ನೆಲದನಿ
ಕುವೆಂಪು ಕಂಡರಿಸಿದ ಕನ್ನಡತನದ ದಾರ್ಶನಿಕತೆ
- ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಕುವೆಂಪು ಬರಹಗಳಲ್ಲಿ ‘ಕನ್ನಡತನ’ದ ವಿನ್ಯಾಸಗಳು ಹೇಗೆ ಮೈದಾಳಿವೆ ಎಂಬುದನ್ನು ಅವರ ಸಾಹಿತ್ಯಕ ಹಾಗೂ ವೈಚಾರಿಕ ಬರಹಗಳ ಮೂಲಕ ಕಂಡುಕೊಳ್ಳಬಹುದಾಗಿದೆ. ಕನ್ನಡತನ ಎನ್ನುವುದು ಕೇವಲ ನಾಡು ನುಡಿಗಳ ಗಡಿಗಳಿಗೆ ಸೀಮಿತವಾಗಿರುವ ವಿದ್ಯಮಾನವಾಗಿರದೇ, ಅದೊಂದು ವ್ಯಾಪಕ ಗ್ರಹಿಕೆ ಎನ್ನುವುದು ಇವರ ಇಡೀ ಬರಹಗಳ ಮೂಲಕ ಅನಾವರಣಗೊಂಡಿರುವುದನ್ನು ಕಾಣುತ್ತೇವೆ.
ಹಾಗೆಂದರೆ, ಕನ್ನಡತನ ಎನ್ನುವುದು ಸಂಕುಚಿತ ಗಡಿಗಳನ್ನು ಮೀರುವ ಮತ್ತು ಅಂತಹ ಸೀಮಿತ ಗಡಿಗಳನ್ನು ದಾಟುವ ವಿನ್ಯಾಸವನ್ನಾಗಿ ನೋಡುವ ಹಲವು ಸನ್ನಿವೇಶಗಳು ಕುವೆಂಪು ಅವರ ಅಭಿವ್ಯಕ್ತಿಗಳಲ್ಲಿ ಅತ್ಯಂತ ನಿಚ್ಚಳವಾಗಿವೆ. ಉದಾ.ಗೆ ನೀ ಮೆಟ್ಟುವ ನೆಲ, ಅದೆ ಕರ್ನಾಟಕ ನೀನೇರುವ ಮಲೆ ಸಹ್ಯಾದ್ರಿ’ ಎನ್ನುವ ಕವನದ ಸಾಲುಗಳು ಇರಬಹುದು ಇಲ್ಲವೇ ಅನಿಕೇತನ ಕವನ ಇರಬಹುದು ಅಥವಾ ಕನ್ನಡ ನಾಡು ನುಡಿ ಕುರಿತ ಪ್ರತಿಯೊಂದು ಗ್ರಹಿಕೆ ಮತ್ತು ಅಭಿವ್ಯಕ್ತಿಯಲ್ಲಿ ಕನ್ನಡತನದ ನಿರ್ವಚನೆಯನ್ನು ಕಾಣಬಹುದಾಗಿದೆ.
ಅಂದರೆ ಕುವೆಂಪು ಅವರ ‘ಅಭಿವ್ಯಕ್ತಿ’ ಮತ್ತು ‘ಗ್ರಹಿಕೆ’ಗಳಲ್ಲಿ ಕನ್ನಡತನ ಎಂಬ ಸಮೂಹ ಅಸ್ಮಿತೆ ಹೇಗೆ ಅನಾವರಣಗೊಂಡಿದೆ ಹಾಗೂ ಈ ಅಸ್ಮಿತೆಯನ್ನು ಗ್ರಹಿಸುವ ಸ್ವರೂಪಗಳು ಯಾವ ಬಗೆಯಲ್ಲಿ ಇವರ ಸಾಹಿತ್ಯ ಮತ್ತು ವೈಚಾರಿಕ ನಿರೂಪಣೆಗಳಲ್ಲಿ ನೆಲೆಗೊಂಡಿವೆ ಎನ್ನುವುದನ್ನು ನೋಡುವ ಜರೂರಿದೆ. ಮುಖ್ಯವಾಗಿ ಕಾವ್ಯ, ನಾಟಕ ಮತ್ತು ಕಥನ ಎಂಬೀ ಸೃಜನಶೀಲ ಅಭಿವ್ಯಕ್ತಿಗಳು ರೂಪಕ, ಪ್ರತಿಮೆ, ಸಂಕೇತಗಳ ಮುಖೇನ ಕನ್ನಡತನವನ್ನು ನಿರೂಪಿಸಿರುವ ಬಗೆಯನ್ನು ಇಲ್ಲಿ ಕಾಣುತ್ತೇವೆ. ಹಾಗೂ ವಿಮರ್ಶೆ ಮತ್ತು ವೈಚಾರಿಕ ಬರಹಗಳಲ್ಲಿ ಈ ಕನ್ನಡತನದ ವಿನ್ಯಾಸವು ತಿಳಿವಿನ ಬಗೆಗಳಾಗಿ (ಎಪಿಸ್ಟಮಿಕ್ ಮಾಡಲ್ಸ್) ಮೈದಾಳಿವೆ.
ದಿಟ ಸಾಹಿತ್ಯಕ ಮತ್ತು ವೈಚಾರಿಕ ಅಭಿವ್ಯಕ್ತಿಗಳ ಸ್ವರೂಪ ಬದಲಾಗುವುದರಿಂದ ಅವುಗಳ ಮೂಲಕ ಪ್ರತಿಪಾದಿಸುವ ತಿಳಿವಿನ ಸ್ವರೂಪವೂ ಬದಲಾಗುತ್ತದೆ. ಹಾಗಾಗಿಯೇ ಸೃಜನಶೀಲ ಅಭಿವ್ಯಕ್ತಿಗಳಲ್ಲಿ ಮೈದಾಳುವ ಕನ್ನಡತನ ಕುರಿತಾದ ನಿರೂಪಣೆಗಳು ಬಹುತೇಕವಾಗಿ ರೂಪಾತ್ಮಕವಾಗಿವೆ. ಆದರೆ ವೈಚಾರಿಕ ಬರಹಗಳಲ್ಲಿ ಏರ್ಪಡುವ ಈ ಕನ್ನಡತನದ ವಿನ್ಯಾಸ ಜ್ಞಾನ ಮೀಮಾಂಸೆಯ ಆಯಾಮವನ್ನು ಪಡೆದುಕೊಳ್ಳುತ್ತವೆ ಎಂಬುದು ಗಮನಾರ್ಹ.
ಆದರೆ ಈ ಎರಡೂ ಸನ್ನಿವೇಶದಲ್ಲಿಯೂ ಕುವೆಂಪು ಪ್ರತಿಮಾ ವಿಧಾನವನ್ನೇ ಅನುಸರಿಸುತ್ತಾರೆ ಎಂಬುದು ವಿಶೇಷ. ಲೋಕೋಪಯೋಗಿ ಮತ್ತು ಭಾವೋಪಯೋಗಿ ನೆಲೆಗಳನ್ನು ಅತ್ಯಂತ ಖಚಿತವಾಗಿ ನಿರ್ಧರಿಸುವ ಆಯಾಮಗಳು ಇವರ ಸಾಹಿತ್ಯಕ ಮತ್ತು ವೈಚಾರಿಕ ಬರಹಗಳಲ್ಲಿ ಯಥೇಚ್ಛವಾಗಿ ನೆಲೆಗೊಂಡಿವೆ.
ಭಾಷೆ ಮತ್ತು ಭಾಷಿಕ ಪರಿಕರಗಳನ್ನು ಕೇವಲ ಸಾಂಕೇತಿಕ ಪ್ರತಿನಿಧೀಕರಣದ ಮಾದರಿಯನ್ನಾಗಿ ಮಾತ್ರ ಉಪಯೋಗಿಸದೇ, ಅದೊಂದು ಜ್ಞಾನಶಿಸ್ತು, ಸಂವೇದನೆಯ ವಿನ್ಯಾಸ ಹಾಗೂ ಅನುಭವಗಳ ಮಾದರಿಗಳನ್ನು ಗುರುತಿಸುವ ಬಹುಮುಖ್ಯ ನೆಲೆಯೆನ್ನುವುದನ್ನು ಕುವೆಂಪು ಅತ್ಯಂತ ಪರಿಣಾಮಕಾರಿಯಾಗಿ ಗುರುತಿಸಿದ್ದಾರೆ. ಆದ್ದರಿಂದ ಭಾಷೆ ಬಗೆಗಿನ ಗ್ರಹಿಕೆಗಳು ಇವರ ಒಟ್ಟು ಅಭಿವ್ಯಕ್ತಿಯಲ್ಲಿ ಪ್ರಮುಖವಾಗುತ್ತವೆ.
ಇವುಗಳ ಮೂಲಕವೇ ಬದುಕಿನ ವಿವಿಧ ಲಯಗಳನ್ನು ಕಂಡುಕೊಳ್ಳಲೂ ಸಾಧ್ಯ ಅನ್ನುವುದನ್ನು ಕುವೆಂಪು ತೋರಿಸಿಕೊಟ್ಟಿದ್ದಾರೆ. ಕಾಲ-ದೇಶಗಳ ಹಂಗು ಮೀರಿದ ಪ್ರಸ್ತುತತೆ ನೆಲೆಗೊಳ್ಳುವುದು ಇಂತಹ ಭಾಷಿಕ ಕ್ರಾಂತಿಯಿಂದಲೇ ಎಂಬ ವಾಸ್ತವವನ್ನು ನಾವು ಮನಗಾಣುವುದಕ್ಕೆ ಸಾಕ್ಷಿಗಳು ನಮಗೆ ಕುವೆಂಪು ಗ್ರಹಿಕೆ ಮತ್ತು ಅಭಿವ್ಯಕ್ತಿಯಲ್ಲಿ ಲಭ್ಯವಾಗುತ್ತವೆ. ‘ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ? ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು ? ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು !’ ಎಂಬೀ ಕವನದ ನಿಲುವು ಯಾವ ಕಾಲ ದೇಶಕ್ಕೂ ಸೀಮಿತಗೊಳ್ಳದೇ ಮನುಜಮತ ಮತ್ತು ವಿಶ್ವಪಥದ ಚಹರೆಗಳಾಗಿ ನೆಲೆಗೊಂಡಿವೆ.
ಸಾಮಾಜಿಕ ಭಾಷಾಶಾಸ್ತ್ರೀಯ ವಿವೇಚನೆಗಳ ಮುಖೇನ ಭಾಷೆ ಮತ್ತು ಸಮಾಜಗಳ ಒಟ್ಟು ಸಂಬಂಧವನ್ನು ವಿಶ್ಲೇಷಿಸಿ ನೋಡಿದರೆ ಕುವೆಂಪು ಅವರ ಭಾಷಿಕ ನಿಲುವುಗಳ ಆಳದಲ್ಲಿ ಹುದುಗಿರುವ ವೈಚಾರಿಕ ಸ್ಥೈರ್ಯ ಹಾಗೂ ನೈತಿಕತೆಯ ಹೊಣೆಗಾರಿಕೆ ನಮಗೆ ಮನನವಾಗುತ್ತದೆ. ಮತಧರ್ಮದ ಪರಿಭಾಷೆ ಒದುಗಿಸುವ ಚಿಂತನಾ ಕ್ರಮ ಬೇರೇನೆ ಸಮಾಜಶಾಸ್ತ್ರೀಯ ವ್ಯಾಖ್ಯಾನಗಳಿಗೆ ಅನುವು ಮಾಡಿಕೊಡುವುದನ್ನು ಕುವೆಂಪು ಅವರು ಮನಗಂಡಿದ್ದರು.
ತತ್ವದರ್ಶನ, ಸಾಂಸ್ಕೃತಿಕ ಮುಖಾಮುಖಿಯ ನಿಲುವುಗಳು ನಮಗೆ ಅರ್ಥವಾಗಲು ಹಾಗೂ ಸಾಂಸ್ಕೃತಿಕ ಅನುಸಂಧಾನದ ಸ್ಪಷ್ಟ ಮಾನದಂಡಗಳು ನಮಗೆ ಲಭ್ಯವಾಗುವುದು ಭಾಷಿಕ ಕ್ರಾಂತಿಯಿಂದ ಎನ್ನುವ ವಾಸ್ತವ ಕುವೆಂಪು ಅವರಿಗೆ ಖಚಿತವಾಗಿತ್ತು.
ಹೊಸ ಪರಿಭಾಷೆ ಮತ್ತು ಹೊಸ ವಿಚಾರಗಳನ್ನು ಏಕತ್ರಗೊಳಿಸುವ ಬಹುದೊಡ್ಡ ವೈಚಾರಿಕ ಕ್ರಾಂತಿಗೆ ಕುವೆಂಪು ಅವರು ಕಾರಣವಾದರು. ಈಗಾಗಲೇ ನೆಲೆನಿಂತಿದ್ದ ಸಮಾಜಶಾಸ್ತ್ರದ ಪರಿಭಾಷೆಯ ಒಳಹುನ್ನಾರವನ್ನು ಅರ್ಥೈಸಿಕೊಳ್ಳಲು ಭಾಷಾಶಾಸ್ತ್ರ ಸಹಾಯ ಮಾಡಬಲ್ಲದು ದಿಟ. ಆದರೆ ಬದುಕಿನ ಸಂಕೀರ್ಣತೆಯನ್ನು ಬಿಡಿಸಿ ನೋಡುವ ನಿರೂಪಣೆಗಳು ಲಭ್ಯವಾಗದೇ ಈ ಒಳಹುನ್ನಾರವನ್ನು ಅರಿಯಲು ಭಾಷಾಶಾಸ್ತ್ರಕ್ಕೆ ಸಾಧ್ಯವೇ ಇಲ್ಲ.
ಆದರೆ ಕುವೆಂಪು ಅವರು ಏಕೆಕಾಲಕ್ಕೆ ಈ ಪರಿಭಾಷೆಗಳ ಚಹರೆಗಳನ್ನು ಬದಲಿಸುವ ಮತ್ತು ಒಳಹುನ್ನಾರಗಳನ್ನು ಖಚಿತವಾಗಿ ತಮ್ಮ ಅಭಿವ್ಯಕ್ತಿಗಳ ಮೂಲಕ ಮಂಡಿಸಿರುವುದನ್ನು ಯಾರಾದರೂ ಗುರುತಿಸಬಹುದು. ಅಲ್ಪಸಂಖ್ಯಾತರು, ಬಹುಸಂಖ್ಯಾತರು, ಮೇಲ್ವರ್ಗಗಳು, ಕೆಳವರ್ಗಗಳು ರೂಢಿಗತವಾಗಿ ಬಳಸುತ್ತಿದ್ದ ಪರಿಭಾಷೆಗಳು ಯಾವ ರೀತಿಯಲ್ಲಿ ಸಾಂಸ್ಕೃತಿಕ ಮತ್ತು ರಾಜಕೀಯ ಯಜಮಾನಿಕೆಯನ್ನು ನಿಭಾಯಿಸುತ್ತಿದ್ದವು ಎನ್ನುವುದನ್ನು ಸೂಚಿಸುವ ಸೂಚಕಗಳಾಗಿ ಒದಗಿ ಬಂದಿರುವುದನ್ನು ಪತ್ತೆಹಚ್ಚುವ ನಿಶಿತಮತಿ ಕುವೆಂಪು ಅವರಲ್ಲಿ ಎದ್ದು ಕಾಣುತ್ತದೆ.
ಭಾಷೆ ಒಂದು ಸಾಮಾಜಿಕ ವಾಸ್ತವವನ್ನು (ಸೋಶಿಯಲ್ ಫ್ಯಾಕ್ಟ್) ಬಿಂಬಿಸುವುದಷ್ಟೆಯಲ್ಲ, ಸಮೂಹಗಳ ಬದುಕು ಹೇಗೆ ಇಂತಹ ಸ್ಥಿತಿಯೊಂದಕ್ಕೆ ಒಗ್ಗಿಕೊಂಡಿವೆ ಎನ್ನುವ ಕಟುಸತ್ಯವನ್ನೂ ಅನಾವರಣಗೊಳಿಸುತ್ತವೆ. ಆದ್ದರಿಂದ ಹೊಸ ಸಾಮಾಜಿಕತೆಯನ್ನು ನೆಲೆಗೊಳಿಸಲು ಹೊಸ ಪರಿಭಾಷೆಗಳ ಅಗತ್ಯವಿದೆ ಎನ್ನುವುದನ್ನು ಕುವೆಂಪು ಅವರು ಬಲವಾಗಿ ನಂಬಿದ್ದರು.
ವೈಜ್ಞಾನಿಕ ದೃಷ್ಟಿ, ವಿಶ್ವಮಾನವತೆ, ಸಾಂಸ್ಕೃತಿಕ ರಾಜಕಾರಣ, ಕಾವ್ಯ, ಕಥನ ಹಾಗೂ ನಾಟಕಗಳು ಇತ್ಯಾದಿ ಸಂಕಥನಗಳು ಕನ್ನಡತನವನ್ನು ನಿರ್ವಚಿಸಲು ಕುವೆಂಪು ಅವರಿಗೆ ಅತ್ಯಂತ ಮುಖ್ಯ ಅಭಿವ್ಯಕ್ತಿ ಮಾದರಿಗಳಾಗುತ್ತವೆ. ಎಲ್ಲವನ್ನೂ ಕನ್ನಡತನ ಮತ್ತು ಕನ್ನಡತನದ ಅಸ್ಮಿತೆಯ ಸ್ವರೂಪವನ್ನು ನಿರ್ವಚಿಸುವ ಬಗೆಯನ್ನಾಗಿಯೇ ಕುವೆಂಪು ಅವರು ನಿರೂಪಿಸಿದ್ದಾರೆ. ಆದ್ದರಿಂದ ಪ್ರತಿಮಾ ವಿಧಾನವನ್ನು ಪರಿಣಾಮಕಾರಿಯಾಗಿ ತಮ್ಮ ಒಟ್ಟು ಅಭಿವ್ಯಕ್ತಿಯಲ್ಲಿ ಬಳಸಿಕೊಳ್ಳಲು ಸಾಧ್ಯವಾಯಿತು.
ಇಲ್ಲವಾದರೆ ಅವರ ಕಾದಂಬರಿಗಳು ಮತ್ತು ಕಾವ್ಯ ವಿಶೇಷವಾಗಿ ರಾಮಾಯಣ ದರ್ಶನಂ ಮಹಾಕಾವ್ಯವು ಇಷ್ಟೊಂದು ವೈಶಿಷ್ಟ್ಯತೆಯನ್ನು ಪಡೆದುಕೊಳ್ಳಲು ಆಗುತ್ತಿರಲಿಲ್ಲ. ತಮ್ಮ ವೈಚಾರಿಕ ಬರಹಗಳು, ವಿಮರ್ಶೆ, ನಾಟಕಗಳು, ಕಥನಗಳು, ಕಾವ್ಯ ಹಾಗೂ ಕವಿತೆಗಳನ್ನು ಅತ್ಯಂತ ವಿಶಿಷ್ಟ ಬಗೆಗಳನ್ನಾಗಿಸುವ ಇರಾದೆಯನ್ನು ಕುವೆಂಪು ಅವರು ಹೊಂದಿರುವುದನ್ನು ಈ ಎಲ್ಲ ವಿನ್ಯಾಸಗಳಲ್ಲಿ ನೋಡುತ್ತೇವೆ.
ಈ ಎಲ್ಲ ಪ್ರಕಾರಗಳ ವೈಶಿಷ್ಟ್ಯತೆಯನ್ನು ಕಂಡರಿಸಲು ಇವರು ಭಾಷೆಯನ್ನೇ ಪ್ರಧಾನ ಮಾನದಂಡವನ್ನಾಗಿ ಬಳಸಿಕೊಂಡಿದ್ದಾರೆ. ಈ ಪ್ರಕ್ರಿಯೆಯ ಮೂಲಕವೇ ಕನ್ನಡತನದ ಚಹರೆಗಳನ್ನೂ ಪತ್ತೆಹಚ್ಚುವುದಕ್ಕೂ ಇವರಿಗೆ ಸಾಧ್ಯವಾಗಿದೆ. ಸಾಮಾಜಿಕತೆ ಮತ್ತು ಕನ್ನಡತನದ ನಡುವಣ ನಂಟಸ್ತಿಕೆಯನ್ನು ರೂಪಿಸುವ ವಿಧಾನವೇ ಅತ್ಯಂತ ಮಾರ್ಮಿಕವಾಗಿದೆ.
ಏಕೆಂದರೆ ಕನ್ನಡದ ಕಾವ್ಯದೊಳಗೆ ಲೋಕದರ್ಶನದ ಮಾದರಿಗಳನ್ನು ಒಡಮೂಡಿಸಲು ಹಾಗೂ ವಿಶ್ವಮಾನವ ಪರಿಕಲ್ಪನೆಯನ್ನು ನೆಲೆಗೊಳಿಸಲು ಹೇಗೆ ಸಾಧ್ಯವಾಯಿತು ಅನ್ನುವುದನ್ನು ಶೋಧಿಸುವುದಕ್ಕೆ ಸಾಕಷ್ಟು ಅವಕಾಶಗಳನ್ನು ಕುವೆಂಪು ಅವರು ಭಾಷಿಕ ಚಲನೆಗಳ ಮೂಲಕವೇ ಅಣಿಗೊಳಿಸಿದ್ದಾರೆ.
ಯಾವುದನ್ನೂ ಇವರು ಕೇವಲ ಒಂದು ನೋಟವನ್ನಾಗಿ ಮಾತ್ರ ಬಿಂಬಿಸದೇ ಅದೊಂದು ಲೋಕಜ್ಞಾನದ ಗ್ರಹಿಕೆಯನ್ನಾಗಿ ಮಂಡಿಸುವ ತವಕವನ್ನು ಹೊಂದಿರುವುದು ನಮಗೆ ಮನವರಿಕೆಯಾಗುತ್ತದೆ. ನೇಗಿಲಯೋಗಿ, ದೇವರು ರುಜು ಮಾಡಿದನು, ಹೀರೆ ಹೂ, ಗೊಬ್ಬರ, ಕಲ್ಕಿ, ಸ್ವರ್ಗ ಬಾಗಿಲು ಯಕ್ಷಪ್ರಶ್ನೆ, ದೇವರು ಮತ್ತು ಪುಜಾರಿ ಇತ್ಯಾದಿ ಕವನಗಳನ್ನು ಪರಿಶೀಲಿಸಿ ನೋಡಬಹುದು.
ಜಲಗಾರ, ಸ್ಮಶಾನ ಕುರುಕ್ಷೇತ್ರಂ, ಶೂದ್ರ ತಪಸ್ವಿ, ರಾಮಾಯಣ ದರ್ಶನಂ ಹಾಗೂ ಕಾನೂರು ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಗಳು ಪಠ್ಯಗಳನ್ನೂ ಈ ನೆಲೆಯಲ್ಲಿ ನೋಡುವುದು ಸೂಕ್ತ. ಈ ಎಲ್ಲ ಪಠ್ಯಗಳ ಇಡೀ ಗ್ರಹಿಕೆಯಲ್ಲಿ ಎದ್ದು ಕಾಣುವ ಬಗೆಯೇ ಕನ್ನಡತನದ ಚಹರೆಯಾಗಿದೆ.
ಈ ಚಹರೆ ಏಕಶಿಲಾಘನಾಕೃತಿಯಲ್ಲ ಅದು ಬಹುಳತೆಯ ವಿನ್ಯಾಸ ಎಂಬ ಚಿಂತನೆಯನ್ನೂ ಇಲ್ಲಿ ನೆಲೆಗೊಳಿಸಲಾಗಿದೆ. ನುಡಿಯೊಂದನ್ನು ಏಕಕಾಲಕ್ಕೆ ಸ್ಥಳೀಯತೆ ಮತ್ತು ವಿಶ್ವಾತ್ಮಕತೆಯ ಸಮಾನ ವಿದ್ಯಮಾನವನ್ನಾಗಿ ಬಿಂಬಿಸುವಲ್ಲಿ ಕುವೆಂಪು ಮತ್ತು ಬೇಂದ್ರೆಯವರು ಅತ್ಯಂತ ಪ್ರಮುಖ ಕವಿಗಳಾಗಿದ್ದಾರೆ.
ಕನ್ನಡತನ ಎನ್ನುವುದು ಕೇವಲ ಭಾಷಿಕ ಗುರುತಲ್ಲ ಅದೊಂದು ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಗ್ರಹಿಕೆಗಳ ಮಾದರಿ. ಈ ಗ್ರಹಿಕಾ ಮಾದರಿ ಏಕರೂಪಿಯಾಗಿರದೇ, ಬಹುಳತೆಯಿಂದ ಕೂಡಿರುವ ವಿದ್ಯಮಾನ ಆಗಿರಬೇಕಾಗುತ್ತದೆ. ಈ ಬಹುಳತೆಯ ಚೌಕಟ್ಟಿನೊಳಗೆ ಕನ್ನಡ ನುಡಿಯ ಸಾಮಾಜಿಕ ವಿನ್ಯಾಸವನ್ನು ಅರಿಯುವುದಕ್ಕೆ ಬೇಕಾಗುವ ದಾರಿಗಳನ್ನು ಕುವೆಂಪು ಅವರು ಕಂಡುಕೊಂಡಿರುವುದನ್ನು ಅವರ ಒಟ್ಟು ಬರಹಗಳಲ್ಲಿ ನೋಡುತ್ತೇವೆ.
ನುಡಿ ಬಗೆಗಿನ ಸವಾಲುಗಳನ್ನು ಕುವೆಂಪು ಅವರು ಕೈಗೆತ್ತಿಕೊಂಡಿರುವ ಬಗೆಯೇ ಅತ್ಯಂತ ವಿಶಿಷ್ಟವಾಗಿರುವಂತಹದು. ನುಡಿ ಕುರಿತ ಇವರ ಈ ದಾರ್ಶನಿಕತೆ ಹೊಸ ಸಾಮಾಜಿಕ ವಿನ್ಯಾಸಕ್ಕೆ (ನ್ಯೂ ಸೋಶಿಯಲ್ ಆರ್ಡರ್) ತುಡಿಯುವ ಬಗೆಯಾಗಿದೆ. ಈ ವಿನ್ಯಾಸಗಳು ಸಮಾನತೆ, ಸಹಬಾಳ್ವೆ, ಸಹೋದರತೆ ಹಾಗೂ ಸಾಮಾಜಿಕ-ಸಾಂಸ್ಕೃತಿಕ ನ್ಯಾಯದ ನಿಲುವುಗಳನ್ನೂ ಒಳಗೊಂಡಿರುತ್ತವೆ. ತಳಸಮುದಾಯ ಮತ್ತು ಹೆಣ್ಣು ಮಕ್ಕಳ ಸಾಮಾಜಿಕ ವಿಮೋಚನೆಯ ಹೊಸ ದಾರಿಗಳನ್ನು ಕನ್ನಡತನದ ಹೊಸ ವ್ಯಾಖ್ಯಾಗಳ ಮೂಲಕ ಅಣಿಗೊಳಿಸುವ ದೊಡ್ಡ ಸಾಹಸವನ್ನು ಕುವೆಂಪು ಅವರು ಮಾಡಿದ್ದಾರೆ.
ಇವರಿಗೆ ಕನ್ನಡತನ ಎನ್ನುವುದು ಸಾಮಾಜಿಕ ಒಳಗೊಳ್ಳುವಿಕೆಯ ವಿನ್ಯಾಸವೂ ಆಗಿರುತ್ತದೆ. ಸಮಾಜವೆಂದರೆ ಅದೊಂದು ಬಹುಳತೆಯ ನೋಟಕ್ರಮ ಮತ್ತು ವಿಭಿನ್ನ ಲೋಕದೃಷ್ಟಿಗಳ ಆಗರ ಎಂಬುದನ್ನು ಕುವೆಂಪು ಮನಗಂಡಿದ್ದರು ಹಾಗೂ ಅದನ್ನು ತಮ್ಮ ಸಾಹಿತ್ಯಕ ನಿರೂಪಣೆಗಳ ಮೂಲಕವೂ ಸಾಧಿಸಿ ತೋರಿಸಿದರು. ಈ ಇಡೀ ಪ್ರಕ್ರಿಯೆಯಲ್ಲಿ ಅನುಭವದ ನೆಲೆ ಮತ್ತು ಭಾಷೆಗಳ ನಡುವಣ ಅನುಸಂಧಾನದ ಮಾದರಿಗಳು ಮಹತ್ವವನ್ನು ಪಡೆದುಕೊಳ್ಳುತ್ತವೆ. ಹಾಗಾಗಿಯೇ ಗುತ್ತಿ, ತಿಮ್ಮಿ, ಪೀಂಚಲು, ಜಲಗಾರ, ಶಂಭೂಕ, ಏಕಲವ್ಯ ಇವರ ವ್ಯಕ್ತಿತ್ವದ ಮಾದರಿಗಳು ಎಲ್ಲ ಕಾಲದ ಕನ್ನಡತನದ ಸೂಚಕಗಳಾಗಿ ರೂಪುಗೊಂಡಿವೆ.
ಕನ್ನಡತನದ ಅಭಿವ್ಯಕ್ತಿಯಾಗಿ ಭಾಷೆಯನ್ನು ರೂಪಿಸುವುದೆಂದರೆ ಅದು ಕೇವಲ ಭಾಷಿಕ ರಾಜಕಾರಣದ ನಿಲುವು ಮಾತ್ರವಾಗದೆ, ಸಮೂಹಗಳ ಇಡೀ ಬದುಕಿನ ಜ್ಞಾನಮೀಮಾಂಸೆಯೂ ಮತ್ತು ಚಹರೆಯೂ ಆಗಿ ನಿರ್ಮಾಣಗೊಂಡಿರುತ್ತದೆ. ಅಂದರೆ ಭಾಷೆಯೊಂದು ಕೇವಲ ರಾಜಕೀಯ-ಸಾಮಾಜಿಕ ಪ್ರಜ್ಞೆ ಮಾತ್ರವಾಗದೇ, ಸಮೂಹಗಳ ಬದುಕಿನ ಪ್ರಜ್ಞೆ ಮತ್ತು ಅಸ್ತಿತ್ವದ ಮೂಲನೆಲೆಯಾಗುವ ಪ್ರಕ್ರಿಯೆಯು ಏರ್ಪಡುತ್ತದೆ. ಪರಿಣಾಮವಾಗಿ ಭಾಷೆ ಎನ್ನುವುದು ವಿಮೋಚನೆಯ ನೆಲೆಯಾಗಿ ರೂಪುಗೊಳ್ಳುತ್ತದೆ.
ಕುವೆಂಪು ಅಂಥವರ ಸಾಹಿತ್ಯ ಅಭಿವ್ಯಕ್ತಿಯು ಸಾಮಾಜಿಕ ಮತ್ತು ಸಾಂಸ್ಕೃತಿಕ ನ್ಯಾಯದ ಪ್ರಶ್ನೆಗಳನ್ನು ಮುಂದಿಟ್ಟುಕೊಂಡೇ ಮೈದಾಳಿದೆ. ಹಾಗಾಗಿ ಬ್ರಾಹ್ಮಣ್ಯ ಮತ್ತು ವೈದಿಕ ಆಲೋಚನಾ ಕ್ರಮವನ್ನೇ ತನ್ನ ಒಡಲಲ್ಲಿ ಅಡಗಿಸಿಕೊಂಡಿದ್ದ ಭಾಷಿಕ ವಿನ್ಯಾಸಗಳನ್ನು, ಸಬಾಲ್ಟ್ರನ್ ಸಮೂಹಗಳ ಅಭಿವ್ಯಕ್ತಿಗೆ ಪೂರಕವಾಗಿ ಮರುವಿನ್ಯಾಸಗೊಳಿಸುವ ಒಂದು ದೊಡ್ಡ ಭಾಷಿಕ ತಿರುವು ಕುವೆಂಪು ಅವರ ಸಾಹಿತ್ಯ ಹಾಗೂ ವೈಚಾರಿಕ ಅಭಿವ್ಯಕ್ತಿಯಲ್ಲಿ ಕಾಣುತ್ತೇವೆ.
ಒಂದು ನಿರ್ದಿಷ್ಟ ಸಂಸ್ಕೃತಿ ಇಲ್ಲವೇ ಸಾಮಾಜಿಕ ಅಸ್ಮಿತೆಯ ಸಾಂಕೇತಿಕತೆಯನ್ನು ಪಡೆದುಕೊಂಡಿದ್ದ ಭಾಷೆಯನ್ನು ನಿರಾಕರಿಸುವುದೇ ಒಂದು ಸಾಹಿತ್ಯಕ ಕ್ರಾಂತಿಗೆ ಕಾರಣವಾಗುತ್ತದೆ ಎನ್ನುವುದನ್ನು ಇವರು ನಿರೂಪಿಸಿದ್ದಾರೆ. ಶೂದ್ರ, ದಲಿತ ಇಲ್ಲವೇ ತಳಸಮೂಹಗಳ ಸಾಹಿತ್ಯ ನಿರೂಪಣೆಗಳಿಗೆ ಒಗ್ಗೂವ ಪರಿಭಾಷೆ, ರೂಪಕ, ಪ್ರತಿಮೆಗಳನ್ನು ಹೊಸದಾಗಿ ಸೃಷ್ಟಿಸುವ ಪ್ರತಿಮಾ ವಿಧಾನದ ಸ್ಪಷ್ಟ ಚಹರೆಗಳು ಕುವೆಂಪು ಅವರ ಒಟ್ಟು ಸಾಹಿತ್ಯದಲ್ಲಿ ಮೇಳೈಸಿರುವುದನ್ನು ಯಾರಾದರೂ ಗುರುತಿಸಬಹುದು.
ಅಂದರೆ ಕಾವ್ಯ (ಲಯ), ಕಥೆ-ಕಾದಂಬರಿ (ಕಥನ) ಹಾಗೂ ನಾಟಕ (ಸಂಭಾಷಣೆಗೆ) ಪ್ರಕಾರಗಳಿಗೆ ಹೊಸದಾದ ವೈಚಾರಿಕ ಮೊನಚು ಮತ್ತು ಕಾವ್ಯಮೀಮಾಂಸೆ-ಸೌಂಧರ್ಯ ಮೀಮಾಂಸೆಯನ್ನು ನೆಲೆಗೊಳಿಸುವ ಇರಾದೆಯಿಂದ ಕುವೆಂಪು ಹೊಸ ನುಡಿಗಟ್ಟನ್ನು ಕಟ್ಟಿಕೊಂಡರು. ಇಡೀ ಈ ವಿನ್ಯಾಸಕ್ಕೆ ಒಂದು ತಾತ್ವಿಕ ಪಾತಳಿಯಾಗಿ ಭಾಷೆ ಕುವೆಂಪು ಅವರ ಗ್ರಹಿಕೆ ಮತ್ತು ಅಭಿವ್ಯಕ್ತಿಯಲ್ಲಿ ಕೆಲಸ ಮಾಡಿದೆ.
ಕುವೆಂಪು ಅವರಿಗೆ ಅಭಿವ್ಯಕ್ತಿ ಎನ್ನುವುದು ಕೇವಲ ರಸಾನುಭವದ ವಿದ್ಯಮಾನವಾಗದೇ, ಕ್ರಿಯೆ, ತತ್ವ, ಪ್ರತಿಭಟನೆಯ ಕುರುಹುಗಳನ್ನು ಸೂಚಿಸುವುದೇ ಆಗಿರುತ್ತದೆ. ಮುಂದೆ ದಲಿತ ಬಂಡಾಯದ ಸನ್ನಿವೇಶದಲ್ಲಿ ಚರ್ಚಿಸಿದಂತಹ ಲಿಟರೇಚರ್ ಆಫ್ ಆಕ್ಸನ್ ಹಾಗೂ ಲಿಟರೇಚರ್ ಆಫ್ ಪ್ರೊಟೆಸ್ಟ್ ಎಂಬಂತಹ ಅಭಿವ್ಯಕ್ತಿಯ ಮಾದರಿಗಳು ಅದಾಗಲೇ ಕುವೆಂಪು ಅವರಲ್ಲಿ ಅವತರಿಸಿಬಿಟ್ಟಿದ್ದವು.
ಹಾಗಾಗಿಯೇ ಕುವೆಂಪು ಅವರಿಗೆ ಅಭಿವ್ಯಕ್ತಿ ಎಂಬುದು ಮೂಲಭೂತವಾಗಿ ಸಾಮಾಜಿ-ಸಾಂಸ್ಕೃತಿಕ ತಾರತಮ್ಯಗಳನ್ನೂ ಹಾಗೂ ಅಧಿಕಾರ ಸಂಬಂಧದ ವಿನ್ಯಾಸಗಳನ್ನು ಪ್ರಕಟಿಸುವ ಕುರುಹುವಾಗಿ ಪರಿಣಮಿಸಿತ್ತು. ಮಾತೆಂಬುದು ಜೋತೀರ್ಲಿಂಗ ಎನ್ನುವ ಈ ಹೇಳಿಕೆ ಎನ್ಲೈಟನ್ಮೆಂಟಿನ ರೂಪಕವಾಗಿದೆ (ಬೆಳಕು). ಈ ಗ್ರಹಿಕೆ ಕುವೆಂಪು ಅವರಲ್ಲಿ ಅತ್ಯಂತ ನಿಚ್ಚಳವಾಗಿಯೇ ಒಡಮೂಡಿದೆ.
ಮಾತೆಂಬುದೇ ವಿಮೋಚನೆಯ ಹಾದಿ ಎಂಬುದನ್ನು ಬಲವಾಗಿ ನಂಬಿದ್ದ ಕುವೆಂಪು ಅವರು ಭಾಷೆಯ ಗ್ರಹಿಕೆ (ಅಂತಸ್ಥನೆಲೆ) ಮತ್ತು ಅಭಿವ್ಯಕ್ತಿ (ಅಸ್ಮಿತೆಯ ನೆಲೆ) ಎಂಬೀ ಎರಡೂ ಆಯಾಮಗಳನ್ನು ಬಹಳ ಖಚಿತವಾಗಿ ತಮ್ಮ ಸಾಹಿತ್ಯದಲ್ಲಿ ನೆಲೆಗೊಳಿಸಿದ್ದರು. ಇವರ ಅಭಿವ್ಯಕ್ತಿಯ ಮಾದರಿಗಳು ಪ್ರಕಟಗೊಂಡಿರುವುದು ಪ್ರತಿಮೆ, ರೂಪಕ ಹಾಗೂ ಸಾಂಕೇತಿಕವಾದದ್ದು ಎಂದು ಮೇಲ್ನೋಟದಲ್ಲಿ ಗುರುತಿಸಿದರೂ, ಈ ವಿನ್ಯಾಸವು ಈಗಾಗಲೇ ಹೇಳಿದಂತೆ ಪ್ರತಿಮಾ ವಿಧಾನದ ಮಾದರಿಯಾಗಿದೆ.
ಈ ಮಾದರಿಯನ್ನು ಮೆಟಾನಮಿಕ್-ಮೆಟಾಫರಿಕ್ (ರೋಮನ್ ಯಾಕೋಬ್ಸನ್ ಅವರ ಪರಿಕಲ್ಪನೆಗಳು) ಮಾದರಿಗಳ ಸಹಯೋಗದಿಂದ ನೆಲೆಗೊಂಡ ದೃಷ್ಟಿಕೋನವನ್ನಾಗಿ ಇವರ ಅಭಿವ್ಯಕ್ತಿಯಲ್ಲಿ ನೋಡಬಹುದು. ಈ ಬಗೆಯ ಸಂಕಥನವನ್ನು ಕಟ್ಟುವ ಪ್ರಕ್ರಿಯೆಯು ಅತ್ಯಂತ ಸಂಕೀರ್ಣವಾದದ್ದು ಎಂಬುದು ಇಲ್ಲಿ ಗೋಚರಿಸುತ್ತದೆ.
“ಕಥೆ ನಿನ್ನದಾಡೊಡಂ..ಕೃತಿ ನನ್ನ ದರ್ಶನಂ ಮೂರ್ತಿವೆತ್ತೊಂದಮರ ಕೃತಿಯೆತ್ತಿ” ಹಾಗೂ “ಇತಿಹಾಸಮಲ್ತು, ಕಥೆಯಲ್ತು ಕಥೆ ತಾಂ ನಿಮಿತ್ತಮಾತ್ರಂ” ಎಂಬೀ ಕುವೆಂಪುವರ ಹೇಳಿಕೆಗಳು ಅವರ ಸಾಹಿತ್ಯದ ದಾರ್ಶನಿಕತೆಯನ್ನು ವಿವರಿಸುತ್ತವೆ. ಈ ದಾರ್ಶನಿಕತೆಯ ಆಕೃತಿಯನ್ನು ನಿರ್ಮಿಸಲು ಹೊಸ ಭಾಷೆ ಮತ್ತು ಪರಿಭಾಷೆಯನ್ನು ಕುವೆಂಪು ಅವರು ಅತ್ಯಂತ ಪರಿಣಾಮಕಾರಿಯಾಗಿ ರೂಪಿಸಿ ಬಳಸಿಕೊಂಡರು.
ಕುವೆಂಪು ಅವರೇ ಹೇಳಿಕೊಂಡಂತೆ, ದರ್ಶನ ಮುಖ್ಯವೇ ಹೊರತು ಕತೆಯಲ್ಲ. ಕಥೆ, ಇತಿಹಾಸ, ಬಹಿರ್ಘಟನೆ ಇವೆಲ್ಲ ಜಡವಾದರೆ ದರ್ಶನವೊಂದೇ ಚೈತನ್ಯ. ಜಡವನ್ನು ಚೈತನ್ಯವನ್ನಾಗಿ ಮಾರ್ಪಡಿಸುವ ಈ ಹಂಬಲದಲ್ಲಿ ಭಾಷೆಯನ್ನು ಒಂದು ಪ್ರಮುಖ ಅಸ್ತ್ರವನ್ನಾಗಿಯೇ ಇವರು ಬಳಸಿಕೊಂಡರು ಎನ್ನುವುದು ನನ್ನ ಅಭಿಮತ.
ಅಂದರೆ ಕುವೆಂಪು ಅವರ ಕ್ರಿಟಿಕಲ್ ಡಿಸ್ಕೋರ್ಸಗಳು ಅಂಚಿನ ವ್ಯಕ್ತಿ/ಸಮೂಹಗಳ ಅಸ್ತಿತ್ವ, ಅಸ್ಮಿತೆ, ಸಬಲೀಕರಣವನ್ನು ಕುರಿತು ನಿಗಾವಹಿಸುತ್ತವೆ. ವಸಾಹತುಶಾಹಿ ಹಾಗೂ ವೈದಿಕಶಾಹಿ ಪ್ರಭಾವಕ್ಕೆ ಒಳಗಾಗಿದ್ದ ಪ್ರತಿಯೊಂದು ಸಮುದಾಯವು ಆಯಾ ಪ್ರಭಾವದಿಂದ ಹೊರಬರದೇ, ಅದು ನೆಲೆಗೊಳಿಸಿರುವ ಅಧಿಕಾರ ಸಂರಚನೆಗಳಿಂದ ಪ್ರಭಾವಿತವಾಗಿರುತ್ತದೆ. ಆದ್ದರಿಂದ ವಸಾಹತುಶಾಹಿ/ವೈದಿಕಶಾಹಿಗೆ ಒಳಗಾಗಿದ್ದ ಸಮೂಹಗಳು ಕಿಳರಿಮೆ ಹಾಗೂ ಪರಾವಲಂಬನೆಯಿಂದ ಬಳಲುತ್ತಿರುತ್ತವೆ.
ಹಾಗಾಗಿಯೇ ವಸಾಹತುಶಾಹಿ ಸಂದರ್ಭದಲ್ಲಿ ನೆಲೆಗೊಂಡಿದ್ದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ರಚನೆಗಳು ಇವತ್ತು ವಸಾಹತೋತ್ತರ ಸನ್ನಿವೇಶದಲ್ಲಿಯೂ ನಮ್ಮ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಬದುಕುಗಳನ್ನು ಸೋಂಕಿಸಿರುತ್ತವೆ. ಏಕೆಂದರೆ, ವಸಾಹತುಶಾಹಿ ಅಥವಾ ವೈದಿಕಶಾಹಿ ವಿರೋಧಿ ರಾಷ್ಟ್ರೀಯತೆಯ ಚಹರೆಗಳು ಕೂಡ ಬೂರ್ಜ್ವಾ ಲಕ್ಷಣಗಳನ್ನು ಮೈಗೂಡಿಸಿಕೊಳ್ಳುವ ಹಾಗೂ ಆ ಮುಖೇನ ವಸಾಹತುಶಾಹಿ ಸನ್ನಿವೇಶದಲ್ಲಿ ಅತ್ಯಂತ ಪ್ರಬಲವಾಗಿದ್ದ ಸಾಮಾಜಿಕ ರಾಜಕೀಯ ಅಸಮಾನತೆಗಳು ಮರುಹುಟ್ಟು ಪಡೆಯುತ್ತವೆ ಎಂಬುದನ್ನೂ ಇಲ್ಲಿ ಕಾಣಬಹುದು.
ಈ ಒಟ್ಟು ಬದುಕಿನ ಸಂಕೀರ್ಣತೆಯನ್ನು ಬಿಡಿಸಿ ನೋಡುವ ಒಂದು ತಾತ್ವಿಕ ಚೌಕಟ್ಟನ್ನೊಂದು ಕುವೆಂಪು ಅವರು ಹೇಗೆ ರೂಪಿಸಿದ್ದಾರೆ ಅನ್ನುವುದನ್ನು ಅವರ ಇಡೀ ಅಭಿವ್ಯಕ್ತಿಯ ಮೂಲಕ ನಾವು ಅರಿಯಬಹುದಾಗಿದೆ. ಬದುಕಿನ ಯಾವ ಆಯಾಮವನ್ನು ಸಾಹಿತ್ಯ ಕೃತಿಯ ಮೂಲಕ ಪ್ರಚುರಪಡಿಸಬೇಕು ಎನ್ನುವ ಸಾಂಸ್ಕೃತಿಕ ರಾಜಕಾರಣದ ಸ್ಪಷ್ಟ ಕಲ್ಪನೆ ಕುವೆಂಪು ಅವರಿಗಿತ್ತು. ಸೃಜನಶೀಲ ಅಭಿವ್ಯಕ್ತಿಯ ಮೂಲಕವೇ ಸಮೂಹಗಳ ಎಲ್ಲ ಕಾಲದ ಬದುಕಿಗೂ ಅವಶ್ಯವಾಗುವ ವೈಚಾರಿಕ ಪಾತಳಿಯನ್ನಾಗಿ ಪರಿವರ್ತಿಸಿದ ದಾರ್ಶನಿಕ ಕುವೆಂಪು.
ಈ ಸಾಹಿತ್ಯಕ ಹಾಗೂ ವೈಚಾರಿಕ ನಿರ್ವಹಣೆಯನ್ನು ಭಾಷಿಕ ನಿಲುವುಗಳಿಂದ ಆಗು ಮಾಡಿರುವುದು ಅತ್ಯಂತ ಮಹತ್ವದ ತಿರುವು ಎಂಬುದನ್ನು ನಾವ್ಯಾರೂ ಅಲ್ಲಗಳೆಯುವಂತಿಲ್ಲ. ಅಂದರೆ ಹೊಸ ಜ್ಞಾನ ಸೃಷ್ಟಿಯೆನ್ನುವುದು ಕೇವಲ ಅನುಭವದ ಕ್ರೂಢೀಕರಣವಲ್ಲ ಬದಲಾಗಿ ಅದನ್ನು ಹೊಸ ನುಡಿಗಟ್ಟಿನ ಮೂಲಕ ಕಟ್ಟಿಕೊಡುವ ಬಗೆಯೇ ಮುಖ್ಯ. ಈ ಕೆಲಸವನ್ನು ಕುವೆಂಪು ಅತ್ಯಂತ ಸಮರ್ಥವಾಗಿ ಮಾಡಿರುತ್ತಾರೆ. ಕನ್ನಡ, ಕರ್ನಾಟಕ, ಕನ್ನಡಿಗರು ಎನ್ನುವ ಸಮೀಕರಣದ ಹಿಂದಿನ ಅತೀ ಸರಳೀಕೃತವಾದ ಗ್ರಹಿಕೆಯನ್ನು ಬುಡಮೇಲು ಮಾಡಿದ್ದಾರೆ.
ಈ ದೃಷ್ಟಿಯಿಂದಲೇ ಭಾಷೆ ಎನ್ನುವುದು ವಿಮೋಚನೆಯ ಅಸ್ತ್ರ ಎಂದು ಹೇಳಲಾಗುತ್ತದೆ. ಭಾಷೆ ಮತ್ತು ಭಾಷಿಕರ ಮನಸ್ಥಿತಿಯನ್ನು ಗೋಡೆಗಳ ಸ್ವರೂಪದಲ್ಲಿ ಕಲ್ಪಸಿಕೊಂಡಿರುವ ಸನ್ನಿವೇಶದಲ್ಲಿಯೇ ಅನಿಕೇತನದ ಕಲ್ಪನೆಯನ್ನು ಇವರು ರೂಪಿಸಿದರು. ಅಷ್ಟೆಯಲ್ಲದೇ ಲೌಕಿಕ ಮತ್ತು ಅಲೌಕಿಕ ಪರಿಕಲ್ಪನೆಗಳ ಮೂಲಕ ಬದುಕಿನ ಸಂವೇದನೆಯಲ್ಲಿ ಅಡಗಿಸಿದ್ದ ಡೈಕಾಟಮಿಯನ್ನು ನಿರಾಕರಿಸಿ, ಅವೆರಡನ್ನೂ ಮೇಳೈಸಿಕೊಂಡಿರುವುದೇ ಬದುಕು ಅನ್ನುವ ತಾತ್ವಿಕತೆಯನ್ನು ಇವರ ಸಾಹಿತ್ಯದಲ್ಲಿ ಕಾಣುತ್ತೇವೆ. ಅದಕ್ಕಾಗಿಯೇ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಪೀಠಿಕೆಯಲ್ಲಿ ಹೇಳಿದ “ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ…” ಎಂಬೀ ಮಾತು ಬದುಕಿನ ದೊಡ್ಡ ದರ್ಶನವನ್ನು ಕೊಡುವ ಕೈವಲ್ಯವಾಗಿದೆ. ಆಲೋಚನೆ ಮತ್ತು ಭಾಷೆಗಳ ನಡುವಣ ಸಂಬಂಧದ ವಿಭಿನ್ನ ವಿನ್ಯಾಸಗಳು ಇಲ್ಲಿ ಅತ್ಯಂತ ನಿಚ್ಚಳವಾಗಿಯೇ ಕಾಣುತ್ತವೆ.
ಕಾಲದ ಬಿಕ್ಕಟ್ಟಿಗೆ ಕಾರಣವಾಗಿರುವ ಸಾಮಾಜಿಕ, ಧಾರ್ಮಿಕ, ರಾಜಕೀಯ ವಿದ್ಯಮಾನಗಳು ಕುವೆಂಪು ಅವರ ಸಾಹಿತ್ಯದಲ್ಲಿ ಅಂತರ್ಗತವಾಗಿವೆ ಎನ್ನುವುದನ್ನು ಈ ಭಾಷಿಕ ವಿನ್ಯಾಸಗಳು ಪ್ರತಿಪಾದಿಸುತ್ತವೆ.
ಸಂವೇದನೆ ಮತ್ತು ಅಭಿವ್ಯಕ್ತಿಯ ರೂಪ ಇವುಗಳ ನಡುವೆ ಇರುವ ಭಾಷೆಯ ಪಾತ್ರ ಹೇಗೆ ಬದಲಾಗಬೇಕು ಎನ್ನುವುದನ್ನು ಕುವೆಂಪು ಅವರಲ್ಲಿ ನೋಡಬಹುದು. ಅಂದರೆ ಭಾಷೆಯ ಜವಾಬ್ದಾರಿ, ಸೂಕ್ಷ್ಮತೆ ಹಾಗೂ ಬದ್ಧತೆ ಏನು? ಅದನ್ನು ನಾವು ರೂಪಿಸುವ ಬಗೆ ಯಾವುದು? ಸಮೂಹಗಳ ಬದುಕು ನೆಲೆಗೊಳ್ಳಲು ಭಾಷೆಯ ಪಾತ್ರ ಎಂತಹದು? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರಗಳು ಕುವೆಂಪು ಅವರಲ್ಲಿ ದೊರೆಯುತ್ತವೆ. ಈ ತಾತ್ವಿಕತೆಯನ್ನು ಅರಿಯಲು ಭಾಷೆ ಮತ್ತು ಸಾಹಿತ್ಯಗಳ ನಡುವಣ ಸಂಬಂಧವನ್ನು ಅರಿಯುವುದು ಅವಶ್ಯ. ಸಾಹಿತ್ಯ ಪಠ್ಯ ಸ್ವಭಾವತ ವಿಶಿಷ್ಟವಾಗಿರುವಂತಹದು.
ಇಲ್ಲಿ ಸಾಹಿತ್ಯ ಮತ್ತು ಭಾಷೆಗಳ ನಡುವಣ ವಿಶಿಷ್ಟ ಸಂಬಂಧ ಎಂತಹದು ಎನ್ನುವುದನ್ನು ಅರಿಯುವುದಕ್ಕೆ ಬೇಕಾದ ಇಲ್ಲವೇ ಪರಿಭಾವಿಸುವುದಕ್ಕೆ ಬೇಕಾದ ಅವಕಾಶವೂ ವ್ಯಕ್ತವಾಗುತ್ತದೆ. ಅಂದರೆ ಸಾಹಿತ್ಯದ ಮೂಲಕ ಏರ್ಪಡುವ ಯಾವುದೇ ಬಗೆಯ ಅನುಭವ ಹಾಗೂ ಅರಿವು ಇಲ್ಲವೇ ತಿಳಿವು ನಮಗೆ ಒಂದು ತಾತ್ವಿಕ ವಿನ್ಯಾಸವಾಗಿ ಭಾಷೆಯ ಮೂಲಕವೇ ಲಭ್ಯವಾಗುತ್ತವೆ. ಇಲ್ಲಿ ಭಾಷೆ ಅತ್ಯಂತ ಪ್ರಾಥಮಿಕ ವಿದ್ಯಮಾನವಾಗಿದೆ. ತಿಳಿವೊಂದು ಮೈದಾಳುವ ಸನ್ನಿವೇಶ ಹಾಗೂ ಸಂಬಂಧಗಳು ವಿಭಿನ್ನ ನೆಲೆಯಲ್ಲಿ ಅಸ್ತಿತ್ವದಲ್ಲಿರುತ್ತವೆ.
ಅಂದರೆ ಭಾಷಾಶಾಸ್ತ್ರ ಮತ್ತು ಇತರ ಜ್ಞಾನಶಿಸ್ತುಗಳ ನಡುವಣ ಸಂಬಂಧದಲ್ಲಿ ಈ ವಿನ್ಯಾಸವನ್ನು ಮನಗಾಣಬಹುದು. ಚರಿತ್ರೆ, ಸಮಾಜಶಾಸ್ತ್ರ, ಮಾನವಶಾಸ್ತ್ರ ಮೊದಲಾದ ಈ ಎಲ್ಲ ವಲಯಗಳಲ್ಲಿ ಮೈದಾಳುವ ತಿಳಿವು ಭಾಷೆಯನ್ನೇ ನೆಲೆಯಾಗಿಸಿಕೊಂಡಿರುತ್ತದೆ. ಏಕೆಂದರೆ, ಭಾಷಾಕೇಂದ್ರಿತ ವಾಸ್ತವಗಳು, ಸನ್ನಿವೇಶಗಳು, ನಿರೂಪಣೆ ಮುಂತಾದವುಗಳನ್ನು ಪರಿಶೀಲಿಸುವ ಇಲ್ಲವೇ ವಿಶ್ಲೇಷಿಸುವ ಮೂಲಕವೇ ತಿಳಿವಿನ ಸಾಧ್ಯತೆಯನ್ನು ನಿಚ್ಚಳವಾಗಿ ಅರಿಯಬಹುದು.
ಆದರೆ ದಿನನಿತ್ಯದ ಮಾತುಕತೆ, ಬದುಕಿನ ವ್ಯವಹಾರಗಳು, ಸಾಹಿತ್ಯ ಇಲ್ಲವೇ ಇನ್ನ್ಯಾವುದೇ ಜ್ಞಾನಶಿಸ್ತಿನಷ್ಟು ಸಂಕೀರ್ಣವಾಗಿರುವುದಿಲ್ಲ. ಅಂದರೆ ಯಾವುದೇ ಸಂಕಥನ ಓದು ಮತ್ತು ಭಾಷಾಶಾಸ್ತ್ರಗಳ ನಡುವೆ ಏರ್ಪಡುವಷ್ಟು ಸಂಕೀರ್ಣತೆ, ನಮ್ಮ ದಿನದ ಮಾತುಕತೆಗಳು ಗಹನತೆಯನ್ನು ಪಡೆದುಕೊಳ್ಳದೇ, ಸಹಜಸ್ಥಿತಿಯಲ್ಲಿಯೇ ತಮ್ಮ ಗುರಿ ಉದ್ದೇಶಗಳನ್ನು ಪೊರೈಸುತ್ತವೆ.
ಬದುಕಿನ ಇಂತಹ ಸಹಜ ಮಾತುಕತೆ, ಅನುಭವ ಅಥವಾ ನಿರೂಪಣೆಗಳನ್ನು ಲಿಂಗ್ವಿಸ್ಟಿಕ್ ಪ್ರ್ಯಾಗ್ಮಾಟಿಸಂ ಮತ್ತು ಸಂಕಥನ ವಿಶ್ಲೇಷಣೆಯ ಚೌಕಟ್ಟಿನಲ್ಲಿಟ್ಟು ನೋಡಿದರೆ, ಸಾಹಿತ್ಯ ಪಠ್ಯಗಳಲ್ಲಿರುವ ನಿರೂಪಣೆಗಳಷ್ಟೇ, ಇವು ಕೂಡ ಗಹನವಾಗಿ/ಗಂಭೀರವಾಗಿ ಇರುತ್ತವೆ ಎನ್ನುವ ವಾಸ್ತವವನ್ನು ಮನಗಾಣುತ್ತೇವೆ. ಬದುಕಿನ ದೈನಂದಿನ ದಂದುಗವೇ ಒಂದು ತಾತ್ವಿಕ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಪರಿಪ್ರೇಕ್ಷ್ಯದಲ್ಲಿ ನೆಲೆಗೊಂಡು ಪ್ರಕಟಗೊಳ್ಳುತ್ತದೆ. ಆದ್ದರಿಂದ ಸಾಹಿತ್ಯ ಪಠ್ಯಗಳಲ್ಲಿ ಅಡಕವಾಗಿರುವ ಅನುಭವ ವಿಶೇಷವಾಗಿ ನಮ್ಮ ಬದುಕಿನ ದಾರ್ಶನಿಕತೆಯಾಗಿ ಕಾಣುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243