ದಿನದ ಸುದ್ದಿ
ಜಿಲ್ಲೆಯ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಆಧಾರ್ ನೊಂದಣಿ ಮಾಡಿಸಿ : ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ
ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ಬಾಲಕ, ಬಾಲಕಿಯರಿಗೆ ಆಧಾರ್ ಗುರುತಿನ ಚೀಟಿಗಳನ್ನು ಮತ್ತು ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ಕುರಿತು ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಈ ಅಭಿಯಾನದ ಭಾಗವಾಗಿ ದಾವಣಗೆರೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರು ಮಹಾವೀರ ಮ. ಕರೆಣ್ಣವರ ಇವರು ಸಾಥಿ ಸಮಿತಿಯನ್ನು ರಚಿಸಲಾಗಿದ್ದು, ಸಾಥಿ ಕಮಿಟಿಯ ಮೂಲಕ ಜಿಲ್ಲೆಯಾದ್ಯಂತ ಅಧಾರ್ ನೊಂದಣಿ ಆಗದ ನಿರ್ಗತಿಕ ಮಕ್ಕಳು, ಕುಟುಂಬದಿಂದ ಹೊರಗಡೆ ಉಳಿದ ಮಕ್ಕಳು, ರಕ್ಷಣೆ ಇಲ್ಲದ ಮಕ್ಕಳು ಕೊಳಗೇರಿ ನಿವಾಸಿಗಳು, ರೈಲ್ವೆ ನಿಲ್ದಾಣದ ಮತ್ತು ಬಸ್ ನಿಲ್ದಾಣಗಳಲ್ಲಿ ವಾಸಿಸುವ ನಿರ್ಗತಿಕ ಮಕ್ಕಳು, ಮಕ್ಕಳ ಆರೈಕೆ ಸಂಸ್ಥೆಗಳಲ್ಲಿ ವಾಸಿಸುವ ಅನಾಥರು. ಕಾನೂನು ಬಾಹಿರಕೃತ್ಯಗಳಲ್ಲಿ ತೊಡಗಿರುವ ಮಕ್ಕಳು, ಕಳ್ಳ ಸಾಗಾಣಿಕೆ, ಭಿಕ್ಷಾಟನೆ ಮತ್ತು ಬಾಲ ಕಾರ್ಮಿಕ ಪದ್ಧತಿಯಿಂದ ರಕ್ಷಿಸಲ್ಪಟ್ಟವರು, ಕಾಣೆಯಾದವರಲ್ಲಿ ಸಿಕ್ಕಂತಹ ಮಕ್ಕಳು, ಇತ್ಯಾದಿ ನಿರ್ಗತಿಕ ಮಕ್ಕಳ ಬಗ್ಗೆ ಸಮಾರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ ಅವರುಗಳಿಗೆ ಆಧಾರ್ ಗುರುತಿನ ಚೀಟಿ ಮತ್ತು ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗುವುದು.
ಕಾನೂನು ಸೇವೆಗಳ ಪ್ರಾಧಿಕಾರದ ಮತ್ತು ಸಮಿತಿಯ ಉದ್ದೇಶಗಳನ್ನು ಪೂರೈಸುವಲ್ಲಿ ಎಲ್ಲಾ ಸರ್ಕಾರಿ ಅಧಿಕಾರಿಗಳು, ಶಾಲಾ ಶಿಕ್ಷಕರು ಮುಖ್ಯೋಪಾಧ್ಯಾಯರು ಹಾಗೂ ಇತರೆ ಅಧಿಕಾರಿಗಳು, ಪಾಲಕ ಮತ್ತು ಪೋಷಕರು ಸಹಕಾರ ನೀಡಬೇಕು.ಇಲ್ಲಿಯವರೆಗೆ ಒಟ್ಟು 42 ಅನಾಥ, ನಿರ್ಗತಿಕ ಮಕ್ಕಳು, ಸರ್ಕಾರಿ ಮತ್ತು ಅನುದಾನಿತ ತಂಗುದಾಣಗಳಲ್ಲಿ ವಾಸಿಸುವ ಮಕ್ಕಳಿಗೆ ಪಾಲಕ, ಪೋಷಕರು ಇಲ್ಲದ ಆಧಾರ್ ಗುರುತಿನ ಚೀಟಿಗಳು ಇಲ್ಲವೆಂದು ತಿಳಿದು ಬಂದಿದೆ. ಅದೇ ರೀತಿ ಜಿಲ್ಲೆಯಲ್ಲಿ ಒಟ್ಟು 6050 ಪ್ರಾಥಮಿಕ ಶಾಲಾ ಮಕ್ಕಳಿಗೆ ಮತ್ತು 2451 ಪ್ರೌಢಶಾಲಾ ಮಕ್ಕಳಿಗೆ ಆಧಾರ್ ಗುರುತಿನ ಚೀಟಿ ಇಲ್ಲವೆಂದು ತಿಳಿದು ಬಂದಿರುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿರುತ್ತದೆ.
ಮೇಲ್ಕಂಡ ಸಾಥಿ ಅಭಿಯಾನಕ್ಕೆ ಎಲ್ಲಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯವರು, ಮಕ್ಕಳ ಪಾಲಕ ಪೋಷಕರು ಹಾಗೂ ಎಲ್ಲರೂ ಕೂಡ ಸಹಕರಿಸಬೇಕೆಂದು ಮತ್ತು ಅತ್ಯುತ್ತಮವಾದ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾವೀರ ಮ ಕರೆಣ್ಣವರ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243