ದಿನದ ಸುದ್ದಿ
ರೈತರಿಗೆ ನೀರು ಕೊರತೆ ಆಗದಂತೆ ಕ್ರಮವಹಿಸಬೇಕು: ಸಚಿವ ಸಿ.ಎಸ್.ಪುಟ್ಟರಾಜು
ಸುದ್ದಿದಿನ, ಮಂಡ್ಯ: ರೈತರಿಗೆ ಅನಾನುಕೂಲವಾಗದಂತೆ ಅಗತ್ಯವಾದ ನೀರನ್ನು ನೀಡಲು ನೀರಾವರಿ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ನೀರಾವರಿ ಸಚಿವರಾದ ಸಿ.ಎಸ್.ಪುಟ್ಟರಾಜು ಅವರು ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಥಮ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಳವಳ್ಳಿ ಹಾಗೂ ಮದ್ದೂರು ಭಾಗದ ವಿ.ಸಿ.ನಾಲೆ ವ್ಯಾಪ್ತಿಯ ಕಡೇ ಭಾಗಕ್ಕೆ ಕನ್ನಂಬಾಡಿ ಅಣೆಕಟ್ಟೆಯ ನೀರು ತಲುಪದ ಹಿನ್ನೆಲೆ ಯಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳ ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದ ಸಚಿವರು ನೀರಾವರಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಇಂಜಿನಿಯರ್ ಮತ್ತು ಸವಡೆಗಳ ನಡುವಿನ ಸಮನ್ವಯ ಹಾಗೂ ಹೊಂದಾಣಿಕೆ ಇಲ್ಲದೆ ರೈತರು ಪರಿತಪಿಸುವಂತಾಗಿದೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಳವಳ್ಳಿ ಶಾಸಕರಾದ ಡಾ.ಅನ್ನದಾನಿ ಅವರು ಮಳವಳ್ಳಿ ಕ್ಷೇತ್ರದ ವಿ.ಸಿ.ನಾಲೆ ಕಡೇ ಭಾಗಗಳಿಗೆ ಇದುವರೆಗೂ ನೀರು ಹರಿದಿಲ್ಲ. ರೈತರು ಭತ್ತ ಅಥವಾ ರಾಗಿ ನಾಟಿ ಮಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.
ಇದಕ್ಕೆ ಸ್ಪಂದಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಹೇಮಾವತಿ ನಾಲೆ ಆಧುನೀಕರಣ ಹಾಗೂ ಅಕ್ವಿಡೆಟ್ ಅಗಲೀಕರಣದಿಂದ ಆ ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸಲು ವಿಳಂಬವಾಗಿದೆ. ರಾಜ್ಯದ 30 ಸಾವಿರ ಕೆರೆಗಳು ನನ್ನ ವ್ಯಾಪ್ತಿಯ ಸಣ್ಣ ನೀರಾವರಿ ಇಲಾಖೆಗೆ ಒಳಪಟ್ಟಿವೆ. ಕನ್ನಂಬಾಡಿಯಲ್ಲಿ ಅಪಾರ ನೀರಿದ್ದರೂ ನಾಲೆಗಳ ಸಾಮಥ್ರ್ಯಕ್ಕೆ ತಕ್ಕಂತೆ ನೀರು ಹರಿಸಬೇಕಿದೆ. ಕೆರೆಗಳನ್ನು ತುಂಬಿಸಲು ಕಾರ್ಯೋನ್ಮುಖರಾಗಿದ್ದರೂ ಪ್ರಗತಿ ಸಾಧ್ಯವಾಗಿಲ್ಲ. ಇದಕ್ಕೆ ಮಳೆ ವೈಫಲ್ಯವೂ ಕಾರಣವಾಗಿದೆ. ತತ್ಕ್ಷಣ ನೀರಾವರಿ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆಯ ಸಹಕಾರ ಪಡೆದು, ಹೇಮಾವತಿ ವ್ಯಾಪ್ತಿಯ ಬಸರಾಳು, ದುದ್ದ ಹಾಗೂ ನಾಗಮಂಗಲ ವ್ಯಾಪ್ತಿಗೆ ನೀರು ತುಂಬಿಸಬೇಕೆಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಾರಿಗೆ ಸಚಿವರಾದ ಡಿ.ಸಿ.ತಮ್ಮಣ್ಣ ಅವರು ಬರಗಾಲದ ಅವಧಿಯಲ್ಲೂ 2000 ರಲ್ಲಿ ನೀರು ಹರಿಸಲಾಗಿತ್ತು. ಸ್ಥಳೀಯ ಪರಿಸ್ಥಿತಿಯನ್ನು ಅರಿತಿರುವ ಇಂಜಿನಿಯರ್ಗಳು ಅಲಭ್ಯರಾಗಿದ್ದಾರೆ. ಮೇಲ್ಭಾಗದ ರೈತರಿಗೆ ಮಿತ ನೀರು ನೀಡಿ, ನಿಗದಿತವಾಗಿ ಕೆಳ ಭಾಗಕ್ಕೆ ನೀರು ಹರಿಸಬೇಕು. ಅಧಿಕಾರಿಗಳ ನಡುವೆ ಸಮನ್ವಯತೆ ಕಡಿಮೆಯಾಗಿದೆ. ಈ ಬಗ್ಗೆ ನೀರಾವರಿ ಸಚಿವರು ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಬೇಕೆಂದರು.
ಈ ಸಮಸ್ಯೆಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಅವರು ನೀರು ನಿರ್ವಹಣೆ ಬಗ್ಗೆ ಈಗಾಗಲೇ ಜಾಗೃತ ಪಡೆ ರಚಿಸಲಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಪೊಲೀಸ್ ಹಾಗೂ ಕಂದಾಯ ಇಲಾಖೆಯ ಸಹಕಾರ ಪಡೆದು ಕಡೇ ಭಾಗದ ಕೆರೆಗಳನ್ನು ತುಂಬಿಸಲು ಮತ್ತು ನಾಲೆಗಳಿಗೆ ನೀರು ಹರಿಸಲು ನೀರಾವರಿ ಇಲಾಖೆಯ ಕಾರ್ಯ ಪ್ರವೃತ್ತರಾಗಬೇಕೆಂದು ಸೂಚಿಸಿದರು.
ಸಭೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಶ್ರೀನಿವಾಸ್, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ವಿಧಾನ ಪರಿಷತ್ ಶಾಸಕರಾದ ಎನ್.ಅಪ್ಪಾಜಿಗೌಡ, ಕೆ.ಟಿ.ಶ್ರೀಂಠೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಾಗರತ್ನ ಸ್ವಾಮಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಗಾಯಿತ್ರಿ, ಉಸ್ತುವಾರಿ ಕಾರ್ಯದರ್ಶಿ ಜಾವೇದ್ ಆಖ್ತರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಯಾಲಕ್ಕಿಗೌಡ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.