ದಿನದ ಸುದ್ದಿ

ಪ್ರಾಚೀನ ಇತಿಹಾಸವಿರುವ ಕನ್ನಡಕ್ಕೆಂದು ಅಳಿವಿಲ್ಲ : ಪ್ರೊ. ಬಾತಿ ಬಸವರಾಜ್

Published

on

ಸುದ್ದಿದಿನ,ದಾವಣಗೆರೆ : ನಾಲ್ಕಾರು ಶತಮಾನಗಳ ಪ್ರಾಚೀನ ಇತಿಹಾಸ ಹೊಂದಿರುವ ದ್ರಾವಿಡ ಭಾಷೆಯಾದ ಕನ್ನಡಕ್ಕೆ ಎಂದಿಗೂ ಅಳಿವಿಲ್ಲ. ಅಚ್ಛ ಕನ್ನಡ ಭಾಷೆ ಮಾತನಾಡುವ ನಮ್ಮ ಗ್ರಾಮ, ಹಳ್ಳಿಗಳು ಮತ್ತು ಹಳ್ಳಿಗರು ಇರುವವರೆಗೂ ಕನ್ನಡ ಅಮರ ಎಂದು ಸಾಹಿತಿ, ಚಿಂತಕರಾದ ಪ್ರೊ. ಬಾತಿ ಬಸವರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮೀಪದ ದೊಡ್ಡಬಾತಿ ಗ್ರಾಮದ ಗುಡ್ಡದ ಮೇಲಿನ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ದೊಡ್ಡಬಾತಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಮಿತಿ., ಸ್ಫೂರ್ತಿ ಪ್ರಕಾಶನ ತೆಲಗಿ – ದಾವಣಗೆರೆ., ಚುಟುಕು ಸಾಹಿತ್ಯ ಪರಿಷತ್‍ನ ದಾವಣಗೆರೆ ಜಿಲ್ಲಾ ಘಟಕ., ಸಿರಿಗನ್ನಡ ವೇದಿಕೆಯ ಹರಿಹರ ತಾಲ್ಲೂಕು ಮತ್ತು ದಾವಣಗೆರೆ ಜಿಲ್ಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ರಾಜ್ಯೋತ್ಸವ ಸಂಭ್ರಮ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭವ್ಯ ಪರಂಪರೆ, ಸಂಸ್ಕøತಿ, ವಿಪುಲ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಕೊಡುಗೆಗಳಿಂದ ಶ್ರೀಮಂತಗೊಂಡಿರುವ ನಮ್ಮ ಕನ್ನಡ ಭಾಷೆ ಗ್ರಾಮೀಣ ಸೊಗಡು ಇರುವವರೆಗೂ ಚಿರಸ್ಥಾಯಿಯಾಗಿರುತ್ತದೆ ಎಂದರು.

ಪ್ರಸ್ತುತ ಹಲವು ಕೊರತೆ ಮತ್ತು ಸಮಸ್ಯೆಗಳನ್ನು ಎದುರಿಸುತ್ತಿರುವ ನಮ್ಮ ಕನ್ನಡ ಭಾಷೆಯ ಬಗ್ಗೆ ಕನ್ನಡಿಗರ ಅಭಿಮಾನ ಗಟ್ಟಿಯಾದಲ್ಲಿ ಕರ್ನಾಟಕ ಮತ್ತು ಕನ್ನಡ ಇತರರಿಗೆ ಎಂದೆಂದಿಗೂ ಮಾದರಿಯಾಗಿಯೇ ಉಳಿಯುವುದರಲ್ಲಿ ಸಂಶಯವಿಲ್ಲ ಎಂದರು.

ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ದೊಡ್ಡಬಾತಿ ಪ.ಪೂ ಕಾಲೇಜಿನ ಪ್ರಾಚಾರ್ಯಿಣಿ ಶ್ರೀಮತಿ ಉಷಾ ಮಾತನಾಡಿ, ನರಕಕ್ಕಿಳ್ಸಿ ನಾಲಿಗೆ ಸೀಳಿ, ಬಾಯಿ ಹೊಲಿದ್ರುನೂ ಮೂಗ್‍ನಲ್ಲಿ ಕನ್ನಡ ಪದವಾಡ್ತಿನಿ ಎಂಬ ರತ್ನನ ಪದ ಕನ್ನಡಿಗರಿಗೆ ಪ್ರೇರಕ ಶಕ್ತಿಯಾಗಬೇಕು. ಕನ್ನಡ ನಾಡು – ನುಡಿಗೆ ಬಹುದೊಡ್ಡ ಕೊಡುಗೆ ಕೊಟ್ಟಿರುವ ಕನ್ನಡ ಸಾಹಿತಿಗಳು ಮತ್ತು ಕಲಾವಿದರು ಮಾದರಿಯಾಗಬೇಕು ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಗಂಗಾಧರ ಬಿ.ಎಲ್ ನಿಟ್ಟೂರ್ ಮಾತನಾಡಿ, ಇತಿಹಾಸ ಅರಿತವರು ಮಾತ್ರ ಹೊಸ ಇತಿಹಾಸ ನಿರ್ಮಿಸಬಲ್ಲರು. ಆ ಹಿನ್ನಲೆಯಲ್ಲಿ ಕನ್ನಡಿಗರಾದ ನಮಗೆಲ್ಲಾ ಆಶ್ರಯ ನೀಡಿ ಬದುಕನ್ನು ಹಸನಾಗಿಸಿಕೊಳ್ಳಲು ಇಂಬು ನೀಡಿರುವ ನಮ್ಮ ನಾಡಿನ ಪ್ರಾಗೈತಿಹಾಸದ ಜೊತೆ ಪ್ರಚಲಿತ ವಿದ್ಯಮಾನಗಳ ಅರಿವು ಸಹ ಇರಬೇಕು. ಅಲ್ಲದೆ ತಾಯ್ನಾಡಿನ ಋಣ ತೀರಿಸುವುದು ನಮ್ಮ ಕರ್ತವ್ಯವಾಗಬೇಕು ಎಂದರು.

ಚುಸಾಪ ಜಿಲ್ಲಾಧ್ಯಕ್ಷರಾದ ರಾಜಶೇಖರ್ ಗುಂಡಗಟ್ಟಿ ಹಾಗೂ ಸ್ಫೂರ್ತಿ ಪ್ರಕಾಶನದ ದಾವಣಗೆರೆ ಅಧ್ಯಕ್ಷರಾದ ಎಂ.ಬಸವರಾಜ್ ಹಾಗೂ ಸಾಹಿತಿ ಸುಬ್ರಹ್ಮಣ್ಯ ನಾಡಿಗೇರ್, ವೇದಿಕೆಯಲ್ಲಿದ್ದರು. ಹಿರಿಯ ಕವಿ ಹೆಚ್ ರೇವಣಸಿದ್ದಪ್ಪ ದೊಡ್ಡಬಾತಿ ಪ್ರಾಸ್ತಾವಿಕ ನುಡಿಯಾಡಿದರು. ರಾಜ್ಯೋತ್ಸವ ಸಮಿತಿಯ ಕಾರ್ಯದರ್ಶಿ ಎಸ್.ಕೃಷ್ಣ ದೊಡ್ಡಬಾತಿ ಸರ್ವರನ್ನು ವಂದಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಾದ ಕೆ.ಜೆ ರೇವಣಸಿದ್ದಪ್ಪ, ಹನುಮಂತಪ್ಪ, ಶಾಂತಪ್ಪ, ಮುಕ್ತೇನಹಳ್ಳಿ ಕರಿಬಸಪ್ಪ, ಡಾ.ಹನುಮಂತಪ್ಪ ಅವರಿಗೆ ಸನ್ಮಾನಿಸಲಾಯಿತು. 2017-18ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ತರುಣ್, ಶಾಲಿನಿ, ಅನಿಲ್, ಶಿಲ್ಪಾ, ರೇಖಾ, ಅನಿತಾ, ಸಂಪ್ರೀತ, ನಿವೇದಿತ ಅವರಿಗೆ ಪ್ರತಿಭಾ ಪುರಸ್ಕಾರದೊಂದಿಗೆ ಪ್ರೋತ್ಸಾಹಿಸಲಾಯಿತು.
ಮಧ್ಯಾಹ್ನ 2 ಗಂಟೆಗೆ ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷ ಶಿವಯೋಗಿ ಹಿರೇಮಠ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಮಟ್ಟದ ಕವಿಗೋಷ್ಠಿಯ ಅತಿಥಿಗಳಾಗಿ ಬಳ್ಳಾರಿ ರೇವಣ್ಣ, ಕುಂದೂರು ಮಂಜಪ್ಪ ಭಾಗವಹಿಸಿದ್ದರು.
ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸುಮಾರು 35ಕ್ಕೂ ಹೆಚ್ಚು ಕವಿ – ಕವಯಿತ್ರಿಯರು ತಮ್ಮ ಸ್ವರಚಿತ ಕವನ ವಾಚಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version