ದಿನದ ಸುದ್ದಿ
ಕಸಾಪ ಚುನಾವಣೆ : ಅಂಚೆ ಮತದಾನಕ್ಕೂ ಬೇಕು ಅವಕಾಶ
ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ, ಜಿಲ್ಲಾ ಮತ್ತು ಹೊರರಾಜ್ಯ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯ ದಿನಾಂಕ ನಿಗದಿಯಾಗಿದೆ. ಉಮೇದುವಾರರಲ್ಲಿ ಉತ್ಸಾಹ ಗರಿಗೆದರಿದೆ. ಹಾಗೆಯೇ ಚುನಾವಣೆಗೆ ಸಂಬಂಧಿಸಿದ ಕಾರ್ಯ ಚಟುವಟಿಕೆಗಳು ಸಹ ಬಿರುಸಿನಿಂದ ಸಾಗುತ್ತಿವೆ.
ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಮತದಾರರಿಗೆ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಿಕೊಡುವ ಅಗತ್ಯತೆ ಇದೆ. ಎಷ್ಟೋ ವರ್ಷಗಳ ಹಿಂದೆ ಆಜೀವ ಸದಸ್ಯರಾದ ಮತದಾರರು ಕಾಲಾನಂತರದಲ್ಲಿ ಸ್ವಂತ ಸ್ಥಳದಿಂದ ಉದ್ಯೋಗ ನಿಮಿತ್ತ ರಾಜ್ಯ, ಹೊರರಾಜ್ಯ, ಹೊರದೇಶಗಳಿಗೆ ಹೋಗಿರುತ್ತಾರೆ.
ಅವರು ಚುನಾವಣಾ ದಿನ ಸ್ವಂತ ಜಿಲ್ಲೆ ಅಥಾವ ತಾಲ್ಲೂಕು ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡುವುದು ಕಷ್ಟಸಾಧ್ಯ. ಹಾಗೆ ಮತದಾನ ಮಾಡುವುದು ಸಹ ಬಹಳ ಅಪರೂಪ. ಆದುದರಿಂದ ಆಜೀವ ಸದಸ್ಯತ್ವದ ವಿಳಾಸದಿಂದ ನಿಗದಿತ ದೂರದಲ್ಲಿರುವವರಿಗೆ ಅಂಚೆ ಮೂಲಕ ಮತದಾನ ಮಾಡುವ ಅವಕಾಶ ಕಲ್ಪಿಸಿ ಕೊಡುವುದರ ಅಗತ್ಯವಿದೆ.
ಹೀಗೆ ಮಾಡಿಕೊಡುವುದರಿಂದ ಸಾವಿರಾರು ಆಜೀವ ಸದಸ್ಯರ ಹಕ್ಕನ್ನು ಚಲಾಯಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಆದುದರಿಂದ ಸಂಬಂಧಪಟ್ಟವರು ಇತ್ತಕಡೆ ಗಮನಿಸುವಂತಾಗಲಿ.
– ನಾಗರಾಜ ಸಿರಿಗೆರೆ, ಕನ್ನಡ ಅಧ್ಯಾಪಕರು
ದಾವಣಗೆರೆ
ಚರವಾಣಿ : 99164 57625, 78926 28053
nagarajsirigere@gmail
ಸುದ್ದಿದಿನ.ಕಾಂ|ವಾಟ್ಸಾಪ್|9980346243