ದಿನದ ಸುದ್ದಿ

ಕಲಬುರಗಿ ಪ್ರವಾಹ | 73 ಗ್ರಾಮಗಳ 27378 ಜನರ ರಕ್ಷಣೆ

Published

on

ಸುದ್ದಿದಿನ,ಕಲಬುರಗಿ : ಭೀಮಾ ನದಿಯ ಪ್ರವಾಹದಿಂದ ತತ್ತರಿಸಿ ಹೋಗಿರುವ ಜಿಲ್ಲೆಯಲ್ಲಿ ಸೋಮವಾರ ಸಾಯಂಕಾಲದ ವರೆಗೆ 73 ಗ್ರಾಮಗಳ 27278 ಜನರನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇದೂವರೆಗೆ 162 ಕಾಳಜಿ ಕೇಂದ್ರಗಳನ್ನು ತೆರೆದು 28637 ಜನರಿಗೆ ಅಲ್ಲಿ ಆಶ್ರಯ ಕಲ್ಪಿಸಿ ಅವರಿಗೆ ಊಟೋಪಚಾರದ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಲಾಗಿದೆ.

ಸಂತ್ರಸ್ತರ ರಕ್ಷಣೆಗೆ 98 ಸದಸ್ಯರ ಆರ್ಮಿ ಸೇನಾ ಪಡೆ, 57 ಸದಸ್ಯರ 3 ಎನ್.ಡಿ.ಆರ್.ಎಫ್. ತಂಡಗಳು, 44 ಸದಸ್ಯದ ಎಸ್.ಡಿ.ಆರ್.ಎಫ್ ತಂಡ, 80 ಸದಸ್ಯರ ಅಗ್ನಿಶಾಮಕ ದಳದ ತಂಡ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಮತ್ತು ಸ್ವಯಂ ಸೇವಕರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಪ್ರವಾಹಕ್ಕೆ 573 ಜಾನುವಾರಗಳ ಜೀವ ಹಾನಿಯಾಗಿದ್ದು, ಯಾವುದೇ ಮಾನವ ಹಾನಿಯಾಗಿಲ್ಲ. 1266 ಮನೆಗಳು ಭಾಗಶ: ಹಾನಿಗೆ ಒಳಗಾಗಿದ್ದು, 10150 ಮನೆಗಳಿಗೆ ಪ್ರವಾಹದ ನೀರು ನುಗಿದ ಪರಿಣಾಮ ಬಟ್ಟೆ ಮತ್ತು ಪಾತ್ರೆಗಳಿಗೆ ಹಾನಿಯಾಗಿವೆ.

ಭೀಕರ ಪ್ರವಾಹದಿಂದ ಹಾನಿಗೊಳಗಾದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಸಂತ್ರಸ್ತರ ನೆರವಿಗೆಂದೆ ಅಂಬುಲೆನ್ಸ್ ಸೇವೆ ಸಹ ಸಿದ್ಧವಿಡಲಾಗಿದೆ ಎಂದು ತಿಳಿಸಿದ್ದಾರೆ.

ಹಾಗರಗುಂಡಗಿಯಲ್ಲಿ ಸೇನಾ ಪಡೆ: ಕಲಬುರಗಿ ತಾಲೂಕಿನ ಹಾಗರಗುಂಡಗಿ ಮತ್ತು ಸರಡಗಿ (ಬಿ) ಗ್ರಾಮಗಳು ನಡುಗಡ್ಡೆಯಾಗಿವೆ. ಹಾಗರಗುಂಡಗಿಯಲ್ಲಿ ಸೇನಾ ಪಡೆ ಮತ್ತು ಸರಡಗಿಯಲ್ಲಿ ಎನ್.ಡಿ.ಆರ್.ಎಫ್. ತಂಡ ಮತ್ತು ಅಗ್ನಿಶಾಮಕ ತಂಡ ಜನರನ್ನು ರಕ್ಷಿಸುವಲ್ಲಿ ತೊಡಗಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version