ದಿನದ ಸುದ್ದಿ
ಸಿದ್ದು ‘ಮುನಿಸು’ ಮುರಿಯಲಿದ್ದಾರಂತೆ ಖರ್ಗೆ..!
ಸುದ್ದಿದಿನ ಡೆಸ್ಕ್ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡವಳಿಕೆ ಕಾಂಗ್ರಸ್ ಸೇರಿದಂತೆ ಅವರ ಅಭಿಮಾನಿಗಳಿಗೆ ತುಂಬಾ ಮುಜುಗರ ಉಂಟುಮಾಡಿದೆ. ಸಮ್ಮಿಶ್ರ ಸರ್ಕಾರ ಸ್ವತಂತ್ರ ಬಜೆಟ್ ಮಂಡಿಸುವ ಬಗ್ಗೆ ಸಿದ್ದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧದ ಅಪಸ್ವರ ಯಾಕೋ ತಣ್ಣಗಾಗುವ ಹಾಗೆ ಕಾಣುತ್ತಿಲ್ಲ. ಸಿದ್ದ ರಾಮಯ್ಯ ಅವರ ಈ ನಡೆಗೆ ಬೇಸರಗೊಂಡಿರುವ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
” ಕೋಮುವಾದಿ ಬಿಜೆಪಿ ಪಕ್ಷ ರಾಜ್ಯದಲ್ಲಿ ಆಡಳಿತ ನಡೆಸಬಾರದು ಎಂಬ ಉದ್ದೇಶದಿಂದ, ಜಾತ್ಯತೀತ ಜನಾತಾದಳ ಪಕ್ಷದೊಂದಿಗೆ ನಾವು ಮೈತ್ರಿ ಮಾಡಿಕೊಂಡಿದ್ದೇವೆ. ಈ ಮೈತ್ರಿ ಸರ್ಕಾರ ಯಾವುದೇ ಕಾರಣಕ್ಕೂ ಅವಧಿಗೆ ಮುನ್ನ ಬಿದ್ದು ಹೋಗುವುದಿಲ್ಲ, ಐದು ವರ್ಷ ಪೂರೈಸುತ್ತದೆ” ಎಂದು ಆತ್ಮವಿಶ್ವಾಸದಿಂದ ಮಾಧ್ಯಮಗಳಿಗೆ ತಿಳಿಸಿದರು. ಹಾಗೇ ಸಮ್ಮಿಶ್ರ ಸರ್ಕಾರದ ವಿರುದ್ಧ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರ ಬಗೆಗೆ ಮಾತನಾಡಿದ ಅವರು” ಸಿದ್ದರಾಮಯ್ಯ ಅವರು ಮೈತ್ರಿ ಸರ್ಕಾರ ಏಕೆ ಐದುವರ್ಷ ಪೂರೈಸುವುದಿಲ್ಲ ಎಂದು ಹೇಳಿದ್ದಾರೆಂಬುದು ತಿಳಿದಿಲ್ಲ. ಈತರಹದ ಹೇಳಿಕೆಗಳನ್ನ ಅವರು ಕೊಡಬಾರದು. ನಾನು ದೆಹಲಿಯಿಂದ ಬೆಂಗಳೂರಿಗೆ ಬಂದ ನಂತರ ಜತೆ ಮಾತಾಡಿ ಸಮಸ್ಯೆ ಬಗೆಹರಿಸಲಿದ್ದೇನೆ” ಎಂದು ಹೇಳಿದ್ದಾರೆ.