ದಿನದ ಸುದ್ದಿ
ದಾವಣಗೆರೆಯಲ್ಲಿ ಇಂದು ‘ಕಸಾಪ ಉಳಿಸಿ ಆಂದೋಲನ’ ಸಭೆ : ಶಿವಕುಮಾರಸ್ವಾಮಿ ಕುರ್ಕಿ
ದಾವಣಗೆರೆಯ ಕಸಾಪ ಆಜೀವ ಸದಸ್ಯರ ಸಮಾನ ಮನಸ್ಕರ ವೇದಿಕೆಯು 11 ಮಾರ್ಚ್ 2018 ರಂದು ಇಲ್ಲಿನ ಕನ್ನಡ ಭವನದ ಮುಂದೆ ಧರಣಿ ಸತ್ಯಾಗ್ರಹ ನಡೆಸಿ ಹಾಲಿ ಇರುವ ಬೈಲಾವನ್ನು ತಿದ್ದುಪಡಿ ಮಾಡಿಕೊಂಡ ಕಸಾಪ ಅಧ್ಯಕ್ಷರ ಅಧಿಕಾರಾವಧಿಯನ್ನು ತಂತಾನೆ ಹೆಚ್ಚಿಸಿಕೊಳ್ಳುವುದನ್ನು ವಿರೋಧಿಸಿದ್ದೆವು.
ಅಲ್ಲದೆ ನಾವು ಹೈಕೋರ್ಟ್ ಮೆಟ್ಟಿಲೇರಿ ಬಹುದೂರದ ದ.ಕ. ಜಿಲ್ಲೆಯ ಪುಟ್ಟಗ್ರಾಮ ಕೋಟದಲ್ಲಿ ನಡೆವ ಸಭೆಗೆ ತಡೆಯಾಜ್ಞೆ ತರಲು ಲಾಯರ್ ಬಳ್ಳಾರಿ ರೇವಣ್ಣನವರ ವಕಾಲತ್ತಿನ ಮೂಲಕ ಪ್ರಯತ್ನಿಸಿದ್ದೆವು. ಆಗ ಸಮಯದ ಅಭಾವದಿಂದ ಈ ಕೆಲಸ ಆಗಿರಲಿಲ್ಲ. ಆದರೆ “ಸಹಕಾರಿ ಸಂಘಸಂಸ್ಥೆಗಳ ಉಪ ನೋಂದಣಾಧಿಕಾರಿಗಳಿಗೆ ತಿದ್ದುಪಡಿಮಾಡದಿರಲು ಅರ್ಜಿ ಹಾಕಬಹುದು ” ಎಂಬ ಸಲಹೆಯನ್ನು ಹೈಕೋರ್ಟ್ ಸೂಚಿಸಿತ್ತು.
ಆದ ಕಾರಣ ದಾವಣಗೆರೆ ಕಸಾಪ ಸಮಾನ ಮನಸ್ಕರ ವೇದಿಕೆಯಿಂದ ಈ ಕುರಿತ ಅರ್ಜಿಯೊಂದಿಗೆ ನಾವು ಹೈಕೋರ್ಟ್ಗೆ ನೀಡಿದ ಎಲ್ಲಾ ದಾಖಲೆಗಳನ್ನೂ ಬೆಂಗಳೂರು ಮಲ್ಲೇಶ್ವರಂ ಸಹಕಾರ ಭವನದಲ್ಲಿರುವ ಈ ಸಂಘ ಸಂಸ್ಥೆಗಳ ಉಪನೋಂದಾವಣಾಧಿಕಾರಿಗಳ ಕಡೆ ನೀಡಿದ್ದೆವು.
ಜುಲೈ 9ರಂದು ಬೆಂಗಳೂರು ಕನ್ನಡ ಸಂಘರ್ಷ ಸಮಿತಿಯ ಅಧ್ಯಕ್ಷರಾದ ಡಾ.ಕೋ.ವೆಂ.ರಾಮಕೃಷ್ಣೇಗೌಡರು, ಧಾರವಾಡದ ಲೇಖಕಿ ಹೊರಾಟಗಾರ್ತಿ ಡಾ.ಹನುಮಾಕ್ಷಿ ಗೋಗಿ ಹಾಗೂ ದಾವಣಗೆರೆ ಕಸಾಪ ಸಮಾನ ಮನಸ್ಕರ ವೇದಿಕೆಯ ಪರವಾಗಿ ಸಂಚಾಲಕರಾದ ಆರ್. ಶಿವಕುಮಾರಸ್ವಾಮಿ ಕುರ್ಕಿ ಎಂಬ ನಾನು ಇಲ್ಲಿನ ಉಪನಿಬಂಧಕರ ನ್ಯಾಯಾಲಯಕ್ಕೆ ಹಾಜರಾಗಿದ್ದೆವು.
ಆ ವಿಚಾರಣೆಯಲ್ಲಿ ಕಸಾಪ ಅಧ್ಯಕ್ಷರಾದ ಡಾ.ಮನುಬಳಿಗಾರ್ ಹಾಗೂ ಗೌ.ಕಾರ್ಯದರ್ಶಿಗಳು ಉಪಸ್ಥಿತರಿದ್ದು ಮತ್ತೆ ತಮ್ಮ ಅದೇ ಹಳೇ ರಾಗದಲ್ಲಿ ” ಅಧ್ಯಕ್ಷರ ಅಧಿಕಾರ ಅವಧಿಯನ್ನು 3 ರ ಬದಲು 5 ವರ್ಷ ಮಾಡಿಕೊಳ್ಳಲು ಅವಕಾಶ ನೀಡಲು ಕೇಳಿಕೊಂಡರು. ಅಲ್ಲದೆ ಈ ನಿಬಂಧನೆಗಳನ್ನು ಇವತ್ತೇ ಈಗಲೇ ಅನುಮೋದಿಸುವಂತೆ , ತಮ್ಮ ಅಧಿಕಾರ ಅವಧಿಯಿಂದಲೇ ಜಾರಿಯಾಗುವಂತೆ ಕೋಟಾದಲ್ಲಿ ನಡೆಸಿದ ಸಭೆಯ ನಿಬಂಧನೆಗಳನ್ನು ಅನುಮೋದಿಸಬೇಕಾಗಿ ಹಟಕ್ಕೆ ಬಿದ್ದವರಂತೆ ಕೇಳಿಕೊಂಡರು.
ಆಗ ನಾವು ಮೂವರೂ ಸೂಕ್ತ ಕಾರಣಗಳನ್ನು ನೀಡಿ ಅದನ್ನು ಬಲವಾಗಿ ವಿರೋಧಿಸಿದೆವು. ಚುನಾವಣೆ ನಡೆದುದು 3 ವರ್ಷಗಳ ಕಾಲಾವಧಿಗಾಗಿಯೇ ವಿನಃ 5 ವರ್ಷಗಳಿಗಲ್ಲ. ಅಲ್ಲದೆ ನ್ಶಾ.ಶ್ಯಾಮಸಂದರ್ ಆಯೋಗ ಹಿಂದೊಮ್ಮೆ ಹಂ.ಪ.ನಾ. ಅವರು ತಮ್ಮ ಆಧಿಕಾರ ಅವಧಿ ವಿಸ್ತರೀಕರಣ ಮಾಡಿಕೊಳ್ಳಲು ಇವರಂತೆಯೇ ಮುಂದಾದಾಗ ಅದನ್ನು ತಿರಸ್ಕರಿಸಿತ್ತು. ಅಗ ಅವರು ತಿದ್ದಿಕೊಂಡಿದ್ದ 5 ರ ಬದಲು 3 ವರ್ಷವೇ ಇರುವಂತೆ ಸರಕಾರ ನೇಮಿಸಿದ ಆಯೋಗ ತಾಕೀತು ಮಾಡಿತ್ತು’ ಎಂಬ ವಿಷಯವನ್ನು ಕೋರ್ಟ್ ಗಮನಕ್ಕೆ ತಂದೆವು.
ಆಗ ಸ್ಪಂದಿಸಿದ ಉಪನಿಬಂಧಕರು ಅದನ್ನು ಆಸಕ್ತಿಯಿಂದ ಆಲಿಸಿದರು. ಅಲ್ಲದೆ ಬಳಿಗಾರರ ವಾದವನ್ನು ಒಪ್ಪದೆ ಈ ಕುರಿತು ಮಾಹಿತಿ ಸಾಕ್ಷಿಗಳನ್ನು ತೋರಿಸಲು ನಾವು ಮೂವರಿಗೆ ಅವಕಾಶ ಕೊಟ್ಟು ಜು.20 ರಂದು ವಿಚಾರಣೆ ಮಾಡಲಾಗುವುದೆಂದು ತಿಳಿಸಿದರು.
ಕನ್ನಡ ವಿದ್ವಾಂಶರು ದಿಗ್ಗಜರು ಕವಿಪುಂಗವರು 100 ವರ್ಷಗಳ ಹಿಂದೆ ನಿಸ್ವಾರ್ಥತೆಯಿಂದ ಕಟ್ಟಿದ ಈ ಕನ್ನಡ ಸಾಹಿತ್ಯ ಹೃನ್ಮಂದಿರ ಇದೀಗ ಹಣ-ಅಧಿಕಾರ ಲಾಲಸೆ ಇರುವ ಮನುಬಳಿಗಾರ ಅವರಂತಹ ಸ್ವಾರ್ಥಪರ ಜನರಿಂದ ಪೂರ್ಣ ಕಲುಷಿತವಾಗಿದೆ.
ಇದರ ಶುದ್ಧೀಕರಣಕ್ಕಾಗಿ ಇಂದು (ಜುಲೈ12) ರ ಸಂಜೆ 6 ಗಂಟೆಗೆ ದಾವಣಗೆರೆಯ ಉದ್ಯಾನವನದ ಕಾವ್ಯ ಮಂಟಪದಲ್ಲಿ “ಕಸಾಪ ಉಳಿಸಿ” ಆಂದೋಲನ ನಡೆಸಲು ಪೂರ್ವಬಾವೀ ಸಮಾಲೋಚನಾ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಜಿಲ್ಲೆಯ ಎಲ್ಲಾ ಕಸಾಪ ಆಜೀವ ಸದಸ್ಯರುಗಳು ಸ್ವಯಂಸ್ಫೂರ್ತಿಯಿಂದ ಪಾಲ್ಗೊಂಡು ಕಸಾಪ ಕ್ಕೆ ಬಂದಿರುವ ಈ ಕುತ್ತನ್ನು ದೂರಮಾಡಲು ಸಹಕರಿಸಲು ವಿನಂತಿ.
ಈಗಾಗಲೆ ಧಾರವಾಡ, ಬೆಂಗಳೂರು, ಮಂಗಳೂರು, ಬಳ್ಳಾರಿ, ಮೈಸೂರು, ಮಂಡ್ಯ, ಮುಂತಾದ ಕಡೆ ಆಂಧೋಲನ ನಡೆಸಲು ಹುರಿಗೊಳ್ಳುತ್ತಿದ್ದಾರೆ. ಆದ್ದರಿಂದ ಹಾಲಿ ಕಸಾಪ ಸಮಿತಿಯ ಯಾವುದೇ ಆಸೆ ಆಮಿಷ, ಹಿಂಜರಿಕೆಗೆ ಒಳಗಾಗದೆ ನಾಳೆ ಜು.12 ರ ಗುರುವಾರ ಸಂಜೆ 6.00 ಗಂಟೆಗೆ ಸರಿಯಾಗಿ ದಾವಣಗೆರೆ ವಿದ್ಯಾನಗರದ ಕಾವ್ಯಮಂಟಪ ಉದ್ಯಾನವನಕ್ಕೆ ಆಗಮಿಸಲು ಆಹ್ವಾನಿಸುತ್ತೇವೆ. ತಮ್ಮ ಆತ್ಮೀಯರೆಲ್ಲರಿಗೂ ಈ ಸಂದೇಶವನ್ನು ರವಾನಿಸಲು ವಿನಂತಿ.
ಆರ್.ಶಿವಕುಮಾರಸ್ವಾಮಿ ಕುರ್ಕಿ, ಸಂಚಾಲಕರು, ದಾವಣಗೆರೆ
ಮೊ: 8970948221