ ಜೋಗತಿಯಿಂದ ಒಂದು ನೆಲೆಯನ್ನು ಕಂಡುಕೊಂಡ ಮಂಜವ್ವ ಜೋಗತಿಯು ತನ್ನ ಬದುಕಿಗಾಗಿ ಸ್ವಾರ್ಥವನ್ನು ಬೆಳೆಸಿಕೊಳ್ಳದೆ, ತನ್ನ ಗುರು ಕಾಳವ್ವ ಜೋಗತಿಯ ಮಾರ್ಗದರ್ಶನದಲ್ಲಿ ತನ್ನಂತೆ ಸಮಾಜ ಮತ್ತು ಕುಟುಂಬದಿಂದ ವಂಚಿತರಾದ ಹಲವಾರು ಅಬಲರಿಗೆ ಆಶ್ರಯ ನೀಡುವ ಮಹಾತಾಯಿಯಾಗಿ ದುಡಿಯುತ್ತಾರೆ.

ಮಂಜಮ್ಮನದು ಯಾವಾಗಲೂ ಒಂಟಿ ಬದುಕಲ್ಲ. ಮಂಜವ್ವ ಎಂಬುದೇ ಕೂಡು ಕುಟುಂಬದ ಮೂರ್ತ ಸ್ವರೂಪ. ಈ ಮಹಾತಾಯಿಯದು ಮಾತೃ ಹೃದಯ. ಕಷ್ಟ ಎಂದು ಬಂದವರಿಗೆ ಅಭಯ ನೀಡಿ ಆಶ್ರಯ ಕಲ್ಪಿಸುವುದೆ ಈ ತಾಯಿಯ ಗುಣವಾಗಿದೆ. ಮಂಜಮ್ಮ ತಾನು ಅನುಭವಿಸಿದ ಎಲ್ಲಾ ಸಂಕಷ್ಟಗಳನ್ನು ಎಂದು ಮರೆತವರಲ್ಲ. ಹೀಗಾಗಿ ಸಮಾಜದಲ್ಲಿ ಮಂಗಳಮುಖಿಯರು ಅನುಭವಿಸುತ್ತಿರುವ ಯಾತನೆಯ ಬಿಸಿಯನ್ನು ಸ್ವತಃ ಅನುಭವಿಸಿದವರಾಗಿದ್ದಾರೆ. ಹೀಗಾಗಿ ಯಾವುದೇ ಮಂಗಳಮುಖಿಯರು ಸಮಾಜದಿಂದ ತಿರಸ್ಕರಿಸಲ್ಪಟ್ಟಿದ್ದರು ಕೂಡ ಅಂತಹವರಿಗೆ ಆಶ್ರಯ ಕಲ್ಪಿಸಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲದೆ ಹಲವಾರು ದೀನ ದಲಿತರಿಗೆ ಆಶ್ರಯಧಾತರಾಗಿ ಮಂಜಮ್ಮ ತಮ್ಮ ಸೇವೆಯನ್ನು ನೀಡುತ್ತಿದ್ದಾರೆ. ಮಂಜಮ್ಮ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಗ್ರಾಮದಲ್ಲಿ ಪುಟ್ಟ ಮನೆಯೊಂದನ್ನು ನಿರ್ಮಿಸಿಕೊಂಡು ದಮನಿತರ ಸೇವೆಯನ್ನು ಮಾಡುವ ಕಾಯಕದಲ್ಲಿ ಸದಾ ತಲ್ಲಿನರಾಗಿದ್ದಾರೆ. ಇದು ಅವರ ಮಾತೃ ಮೌಲ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ.
ಮಂಜಮ್ಮನದು ಬಹುಮುಖಿ ವ್ಯಕ್ತಿತ್ವ. ಯಾವುದೆ ಒಂದು ಕಾರ್ಯದಲ್ಲಿ ಮಾತ್ರ ತನ್ನನ್ನು ತೊಡಗಿಸಿಕೊಂಡು ಸುಮ್ಮನಿರುವವರಲ್ಲ. ಕಲಾ ಕ್ಷೇತ್ರಕ್ಕೆ ಬಂದರೆ ಅವರು ಒಬ್ಬ ಜೋಗತಿಯಾಗಿ, ದೇವತೆಯನ್ನು ಆರಾಧಿಸುವುದರೊಂದಿಗೆ, ಜೋಗತಿ ನೃತ್ಯದಲ್ಲಿ ತನ್ನದೆ ಆದ ಛಾಪು ಮೂಡಿಸಿದ ಕೀರ್ತಿ ಇವರದಾಗಿದೆ. ಜೋಗತಿ ನೃತ್ಯದಲ್ಲಿನ ಇವರ ಸಾಧನೆಯು ಇವರನ್ನು ಉತ್ತುಂಗ ಶಿಖರದತ್ತ ಕೊಂಡೊಯ್ದಿದೆ. ಈ ಜೋಗತಿ ಕಲೆಯು ಅವಸಾನದ ಅಂಚಿನಲ್ಲಿರುವಾಗ ಇದಕ್ಕೆ ಮರುಜೀವ ನೀಡಿದವರು ಮಂಜಮ್ಮ ಎಂದರೆ ತಪ್ಪಾಗಲಾರದು. ಈ ಜೋಗತಿ ಕಲೆಯನ್ನು ಪ್ರಚಾರಾತ್ಮಕವಾದ ನೆಲೆಯಲ್ಲಿ ಹಲವಾರ ಸಮಾಜಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ಇದನ್ನು ಬಳಸಿಕೊಂಡ ಕೀರ್ತಿಗೆ ಇವರು ಭಾಜನರಾಗಿದ್ದಾರೆ. ಆಧುನಿಕ ಸಂಗೀತಾ ಮತ್ತು ನೃತ್ಯಗಳ ಪ್ರಭಾವದಿಂದ ಮೂಲೆಗುಂಪಾಗಿದ್ದ ಮತ್ತು ಯುವಜನತೆ ಮನದ ಮೂಸೆಯಿಂದ ಮರೆಯಾಗುತ್ತಿದ್ದ ಈ ಜೋಗತಿ ನೃತ್ಯ ಮತ್ತು ಕಲೆಯನ್ನು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳ ಮೂಲಕ ಪ್ರದರ್ಶನ ನೀಡಿ, ಇದರ ಬಗೆಗೆ ಅರಿವು ಮೂಡಿಸುವಲ್ಲಿ ಮಂಜಮ್ಮ ಜೋಗತಿಯ ಕಾಣ್ಕೆಯು ಅಪಾರವಾಗಿದೆ. ಹಾಗೆಯೇ ಈ ಜೋಗತಿ ನೃತ್ಯವನ್ನು ಯುವ ಪೀಳಿಗೆಗೆ ಪರಿಚಯಿಸುವ ಮತ್ತು ಈ ಕಲೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ನೆಲೆಯಲ್ಲಿ ತಮ್ಮ ಹೋರಾಟವನ್ನು ಮಂಜಮ್ಮ ಮುಂದುವರೆಸಿಕೊಂಡು ಬಂದಿದ್ದಾರೆ.

ಮಂಜಮ್ಮನ ಕಲಾಸೇವೆ ಜೋಗತಿ ನೃತ್ಯಕ್ಕೆ ಮಾತ್ರ ಸೀಮಿತವಾದುದಲ್ಲ. ಅದರಾಚೆ ನಾಟಕ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದೆ. ಆರಂಭಿಕ ಹಂತದಲ್ಲಿ ತಮ್ಮ ಹಸಿವನ್ನು ನೀಗಿಸಲು ದೇವಿಯ ಮಹಾತ್ಮೆಯನ್ನು ಪ್ರಧಾನವಾಗಿಟ್ಟುಕೊಂಡು ಬೀದಿ ನಾಟಕಗಳನ್ನು ಪ್ರದರ್ಶನ ಮಡುವ ಮೂಲಕ ಜೀವನವನ್ನು ಆರಂಭಿಸಿದ ಮಂಜಮ್ಮ ಜೋಗತಿಯು ರೇಣುಕೆಯ ಪಾತ್ರಕ್ಕೆ ಜೀವ ತುಂಬಿದರು. ಹೀಗೆ ಬೀದಿ ನಾಟಕಗಳ ಮೂಲಕ ಪ್ರದರ್ಶನವನ್ನು ಆರಂಭಿಸಿದ ಮಂಜಮ್ಮ ಸಾಮಾಜಿಕ ಅರಿವು ಮೂಡಿಸುವ ನೆಲೆಯಲ್ಲಿ ಏಡ್ಸ್, ಮಲೇರಿಯಾ, ಪೋಲಿಯೊ, ಸ್ವಚ್ಚತೆಯ ಅರಿವು ಮೂಡಿಸುವ ಹಲವಾರು ನಾಟಕಗಳನ್ನು ಪ್ರದರ್ಶನ ಮಾಡುತ್ತ ಬಂದಿದ್ದಾರೆ. ಹಾಗೆಯೇ ಮುಂದುವರೆದು ಹಲವಾರು ಪೌರಾಣಿಕ ನಾಟಕಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿ ತನ್ನ ಸೇವೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ದೃಢ ದೇಹಕಾಯರಾದ ಮಂಜಮ್ಮ ಭೀಮ, ದುರ್ಯೋಧನ, ಹಿರಣ್ಯಕಶ್ಯಪು ಪಾತ್ರಗಳ ಮೂಲಕ ಪುರುಷ ಪಾತ್ರಧಾರಿಗಳು ನಾಚುವಂತೆ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಹೀಗೆ ಮುಂದುವರೆದ ಇವರ ಸಾಧನೆಯು ಇಂದಿಗೂ ತನ್ನ ಜೀವಂತಿಕೆಯನ್ನು ಕಾಯ್ದುಕೊಂಡಿದ್ದು, ಹಲವಾರು ನಾಟಕಗಳ ಪ್ರದರ್ಶನದ ಜೊತೆಗೆ ಯುವ ಸಮುದಾಯಕ್ಕೆ ನಾಟಕ ತರಬೇತಿ ನೀಡುವ ಜವಬ್ದಾರಿಯನ್ನು ಹೊತ್ತಿದ್ದಾರೆ. ಹೀಗಾಗಿ ಜೋಗತಿ ನೃತ್ಯ ಮತ್ತು ನಾಟಕ ಕ್ಷೇತ್ರಗಳಲ್ಲಿ ಮಂಜಮ್ಮನ ಸಾಧನೆಯು ಅಪಾರವಾದುದಾಗಿದೆ.

ಮಂಜಮ್ಮ ಗಂಡಾಗಿ ಹುಟ್ಟಿ ಹೆಣ್ಣಾಗಿ ಪರಿವರ್ತನೆಯಾದವರು. ಇದು ಅವರ ದೇಹದಲ್ಲಾದ ಜೈವಿಕ ಬದಲಾವಣೆ. ಆದರೆ ಈ ಜೈವಿಕ ಕ್ರಿಯೆಯಿಂದ ಉಂಟಾದ ಬದಲಾವಣೆಯ ಪರಿಣಾಮವಾಗಿ ಸಮಾಜದಲ್ಲಿ ಹಲವಾರು ಸಂಕಷ್ಟಗಳನ್ನು ಅನುಭವಿಸಿದರು. ಈ ಸಂಕಷ್ಟಗಳು ಅತಿಯಾದಾಗ ಸಾವಿಗೆ ಶರಣಾಗಲು ಮುಂದಾದರು. ಆದರೆ ಸಾವನ್ನು ಜಯಿಸಿದ ಮಂಜಮ್ಮ ಇಂದು ಸಾಧನೆಯ ಶಿಖರದಲ್ಲಿದ್ದಾರೆ. ಅಂದು ತಾವು ಹೆಣ್ಣಾಗಿ ಮನೆಯನ್ನು ತೊರೆದಾಗ ಒಂದು ಕಾಟನ್ ಸೀರೆ ಮಾತ್ರ ಇವರ ಬಳಿ ಇದ್ದಿದ್ದು. ಆದರೆ ಈ ಬಡತನಕ್ಕೆ ಅಂಜದ ಮಂಜಮ್ಮ ನಿಷ್ಠೆ ಮತ್ತು ಪ್ರಾಮಾಣಿಕತೆಯ ಮೂಲಕ ಇಂದು ಸಮಾಜದಲ್ಲಿ ಉತ್ತಮವಾದ ಸ್ಥಾನಮಾನವನ್ನು ಪಡೆದುಕೊಂಡಿದ್ದಾರೆ. ಅಂದು ಕೇವಲ ಒಂದು ಸೀರೆಯನ್ನುಟ್ಟು ಹೊರಬಂದ ಈ ಮಹಾತಾಯಿಯು ಇಚಿದು ತನ್ನಲ್ಲಿ ಹಲವಾರು ಸೀರೆಗಳು ಇರುವುದನ್ನು ನೆನೆದು ಸಂತೋಷ ಪಡುತ್ತಾರೆ. ಮಂಜಮ್ಮ ಆಸ್ತಿಪಾಸ್ತಿಯನ್ನು ಸಂಪಾದಿಸಿದವರಲ್ಲ. ದೀನ ದಲಿತರ ಹಾರೈಕೆ ಮತ್ತು ಅವರ ಪ್ರೀತಿಯನ್ನು ಸಂಪಾದಿಸುವುದೆ ಆಸ್ತಿಯೆಂದು ಭಾವಿಸಿದವರು. ಸೀರೆಯೊಂದಿಗಿನ ಇವರ ನಂಟು ಹೆಣ್ತನದ ಪ್ರತಿರೂಪವಾಗಿದೆ. ಇದರೊಂದಿಗಿನ ಅವರ ನಂಟು ಭಾವನಾತ್ಮಕ ಸ್ವರೂಪದಿಂದ ಕೂಡಿದೆ.

ಮಂಜಮ್ಮನವರ ಕಲಾಕ್ಷೇತ್ರದ ಸಾಧನೆಗಾಗಿ ಕರ್ನಾಟಕ ಸರ್ಕಾರವು ನೀಡುವ ಉನ್ನತ ಪುರಸ್ಕಾರವಾಗಿರುವ ‘ಕನ್ನಡ ರಾಜ್ಯೋತ್ಸವ’ ಪ್ರಶಸ್ತಿಯು ಇವರ ಮುಡಿಗೇರಿದೆ. ಹಾಗೆಯೇ ಇವರ ಕಲಾಸೇವೆ ಹಾಗೂ ಸಾಮಾಜಿಕ ಕಳಕಳಿಯನ್ನು ಗಮನಿಸಿದಂತಹ ಹಲವಾರು ಸಂಘ ಸಂಸ್ಥೆಗಳು ಹಲವಾರು ಪುರಸ್ಕಾರ ಹಾಗೂ ಸನ್ಮಾನದ ಮೂಲಕವಾಗಿ ಇವರನ್ನು ಗೌರವಿಸಿವೆ. ಸಾಧನೆಗೆ ಹೆಣ್ಣು ಗಂಡು, ಮೇಲು ಕೀಳು, ಶ್ರೇಷ್ಠ ಕನಿಷ್ಟವೆಂಬ ಯಾವುದೇ ಅಡ್ಡಿ ಆತಂಕಗಳಿಲ್ಲ. ಸಾಧಿಸುವ ಛಲವೊಂದಿದ್ದರೆ ಎಂಥ ಪರ್ವತವನ್ನು ಶ್ರಮದ ಮೂಲಕ ಹೇರಿ ಸಾಧಿಸಬಹುದು ಎಂಬುದನ್ನು ಮಂಜಮ್ಮ ಸಾಧಿಸಿ ತೋರಿಸಿದ್ದಾರೆ. ಮಂಜಮ್ಮನದು ಸದಾ ತುಡಿಯುವ ಮಾತೃ ಹೃದಯ. ಈ ಮಹಾತಾಯಿಯ ಮಾತೃ ಹೃದಯವು ಕೇವಲ ದಮನಿತ ಸಮುದಾಯದ ಮಾನವ ಲೋಕಕ್ಕೆ ಮಾತ್ರ ಮಿಡಿಯುತ್ತ ಬಂದಿಲ್ಲ. ಅದರಾಚೆಗಿನ ಪ್ರಾಣಿ ಪಕ್ಷಿ ಸಂಕುಲಕ್ಕೂ ತನ್ನ ಅಂತಃಕರಣದ ತುಡಿತವನ್ನು ವ್ಯಕ್ತಪಡಿಸಿಕೊಂಡು ಬಂದಿದೆ. ಇದಕ್ಕೆ ಸಾಕ್ಷಿಯಾಗಿ ಈ ತಾಯಿಯು ತನ್ನ ಕುಟೀರದೊಳಗೆ ವಿವಿಧ ಪ್ರಾಣಿ ಸಂಕುಲಕ್ಕೆ ಆಶ್ರಯ ನೀಡಿ, ತನ್ನ ಮಕ್ಕಳಂತೆ ಪ್ರೀತಿಯುಣಿಸುತ್ತಾ ಬಂದು, ಅವುಗಳ ನೋವಿಗೆ ಮಿಡಿದಿದ್ದಾರೆ. ಮಂಜಮ್ಮ ಎಂಬ ಈ ಮಹಾತಾಯಿಯು ತನ್ನಂತೆ ಹಲವಾರು ಮಂಗಳಮುಖಿಯರಿಗೆ ಆಶ್ರಯ ನೀಡುವುದರ ಜೊತೆಗೆ, ಆಶ್ರಯ ಕಳೆದುಕೊಂಡ ವೃದ್ಧರು ಹಾಗೂ ತಂದೆ ತಾಯಿಗಳ ಪ್ರೀತಿಯಿಂದ ವಂಚಿತರಾದ ಅನಾಥ ಮಕ್ಕಳಿಗೆ ಆಶ್ರಯಧಾತೆಯಾಗಿ ತನ್ನ ಮಾತೃ ಶ್ರೀಮಂತಿಕೆಯನ್ನು ಹಾಗೂ ತಾಯ್ತನವನ್ನು ಹೆಚ್ಚಿಸಿಕೊಂಡಿದ್ದಾರೆ. ಇದು ಮಂಜಮ್ಮ ಜೋಗತಿಯ ಬದುಕಿನ ಕಿರು ಪರಿಚಯ ಮಾತ್ರವಾಗಿದೆ. ಇವರ ಸಾಧನೆಯು ನಿಸ್ವಾರ್ಥದಿಂದ ಕೂಡಿದ್ದು, ಮಾತು ಕೃತಿಯಾಗಿ, ಕಾರ್ಯವಾಗಿ ಹೊರಹೊಮ್ಮಿದೆ. ಆದ ಕಾರಣ ಇವರನ್ನು, ಇವರ ಕಾರ್ಯವನ್ನು ಎಷ್ಟು ವರ್ಣಿಸಿದರೂ ಅತಿಶಯೋಕ್ತಿಯಾಗಲಾರದು. ಮಂಜಮ್ಮ ಜೋಗತಿಯೆಂಬ ಈ ಮಹಾತಾಯಿಯು ಕಲಾಕ್ಷೇತ್ರಕ್ಕೆ ಇನ್ನಷ್ಟು ಸೇವೆಯನ್ನು ನೀಡಲಿ, ಇವರ ಸಾಮಾಜಿಕ ಕಳಕಳಿ ಸದಾ ಹೀಗೆ ಮುಂದುವರೆಯುವಂತಹ ಆರೋಗ್ಯವನ್ನು ದೇವರು ಕರಣಿಸಲಿ ಎಂಬುದೆ ನಮ್ಮ ಹಾರೈಕೆ.

ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

Leave a Reply

Your email address will not be published. Required fields are marked *

Trending

Exit mobile version