ದಿನದ ಸುದ್ದಿ
ಶನಿವಾರ ಕಲಬುರಗಿ ಪಾಲಿಕೆಯ ಹೊಸ ಮೇಯರ್, ಉಪ ಮೇಯರ್ ಆಯ್ಕೆ: ಯಾರಿಗೆ ಒಲಿಯಲಿದೆ ಅಧಿಕಾರದ ಪಟ್ಟ?
ಸುದ್ದಿದಿನ, ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಶನಿವಾರ ನಡೆಯಲಿರುವ ಚುನಾವಣೆಯಲ್ಲಿ ಮೇಯರ್ ಸ್ಥಾನವನ್ನು ಬಿಸಿಎ ವರ್ಗಕ್ಕೆ ಹಾಗೂ ಉಪ ಮೇಯರ್ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ. ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಚುರುಕುಗೊಂಡಿವೆ.
http://Visit : www.suddidina.com
ಆಡಳಿತಾರೂಢ ಕಾಂಗ್ರೆಸ್ ಪಾಲಿಕೆಯಲ್ಲಿ ಅಗತ್ಯ ಬಹುಮತದ ಸಂಖ್ಯಾಬಲ ಹೊಂದಿರುವುದರಿಂದ ಅಧಿಕಾರ ಉಳಿಸಿಕೊಳ್ಳುವ ವಿಚಾರದಲ್ಲಿ ದೊಡ್ಡ ಆತಂಕವಿಲ್ಲ. ಆದರೆ ಮೇಯರ್ ಮತ್ತು ಉಪ ಮೇಯರ್ ಸ್ಥಾನ ಯಾರಿಗೆ ನೀಡಬೇಕು ಎಂಬುದೇ ಈಗ ಪಕ್ಷದೊಳಗಿನ ಪ್ರಮುಖ ಚರ್ಚೆಯಾಗಿದೆ. ಸಚಿವರು, ಶಾಸಕರು ಹಾಗೂ ಪಕ್ಷದ ಪ್ರಮುಖ ಪದಾಧಿಕಾರಿಗಳು ಶುಕ್ರವಾರ ಸಭೆ ನಡೆಸಿದ್ದು, ಶನಿವಾರ ಬೆಳಗ್ಗೆ ಅಭ್ಯರ್ಥಿಗಳ ಕುರಿತು ಅಂತಿಮ ಸ್ಪಷ್ಟತೆ ಮೂಡುವ ಸಾಧ್ಯತೆಯಿದೆ.
ಕಾಂಗ್ರೆಸ್ ಸಂಖ್ಯಾಬಲ 35ಕ್ಕೆ
ಕಲಬುರಗಿ ಪಾಲಿಕೆಯಲ್ಲಿ ಕಾಂಗ್ರೆಸ್ ತನ್ನ 28 ಸದಸ್ಯರ ಜತೆಗೆ ಸಂಸದ ರಾಧಾಕೃಷ್ಣ ದೊಡ್ಡಮನಿ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಶಾಸಕರಾದ ಅಲ್ಲಮಪ್ರಭು ಪಾಟೀಲ್ ಮತ್ತು ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ್, ತಿಪ್ಪಣ್ಣಪ್ಪ ಕಮಕನೂರ ಹಾಗೂ ಡಾ. ಚಂದ್ರಶೇಖರ ಪಾಟೀಲ್ ಹುಮನಾಬಾದ್ ಅವರ ಮತದಾನದ ಹಕ್ಕಿನಿಂದ ಒಟ್ಟು 35 ಮತಗಳ ಬಲ ಹೊಂದಿದೆ.
ಇದರಿಂದ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಮೇಲುಗೈ ದೊರೆಯುವಂತಾಗಿದೆ. ಆದರೂ ಪಕ್ಷದೊಳಗಿನ ಆಕಾಂಕ್ಷಿಗಳ ಸಂಖ್ಯೆ ಹಾಗೂ ಸ್ಥಳೀಯ ರಾಜಕೀಯ ಸಮೀಕರಣಗಳು ಅಭ್ಯರ್ಥಿ ಆಯ್ಕೆಯನ್ನು ಕುತೂಹಲಕರವಾಗಿಸಿವೆ.
ಬಿಜೆಪಿಗೂ ಗಮನಾರ್ಹ ಸಂಖ್ಯಾಬಲ
ಇನ್ನೊಂದೆಡೆ ಬಿಜೆಪಿ 22 ಸದಸ್ಯರು ಹಾಗೂ ಒಬ್ಬರನ್ನು ಸೇರಿಸಿ 23ರ ಸಂಖ್ಯಾಬಲ ಹೊಂದಿದೆ. ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ್, ಶಶೀಲ್ ನಮೋಶಿ ಹಾಗೂ ಶಾಸಕ ಬಸವರಾಜ ಮತ್ತಿಮಡು ಅವರ ಮತದಾನದ ಹಕ್ಕು ಸೇರಿ ಬಿಜೆಪಿಯ ಒಟ್ಟು ಬಲ 26ಕ್ಕೆ ತಲುಪುತ್ತದೆ.
ಈ ನಡುವೆ ಜೆಡಿಎಸ್ನ ನಾಲ್ವರು ಸದಸ್ಯರ ಮತಗಳು ನಿರ್ಣಾಯಕವಾಗುವ ಸಾಧ್ಯತೆಯೂ ಇದೆ. ಅವರು ಯಾವ ನಿಲುವು ತೆಗೆದುಕೊಳ್ಳುತ್ತಾರೆ ಎಂಬುದು ಚುನಾವಣಾ ದಿನದವರೆಗೂ ಕುತೂಹಲ ಮೂಡಿಸಿದೆ.
ಮಧ್ಯಾಹ್ನ 3.30ಕ್ಕೆ ಚುನಾವಣೆ
ಇಂದಿರಾ ಸ್ಮಾರಕ ಭವನದಲ್ಲಿ ಶನಿವಾರ ಮಧ್ಯಾಹ್ನ 3.30ಕ್ಕೆ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಅಪರ ಜಿಲ್ಲಾಧಿಕಾರಿಗಳ ಮುಂದೆ ಬೆಳಗ್ಗೆ 10 ಗಂಟೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಸಂಬಂಧಿಸಿದ ಮತದಾರರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ.
ಎಸ್ಐಆರ್ ಪ್ರಕ್ರಿಯೆ ಹಾಗೂ ಸಂಸತ್ ಅಧಿವೇಶನದ ಹಿನ್ನೆಲೆಯಲ್ಲಿ ಆಗಸ್ಟ್ 8ರಂದು ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲಾಗಿತ್ತು. ಇದೀಗ ಹೊಸ ದಿನಾಂಕ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಪಾಲಿಕೆ ರಾಜಕೀಯ ಮತ್ತೆ ರಂಗೇರಿದೆ.
ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಂಸದ ರಾಧಾಕೃಷ್ಣ ದೊಡ್ಡಮನಿ ನೇತೃತ್ವದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಆಕಾಂಕ್ಷಿಗಳು, ಪದಾಧಿಕಾರಿಗಳ ಸಭೆ ನಡೆದಿದೆ. ಪಾಲಿಕೆಯಲ್ಲಿ ಪಕ್ಷ ಬಹುಮತ ಹೊಂದಿದೆ. ಆಕಾಂಕ್ಷಿಗಳು ಹೆಚ್ಚಿದ್ದರೂ ಸಮಗ್ರ ಚರ್ಚೆ ಬಳಿಕ ಹಿರಿಯರ ಮಾರ್ಗದರ್ಶನದಂತೆ ಸೂಕ್ತ ವ್ಯಕ್ತಿಗಳನ್ನು ಗುರುತಿಸಲಾಗುವುದು.
- ಜಗದೇವ ಗುತ್ತೇದಾರ್ ಜಿಲ್ಲಾಧ್ಯಕ್ಷ, ಕಾಂಗ್ರೆಸ್