ದಿನದ ಸುದ್ದಿ

ಮಹಿಳೆ ಸಂಸಾರದ ಅಡಿಗಲ್ಲು : ಡಾ. ಶಶಿಕಲಾ ಕೃಷ್ಣಮೂರ್ತಿ

Published

on

ಸುದ್ದಿದಿನ,ದಾವಣಗೆರೆ: ‘ಕನ್ನಡ ಕಲಿತವನು ಜ್ಞಾನಿ, ಕನ್ನಡ ಕಲಿಸುವವನು ದಾನಿ’ ಎನ್ನುವ ಮಾತಿನಂತೆ ನಾವೆಲ್ಲರು ಸೇರಿ ಕನ್ನಡವನ್ನು ಉಳಿಸೊಣ, ಪೋಷಿಸೋಣ, ಬೆಳೆಸೋಣ ಎಂದು ನಗರದ ಖ್ಯಾತ ವೈಧ್ಯೆ ಹಾಗು ಸಾಹಿತಿಗಳಾದ ಡಾ. ಶಶಿಕಲಾ ಕೃಷ್ಣಮೂರ್ತಿಯವರು ಕನ್ನಡಾಭಿಮಾನಿಗಳಿಗೆ ಕರೆ ನೀಡಿದರು.

ದಾವಣಗೆರೆ ತಾಲ್ಲೂಕು ಕ ಸಾ ಪ ದ ವತಿಯಿಂದ ಅಂತರ್ಜಾಲದ ಮೂಲಕ ಕನ್ನಡ ನುಡಿ-ಹಬ್ಬ ದ 5 ನೇ ದಿನದ ಉಪನ್ಯಾಸ ನೀಡುತ್ತಾ ಅವರು “ಮಹಿಳೆ ಮತ್ತು ಆರೋಗ್ಯ” ಎಂಬ ವಿಷಯದ ಕುರಿತಾಗಿ ಮಾತನಾಡಿದರು.

ಮಹಿಳೆ ಮತ್ತು ಆರೋಗ್ಯಕ್ಕೆ ನಿಕಟವಾದ ಸಂಬಂಧಂವಿದೆ. ಏಕೆಂದರೆ “ರೈತ ದೇಶದ ಬೆನ್ನಲುಬು” ಎಂದಾದರೆ ಮಹಿಳೆ ಪ್ರತಿ ಕುಟುಂಬಕ್ಕೆ ಪ್ರತಿ ಸಂಸಾರಕ್ಕೆ ಬೆನ್ನಲುಬು ಹೆಣ್ಣು ಸಂಸಾರದ ಕಣ್ಣು. ಮಹಿಳೆ ಸಂಸಾರದ ಅಡಿಗಲ್ಲು. ಸಂಸಾರದ ಆರೋಗ್ಯ ಪಾಲನೆ ಪೋಷಣೆ ಮಾಡುತ್ತಿದ್ದು ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕೆಂದು ತಿಳಿಸಿದರು.

ಮುಂದುವರೆದು ಹೆಣ್ಣು ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ, ಸೊಸೆಯಾಗಿ, ದಾದಿಯಾಗಿ, ವೈದ್ಯಳಾಗಿ ಸಲಹೆಗಾರಳಾಗಿ ಹೀಗೆ ಏಷ್ಟೊಂದು ಕೆಲಸ ಮಾಡುತ್ತಿದ್ದು ಅವಳ ಕಣ್ಣು ಆನಂದ ಬಾಷ್ಪದಂತಹ ಕಣ್ಣೀರಿನ ಹೊರತು ಬೇರೆ ರೀತಿಯಲ್ಲಿ ನೋಡದಂತೆ ಅವಳ ಬಗ್ಗೆ ಕಾಳಜಿ ವಹಿಸಬೇಕು.

ಹೆಣ್ಣು ಭಗವಂತನ ವಿಶೇಷವಾದ ಸೃಷ್ಟಿ. ಆದರೂ ಅವಳು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ. ಅವಳಿಗೂ ಆರೋಗ್ಯ ಬೇಕು. ಅವಳು ಆರೋಗ್ಯದಿಂದಿದ್ದರೆ ಸಂಸಾರ ಆರೋಗ್ಯ ಪೂರ್ಣವಾಗಿರುತ್ತದೆ ಎಂದರು.

ಮುಖ್ಯವಾಗಿ ಹೆಣ್ಣಿಗೆ ಬರುವ ಕಾಯಿಲೆಗಳು ಹಾಗೂ ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನೋಡುವುದಾದರೆ ; ಭಾರತದ ಮಹಿಳೆ ಮುಖ್ಯವಾಗಿ ಐದು ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ. ಅವೆಂದರೆ
ಕನ್ನಡ ಮೊದಲ ಅಕ್ಷರ “ಅ” ದಿಂದ ಶುರುವಾಗುವ ಕಾಯಿಲೆಗಳು ಬಹಳ ಭಯಾನಕ.

ಅವುಗಳಲ್ಲಿ ಅನಿಮಿಯಾ (ರಕ್ತ ಕೊರತೆ/ ರಕ್ತ ಹೀನತೆ), ಅರ್ಬುದ ರೋಗ (ಕ್ಯಾನ್ಸರ್), ಗರ್ಭಕೋಶ ಮತ್ತು ಸ್ಥನ ಕ್ಯಾನ್ಸರ್, ಗರ್ಭಕೋಶದ ಒಳಪದರ (ಎಂಡೋಮೆಟ್ರಿಯಂ) ಇವುಗಳ ಜೊತೆಗೆ ಪುರುಷರ ಹಾಗೆ ಹೃದಯ ಸಂಬಂಧಿ ರೋಗಗಳನ್ನು ಅವಳು ಎದುರಿಸುತ್ತಿದ್ದಾಳೆ.

ಅವಳು ಸಹ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾಳೆ. ಇತ್ತೀಚಿನ ದಿನಗಳಲ್ಲಿ ತುಂಬಾ ನೋವಿನ ಸಂಗತಿ ಎಂದರೆ ಸ್ಥನದ ಕ್ಯಾನ್ಸರ್ ಹಾಗೂ ಗರ್ಭಕೋಶದ ಕೊರಳಿನ ಕ್ಯಾನ್ಸರ್. ಇದು ಸಾಮಾನ್ಯವಾಗಿ 30 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಬರುತ್ತದೆ. ಪ್ರತಿ ದಿನದ ಅಂಕಿ ಅಂಶಗಳ ಪ್ರಕಾರ185 ಮಹಿಳೆಯರು ಗರ್ಭಕೋಶದ ಕ್ಯಾನ್ಸರ್‌ನಿಂದ ಸಾವನಪ್ಪುತ್ತಿದ್ದಾರೆ. ಇದು ತಡೆಗಟ್ಟ ಬಹುದಾದಂತಹ ಒಂದು ರೋಗ. ಇದನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿದರೆ ಚಿಕಿತ್ಸೆ ಫಲಕಾರಿಯಾಗುತ್ತದೆ ಎಂದು ಭರವಸೆ ನೀಡಿದರು.

ಇಂದು ಜನರಿಗೆ ಬಹುಮುಖ್ಯವಾದ ಅರಿವಿನ ಕೊರತೆ, ಜ್ಞಾನದ ಕೊರತೆ, ವೈಧ್ಯರ ಬಳಿ ಬೇಗ ಹೋಗದಿರುವುದು, ಸಂಕೋಚ, ಹೀಗೆ ಹಲವು ನಕಾರಾತ್ಮಕವಾದ ವಿಚಾರಗಳಿಂದ ಕಾಯಿಲೆಗಳಿಗೆ ಬೇಗ ತುತ್ತಾಗುತ್ತಿದ್ದಾರೆ. ಆದ್ದರಿಂದ ಆರೋಗ್ಯದ ಬಗ್ಗೆ ಜಾಗೃತರಾಗಿರಬೇಕು. ಕೂಡಲೇ ವೈಧ್ಯರ ಸಲಹೆ-ಮಾರ್ಗದರ್ಶನ, ಚಿಕಿತ್ಸೆ ಪಡೆಯುವ ಮೂಲಕ ಸಾಕಷ್ಟು ಪ್ರಮಾಣದಲ್ಲಿ ರೋಗಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

ಈ ದೇಹ ಒಂದು ಆಲಯವಿದ್ದಂತೆ ಇದನ್ನು ತುಂಬಾ ಚೆನ್ನಾಗಿ ಕಾಪಾಡಿಕೊಳ್ಳಬೇಕು ಎಂದು ಹೇಳುತ್ತಾ ಹಣ್ಣು ತರಕಾರಿಗಳನ್ನು ಸರಿಯಾದ ರೀತಿಯಲ್ಲಿ ಸೇವಿಸುವುದು ಬಹಳ ಮುಖ್ಯವೆಂದು ತಮ್ಮ ಉಪನ್ಯಾಸದಲ್ಲಿ ಸಲಹೆ ನೀಡಿದರು.
ಅಧ್ಯಕ್ಷೀಯ ನುಡಿಗಳನ್ನು ಆಡುತ್ತಾ ಭಾರತೀಯ ಪಾರಂಪರೀಕ ವೈಧ್ಯ ಪದ್ದತಿ ಪ್ರಾಚೀನ ಕಾಲದಿಂದಲೂ ಇಡೀ ವಿಶ್ವಕ್ಕೆ ಮಾದರಿಯಾಗಿದ್ದು. ಅಪಾರ ಕೊಡುಗೆಗಳನ್ನು ನೀಡುತ್ತಾ ಬಂದಿದೆ.

ಪ್ರಾಚೀನ ವೈಧ್ಯರುಗಳಾದ ಚರಕ ಮತ್ತು ಸುಶ್ರುತರು ಕೊಟ್ಟಿರುವ ಕೊಡುಗೆ ಅಪಾರವಾದುದ್ದು.
ಈ ನಿಟ್ಟಿನಲ್ಲಿ ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಪೂಜ್ಯ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಶಾಂತಿವನದಲ್ಲಿ ಚರಕ ಮತ್ತು ಸುಶ್ರುತರ ಶಿಲಾ-ವಿಗ್ರಹಗಳನ್ನು ಸ್ಥಾಪಿಸಿ ಅನೇಕ ಗಿಡಮೂಲಿಕೆ ಸಸ್ಯಗಳನ್ನು ಬೆಳೆಸಿರುವುದು ಅತ್ಯಂತ ಶ್ಲಾಘನೀಯ ಎಂಬುದಾಗಿ ತಾಲ್ಲೂಕು ಕ ಸಾ ಪ ಅಧ್ಯಕ್ಷ ಬಿ. ವಾಮದೇವಪ್ಪ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಬಣ್ಣಿಸಿದರು.

ಆರಂಭದಲ್ಲಿ ತಾಲ್ಲೂಕು ಕ ಸಾ ಪ ದ ನಿರ್ದೇಶಕರಾದ ಶ್ರೀಮತಿ ಎಸ್.ಎಂ ಮಲ್ಲಮ್ಮನವರು ಸ್ವಾಗತಿಸಿದರು.
ಬೆಳಕು ಜಾನಪದ ಕಲಾ ತಂಡದ ಶ್ರೀಮತಿ ರುದ್ರಾಕ್ಷಿ ಬಾಯಿ ಪುಟ್ಟನಾಯ್ಕ ಮತ್ತು ತಂಡದವರು ಸುಗಮ ಸಂಗೀತವನ್ನು ನೆರವೇರಿಸಿದರು.

ವರದಿ: ಸಿ.ಜಿ ಜಗದೀಶ್ ಕೂಲಂಬಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version