ನೆಲದನಿ
ನೆಲನುಡಿಗೆ ದನಿಯಾದ ಡಾ. ಎಂ.ಜಿ ಈಶ್ವರಪ್ಪ ಅವರ ಸಾಹಿತ್ಯ ಮತ್ತು ಕಲಾ ಬದುಕಿನ ಸುತ್ತ
ಭಾರತೀಯ ಸಂಸ್ಕøತಿಯು ನೆಲಮೂಲ ಬದುಕಿನೊಂದಿಗೆ ಅನುಸಂಧಾನಗೊಂಡು, ನೆಲದ ಸೊಗಡು ಮತ್ತು ಕಸುವನ್ನು ತನ್ನ ಜೀವಾಳವಾಗಿಸಿಕೊಂಡಿದೆ. ಇಂತಹ ನೆಲಮೂಲ ಸಂಸ್ಕøತಿಯ ಜೀವಾಳದಂತಿರುವ ಜನಪದ ಸಾಹಿತ್ಯಕ್ಕೆ ಕಸುವು ನೀಡಿ, ತಮ್ಮ ಬದುಕಿನ ಭಾಗವೆಂಬಂತೆ ಕಾಪಾಡಿಕೊಂಡು ಬಂದವರು ಈ ನಾಡಿನ ಮೂಲನಿವಾಸಿಗಳು. ಜನಪದ ಸಾಹಿತ್ಯವು ಸಾಮಾನ್ಯ ಜನತೆಯ ಬದುಕಿನಲ್ಲಿ ಮಹತ್ತರವಾದ ಸ್ಥಾನಮಾನವನ್ನು ಪಡೆದುಕೊಂಡಿದೆ. ನಮ್ಮ ಜನಪದರು ಅಕ್ಷರವಂಚಿತರಾದರೂ ಶಿಕ್ಷಿತವರ್ಗದ ಕಟ್ಟುಪಾಡುಗಳಿಗೆ ಪ್ರತಿರೋಧ ಒಡ್ಡುವ ಮೂಲಕವಾಗಿ ತಮ್ಮದೆ ಆದ ಪರ್ಯಾಯ ಬದುಕನ್ನು ರೂಪಿಸಿಕೊಂಡು, ತಮ್ಮ ವಿಶ್ವಭ್ರಾತೃತ್ವದ ಮೌಲ್ಯಗಳನ್ನು ಜನ ಸಾಹಿತ್ಯದ ವಿವಿಧ ಪ್ರಕಾರಗಳ ಮೂಲಕವಾಗಿ ಪಸರಿಸಿಕೊಂಡು ಬಂದಿದ್ದಾರೆ. ಇಂದಿನ ಜಾಗತೀಕರಣ, ಔದ್ಯೋಗಿಕರಣ ಹಾಗೂ ಉದಾರೀಕರಣದಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಎಲ್ಲಾ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಇಲ್ಲಿನ ಜನ ಸಾಹಿತ್ಯದಲ್ಲಿದೆ. ಇಂತಹ ಜನ ಅಥವಾ ಜನಪದ ಸಾಹಿತ್ಯವನ್ನು ಯಾವುದೇ ಅಕಾಡೆಮಿಕ್ ಶಿಸ್ತಿಗೆ ಒಳಪಡದೆ ನಮ್ಮ ಜನಪದರು ಕಾಪಾಡಿಕೊಂಡು ಬಂದಿದ್ದಾರೆ. ಆದರೆ ಇತ್ತೀಚಿನ ದಿನಮಾನಗಳಲ್ಲಿ ಶಿಷ್ಟ ಸಾಹಿತ್ಯದ ಎದುರು ಸ್ಪರ್ಧೆಗೊಳ್ಳದೆ ಮೂಲೆಗುಂಪಾಗಿದ್ದ ಜನಪದ ಸಾಹಿತ್ಯವನ್ನು ಸಮಾಜದ ಮುನ್ನೆಲೆಗೆ ತಂದು, ಅದರ ಆಳ ಅಗಲ ಹಾಗೂ ಕಸುವನ್ನು ಗುರುತಿಸುವ ನೆಲೆಯಲ್ಲಿ ನಮ್ಮ ನೆಲದ ವಿದ್ವಾಂಸರು ಅವಿರತ ಶ್ರಮಿಸಿದ್ದಾರೆ.
ಇಂತಹ ಅಥವಾ ಜನ ಸಾಹಿತ್ಯಕ್ಕೆ ದನಿಯಾದವರಲ್ಲಿ ಡಾ.ಎಂ.ಜಿ ಈಶ್ವರಪ್ಪನವರು ಒಬ್ಬರಾಗಿದ್ದಾರೆ.
ಶೀಯುತ ಎಂ.ಜಿ ಈಶ್ವರಪ್ಪನವರು ಶಿವಮೊಗ್ಗ ಜಿಲ್ಲೆಯ ಹಾಡೊನಹಳ್ಳಿ ಗ್ರಾಮದಲ್ಲಿ ಶ್ರೀಮತಿ ಗಿರಿಜಮ್ಮ ಶ್ರೀ ರುದ್ರಪ್ಪ ದಂಪತಿಗಳ ಪುತ್ರರಾಗಿ ಜನಿಸಿದರು. ಶ್ರೀಯುತರ ತಂದೆಯವರಾದ ರುದ್ರಪ್ಪನವರು ಕೃಷಿ ಮೂಲ ಕುಟುಂಬದವರಾಗಿದ್ದು, ಇವರ ಪ್ರೇರಣೆಯು ಎಂ.ಜಿ ಈಶ್ವರಪ್ಪನವರ ಮೇಲೆ ಸಾಕಷ್ಟು ಪ್ರಭಾವ ಬೀರಿತು. ಬಾಲ್ಯದ ದಿನಗಳಿಂದಲೂ ಕೃಷಿ ಚಟುವಟಿಕೆಗಳನ್ನು ಹತ್ತಿರದಿಂದ ನೋಡಿದ ಇವರು, ಈ ಕೃಷಿ ಕಾರ್ಯಗಳಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿದ್ದರು. ಶಾಲಾ ಶಿಕ್ಷಣದಲ್ಲಿನ ಆಸಕ್ತಿಯೊಂದಿಗೆ, ಬಿಡುವಿನ ವೇಳೆಯಲ್ಲಿ ಕೃಷಿಯ ವಿವಿಧ ಕಾರ್ಯಗಳಾದ ಕುಂಟೆ ಹೊಡೆಯುವ, ಜಾನುವಾರುಗಳನ್ನು ಸಾಕುವ ಕಾಯಕದಲ್ಲಿ ತಲ್ಲಿನರಾಗಿರುತ್ತಿದ್ದರು. ಇವರು ಪದವಿ ಶಿಕ್ಷಣವನ್ನು ವಿಜ್ಞಾನ ವಿಷಯದಲ್ಲಿ ಅಧ್ಯಯನ ಮಾಡಿ, ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಪೂರೈಸಿದರು. ಈ ಅವಧಿಯಲ್ಲಿ ಇವರಿಗೆ ಕರಗತವಾಗಿದ್ದ ಜಾನಪದ ಹಾಗೂ ಕೃಷಿ ಜ್ಞಾನವನ್ನು ಸೂಕ್ಷ್ಮವಾಗಿ ಗಮನಿಸಿದ ಹೆಸರಾಂತ ಜಾನಪದ ವಿದ್ವಾಂಸರಾದ ಜಿ.ಶಂ.ಪರಮಶಿವಯ್ಯನವರು ‘ವ್ಯವಸಾಯ ಜಾನಪದ’ ಎಂಬ ವಿಷಯದ ಕುರಿತಾಗಿ ಪಿಎಚ್.ಡಿ ಅಧ್ಯಯನ ಕೈಗೊಳ್ಳುವಂತೆ ಮಾರ್ಗದರ್ಶನ ನೀಡಿದರು. ಇವರ ಒತ್ತಾಸೆ ಹಾಗೂ ತನ್ನಲ್ಲಿ ಅಂತರ್ಗತವಾಗಿದ್ದ ಕೃಷಿ ಮತ್ತು ಜಾನಪದ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಅಧ್ಯಯನ ನಡೆಸಿದರು. ಜಾನಪದ ಲೋಕದ ಕೃಷಿಯ ಮಹತ್ತು ಹಾಗೂ ಅದರ ಜೀವಪರ ಧೋರಣೆಗಳನ್ನು ಗುರುತಿಸುವ ಮೂಲಕ ಜಾನಪದ ಕ್ಷೇತ್ರಕ್ಕೆ ತಮ್ಮದೆ ಆದ ಕೊಡುಗೆಯನ್ನು ನೀಡುವ ಮುಖಾಂತರ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದರು. ಶ್ರೀಯುತ ಎಂ.ಜಿ ಈಶ್ವರಪ್ಪನವರಿಗೆ ಬಾಲ್ಯದ ದಿನಗಳಿಂದಲೂ ಕೃಷಿ ಹಾಗೂ ಜಾನಪದ ಕ್ಷೇತ್ರದ ಕುರಿತು ಹೆಚ್ಚು ಪ್ರೇರಣೆಯಾದವರು ಇವರ ದೊಡ್ಡಪ್ಪನವರಾದ ಶ್ರೀ ಮಲ್ಲಪ್ಪನವರು. ಜಾನಪದದ ಗಣಿಯಂತಿದ್ದ ಇವರು ದೇಶಿ ಸೊಗಡನ್ನು ಮೈಗೂಡಿಸಿಕೊಂಡು, ತಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ಸನ್ನಿವೇಶಗಳ ಕುರಿತು ಹಲವಾರು ಕಥೆ, ಪುರಾಣ ಹಾಗೂ ಐತಿಹ್ಯಗಳನ್ನು ತಮ್ಮಲ್ಲಿ ಕರಗತ ಮಾಡಿಕೊಂಡಿದ್ದರು. ಇವರಲ್ಲಿ ಕರಗತವಾದ ಈ ಕಲೆಯನ್ನು ಒಂದೊಂದಾಗಿಯೇ ಸಂದರ್ಭಾನುಸಾರವಾಗಿ ಇವರ ಮುಂದೆ ಪ್ರಸ್ತಾಪಿಸುತ್ತಿದ್ದರು. ಬಾಲ್ಯದ ದಿನಗಳಿಂದಲೂ ತಮ್ಮ ದೊಡ್ಡಪ್ಪನವರಿಂದ ಕಲಿತ ಈ ಪಾಠವು ಮುಂದೆ ಇವರ ಜಾನಪದ ಅಧ್ಯಯನದ ಸಂದರ್ಭದಲ್ಲಿ ಹೆಚ್ಚು ಆಪ್ತವಾಗತೊಡಗಿತು. ಈ ಎಲ್ಲಾ ಪಾಠಗಳು ಮುಂದೊಂದು ದಿನ ಜಾನಪದ ಕ್ಷೇತ್ರದ ವಿದ್ವತ್ತಿಗೆ ದಾರಿ ದೀಪವಾದವು. ಹೀಗಾಗಿ ಶ್ರೀಯುತ ಎಂ.ಜಿಯವರ ಜಾನಪದ ವಿದ್ವತ್ತಿಗೆ ಅವರ ದೊಡ್ಡಪ್ಪನವರು ಸಾಕಷ್ಟು ಪ್ರೇರಣೆಯಾಗಿ ನಿಂತಿದ್ದಾರೆ.
ಜಾನಪದ ವಿದ್ವತ್ತ್ ವಲಯದಲ್ಲಿ ಶ್ರೀಯುತ ಎಂ.ಜಿ ಈಶ್ವರಪ್ಪನವರದು ಬಹುದೊಡ್ಡ ಹೆಸರು. ಬಹುಮುಖಿ ಪ್ರತಿಭೆಯುಳ್ಳ ಇವರು ತಮ್ಮ ಅಧ್ಯಯನ ವಿಷಯಕ್ಕೆ ಮಾತ್ರ ಸೀಮಿತಗೊಳ್ಳದೆ, ಸಾಹಿತ್ಯ ವಲಯದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಒಬ್ಬ ಅಧ್ಯಯನಕಾರ, ವಿದ್ವಾಂಸ, ಒಬ್ಬ ಚಿಂತಕ ಕೇವಲ ಅಧ್ಯಯನದಲ್ಲಿ ಕಾರ್ಯಪ್ರವೃತ್ತವಾದಾಗ ಅಲ್ಲಿನ ಆಳ ಅಗಲ ತಿಳಿಯುವುದಿಲ್ಲ. ಅಧ್ಯಯನದ ಜೊತೆ ಜೊತೆಯಲ್ಲಿ ತಾನು ಅಧ್ಯಯನ ಮಾಡುವ ವಿಷಯದ ಒಂದು ಭಾಗವಾಗಿ ಬೆರೆತಾಗ, ತನ್ನನ್ನು ಆ ಕ್ಷೇತ್ರದ ಪ್ರತಿನಿಧಿಯಾಗಿ ಗುರುತಿಸಿಕೊಂಡಾಗ ಮಾತ್ರವೇ ಒಂದು ಕ್ಷೇತ್ರದ ಸ್ಷಷ್ಟವಾದ ಚಿತ್ರಣವನ್ನು ಅರಿಯುವುದಕ್ಕೆ, ಅರಿತಿರುವುದನ್ನು ಸಂವೇದನಾತ್ಮಕ ನೆಲೆಯಲ್ಲಿ ಕಟ್ಟಿಕೊಡುವುದಕ್ಕೆ ಸಹಕಾರಿಯಾಗುತ್ತದೆ. ಈ ನೆಲೆಯಲ್ಲಿ ತಾನು ಆಯ್ದುಕೊಂಡ ಪ್ರತಿಯೊಂದು ಕ್ಷೇತ್ರದೊಂದಿಗೆ ಬೆರೆತು ದುಡಿಮೆ ಮಾಡಿದ ಕೀರ್ತಿ ಶ್ರೀಯುತ ಎಂ.ಜಿಯವರಿಗೆ ಸಲ್ಲುತ್ತದೆ. ತಾನು ಅಧ್ಯಯನಕ್ಕೆ ಆಯ್ದುಕೊಂಡ ಜಾನಪದ, ಕೃಷಿ, ನಾಟಕ, ರಂಗಭೂಮಿ, ಸಾಹಿತ್ಯ, ಸಂಸ್ಕøತಿ, ಅಧ್ಯಾಪನ, ಶೈಕ್ಷಣಿಕ ಶಿಸ್ತು ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅಧ್ಯಯನ ಮಾಡಿರುವ ಇವರು, ಈ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಆ ಮೂಲಕವಾಗಿ ವಿಶಿಷ್ಟವಾದ ಅನುಭವವನ್ನು ಪಡೆದುಕೊಂಡಿದ್ದಾರೆ. ಮಣ್ಣಿನೊಂದಿಗೆ ಬೆರೆತಾಗ ಮಾತ್ರ ಮಣ್ಣಿನ ಸೊಗಡು ತಿಳಿಯುವುದು ಎನ್ನುವಂತೆ ಈ ಎಲ್ಲಾ ವಿದ್ವತ್ತ್ ಕ್ಷೇತ್ರಗಳ ಮಣ್ಣಿನ ವಾಸನೆಯನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ.
ಶ್ರೀಯುತ ಎಂ.ಜಿ ಈಶ್ವರಪ್ಪನವರು ಜಾನಪದ ವಿದ್ವಾಂಸರಾಗಿ ಹೆಚ್ಚು ಪ್ರಸಿದ್ಧಿಯನ್ನು ಪಡೆದವರು. ‘ಚಿತ್ರದುರ್ಗ ಜಿಲ್ಲೆಯ ವ್ಯವಸಾಯ ಜಾನಪದ’ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿಯನ್ನು ಪಡೆದ ಇವರು, ಇಲ್ಲಿ ದೇಶಿ ಕೃಷಿ ಪದ್ಧತಿಯ ಮಹತ್ವವನ್ನು ಎತ್ತಿಹಿಡಿದಿದ್ದಾರೆ. ಹಾಗೇಯೆ ಜಾನಪದ ಕ್ಷೇತ್ರಕ್ಕೆ ಸಂಬಂಧಿಸಿದಂತಹ ಹಲವಾರು ವಿಷಯಗಳ ಕುರಿತು ಅಧ್ಯಯನ ನಡೆಸಿ, ಸಾಕಷ್ಟು ಲೇಖನ ಹಾಗೂ ಕೃತಿಗಳನ್ನು ಸಾಹಿತ್ಯ ವಲಯಕ್ಕೆ ನೀಡಿದ್ದಾರೆ. ಇವರ ಜಾನಪದ ಕೃತಿಗಳಲ್ಲಿ ‘ಮ್ಯಾಸಬೇಡರು’ ಎಂಬ ಕೃತಿಯು ಇವರ ಮೊದಲ ಅಧ್ಯಯನ ಕೃತಿಯಾಗಿದೆ. ಹಾಗೆಯೇ ಬೇಸಾಯ ಪದ್ಧತಿ, ನಮ್ಮ ಬೇಸಾಯ, ಬಂಗಾರ ಕೂದಲ ಜೈರಾಣಿ, ಜಾನಪದ ಇಬ್ಬನಿಗಳು ಎಂಬ ಕೃತಿಗಳು ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿವೆ. ಜಾನಪದಕ್ಕೆ ಸಂಬಂಧಿಸಿದ ವಿವಿಧ ವಲಯಗಳಿಗೆ ಸಂಬಂಧಿಸಿದಂತೆ ಸುಮಾರು ನಲವತ್ತಕ್ಕೂ ಹೆಚ್ಚು ಲೇಖನಗಳನ್ನು ನಾಡಿನ ವಿವಿಧ ಪತ್ರಿಕೆಗಳನ್ನು ಪ್ರಕಟಿಸಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ. ಶ್ರೀಯುತರಿಗೆ ಜಾನಪದ ಕ್ಷೇತ್ರದಲ್ಲಿನ ವಿಶೇಷ ಕಾಳಜಿಯಿಂದಾಗಿ ಜಾನಪದ ವಿದ್ವತ್ತ್ ಲೋಕದಲ್ಲಿ ಇವರು ತಮ್ಮದೆ ಆದ ಹೆಸರು ಗಳಿಸಿದ್ದಾರೆ.
ಶ್ರೀಯುತರು ಜಾನಪದ ಕ್ಷೇತ್ರ ಮಾತ್ರವಲ್ಲದೆ, ಸಾಹಿತ್ಯ ಮತ್ತು ನಾಟಕ ವಲಯದಲ್ಲಿಯೂ ಸಾಕಷ್ಟು ಸೇವೆಯನ್ನು ಸಲ್ಲಿಸುವ ಮೂಲಕ ಹೆಸರು ಗಳಿಸಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೂ ನಾಟಕ ಕ್ಷೇತ್ರದಲ್ಲಿ ವಿಶೇಷವಾದ ಆಸಕ್ತಿಯನ್ನು ಮೈಗೂಡಿಸಿಕೊಂಡಿದ್ದ ಇವರು, ಕನ್ನಡ ಸಾಹಿತ್ಯದಲ್ಲಿ ಪ್ರಕಟಗೊಂಡ ಸಾಕಷ್ಟು ನಾಟಕಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಹಾಗೆಯೇ ನಾಟಕ ಕಲಾವಿದರಾಗಿಯೂ ಬಣ್ಣದ ಬದುಕಿನೊಳಗೆ ತಮ್ಮನ್ನು ಗುರುತಿಸಿಕೊಂಡಿರುತ್ತಾರೆ. 1979 ರಲ್ಲಿ ಕೇರಳದ ತ್ರಿಚೂರಿನಲ್ಲಿ ವಿಶ್ವವಿದ್ಯಾಲಯದ ಧನಸಹಾಯ ಆಯೋಗವು ಸ್ಕೂಲ್ ಆಫ್ ಡ್ರಾಮಾದ ವತಿಯಿಂದ ನಡೆಸಿದ ರಾಷ್ಟ್ರಮಟ್ಟದ ರಂಗಭೂಮಿ, ರಂಗನಟನೆ, ರಂಗ ನಿರ್ದೇಶನ ಕುರಿತ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ನಾಟಕದ ಕುರಿತು ಅನುಭವವನ್ನು ಪಡೆದುಕೊಂಡಿರುತ್ತಾರೆ. ಹಾಗೆಯೇ 1983 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ನೀಡಿದ ಧನಸಹಾಯ ಪಡೆದು ರಂಗದಿಗ್ಗಜರಾದ ಶ್ರೀ ಬಿ.ವಿ. ಕಾರಂತರ ಮಾರ್ಗದರ್ಶನದಲ್ಲಿ ಮಧ್ಯಪ್ರದೇಶದ ಭೂಪಾಲ್ ಮತ್ತು ದೇಹಲಿಯಲ್ಲಿ ರಂಗಭೂಮಿ ಕುರಿತು ಅಧ್ಯಯನ ಕೈಗೊಂಡಿರುತ್ತಾರೆ. ಇಷ್ಟೇ ಅಲ್ಲದೆ, 1979 ರಲ್ಲಿ ಹೆಗ್ಗೋಡಿನಲ್ಲಿ ನಡೆದ ‘ಚಲನಚಿತ್ರ ಸಹೃದಯ ಶಿಬಿರ’ ಹಾಗೂ 1983ರಲ್ಲಿ ನಾಟಕ ಅಕಾಡೆಮಿ ಕೊಂಡಾಜಿಯಲ್ಲಿ ನಡೆಸಿದ ನಾಟಕ ರಚನಾ ಶಿಬಿರದಲ್ಲಿ ಪಾಲ್ಗೊಂಡು ನಾಟಕ ಮತ್ತು ರಂಗಭೂಮಿ ಕ್ಷೇತ್ರದ ಬಗೆಗೆ ವಿದ್ವತ್ತನ್ನು ಗಳಿಸಿರುತ್ತಾರೆ. ನಾವು ಈ ಹಿಂದೆ ಗುರುತಿಸಿದಂತೆ ಶ್ರೀಯುತ ಎಂ.ಜಿಯವರು ಕೇವಲ ಅಧ್ಯಯನಕಾರರಾಗಿ ಗುರುತಿಸಿಕೊಂಡವರಲ್ಲ. ತಾವು ಅಧ್ಯಯನ ಮಾಡಿದ ಕ್ಷೇತ್ರದೊಳಗೆ ಬೆರೆತು ಬಂದವರು. ಇದಕ್ಕೆ ನಿದರ್ಶನ ಎನ್ನುವಂತೆ ನಾಟಕ ಹಾಗೂ ರಂಗಭೂಮಿಯ ಅಧ್ಯಯನ ಜೊತೆಯಲ್ಲಿ ರಂಗನಟರಾಗಿಯೂ ತಮ್ಮ ಸೇವೆಯನ್ನು ಸಲ್ಲಿಸಿರುತ್ತಾರೆ.
ದಾವಣಗೆರೆಯ ಪ್ರತಿಷ್ಠಿತ ಸಾಹಿತ್ಯಕ ಮತ್ತು ಸಾಂಸ್ಕøತಿಕ ಸಂಸ್ಥೆಯಾದ ‘ಪ್ರತಿಮಾಸಭಾ’ದ ರಂಗಶಿಬಿರದಲ್ಲಿ ಕ್ರಿಯಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಂಡು, ಮೆರವಣಿಗೆ, ಈಡಿಪಸ್, ಸಂಕ್ರಾಂತಿ, ಸಂತೆಯಲ್ಲಿ ನಿಂತ ಕಬೀರ, ಸೆಜುವಾನಿನ ಸಾಧ್ವಿ, ಕೊಡೆಗಳು ಹಾಗೂ ಮುಂತಾದ ನಾಟಕಗಳಲ್ಲಿ ತಮ್ಮ ನಟನೆಯನ್ನು ಪ್ರದರ್ಶಿಸಿರುತ್ತಾರೆ. ಹಾಗೆಯೇ ಜಾತ್ರೆ, ಸಾಯೋ ಆಟ, ಅಪ್ಪ, ಕಡೇಮನೆ ಕಡೇಗಲ್ಲಿ, ಹಳ್ಳಿಚಿತ್ರ, ಹಳ್ಳಿಮೇಷ್ಟ್ರು, ಮಾರೀಚನ ಬಂಧುಗಳು, ಇಲಿಬೋನು, ನಾಗನ ಕತೆ ಮುಂತಾದ ನಾಟಕಗಳನ್ನು ನಿರ್ದೇಶನ ಮಾಡಿರುತ್ತಾರೆ. ಶ್ರೀಯುತರು ನಾಟಕ ಮತ್ತು ರಂಗಭೂಮಿ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಮತ್ತು ನಿಸ್ವಾರ್ಥ ಸೇವೆಗೆ ಹಲವಾರು ಪುರಸ್ಕಾರಗಳು ಲಭಿಸಿವೆ. ಇವರ ‘ನಾಗನ ಕತೆ’ ನಾಟಕಕ್ಕೆ ಸಾಹಿತ್ಯ ಪರಿಷತ್ತು ನಡೆಸಿದ ಅಖಿಲ ಕರ್ನಾಟಕ ಮಕ್ಕಳ ಸಮ್ಮೇಳನದಲ್ಲಿ ಪ್ರಥಮ ಪ್ರಶಸ್ತಿ ಪುರಸ್ಕಾರ ಲಭಿಸಿದೆ. ನಾಟಕ ಮತ್ತು ರಂಗಭೂಮಿ ಇವರ ಅಧ್ಯಯನ ಕ್ಷೇತ್ರ ಮಾತ್ರವಾಗಿರದೆ, ಹವ್ಯಾಸ ಮತ್ತು ಅಭಿರುಚಿಯ ತಾಣವಾಗಿದೆ. ನಾಟಕ ಮತ್ತು ರಂಗಭೂಮಿಯಲ್ಲಿನ ಇವರ ವಿಶೇಷವಾದ ಕಾಳಜಿ ಹಾಗೂ ಶ್ರದ್ಧೆಯ ಫಲವಾಗಿ ಹಲವಾರು ಜಾನಪದ ವಸ್ತುಗಳನ್ನು ಕೇಂದ್ರವಾಗಿಟ್ಟುಕೊಂಡು ನಾಟಕ ರಚನೆಯಂತಹ ಕಾರ್ಯಕ್ಕೆ ಮುಂದಾಗಿ ಯಶಸ್ವಿಯನ್ನು ಪಡೆದುಕೊಂಡಿದ್ದಾರೆ. ಇದರ ಫಲವಾಗಿ ಹಲವಾರು ಜಾನಪದ ಕಲೆಗಳನ್ನು ರಂಗ ಪ್ರಯೋಗ ನಡೆಸುವ ಮೂಲಕವಾಗಿ ಜಾನಪದವನ್ನು ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ತಮ್ಮ ನಾಟಕ ಮತ್ತು ರಂಗಭೂಮಿಯಲ್ಲಿನ ವಿದ್ವತ್ತಿನಿಂದಾಗಿ ಗಿರೀಶ್ ಕಾರ್ನಾಡ್, ಚಂದ್ರಶೇಖರ್ ಕಂಬಾರರಂತಹ ಹಲವಾರು ಪ್ರಸಿದ್ಧ ನಾಟಕಕಾರರೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿರುತ್ತಾರೆ.
ಶ್ರೀಯುತ ಎಂ.ಜಿ ಈಶ್ವರಪ್ಪನವರು ಬಾಲ್ಯದ ದಿನಗಳಿಂದಲೂ ಜಾನಪದ ಪರಿಸರದೊಳಗೆ ಬೆಳೆದುಬಂದವರು. ಹೀಗಾಗಿ ಜಾನಪದ ಅನ್ನೊದು ಇವರಿಗೆ ತನ್ನತನದ ಸೊಗಡು. ಇದು ತನ್ನತನ ಮಾತ್ರವಲ್ಲದೆ, ತಾಯ್ತನದ ಸೊಗಡು ಕೂಡ ಹೌದು. ಇಂತಹ ತಾಯ್ತನದ ಸೊಗಡನ್ನು ಮೈಗೂಡಿಕೊಂಡ ಇವರು, ಈ ಜಾನಪದ ಸೊಗಡಿನ ಮೂಲಕವೇ ಮೌಲ್ಯಯುತವಾದ ಬದುಕಿಗೆ ಅಗತ್ಯವಾದ, ಜೀವಪರವಾದ ಆಶಯಗಳನ್ನು ಎತ್ತಿಹಿಡಿಯುವ ನೆಲೆಯಲ್ಲಿ ನಾಲ್ಕು ಸಿದ್ಧಾಂತಗಳನ್ನು ಕಂಡುಕೊಂಡಿದ್ದಾರೆ. ಅವುಗಳೆಂದರೆ, ಒಂದು, ಕೈ ಕೆಸರಾದರೆ ಬಾಯಿ ಮೊಸರು. ಎರಡು, ತುಂಬಿದಕೊಡ ತುಳುಕುವುದಿಲ್ಲ. ಮೂರು, ಹಾಸಿಗೆ ಇದ್ದಷ್ಟು ಕಾಲುಚಾಚು. ನಾಲ್ಕು, ತಾಳಿದವನು ಬಾಳಿಯಾನು. ಇವು ಶ್ರೀಯುತರು ತಮ್ಮ ಜನಪದ ಬದುಕಿನ ತಾಯ್ತನದ ಸೊಗಡಿನಲ್ಲಿ ಕಂಡುಕೊಂಡ ಪ್ರಮುಖವಾದ ಸಿದ್ಧಾಂತ. ಈ ಸಿದ್ಧಾಂತಗಳು ಅತ್ಯಂತ ಸರಳವಾಗಿದ್ದು, ಸರಳವಾದ ಬದುಕಿಗೆ ದಾರಿದೀಪದಂತಿವೆ. ನಮ್ಮ ನೆಲದಲ್ಲಿ ಜೀವಪರ ಕಾಳಜಿಯನ್ನು ಮೆರೆದ ಬುದ್ಧ, ಬಸವ, ಗಾಂಧೀಜಿ ಹಾಗೂ ಅಂಬೇಡ್ಕರ್ ಅವರಂತಹ ಮಹಾಶಯರು ವಿವಿಧ ರೂಪದಲ್ಲಿ ಸಾರಿದ್ದು ಇದೇ ಆಶಯಗಳನ್ನು. ಇವರೆಲ್ಲರ ಸಾರವನ್ನು ಶ್ರೀಯುತ ಎಂ.ಜಿಯವರು ತಮ್ಮ ಸುತ್ತಮುತ್ತಲಿನ ಜನಪದ ಬದುಕಿನೊಳಗೆ ಈ ಜೀವಪರವಾದ ಆಶಯಗಳನ್ನು ಕಂಡುಕೊಂಡಿದ್ದಾರೆ. ಇದು ಇವರ ಜನಪದೀಯ ಸಿದ್ಧಾಂತ. ಇದು ಅನ್ಯ ಪರಿಸರ, ಅನ್ಯ ಸಂಸ್ಕøತಿಯಿಂದ ಎರವಲು ಪಡೆದಿರುವುದಲ್ಲ. ತಮ್ಮ ನಿತ್ಯದ ಜನಪದ ಬದುಕಿನೊಳಗೆ ಕಂಡುಕೊಂಡ ನೆಲದನಿಯಾಗಿದೆ. ಈ ನೆಲದನಿಯೇ ನಮ್ಮ ಜನಪದ ಬದುಕಿನ ಸಾರ.
ಶ್ರೀಯುತರು ಜಾನಪದ ಕ್ಷೇತ್ರದಲ್ಲಿ ಆಳವಾದ ಅಧ್ಯಯನ ನಡೆಸುವ ಮೂಲಕವಾಗಿ ತಮ್ಮ ನೆಲದ ಸೊಗಡನ್ನು ಅರಿತವರು. ಈ ಅಧ್ಯಯನದ ಮೂಲಕವಾಗಿ ತಮ್ಮ ನೆಲದ ದನಿಯನ್ನು, ತಮ್ಮ ನೆಲದ ಸಾರವನ್ನು ಅರಿತವರು. ತಮ್ಮ ಈ ಅಧ್ಯಯನದ ಮೂಲಕ ತಾವು ಕಂಡುಕೊಂಡ ಸತ್ಯಗಳನ್ನು ವೈಜ್ಞಾನಿಕ ನೆಲೆಯಲ್ಲಿ ಗುರುತಿಸುವ ಪ್ರಯತ್ನವನ್ನು ಮಾಡಿರುತ್ತಾರೆ.
ಜಾನಪದ ಎಂದರೆ ಅವೈಜ್ಞಾನಿಕ, ಮೌಢ್ಯತೆಯಿಂದ ಕೂಡಿದ್ದು ಎಂದು ಬಿಂಬಿಸಲು ಹೊರಟಿರುವ ವೈಜ್ಞಾನಿಕ ಜಗತ್ತಿಗೆ ಜಾನಪದದಲ್ಲಿ ಅಂತರ್ಗತವಾಗಿರುವ ಮೌಲ್ಯಯುತವಾದ ಹಾಗೂ ವೈಚಾರಿಕ ಅಂಶಗಳನ್ನು ಗುರುತಿಸಿದ್ದಾರೆ. ಹಾಗೆಯೇ ಜಾನಪದ ಬದುಕು ಹಾಗೂ ಸಂಸ್ಕøತಿಯಲ್ಲಿ ಅಂತರ್ಗತವಾಗಿರುವ ಅವೈಜ್ಞಾನಿಕವಾದ ಮತ್ತು ಸಮಾಜದ ಪ್ರಗತಿಗೆ ಮಾರಕವಾದ ಅಂಶಗಳನ್ನು ಸಹ ಗುರುತಿಸುವ ಮೂಲಕ ಜಾನಪದವನ್ನು ಪರಿಷ್ಕರಣೆ ಮಾಡುವತ್ತ ತಮ್ಮ ವಿದ್ವತ್ತನ್ನು ಪ್ರದರ್ಶಿಸಿದ ಕೀರ್ತಿಯು ಇವರಿಗೆ ಸಲ್ಲುತ್ತದೆ. ನಮ್ಮ ಜನಪದ ಬದುಕಿನೊಳಗೆ ಅಂತರ್ಗತವಾಗಿರುವ ಬಾಲ್ಯ ವಿವಾಹ, ದೇವದಾಸಿ ಪದ್ಧತಿ, ಪ್ರಾಣಿ ಬಲಿಯಂತಹ ಮಾರಕ ಅಂಶಗಳನ್ನು ವಿರೋಧಿಸುವ ಮೂಲಕ, ನಮ್ಮ ಭಾವನಾತ್ಮಕ ಸಂಬಂಧಗಳನ್ನು ಬೆಸೆಯುವಂತಹ ಕಲೆ ಹಾಗೂ ಸಂಸ್ಕøತಿಯನ್ನು ಪೋಷಿಸುವ ಮೂಲಕವಾಗಿ ಜಾನಪದದ ಉಳಿವಿಗಾಗಿ ತಮ್ಮದೆ ಆದ ನಿಲುವುಗಳನ್ನು ಎತ್ತಿಹಿಡಿದಿದ್ದಾರೆ. ಹಾಗೆಯೇ ತಮ್ಮಲ್ಲಿ ಅಂತರ್ಗತವಾದ ವಿದ್ವತ್ತಿನಿಂದಾಗಿ ಹಲವಾರು ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿರುತ್ತಾರೆ.
ಶ್ರೀಯುತರು ಜಾನಪದ, ಸಾಹಿತ್ಯ ಮತ್ತು ಸಾಂಸ್ಕøತಿಕ ವಲಯದಲ್ಲಿ ತಮ್ಮದೇ ಆದ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿರುತ್ತಾರೆ. ಇದರ ಫಲವಾಗಿ 2011 ರಲ್ಲಿ ಶಿವಮೊಗ್ಗ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, 2014 ರಲ್ಲಿ ದಾವಣಗೆರೆ ಜಿಲ್ಲಾ ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಹಾಗೆಯೇ 2017 ರಲ್ಲಿ ದಾವಣಗೆರೆ ತಾಲ್ಲೂಕು ಶ್ಯಾಗಲೆ ಗ್ರಾಮದಲ್ಲಿ ನಡೆದ ‘ಕುವೆಂಪು ನುಡಿಜಾತ್ರೆ’ಯ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಶ್ರೀಯುತರ ಸೇವೆಯನ್ನು ಪರಿಗಣಿಸಿ ಹಲವಾರು ಪ್ರಶಸ್ತಿಗಳು ಇವರ ಮುಡಿಗೇರಿವೆ. ಅವುಗಳಲ್ಲಿ ಗುಂಡ್ಮಿ ಜಾನಪದ ಪ್ರಶಸ್ತಿ, ಕು.ಶಿ. ಹರಿದಾಸಭಟ್ಟ ಪ್ರಶಸ್ತಿ, ಕರ್ನಾಟಕ ಅಕಾಡೆಮಿ ಗೌರವ ಫೆಲೋಶಿಫ್, ಕರ್ನಾಟಕ ಜಾನಪದ ಅಕಾಡೆಮಿಯ ತಜ್ಞ ಪ್ರಶಸ್ತಿ, ರಂಗಸಂಸ್ಥಾನ ಜಾನಪದ ಪ್ರಶಸ್ತಿ, ಮಹಾಲಿಂಗ ರಂಗ ಪ್ರಶಸ್ತಿಗಳು ಪ್ರಮುಖವಾಗಿವೆ. ಮಹಾತ್ಮ ಗಾಂದೀಜಿಯವರ ತತ್ವಾದರ್ಶಗಳು, ತಮ್ಮ ದೊಡ್ಡಪ್ಪನವರಾದ ಶ್ರೀ ಮಲ್ಲಪ್ಪನವರಿಂದ ಕಲಿತ ಜನಪದೀಯ ಜ್ಞಾನವನ್ನು ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವ ಶ್ರೀಯುತ ಡಾ.ಎಂ.ಜಿ ಈಶ್ವರಪ್ಪನವರು ಸಾಹಿತ್ಯ, ಸಾಂಸ್ಕøತಿಕ, ಬೋಧನೆ ಹಾಗೂ ಆಡಳಿತಾತ್ಮಕ ವಲಯದಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ಸರಳ ಹಾಗೂ ಸಜ್ಜನಿಕೆಗೆ ಹೆಸರಾದ ಶ್ರೀಯುತರಿಂದ ಸಾಹಿತ್ಯ ಮತ್ತು ಸಾಂಸ್ಕøತಿಕ ವಲಯವು ಮತ್ತಷ್ಟು ಶ್ರೀಮಂತಿಕೆಯನ್ನು ಪಡೆಯುಂತಾಗಲಿ ಎಂಬುದು ನಮ್ಮ ಹಾರೈಕೆ.