ದಿನದ ಸುದ್ದಿ
ಮಾತೃಭೂಮಿ ಸಂಪಾದಕ, ಪತ್ನಿ ಮೇಲೆ ಹಲ್ಲೆ: ಕಟ್ಟರ್ ವಾದಿಗಳ ಮೇಲೆ ಶಂಕೆ
ಸುದ್ದದಿನ ಡೆಸ್ಕ್: ಮಲಯಾಳಂನ ಮಾತೃಭೂಮಿ ಪತ್ರಿಕೆಯ ಕಣ್ಣೂರು ವಿಭಾಗೀಯ ಸಂಪಾದಕ ವಿನೋದ್ ಚಂದ್ರನ್ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಚಂದ್ರನ್ ಮತ್ತು ಅವರ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಇಬ್ಬರೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಧಾರಾವಾಹಿಯೊಂದನ್ನು ನಿಲ್ಲಿಸುವಂತೆ ಹಿಂದೂ ಸಂಘಟನೆಗಳು ಹಲವು ದಿನಗಳಿಂದ ಕಚೇರಿಗೆ ನುಗ್ಗಿ ಗಲಾಟೆ ಮಾಡುವುದಲ್ಲದೆ ಪ್ರತಿಭಟನೆ ಕೂಡ ನಡೆಸಿದ್ದರು, ಇದೇ ದ್ವೇಷದ ಮೇಲೆ ಹಲ್ಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಗುರುವಾರ ರಾತ್ರಿ 3.30ರ ಸುಮಾರಿಗೆ ಮನೆಗೆ ನುಗ್ಗಿದ ನಾಲ್ವರು ಯುವಕರು ಚಂದ್ರನ್ ಹಾಗೂ ಅವರ ಪತ್ನಿಯ ಕಣ್ಣಿಗೆ ಬಟ್ಟೆ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಮನಬಂದಂತೆ ಥಳಿಸಿದ್ದಾರೆ ಎಂದು ಅಲ್ಲಿನ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.
ಮನೆಯಲ್ಲಿ ಏನೋ ದೊಡ್ಡ ಶಬ್ದವಾಯಿತು. ಏನಾಯಿತು ಎಂದು ನೋಡುವಷ್ಟರಲ್ಲಿ ನಾಲ್ವರು ಮನೆಯ ಬಾಗಿಲು ಮುಗಿದು ಒಳಗೆ ಬಂದಿದ್ದರು, ನಮ್ಮ ಕಣ್ಣು ಹಾಗೂ ಬಾಯಿಗೆ ಬಟ್ಟೆ ಕಟ್ಟಿ ಹಲ್ಲೆ ಮಾಡಿದರು. ಅವರು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಅವರು ಹೋದ ನಂತರ ಹೇಗೋ ಕೈಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿಕೊಂಡು ತಕ್ಷಣ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಇಲ್ಲದಿದ್ದರೆ ನಾವು ಅಲ್ಲೇ ಸಾಯಬೇಕಿತ್ತು ಎಂದು ಚಂದ್ರನ್ ಪೊಲೀಸರಿಗೆ ತಿಳಿಸಿದ್ದಾರೆ. ದುಷ್ಕರ್ಮಿಗಳು ಚಂದ್ರನ್ ಅವರ ಮನೆಯಿಂದ ಲ್ಯಾಪ್ಟಾಪ್, ಹಣ ಹಾಗೂ ಒಡವೆಗಳನ್ನು ದೋಚಿದ್ದಾರೆ.