ದಿನದ ಸುದ್ದಿ
‘ಸಂಜೀವಿನಿ’ ಕೆರೆ ಗೌಡರು..!
- ನಾಗರಾಜ ಸಿರಿಗೆರೆ
ಕಳೆದ ಎರಡೂ ದಿನಗಳಿಂದ ತುಂಬಾ ಹತ್ತಿರದ, ಪರಿಚಿತರ, ಆತ್ಮೀಯರ ಸಾವಿನ ಸುದ್ದಿಗಳು ಬೇಡವಂದರೂ ಕಿವಿಗೆ ಅಪ್ಪಳಿಸುತ್ತಿದ್ದವು. “ಈ ಸುದ್ದಿ ಸುಳ್ಳಾಗಲಿ” ಎಂಬ ಪ್ರಾರ್ಥನೆ “ನರಿ ಕೂಗು ಗಿರಿಗೆ ಕೇಳೀತೆ” ಎನ್ನುವಂತಾಯಿತು. ನಿನ್ನೆ ಬೆಳಗಿನಿಂದ “ಡಾ. ಮಂಜುನಾಥ ಗೌಡರ ಆರೋಗ್ಯದ ಸ್ಥಿತಿ ಗಂಭೀರ” ಎಂಬ ಸುದ್ದಿ ಸುಳ್ಳಾಗಲಿ ಎಂದು ಹಂಬಲಿಸಿದ ಮನಸ್ಸುಗಳೆಷ್ಟೊ. ಕ್ಷಣ ಕ್ಷಣಕ್ಕೂ ಪೊನ್ ಕರೆಗಳು. ”ಗೌಡರ ಆರೋಗ್ಯ ಸುಧಾರಿಸಲಿ” ಎಂಬ ಒಂದೇ ಮಂತ್ರ ಎಲ್ಲರ ಬಾಯಲ್ಲೂ.
ಆದರೆ ಕ್ರೂರ ವಿಧಿ ಹಾಗೆ ಮಾಡಲಿಲ್ಲ. “ಜವರಾಯ ಬಂದರೆ ಬರಿಗೈಲಿ ಬರಲಿಲ್ಲ ಒಳ್ಳೊಳ್ಳೆ ಮರಗಳ ಕಡಿಯುತ ಬಂದ” ಎಂಬ ಜನಪದ ಗೀತೆಯಂತೆ ಸಮಾಜದ ಬಹುದೊಡ್ಡ ಆಸ್ತಿಯಾಗಿದ್ದ ಮಂಜುನಾಥ ಗೌಡರನ್ನು ಕ್ರೂರ ವಿಧಿ ಬಲಿತೆಗೆದುಕೊಂಡಿತು. ಅವರ ಸಾವು ಕೇವಲ ಯಾವುದೊ ಒಂದು ವರ್ಗದವರಿಗೆ ಮಾತ್ರವಲ್ಲ. ಎಲ್ಲಾ ವರ್ಗಕ್ಕೂ ತುಂಬಲಾರದ ನಷ್ಟ ಎಂದರೆ ಕ್ಷೀಷೆಯಾಗಲಾರದು. ನೂರಾರು ಜನಕ್ಕೆ ಅನ್ನ, ಆಶ್ರಯ ನೀಡಿದ್ದರು. ರೈತರಿಗೆ, ಯುವಕರಿಗೆ ಆದರ್ಶಪ್ರಾಯರಾಗಿದ್ದರು.
ಗೌಡರು ಗುಜರಾತಿನಲ್ಲಿ
ಮೆಡಿಕಲ್ ಸೈನ್ಸ್ ಓದುತ್ತಿರುವಾಗ ಅಲ್ಲಿಯ ಏತ ನೀರಾವರಿ ಯೋಜನೆಗಳನ್ನು ಹತ್ತಿರದಿಂದ ಕಂಡಿದ್ದರು. ಆ ಮಾದರಿಯಲ್ಲಿ ಕರ್ನಾಟಕದಲ್ಲೂ ನೀರಾವರಿ ಯೋಜನೆ ರೂಪಿಸಬೇಕು ಎಂದು ದಶಕಗಳ ಹಿಂದೆ ಕನಸು ಕಂಡಿದ್ದರು. ಮೊದಲ ಹಂತದಲ್ಲಿ ದಾವಣಗೆರೆ ಜಿಲ್ಲೆಯ 22 ಕೆರೆಗಳನ್ನು ತುಂಬಿಸಲು ರೈತರನ್ನು ಸಂಘಟಿಸಿ, ವಿಧಾನ ಸೌಧದ ಮೆಟ್ಟಿಲೇರಿದ್ದರು.
ಹಗಲಿರಳೆನ್ನದೆ ಅವಿರತ ಹೋರಾಟಕ್ಕಿಳಿದರು. ಆಡಳಿತ ವರ್ಗ ಕಿವಿಗೊಡದಿದ್ದಾಗ ಉಪವಾಸ ಸತ್ಯಾಗ್ರಹಕ್ಕೂ ಇಳಿದರು. ಆನಂತರ ಸಿರಿಗೆರೆಯ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಯಶಸ್ವಿಯಾದರು. ತಮ್ಮ ಊರಾದ ತುಪ್ಪದಳ್ಳಿಯ ಕೆರೆಗೆ ಈ ಯೋಜನೆಯಲ್ಲಿ ತುಂಬಿಸಲು ಆಗದಿದ್ದಾಗ ಸ್ಥಿತಪ್ರಜ್ಞರಾಗಿದ್ದರು.
ಕೆರೆ ಯೋಜನೆಗಳ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದರು. ಲಯನ್ಸ್ ಕ್ಲಬ್ ಮತ್ತಿತರ ಸಂಘಸಂಸ್ಥೆಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು. ರಾಜಕೀಯ ನಾಯಕತ್ವದ ಕನಸು ಕಂಡರು. ದಾವಣಗೆರೆ ನಗರದಲ್ಲಿ ‘ಸಂಜೀವಿನಿ ನರ್ಸಿಂಗ್ ಹೋಂ’ ಮತ್ತು ‘ಸಂಜೀವಿನಿ ಆಸ್ಪತ್ರೆ’ ಎಂಬ ಎರಡು ಆಸ್ಪತ್ರೆಗಳನ್ನು ತೆರೆದು ಗ್ರಾಮೀಣ ಜನರ ನೋವಿಗೆ ಸ್ಪಂದಿಸುತ್ತಿದ್ದರು. ಎಲ್ಲರನ್ನೂ ಸದಾ ನಗುಮೊಗದಿಂದ ಮಾತನಾಡಿಸುತ್ತಿದ್ದರು.
ಸಿರಿಗೆರೆ ಗುರುಗಳ ನಿಕಟವರ್ತಿಯಾಗಿ ಪೂಜ್ಯರುಗಳೊಂದಿಗೆ ಸದಾ ಸಮಾಜದ ಹಿತಚಿಂತನೆಯಲ್ಲಿದ್ದರು. ಎರಡು ವರ್ಷಗಳ ಹಿಂದೆ ಜಗಳೂರಿನಲ್ಲಿ ಜರುಗಿದ ‘ತರಳಬಾಳು ಹುಣ್ಣಿಮೆ’ಯ ಪ್ರಧಾನ ಕಾರ್ಯದರ್ಶಿಯಾಗಿ ಅದರ ಸಂಪೂರ್ಣ ಯಶಸ್ಸಿಗೆ ಕಾರಣರಾಗಿದ್ದವರು. ಕಳೆದ ವರ್ಷ ಗೋಕಾಕ್ ಮತ್ತು ಹಾವೇರಿ ತಾಲ್ಲೂಕಿನ ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿತರಣೆ ಸಂದರ್ಭದಲ್ಲಿ ಶ್ರೀಗಳೊಂದಿಗೆ ಮುಂಚೂಣಿಯಲ್ಲಿದ್ದರು.
ಶಾಶ್ವತ ಬರಪೀಡಿತ ತಾಲ್ಲೂಕು ಎನಿಸಿದ ಜಗಳೂರನ್ನು ಸಮೃದ್ಧ ನೆಲವನ್ನಾಗಿಸಬೇಕೆಂದು ತುಂಗಭದ್ರಾ ನದಿಯಿಂದ ನೀರು ಹರಿಸುವ ಕಾರ್ಯಕ್ಕೆ ಸಿರಿಗೆರೆ ಶ್ರೀಗಳಿಗೆ ಬೆನ್ನೆಲೆಬಾಗಿದ್ದರು.
ಜಗಳೂರು ತಾಲೂಕಿನ ತುಪ್ಪದಹಳ್ಳಿ ಗ್ರಾಮದ ಗೌಡರ ಮನೆತನದವರಾದ ಮಂಜುನಾಥ್ ಆರುಜನ ಅಕ್ಕತಂಗಿಯರ ನಡುವೆ ಒಬ್ಬನೇ ಗಂಡುಮಗ. ಸೋದರ ಸೊಸೆಯನ್ನೇ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದರು.
ಇವರ ಕಾರ್ಯ ಯೋಜನೆಗಳ ಬಗ್ಗೆ ಒಂದು ಲೇಖನ ಬರೆಯಲು ಸಂದರ್ಶನಕ್ಕೆ ಸಮಯ ಕೇಳಿದಾಗಲೆಲ್ಲ “ನಾನೇ ಕರೆಮಾಡಿ ಹೇಳುತ್ತೇನೆ” ಎಂದಿದ್ದರು. ಅಷ್ಟೊತ್ತಿಗೆ ಕೊರೊನಾ ಮಾರಿ ಒಕ್ಕರಿಸಿ, ಸಮಯ ಹೊಂದಿಸಿಕೊಳ್ಳಲು ಅವಕಾಶ ನೀಡಲೇಯಿಲ್ಲ. ಬನಶಂಕರಿ ಬಡಾವಣೆಯಲ್ಲಿ ಬೆಳಗಿನ ವಾಕಿಂಗ್ ನಲ್ಲಿ ಕೊರೊನಾ ಕಾರಣಕ್ಕೆ ದೂರದಿಂದಲೇ ಶುಭಾಶಯಗಳ ವಿನಿಮಯ ಅನಿವಾರ್ಯವಾಗಿತ್ತು.
ತಲೆತುಂಬ ಕನಸುಗಳು ಹೊತ್ತು, ರೈತಪರ ಚಿಂತಕರಾಗಿ, ಯುವಜನಾಂಗಕ್ಕೆ ಸ್ಫೂರ್ತಿಯಾಗಿದ್ದ ಗೌಡರಿಗೆ 52 ನಿಜಕ್ಕೂ ಸಾವಿನ ವಯಸ್ಸಲ್ಲ.ಆದರೆ ಸ್ವತಃ ವೈದ್ಯರಾಗಿ ತಮ್ಮ ಸಾವನ್ನು ಅರಿಯದೆ ಹೋಗಿದ್ದು ವಿಧಿಯ ಅಟ್ಟಹಾಸ. ಈ ಹಿಂದೆ ರೈತ ನಾಯಕ ಎನ್ ಡಿ ಸುಂದರೇಶ್, ಕಾರ್ಮಿಕ ನಾಯಕ ಬಿ ಕೆ ಸುಂದರೇಶ್ ಹೀಗೆ ಅಕಾಲ ಮೃತ್ಯುವಿಗೆ ಈಡಾದರು. ಸಮಾಜಕ್ಕೆ ಬೇಕಾದ ಇಂತಹ ಕಳಕಳಿಯ ನಾಯಕರು ನಡುವಿನಲ್ಲಿಯೇ ತುತ್ತಾಗುತ್ತಾರೆ. ಎಸ್ ಪಿ ಬಿ ಯಂತೆ ಗೌಡರ ಆರೋಗ್ಯ ಸುಧಾರಿಸಬಹುದು ಎಂಬ ಕನವರಿಕೆ ಕನವರಿಕೆಯಾಗಿಯೇ ಉಳಿಯಿತು.
ಸುದ್ದಿದಿನ.ಕಾಂ|ವಾಟ್ಸಾಪ್ |9980346243