ದಿನದ ಸುದ್ದಿ

ನನ್ನೂರು ಕೂಡ್ಲಿಗಿ ಮತ್ತು ಮಹಾತ್ಮ ಗಾಂಧೀಜಿಯವರ ಚಿತಾಭಸ್ಮ

Published

on

  • ಕೆ.ಶ್ರೀಧರ್ (ಕೆ.ಸಿರಿ)

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹೆಸರು ಅಜರಾಮರ. ಶ್ರೀಯುತರನ್ನು ಇಡೀ ವಿಶ್ವವೇ ‘ಪೂಜ್ಯನೀಯ’ ಭಾವನೆಯಿಂದ ಗೌರವಿಸುತ್ತದೆ.

ವಿಶ್ವದ ದಿಗ್ಗಜ ನಾಯಕರುಗಳು ಹಾಗೂ ವಿದ್ವಾಂಸರು, ವಿವಿಧ ಸಂಪನ್ಮೂಲ ವ್ಯಕ್ತಿಗಳಾದ ಮಾರ್ಟಿನ್ ಲೂಥರ್ ಕಿಂಗ್, ಆಲ್ಬರ್ಟ್‌ ಐನ್‌ಸ್ಟೈನ್‌,ನೆಲ್ಸನ್‌ ಮಂಡೇಲಾ,ವಿಲ್‌ ಡ್ಯುರಾಂಟ್‌,ಅಟೆನ್‌ಬರೋ,ಹೋ ಚಿ ಮಿನ್‌,ಬರಾಕ್‌ ಒಬಾಮ,ಆಂಗ್‌ ಸಾನ್‌ ಸೂಕಿ,ದಲಾಯಿ ಲಾಮ ರವರು “ನಾವು ಮಹಾತ್ಮ ಗಾಂಧೀಜಿಯವರ ಅನುಯಾಯಿಗಳು” ಎಂದು ಮುಕ್ತಕಂಠದಿಂದ ಅರ್ಪಿತಗೊಳಿಸಿಕೊಂಡಿದ್ದಾರೆ.

ಈ ನಿಟ್ಟಿನಲ್ಲಿ ನೋಡುವುದಾದರೆ ಮಹಾತ್ಮ ಗಾಂಧೀಜಿಯವರು ವಿಶ್ವಮಾನವರಂತೆ ಕಾಣುತ್ತಾರೆ. ಇದು ನಮ್ಮ ಭಾರತ ದೇಶದ ಹೆಮ್ಮೆ.ಗಾಂಧೀಜಿಯವರು ಒಬ್ಬ ವ್ಯಕ್ತಿಯಲ್ಲ ನಮ್ಮ ದೇಶದ ಶಕ್ತಿ, ತಮ್ಮ ಜೀವನದುದ್ದಕ್ಕೂ ಅಹಿಂಸಾತ್ಮಕ ಮಾರ್ಗದ ಮೂಲಕ ಸ್ವಾತಂತ್ರ್ಯ ಚಳುವಳಿ, ವರ್ಣಭೇದ ನೀತಿ ವಿರೋಧಿಸಿ ಉಪವಾಸ ಸತ್ಯಾಗ್ರಹದಿಂದಲೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಚೇತನ ನಮ್ಮ ಬಾಪೂಜಿ.

ಕೂಡ್ಲಿಗಿ ತಾಲೂಕು ಬಳ್ಳಾರಿಯ ವಿಭಜಿತ ವಿಜಯನಗರ ಜಿಲ್ಲೆಯ ಕರ್ನಾಟಕದ ಎರಡನೆಯ ಅತೀದೊಡ್ಡ ತಾಲ್ಲೂಕು ಹಾಗೂ ಹಿಂದುಳಿದ ತಾಲ್ಲೂಕು. ಮುಖ್ಯವಾಗಿ ಇಲ್ಲಿ ಹಿಂದುಳಿದಿರುವುದು ನಮ್ಮ ತಾಲ್ಲೂಕಲ್ಲ ತಾಲ್ಲೂಕಿನಲ್ಲಿರುವ ಮನಸ್ಸುಗಳು ಅಭಿವೃದ್ಧಿ ಪಥದಲ್ಲಿ ಹಿಂದುಳಿದಿವೆ ಈ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿಯನ್ನು ಯಾರು ಹಾಕಿದ್ದಲ್ಲ ನಮಗೇ ನಾವೇ ಹಿಂದುಳಿದ ತಾಲ್ಲೂಕು ಹಿಂದುಳಿದ ತಾಲ್ಲೂಕು ಎಂದೇಳಿ ಹಿಂದೆಯೇ ಉಳಿಸುವ ಪ್ರಯತ್ನದಲ್ಲಿದ್ದೇವೆ.

ಜಾತಿ ಜಾತಿಗಳ ಪ್ರಾಬಲ್ಯ ಸ್ಥಾಪಿಸುವ ಜಿದ್ದಿನಲ್ಲಿ ತಾಲ್ಲೂಕು ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ವೈಫಲ್ಯ ಹೊಂದಿದೆ. ಇಲ್ಲಿ ದುಡಿಯುವವರು ದುಡಿಯುತ್ತಲೇ ಇದ್ದಾರೆ, ಕುಣಿಯುವವರು ಕುಣಿಯುತ್ತಲೇ ಇದ್ದಾರೆ, ಕುಣಿಯುತ್ತಿರುವುದು ಜಾತಿಯ ಅಮಲು, ಇಷ್ಟೆಲ್ಲಾ ನ್ಯೂನ್ಯತೆಗಳು ತಾಲ್ಲೂಕು ಹಿಂದುಳಿದಿದೆ ಎಂದು ಹೇಳುವ ನಮ್ಮ ಮನಸ್ಸುಗಳಲ್ಲಿಯೇ ಇವೆ ಈ ನ್ಯೂನತೆಗಳನ್ನು ಬದಿಗಿರಿಸಿ ಕೂಡ್ಲಿಗಿ ತಾಲೂಕಿನ ಚಾರಿತ್ರಿಕ ಹಿನ್ನೆಲೆ ಒಮ್ಮೆ ಅವಲೋಕನ ಮಾಡಿದರೆ ನಿಜಕ್ಕೂ ಹಿಂದುಳಿದಿರುವುದು ತಾಲ್ಲೂಕ? ಅಥವಾ ತಾಲ್ಲೂಕಿನಲ್ಲಿರುವ ನಮ್ಮ ಮನಸ್ಸುಗಳೇ? ಎಂದು ನಮಗೆ ತಿಳಿಯುತ್ತದೆ.

ಕೂಡ್ಲಿಗಿ ತಾಲೂಕನ್ನು ಮೌರ್ಯರು, ಶಾತವಾಹನರು, ಪಲ್ಲವರು, ಕದಂಬರು, ಚಾಲುಕ್ಯರು ಹಾಗೂ ವಿಜಯನಗರದ ಅರಸರು ಆಳ್ವಿಕೆ ನಡೆಸಿದ್ದಾರೆ. ಅಲ್ಲದೇ ಬಳ್ಳಾರಿ ಜಿಲ್ಲೆಗೆ ಮಹಾತ್ಮ ಗಾಂಧೀಜಿಯವರು 2 ಕಾರಣಗಳಿಂದಾಗಿ 1934 ರ ಮಾರ್ಚ್ 3 ರಂದು ಭೇಟಿ ನೀಡಿರುವುದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ.

1- ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ರೂಪುರೇಷೆಗಳಿಗೆ ಆರ್ಥಿಕ ನೆರವು ಕೇಳಲು.

2-ಸಂಡೂರು ತಾಲ್ಲೂಕಿನ ಬೆಟ್ಟ ಗುಡ್ಡಗಳಲ್ಲಿ ನೆಲೆಸಿರುವ ಕುಮಾರಸ್ವಾಮಿ ದೇವಾಲಯಕ್ಕೆ ದಲಿತ ಸಮುದಾಯದವರಿಗೆ ಪ್ರವೇಶಾತಿ ನೀಡಿದ್ದ ಅಂದಿನ ಮಹಾರಾಜರಿಗೆ ಅಭಿನಂದನೆ ಸಲ್ಲಿಸಲು.

ಸಂಡೂರಿಗೆ ಭೇಟಿ ನೀಡಿದ ಮಹಾತ್ಮ ಗಾಂಧೀಜಿಯವರು ಅಲ್ಲಿ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋತು ‘ಓಯಾಸಿಸ್’ ಎಂದು ಕರೆಯುವುದಲ್ಲದೆ ಸೆಪ್ಟೆಂಬರ್ ತಿಂಗಳಲ್ಲಿ ಸಂಡೂರು ನೋಡು (See Sundur in September) ಎಂದು ಹೇಳಿದ ವಾಕ್ಯ ಈಗಲೂ ಮಾನಸ ಸರೋವರದ ಬಳಿ ಬರುವ ರಸ್ತೆಯ ಇಕ್ಕೆಲದಲ್ಲಿನ ಕಲ್ಲುಬಂಡೆಯ ಮೇಲೆ ಬರೆದಿರುವುದು ಈಗಲೂ ಇದೆ ಇದೊಂದು ಇತಿಹಾಸ ಈ ಸಂಡೂರು ತಾಲೂಕು ಕೂಡ್ಲಿಗಿ ಪಕ್ಕದ ತಾಲ್ಲೂಕಾಗಿದೆ.

ಇದು ಅಲ್ಲದೇ 1921 ರ ಅಕ್ಟೋಬರ್ 1 ರಂದು ಧಾರವಾಡಕ್ಕೆ ಹೋಗಲು ಗಾಂಧೀಜಿಯವರು ಬಳ್ಳಾರಿಗೆ ಬಂದಿದ್ದರು ಹಾಗೂ ಅಲ್ಲಿ ತೆಲುಗು ಹಾಗೂ ಕನ್ನಡ ಭಾಷಿಕ ಕಾಂಗ್ರೆಸ್ ಮುಖಂಡರು ನಮ್ಮಲ್ಲಿ ಬರಬೇಕೆಂದು ದುಂಬಾಲು ಬಿದ್ದಾಗ ಎತ್ತ ಕಡೆ ಹೋಗದೆ 8 ಗಂಟೆಗಳ ಕಾಲ ಬಳ್ಳಾರಿ ರೈಲು ನಿಲ್ದಾಣದಲ್ಲಿಯೇ ಇದ್ದರೆಂಬುದು ಅಧ್ಯಯನದಿಂದ ತಿಳಿದು ಬರುತ್ತದೆ.

ಒಟ್ಟು ಕರ್ನಾಟಕಕ್ಕೆ ಮಹಾತ್ಮ ಗಾಂಧೀಜಿಯವರು 18 ಬಾರಿ ಆಗಮಿಸಿದ್ದರು ಅದರಲ್ಲಿ ನಮ್ಮ ಜಿಲ್ಲೆಗೆ ಎರಡು ಬಾರಿ ಬಂದಿದ್ದರು ಎಂಬುದು ನಮ್ಮ ಹೆಮ್ಮೆಯ ವಿಚಾರ. ಹೀಗೆ ಅಹಿಂಸಾತ್ಮಕ ಹಾಗೂ ಹಿಂಸಾತ್ಮಕ ಮಾರ್ಗದ ಮೂಲಕ ಆಗಸ್ಟ್ 15 1947 ರಂದು ನಮ್ಮ ಭಾರತ ದೇಶಕ್ಕೆ ಮಹಾತ್ಮ ಗಾಂಧೀಜಿ ಹಾಗೂ ದೇಶಭಕ್ತರ ತಂಡ ಸ್ವಾತಂತ್ರ್ಯ ತಂದುಕೊಟ್ಟಿತು.

ಈ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಪಾತ್ರ ಹಿರಿತನದ್ದು. ಸ್ವಾತಂತ್ರ್ಯ ಬಂದು ಕೆಲವೇ ದಿನಗಳಲ್ಲಿ ಮಹಾತ್ಮ ಗಾಂಧೀಜಿಯವರನ್ನು ನಾಥೂರಾಮ್ ಗೋಡ್ಸೆ ಗುಂಡಿಟ್ಟು ಕೊಂದೆ ಬಿಟ್ಟರು.! ಗಾಂಧೀಜಿಯವರ ಚಿತಾಭಸ್ಮವನ್ನು ಬಳ್ಳಾರಿ ನಗರದ ಗಾಂಧಿ ಭವನದ ಮಲ್ಲಸಜ್ಜನ ವ್ಯಾಯಾಮ ಶಾಲೆಯ ಆವರಣದಲ್ಲಿ 24 ಗಂಟೆಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.

ಕೂಡ್ಲಿಗಿ ತಾಲೂಕಿನ ಶಿಕ್ಷಕರಾದ ಬಿಂದು ಮಾಧವ್ ರಾಯ್ ಹಾಗೂ ಮಹಾತ್ಮ ಗಾಂಧೀಜಿಯವರ ಅಭಿಮಾನಿಗಳ ತಂಡ ಗಾಂಧೀಜಿಯವರ ಚಿತಾಭಸ್ಮ ತಂದು ಕೂಡ್ಲಿಗಿ ತಾಲೂಕಿನ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ದೆಹಲಿಯ ರಾಜ್ ಘಾಟ್ ನಂತೆಯೇ ಇರುವ ಬಾಪೂಜಿಯವರನ್ನು ನೆನಪಿಸುವ ಸ್ಮಾರಕವನ್ನು ಚಿತಾಭಸ್ಮವನ್ನು ಇಡುವ ಮೂಲಕ ಹುತಾತ್ಮರ ಸ್ಮಾರಕ ನಿರ್ಮಿಸಲಾಗಿದೆ.

1950 ರೆ ದಶಕದಲ್ಲಿ ಸ್ಥಾಪಿಸಲಾದ ಈ ಚಿತಾಭಸ್ಮ ಸ್ಮಾರಕ ನಿರ್ಮಾಣ ಕಾರ್ಯವನ್ನು ಮಾಜಿ ಪ್ರಧಾನಿ P.V ನರಸಿಂಹರಾವ್ ಅವರ ಗುರುಗಳಾದ ರಮಾನಂದ ತೀರ್ಥರು ಉದ್ಘಾಟಿಸಿದರು. ಇಂತಹ ಮಹಾನ್ ಚೇತನರ ಚಿತಾಭಸ್ಮ ನಮ್ಮ ಕೂಡ್ಲಿಗಿ ತಾಲ್ಲೂಕಿನಲ್ಲಿ ಇರುವುದು ಒಂದು ಐತಿಹಾಸಿಕ ವಿಷಯ ಈ ಮೂಲಕ ನಮ್ಮ ಬಳ್ಳಾರಿ ಜಿಲ್ಲೆಗೂ ಸ್ವಾತಂತ್ರ್ಯ ಸಂಗ್ರಾಮಕ್ಕೂ ನಂಟಿದೆ.

ಇತ್ತೀಚೆಗೆ ಕೂಡ್ಲಿಗಿ ತಾಲೂಕಿನ ಚಿತಾಭಸ್ಮದ ಬಳಿ ‘ಚಿಂತನಾ ಚೇತನ’ ವೇದಿಕೆಗಳು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವುದು ಸಂತೋಷದ ವಿಚಾರವಾಗಿದೆ‌. ಕೂಡ್ಲಿಗಿ ತಾಲೂಕಿನಲ್ಲಿ ಹೇಳಿಕೊಳ್ಳುವಂತಹ ಯಾವ ಪ್ರೇಕ್ಷಣೀಯ ಸ್ಥಳಗಳು ಇಲ್ಲದಿದ್ದರೂ ಮಹಾತ್ಮ ಗಾಂಧೀಜಿಯವರಂತಹ ಚಿತಾಭಸ್ಮ ಹುತಾತ್ಮರ ಸ್ಮಾರಕ ಇರುವುದು ನಮ್ಮ ತಾಲ್ಲೂಕಿನ ಪುಣ್ಯ ಈ ಚಿತಾಭಸ್ಮ ತಂದು ಹುತಾತ್ಮರ ಸ್ಮಾರಕ ನಿರ್ಮಿಸಲು ಶ್ರಮಿಸಿದ ಸರ್ವರಿಗೂ ದೀರ್ಘದಂಡ ನಮಸ್ಕಾರಗಳು.

ಹೀಗೆ ನನ್ನೂರು ಕೂಡ್ಲಿಗಿ ತಾಲೂಕಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನೆನಪು ಹುತಾತ್ಮರ ಸ್ಮಾರಕದ ಮೂಲಕ ಅಚಂದ್ರಾರ್ಕಸ್ಥಾಯಿಯಾಗಿದೆ ಸರ್ವರಿಗೂ ಮಹಾತ್ಮ ಗಾಂಧೀಜಿಯವರ ದಿನಾಚರಣೆಯ ಶುಭಾಶಯಗಳು.

(ಕೆ.ಶ್ರೀಧರ್ (ಕೆ.ಸಿರಿ)
ಯುವ ಸಾಹಿತಿ
ಚಾಮರಾಜನಗರ
9741270125)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version