Connect with us

ರಾಜಕೀಯ

ಯುದ್ಧೋನ್ಮಾದ ಹೆಮ್ಮೆಯ ಅಮಲಿನ ವಿಲಕ್ಷಣ ಅಲೆ

Published

on

ಸುದ್ದಿದಿನ ವಿಶೇಷ : ಇಬ್ಬರ ನಡುವೆ ಜಗಳವಾಗುತ್ತದೆ. ಕೈ ಕೈ ಮಿಲಾಯಿಸಿ ಒಬ್ಬರನ್ನೊಬ್ಬರು ಹೊಡೆದುಕೊಂಡು ರಕ್ತಸಿಕ್ತಗೊಂಡು ಘಾಸಿಗೊಳ್ಳುವ ಸಂದರ್ಭವದು.

ದೈಹಿಕ ಶಕ್ತಿಯ ಬಲದಲ್ಲಿ ಒಬ್ಬರು ಮತ್ತೊಬ್ಬರನ್ನು ಮಣಿಸಿಬಿಡುತ್ತಾರೆ. ಗೆದ್ದು ಬೀಗುತ್ತಾರೆ. ಆ ಗೆಲುವು ಗೆದ್ದವನೊಳಗೆ ಅಹಂಕಾರವನ್ನು ಶಾಶ್ವತವಾಗಿ ಬೇರೂರಿಸಿಬಿಡುತ್ತದೆ. ಅದರ ಜೊತೆಗೆ ಪ್ರತಿಯೊಂದು ಸಲವೂ ಆ ಗೆಲುವನ್ನು ನೆನಪಿಸುವಂಥ ರೀತಿಯ ನಡವಳಿಕೆಗಳೊಂದಿಗೆ ಉಳಿದವರೊಳಗೆ ಭಯಭೀತಿ ಉಂಟುಮಾಡುತ್ತಲೇ ತನ್ನ ಪ್ರಾಬಲ್ಯದ ಪ್ರದರ್ಶನದೊಂದಿಗೆ ವಿಜೃಂಭಿಸುತ್ತಾನೆ. ಅಂಥ ಕ್ಷಣಗಳನ್ನೇ ಸಂಭ್ರಮಿಸುತ್ತಾ ದೈಹಿಕವಾಗಿ ಪ್ರಬಲವಾಗಿರುವುದೇ ಎಲ್ಲರನ್ನು ಹದ್ದುಬಸ್ತಿನಲ್ಲಿಡುವ ಬಹುಮುಖ್ಯ ತಂತ್ರ ಎಂಬುದನ್ನು ಸಾರುತ್ತಲೇ ಇರುತ್ತಾನೆ. ತನ್ನನ್ನು ತೊಡವಿಕೊಂಡರೆ ಪರಿಣಾಮ ನೆಟ್ಟಗಿರದು ಎಂಬ ಭಯಾನಕ ಸಂದೇಶ ರವಾನಿಸುತ್ತಾನೆ.

ಅವನ ಬೆಂಬಲಿಗರ ಭಾವುಕ ಅಜ್ಞಾನವು ಅವರಲ್ಲಿ ಒಂದು ಬಗೆಯ ಹುಸಿ ಹೆಮ್ಮೆಯನ್ನು ಮೂಡಿಸಿಬಿಡುತ್ತದೆ. ಅದರ ಕತ್ತಲ ಬಂಧದೊಳಗೆ ಬೆಂಬಲಿಗ ಅಭಿಮಾನಿಗಳ ವಿವೇಕ ಉಸಿರುಗಟ್ಟುತ್ತಿರುತ್ತದೆ. ಅಂಥವರ ಸಂಖ್ಯೆಯೇ ಹೆಚ್ಚಾಗುತ್ತಾ ಒಂದು ಬಗೆಯ ಸ್ಥಗಿತತೆಯ ವಾತಾವರಣ ನೆಲೆಸಿಬಿಡುತ್ತದೆ.

 

ನಕಾರಾತ್ಮಕತೆಗೆ ಸಾಕ್ಷ್ಯ ಒದಗಿಸುವ ಯುದ್ಧ

ಕಾರ್ಗಿಲ್ ವಿಜಯೋತ್ಸವವು ದೇಶದಾದ್ಯಂತ ಇಂಥದ್ದೊಂದು ನಕಾರಾತ್ಮಕತೆಗೆ ಸಾಕ್ಷ್ಯ ಒದಗಿಸುತ್ತಿದೆ. ಯುದ್ಧ ಗೆದ್ದ ಸಂಭ್ರಮದಲ್ಲಿ ದೇಶದ ಕುರಿತಾದ ಹೆಮ್ಮೆ ಅಪವ್ಯಾಖ್ಯಾನಕ್ಕೀಡಾಗುತ್ತಿದೆ. ನಿಜದ ಹೆಮ್ಮೆಯ ಬದಲು ವಿಲಕ್ಷಣ ಅಭಿಮಾನದ ವಿಕೃತಿ ವ್ಯಾಪಕವಾಗುತ್ತಲೇ ಇದೆ.

ಒಂದು ದೇಶ ಮತ್ತೊಂದು ದೇಶದ ವಿರುದ್ಧ ಜಯ ಸಾಧಿಸಿದ ಘಳಿಗೆಯನ್ನು ನೆನಪಿಸಿಕೊಂಡು ಜಗತ್ತಿಗೆ ನಮ್ಮ ಶಕ್ತಿಯನ್ನು ತೋರ್ಪಡಿಸುವ ವಿಜಯೋತ್ಸವವು ಪ್ರಜೆಗಳ ಪ್ರಜ್ಞೆಯನ್ನು ಶತಮಾನಗಳಷ್ಟು ಹಿಂದಕ್ಕೆ ತಳ್ಳುವ ಹುನ್ನಾರದ ಭಾಗವಾಗಿಯೇ ಕಾಣಿಸುತ್ತಿದೆ. ನಮ್ಮವರೇ ಆಗಿದ್ದವರು ಹಿಂದೊಮ್ಮೆ ವಿಭಜನೆಯ ಸಾಂದರ್ಭಿಕ ಅನಿವಾರ್ಯತೆಯಲ್ಲಿ ಅಧಾರ್ಮಿಕ ತಿಳಿಗೇಡಿತನದ ಪರಮಾವಧಿಯ ಅತಿರೇಕದ ಕಾರಣಕ್ಕಾಗಿ ಬೇರೊಂದು ದೇಶದವರಾದರು. ನಂತರ ಒಬ್ಬರಿಗೊಬ್ಬರು ಜಗಳವಾಡಿಕೊಳ್ಳುವ ಧಾವಂತ ಒಬ್ಬರನ್ನೊಬ್ಬರು ಜಯಿಸುವ ಹಠವನ್ನು ಪ್ರತಿಷ್ಠಾಪಿಸಿಬಿಟ್ಟಿತು. ಈ ಹಠದೊಂದಿಗಿನ ದ್ವೇಷದ ಭಾವಗಳನ್ನು ರಾಜಕೀಯ ಸಂಕುಚಿತತೆ ಮತ್ತು ಅಧಿಕಾರ ದಾಹದ ಮನುಷ್ಯ ಸಹಜ ದೌರ್ಬಲ್ಯಗಳು ಮತ್ತಷ್ಟು ಪ್ರಬಲಗೊಳಿಸಿದವು.

ಅವು ಎಷ್ಟು ಪ್ರಖರವಾಗಿ ಮುಂದುವರೆದವು ಎಂದರೆ ಬಗೆಹರಿಸಿಕೊಳ್ಳಬಹುದಾಗಿದ್ದ ಭಿನ್ನಾಭಿಪ್ರಾಯಗಳನ್ನು ಕ್ರೌರ್ಯದ ಮೂಲಸರಕುಗಳನ್ನಾಗಿಸಿದವು. ಇಷ್ಟಿಷ್ಟಕ್ಕೆ ಗೆರೆಗೀಚಿ ಜಗಳಕ್ಕೆ ನಿಲ್ಲುವುದನ್ನೇ ಸ್ಥಾಯಿಯಾಗಿಸಿದವು. ಒಡೆದು ಆಳುವ ನೀತಿಯನ್ನೇ ಬಂಡವಾಳವಾಗಿಸಿಕೊಂಡವರನ್ನು ಮುಂಚೂಣಿಗೆ ತಂದುನಿಲ್ಲಿಸಿದವು. ಅವರ ಮೂಗಿನ ನೇರಕ್ಕೆ ರಾಷ್ಟ್ರವಾದವನ್ನು ಮುನ್ನೆಲೆಗೆ ತಂದವು. ಅಷ್ಟೇ ಅಲ್ಲದೇ ದೇಶವನ್ನು ಪ್ರೇಮಿಸುವ ಭ್ರಮಾತ್ಮಕ ಭಾವನೆ ಕೆರಳಿಸುವಂಥ ವಿಕೃತಿಗಳನ್ನು ಸೃಷ್ಟಿಸಿದವು. ಯುದ್ಧ, ಸಂಘರ್ಷಗಳ ಜೊತೆಗೆ ನಿಲ್ಲುವ ವಿಲಕ್ಷಣ ವಿತಂಡವಾದವನ್ನು ದಾಟಿಸಿದವು.

ಉದಾತ್ತ ಪದಗಳ ವರ್ತುಲದೊಳಗೆ ಬಂಧಿ

ದೇಶಾಭಿಮಾನವು ಅಧಿಕಾರವನ್ನು ದಕ್ಕಿಸಿಕೊಳ್ಳುವ ಹುನ್ನಾರಗಳೊಂದಿಗೆ ಗುರುತಿಸಿಕೊಂಡವರ ರಾಕ್ಷಸ ಹಸಿವನ್ನು ನೀಗಿಸುವ ಪಾತ್ರವನ್ನು ನಿಭಾಯಿಸಲಾರಂಭಿಸಿತು. ಸಾವು-ನೋವುಗಳು ತ್ಯಾಗ-ಬಲಿದಾನಗಳ ಉದಾತ್ತ ಪದಗಳ ವರ್ತುಲದೊಳಗೆ ಬಂಧಿಯಾಗಿ ತಮ್ಮ ನಿಜ ಅರ್ಥವನ್ನು ಕಳೆದುಕೊಂಡವು. ಈ ಹಂತದಲ್ಲಿಯೇ ಇತಿಹಾಸದಲ್ಲಿ ಆಗಿಹೋದ ಗಾಯಗಳನ್ನು ಜನಪ್ರಿಯ ಶೈಲಿಯಲ್ಲಿ ನೆನಪಿಸಿಕೊಂಡು ಅತ್ಯದ್ಭುತ ಎನ್ನಿಸುವ ಹಾಗೆ ಭಾಷಾಪಾಂಡಿತ್ಯ ಪ್ರದರ್ಶಿಸಿ ಇನ್ನೊಂದು ದೇಶದ ವಿರುದ್ಧ ಮಾತನಾಡುತ್ತಾ ಬೆಂಬಲ ಗಳಿಸಿಕೊಳ್ಳುವ ರಹಸ್ಯ ಕಾರ್ಯಸೂಚಿ ಪ್ರಯತ್ನಗಳು ಯಶಸ್ಸು ಕಂಡವು. ಆ ಯಶಸ್ಸೇ ಇಂದು ಹಿಂಸೆಯ ಪರವಾದ ಸೋಂಕಿನೊಂದಿಗಿನ ವರ್ತನೆಗಳನ್ನೇ ವ್ಯಾಪಕವಾಗಿಸಿಬಿಟ್ಟಿದೆ.

ಇಂಥವುಗಳನ್ನು ಪ್ರಶ್ನಿಸಿ ಚಿಗುರಿಕೊಳ್ಳಬೇಕಾಗಿದ್ದ ಪರ್ಯಾಯ ಪ್ರತಿರೋಧದ ರಾಜಕಾರಣ ಪಕ್ಷಗಳ ಸಂಕುಚಿತ ಸಾರ್ವಭೌಮತ್ವದ ಅಲೆಯ ಹೊಡೆತಕ್ಕೆ ಸಿಲುಕಿಬಿಟ್ಟಿದೆ. ಆ ಅಲೆಯು ನಟನೆಯನ್ನೇ ನಿಜವಾದ ನಾಯಕತ್ವ ಎಂದು ಬಿಂಬಿಸುತ್ತಿದೆ. ಹಿಂದಿನವರಿಗಿಂತ ಈಗಿನ ಭಾವುಕ ಕೃತಕತೆಯೇ ಯೋಗ್ಯ ಎನ್ನುವಂಥ ನಂಬಿಕೆಯನ್ನು ಬಿತ್ತುತ್ತಿದೆ. ಚಿಂತನೆಯ ಸಾರ್ವಜನಿಕ ಸಾಮಥ್ರ್ಯವನ್ನೇ ಮುಳುಗಿಸಿ ಅದರ ಜಾಗದಲ್ಲಿ ಆರಾಧನೆಯ ಮನೋಭಾವವನ್ನು ನೆಲೆಗೊಳಿಸಿಬಿಟ್ಟಿದೆ.

ಮಾತಿನ ಮೋಡಿಯೊಳಗೆ ಸಿಲುಕಿದ ಯುವಜನ

ಯಾರನ್ನು ನೆಚ್ಚಿಕೊಂಡಿದ್ದೇವೆ, ಯಾರನ್ನು ನೆಚ್ಚಿಕೊಳ್ಳಬೇಕಿತ್ತು ಎಂಬ ವಿವೇಚನೆಯನ್ನೇ ಮರೆಸಿ ಒಂದು ಬಗೆಯ ಅಸಹಾಯಕತೆಯನ್ನು ಸೃಷ್ಟಿಸಿಬಿಟ್ಟಿದೆ.
ಕಾರ್ಗಿಲ್ ಯುದ್ಧದ ವೇಳೆ ಭಾರತದ ಆಗಿನ ಪ್ರಧಾನಿ ಕಾವ್ಯಾತ್ಮಕ ಧಾಟಿಯ ಯುದ್ಧಪ್ರಚೋದಕ ಭಾವುಕ ಪರಿಭಾಷೆಯನ್ನು ನೆಚ್ಚಿಕೊಂಡಿದ್ದರು. ಈಗಿನ ಪ್ರಧಾನಿ ಭಾಷೆಗೆ ಇರುವ ಉದಾತ್ತ ದೃಷ್ಟಿಕೋನಗಳ ಬಹುಮುಖೀ ಪ್ರಭಾವೀ ಶಕ್ತಿಯನ್ನೇ ಆಧರಿಸಿಕೊಂಡ ಮಾತಿನ ಮೋಡಿಯೊಳಗೆ ಜನರನ್ನು ಸಿಲುಕಿಸುತ್ತಿದ್ದಾರೆ. ಮಾತನಾಡಲೇಬೇಕಾದ ಸಂಗತಿಗಳ ಬಗ್ಗೆ ಮೌನವಹಿಸುತ್ತಿದ್ದಾರೆ.

ಇದೇನು ಇಂದು ನಿನ್ನೆಯ ರಾಜಕೀಯ ಪ್ರವೃತ್ತಿಯಲ್ಲ. ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು ಈಗ ಮಾತಿನ ಆಕರ್ಷಕ ಆಯಾಮ ಪಡೆದಿದೆ ಅಷ್ಟೇ. ಅವರ ಮೌನದ ಸ್ಪೇಸ್‍ನ್ನು ಅವರನ್ನು ಆರಾಧಿಸುವ ಬೆಂಬಲಿಗ ಪಡೆಯು ಸಂಘರ್ಷವನ್ನು, ಯದ್ಧೋನ್ಮಾದದ ಗುಂಗುಗಳನ್ನು ಶಾಶ್ವತವಾಗಿ ಬೇರೂರಿಬಿಡಿಸುವ ಪ್ರಯತ್ನಗಳಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ.
ಜನರೂ ರಾಜಕೀಯ ಮನರಂಜನೆಯ ಗ್ರಾಹಕರಾಗಿ ಮೂಕಪ್ರೇಕ್ಷಕರಾಗಿದ್ದಾರೆ. ಅವರ ಅಸಹಾಯಕತೆಯು ಯುದ್ಧೋನ್ಮಾದದ ಅಮಲನ್ನು ಹೆಮ್ಮೆ ಮತ್ತು ಅಭಿಮಾನ ಎಂಬ ಪದಗಳೊಂದಿಗೆ ಜೋಡಿಸಿ ಹಿಂಸೆಯ ಪರವಾದ ಅಲೆಯನ್ನು ಸೃಷ್ಟಿಸಲಾಗುತ್ತಿದೆ. ರಂಜನೆಯ ರೂಪದ ನುಡಿಗಳು ಮತ್ತು ಮಾತನಾಡಲೇಬೇಕಾದ ಸಂದರ್ಭದಲ್ಲಿ ಮೌನಕ್ಕೆ ಶರಣುಹೋಗುವ ತಂತ್ರಗಳ ಮೂಲಕ ಹಿಂಸೆಯೇ ಎಲ್ಲದಕ್ಕೂ ಪರಿಹಾರ ಎಂಬ ತಪ್ಪುಕಲ್ಪನೆಯನ್ನು ಬಿತ್ತಲಾಗುತ್ತಿದೆ. ತಪ್ಪು ತಿಳುವಳಿಕೆಗಳನ್ನು ನೆಲೆಗೊಳಿಸಿ ಅದರ ಆಧಾರದ ಮೇಲೆ ಅಧಿಕಾರದ ಮೇಲಿನ ಹಿಡಿತವನ್ನು ಪ್ರಬಲಗೊಳಿಸಿಕೊಳ್ಳುವ ಹೆಜ್ಜೆಗಳು ಹಿಂದೆಂದಿಗಿಂತಲೂ ದಟ್ಟವಾಗುತ್ತಿವೆ.

ಮನಮೋಹನ ಮೌನಕ್ಕಿಂತಲೂ ಈಗಿಮ ಮಾತಿನ ಅಬ್ಬರವೇ ಮೇಲು

ಹಿಂದಿನ ಮನಮೋಹನ ಮೌನಕ್ಕಿಂತಲೂ ಈಗಿನ ಮಾತಿನ ಅಬ್ಬರವೇ ಮೇಲು ಎಂದು ನಂಬಿಸಲಾಗುತ್ತಿದೆ. ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷವು ಪ್ರಬಲ ಪ್ರತಿರೋಧವನ್ನೊಡ್ಡುವ ಬದಲು ತನ್ನ ಮುಂಚೂಣಿ ಯುವ ನೇತಾರನ ತೊಳಲಾಟದ ಚಡಪಡಿಕೆಗೆ ಸಾಕ್ಷಿಯಾಗುತ್ತಿದೆ. ಇದೆಲ್ಲದರ ನಡುವೆ ಹಿಂಸೆಯು ಅಧಿಕಾರದ ಅಧಿಪತ್ಯದ ಇಂಧನವಾಗಿ ರಾಜಕೀಯ ಬೃಹದಾಕೃತಿಯನ್ನು ತಳೆದುಬಿಟ್ಟಿದೆ. ಅದೇ ಕಾರ್ಗಿಲ್ ಜಯಭೇರಿಯ ಕ್ಷಣಗಳಿಗೆ ಉತ್ಸವದ ಬಣ್ಣವನ್ನು ಲೇಪಿಸಿ ಜನರ ಮನೋಧರ್ಮವನ್ನು ಯುದ್ಧದ ಪರವಾಗಿ ತಿರುಗಿಸಿಬಿಟ್ಟಿದೆ.

ಯುದ್ಧವೆಂದರೆ ಎರಡು ದೇಶಗಳ ಸಂಘರ್ಷದ ಹಿಂಸಾತ್ಮಕ ಕ್ರಿಯೆ. ಕಳೆದುಕೊಳ್ಳುವ ನೋವುಗಳನ್ನು ಮನುಷ್ಯ ವಲಯದೊಳಗೆ ಸೇರ್ಪಡೆಗೊಳಿಸುವ ರಾಕ್ಷಸದಾಹದ ಅಖಾಡ. ಸೈನಿಕರ ಜೀವಗಳನ್ನು ಬಲಿ ಪಡೆದು ತಂದೆ, ತಾಯಿ, ಅಜ್ಜ, ಅಜ್ಜಿ, ಪತ್ನಿ, ಅಕ್ಕ, ತಂಗಿ ಸೇರಿದಂತೆ ಸಂಬಂಧಿಗಳೊಳಗೆ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಭಯಾನಕ ಸ್ವರೂಪಿ. ಜೀವ ಕಳೆದುಕೊಂಡ ಸೈನಿಕರ ತ್ಯಾಗ ನೆನಪಿಸಿಕೊಂಡು ದೇಶದ ಆಡಳಿತಾತ್ಮಕ ಪ್ರತಿನಿಧಿಗಳು ಅಧಿಕಾರಕ್ಕೆ ಮತ್ತಷ್ಟು ಹತ್ತಿರಾಗುವ ಪ್ರಯತ್ನಗಳಿಗೆ ಕುಮ್ಮಕ್ಕು ನೀಡುವ ಸಂದರ್ಭ. ಜೊತೆಗೆ ಯುದ್ಧ ನಡೆಯಲೇಬೇಕು, ಎದುರಾಳಿಗಳ ಸೊಕ್ಕು ಮುರಿಯಲೇಬೇಕು ಎಂಬ ಆವೇಶಭರಿತ ವಿಕೃತಿಗಳನ್ನು ವಿಜೃಂಭಿಸಿಕೊಳ್ಳಲು ಬೇಕಾಗುವ ಮಾಹಿತಿಯ ನಮೂನೆಗಳನ್ನು ನೆನಪಿಸಿಕೊಳ್ಳಲು ಪೂರಕವಾಗುವ ಬೀತಿಯ ಮೂಲ.

ಸದ್ಯದ ಕಾರ್ಗಿಲ್ ವಿಜಯೋತ್ಸವದೊಂದಿಗಿನ ರಹಸ್ಯ ಕಾರ್ಯಸೂಚಿ ಮತ್ತು ಅದನ್ನು ದೃಷ್ಟಿಯಲ್ಲಿರಿಸಿಕೊಂಡ ಸಂಕುಚಿತ ರಾಜಕಾರಣ ಯುದ್ಧವನ್ನು ಹೀಗೆ ಮರುವ್ಯಾಖ್ಯಾನಿಸಿಕೊಳ್ಳುವ ಒತ್ತಡವನ್ನು ಸೃಷ್ಟಿಸಿದೆ.
ಆದರೆ, ನಮ್ಮ ಯುವಶಕ್ತಿ ನಾಲ್ಕು ಗೋಡೆಗಳ ಮಧ್ಯೆ ಕುಳಿತುಕೊಂಡು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಭಾವುಕತೆಯ ಲೇಪನೆಯೊಂದಿಗಿನ ವಿಕೃತ ಬಿಂಬಗಳನ್ನೇ ಆರಾಧಿಸುತ್ತಾ ಸೈನಿಕರನ್ನು ನೆನಪಿಸಿಕೊಳ್ಳುವುದಷ್ಟನ್ನೇ ದೇಶಪ್ರೇಮ ಎಂದುಕೊಂಡಿವೆ. ಯುದ್ಧ ಆಗಲೇಬೇಕು, ಯುದ್ಧದಿಂದಲೇ ಪರಿಹಾರ ಎಂಬ ಅಧಿಕಾರಕೇಂದ್ರದ ಮೂಲಭೂತವಾದಿ ದೃಷ್ಟಿಕೋನವನ್ನೇ ಆರಾಧಿಸುತ್ತಾ, ಆ ಆರಾಧನೆಯ ಭಾವಗಳನ್ನೇ ವಿಸ್ತರಿಸುವ ಪ್ರಚೋದಕ ಮಾಹಿತಿ, ಮಾತುಗಳನ್ನು ಶೇರ್ ಮಾಡುತ್ತಾ ತಮ್ಮೊಳಗಿನ ಯೋಚನೆಯ ಶಕ್ತಿಯನ್ನೇ ಕ್ರಮೇಣ ಕಳಚಿಕೊಳ್ಳುತ್ತಾ ಸಾಗಿದೆ.

ಗೇಲಿ ಮಾಡುವ ಪ್ರವೃತ್ತಿ

ಯೋಚಿಸುವವರನ್ನು ‘ಬುದ್ಧಿಜೀವಿಗಳು’ ಎಂಬ ಪಟ್ಟ ಕಟ್ಟಿ ಅದೊಂದು ಅಸ್ಪೃಶ್ಯ ವರ್ಗ ಎನ್ನುವಂತೆ ಗೇಲಿಮಾಡುತ್ತಿದೆ. ಬುದ್ಧಿ ಮತ್ತು ಜೀವ ಎರಡೂ ಮನುಷ್ಯ ಬದುಕನ್ನು ಚಲನಶೀಲಗೊಳಿಸುವಂಥವು. ಬುದ್ಧಿಯು ವಿವೇಕ ತಂದುಕೊಳ್ಳುವ ಮೂಲವಾದರೆ ಜೀವ ಅಂಥ ವಿವೇಕವನ್ನು ದಾಟಿಸುವ ಚಲನೆಯನ್ನೇ ಸಂಕೇತಿಸುತ್ತದೆ. ಆ ಮೂಲಕ ಸಾಮಾಜಿಕ ಚಲನಶೀಲತೆಯ ಜೀವಂತಿಕೆಯನ್ನು ಹೆಚ್ಚಿಸುವುದಕ್ಕೆ ಸಾಧ್ಯವಾಗುತ್ತದೆ. ಅದಕ್ಕೆ ಮೌಲಿಕ ಚಿಂತನೆಗಳನ್ನು ಕೊಡುಗೆಗಳನ್ನಾಗಿ ನೀಡುವವರು ಬುದ್ಧಿಜೀವಿಗಳೆನ್ನಿಸಿಕೊಳ್ಳುತ್ತಾರೆ. ತಾವು ಬುದ್ಧಿಜೀವಿಗಳೆಂದುಕೊಂಡು ಬೀಗುವವರು, ತಮ್ಮ ಬುದ್ಧಿಯನ್ನು ಅಧಿಕಾರದಲ್ಲಿರುವವರ ಕೈಗೊಪ್ಪಿಸುವವರು, ಸಮಾಜದ ಜೀವಂತಿಕೆಗೆ ತದ್ವಿರುದ್ಧದ ನಡವಳಿಕೆಯವರು ಬುದ್ಧಿ ಅಥವಾ ವಿವೇಕದೊಂದಿಗಿನ ಜೀವಗಳಲ್ಲ. ಆದರೆ, ಸಮಾಜಕ್ಕೆ ಈ ಕ್ಷಣಕ್ಕೆ ಬೇಕಾದದ್ದನ್ನು ಪ್ರಸ್ತಾಪಿಸಿ ಅಧಿಕಾರದಲ್ಲಿರುವವರನ್ನು ಎಚ್ಚರಿಸುವ ಮಾತುಗಳನ್ನಾಡಿ ಬೆಳವಣಿಗೆಗೆ ಅರ್ಥಪೂರ್ಣ ತೀವ್ರತೆ ತಂದುಕೊಡುವ ಚಿಂತನಶೀಲರು ಬುದ್ಧಿಜೀವಿಗಳು.

ನಮ್ಮ ರಾಜಕಾರಣ ಮತ್ತು ಮಾಧ್ಯಮದ ಆಕ್ರಾಮಕ ಭಾಷಿಕ ವಿಕೃತಿಗಳು ಬುದ್ಧಿಜೀವಿಗಳ ವೈವಿಧ್ಯಮಯ ಶಕ್ತಿಯನ್ನು ಹಿನ್ನೆಲೆಗೆ ಸರಿಸಿ ಅವರನ್ನು ದೇಶದ್ರೋಹಿಗಳು ಎಂದು ಬಿಂಬಿಸುವುದರ ಕಡೆಗೆ ಹೆಚ್ಚು ವಾಲಿಕೊಂಡಿವೆ. ನಾಯಕರೆನ್ನಿಸಿಕೊಂಡ ಅಪ್ರಬುದ್ಧರು ‘ನಾನು ಗೃಹಸಚಿವನಾಗಿದ್ದರೆ ಇಂಥವರನ್ನು ಒಟ್ಟಿಗೆ ನಿಲ್ಲಿಸಿ ಗುಂಡು ಹಾರಿಸುವಂತೆ ಹೇಳುತ್ತಿದ್ದೆ’ ಎಂಬ ಯುದ್ಧದ ಪರಿಭಾಷೆಯಲ್ಲಿಯೇ ಮಾತನಾಡಿಬಿಡುತ್ತಾರೆ. ಆ ಮಾತನ್ನು ಸುದ್ದಿಮಾಧ್ಯಮಗಳು ಬಹುದೊಡ್ಡ ದಾರ್ಶನಿಕ ನುಡಿ ಎಂಬಂತೆ ಚಿತ್ರಿಸಿಬಿಡುತ್ತವೆ. ಮತ್ತೊಂದು ರಾಷ್ಟ್ರದ ವಿರುದ್ಧದ ಯುದ್ಧಸನ್ನದ್ಧತೆಯ ವಿಕೃತಿಗಳು ಮತ್ತು ದೇಶದ ಒಳಗೇ ಇರುವ ಯೋಚಿಸುವ ಶಕ್ತಿಯುಳ್ಳವರ ವಿರುದ್ಧದ ಹಿಂಸಾತ್ಮಕ ದಾಳಿಗಳು ಸಂಕುಚಿತತೆಯನ್ನು ವಿಸ್ತಾರಗೊಳಿಸಲು ಬೇಕಾದ ಜನಸಮ್ಮತಿಯನ್ನು ಉತ್ಪಾದಿಸಿಕೊಳ್ಳುತ್ತಿವೆ. ಹಾಗಾಗುವಂತೆ ಮೂಲಭೂತವಾದಿ ಚಾಣಾಕ್ಷ ನಡೆಗಳು ಸಂವಹನ ತಂತ್ರಗಳನ್ನು ಹೆಣೆದು ಯಶಸ್ಸು ಕಾಣುತ್ತಿವೆ.

ಮೂಲಭೂತವಾದಿ ಕಾರ್ಯತಂತ್ರಗಳು ಗಾಂಧಿ ಚಿಂತನೆಯನ್ನು ಪರೋಕ್ಷವಾಗಿ ಮತ್ತು ನೇರವಾಗಿ ಅಪ್ರಸ್ತುತ ಎಂದು ನಂಬಿಸುತ್ತಿವೆ. ಉಪವಾಸದ ನಡೆಗಿಂತ ಹಿಂಸೆಯೊಂದಿಗಿನ ನಡೆಗಳಿಗೆ ಬ್ರಿಟಿಷರು ಹೆದರಿದರು ಎಂದು ಈಗಾಗಲೇ ಆಗಿಹೋದ ಇತಿಹಾಸವನ್ನು ಸಂಕುಚಿತ ದೃಷ್ಟಿಕೋನಗಳ ಮಟ್ಟಕ್ಕಿಳಿಸಿ ವಿವರಿಸುತ್ತಿವೆ. ಇಂಥವುಗಳನ್ನು ಅಲ್ಲಗಳೆಯಬೇಕಿದ್ದ ಸುದ್ದಿಮಾಧ್ಯಮಗಳು ವೈಭವೀಕರಣದ ತಂತ್ರಗಾರಿಕೆಯೊಂದಿಗೆ ಪ್ರಜೆಗಳನ್ನು ವೀಕ್ಷಕ ಗ್ರಾಹಕರನ್ನಾಗಿಸಿಕೊಂಡು ಹಣಗಳಿಕೆಯ ಲೆಕ್ಕಾಚಾರದ ಗುಂಗಿನೊಂದಿಗೇ ಸಂಭ್ರಮಿಸುತ್ತಿವೆ. ಈ ನಕಾರಾತ್ಮಕತೆಗೆ ಕಡಿವಾಣ ಹೇಗೆ? ಸಾಧ್ಯವೇ ಇಲ್ಲ ಎನ್ನುವಂತಿಲ್ಲ.

ಮತ್ತೆ ಬುದ್ಧಿ ಮತ್ತು ಜೀವಗಳೆರಡೂ ಸಂಯೋಜಿತಗೊಂಡು ಚಲನಶೀಲತೆಯೆಡಗಿನ ಪಯಣ ಹಿಂದೆಂದಿಗಿಂತಲೂ ತೀವ್ರಗೊಳ್ಳಬೇಕು. ಪ್ರಶ್ನೆಗಳು ಹುಟ್ಟಿಕೊಳ್ಳಬೇಕು. ಪ್ರಶ್ನಿಸುವವರ ಸ್ಥೈರ್ಯ ಹೆಚ್ಚಿಸುವ ಪ್ರಜಾಸತ್ತಾತ್ಮಕ ವಾತಾವರಣ ರೂಪುಗೊಳ್ಳಬೇಕು. ಬುದ್ಧಿ ಜೀವಗಳನ್ನು ಕೊಲ್ಲುವ ಪರಿಭಾಷೆಯನ್ನು ಎದುರುಗೊಳ್ಳುವ ಸೌಹಾರ್ದಯುತ ಸಂವಾದದ ಆರೋಗ್ಯಕರ ಆಂದೋಲನ ದೇಶವ್ಯಾಪಿಯಾಗಬೇಕು. ಯುದ್ಧೋನ್ಮೋದ ಮತ್ತು ಸಂಘರ್ಷದ ಭಾಷಿಕ ವಿಕೃತಿಗಳಿಗಿಂತ ಮಾನವೀಯತೆಯೇ ದೇಶದ ಶ್ರೇಷ್ಠ ಗುಣಲಕ್ಷಣವಾಗಬೇಕು ಎಂಬ ಕಾಳಜಿಗಳು ಮುನ್ನೆಲೆಗೆ ಬರಬೇಕು. ದೇಶದ ಕುರಿತಾದ ಹೆಮ್ಮೆಯ ಭಾವಗಳು ಮನುಷ್ಯತ್ವದ ಮೌಲಿಕತೆಯೊಂದಿಗೇ ಸಂಯೋಜಿತಗೊಳ್ಳಬೇಕು. ದೇಶದ ಬಗೆಗಿನ ಪ್ರೇಮವು ಅಂಧಾಭಿಮಾನದ ಮಿತಿಗಳನ್ನು ದಾಟಿಕೊಂಡು ಗಂಭೀರ ಚಿಂತನೆಗಳ ಬಲದಲ್ಲಿ ಗಟ್ಟಿಗೊಳ್ಳಬೇಕು.

(ಲೇಖಕರು: ಡಾ.ಎನ್.ಕೆ.ಪದ್ಮನಾಭ,
ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್‍ಡಿಎಂ ಸ್ನಾತಕೋತ್ತರ ಕೇಂದ್ರ, ಉಜಿರೆ)

ದಿನದ ಸುದ್ದಿ

ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ

Published

on

ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.

ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.

ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.

ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.

ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು‌.”

  • ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
  • ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ:2023-24ನೇ ಸಾಲಿನಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ ಬರುವ ಸಮಸ್ಯಾತ್ಮಕ ಗ್ರಾಮಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿ 5 ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್, ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳೇಶ್ ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇಲ್ಲಿಗೆ 2023-24ನೇ ಸಾಲಿನಲ್ಲಿ ಉಂಟಾದ ಮಳೆಯ ಅಭಾವ ಮತ್ತು ಬರದ ಕಾರಣದಿಂದ ಕೋಟ್ಯಾಂತರ ರೂಪಾಯಿಗಳನ್ನು ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಆದರೆ ಕೆಲವು ಅಧಿಕಾರಿಗಳು ತುರ್ತು ಕುಡಿಯುವ ನೀರಿನ ಅನುದಾನವನ್ನು ದುರುಪಯೋಗಪಡಿಸಿಕೊಂಡ ಮಾಹಿತಿ ತಿಳಿದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಉಪ ವಿಭಾಗ, ಚನ್ನಗಿರಿ ಇವರಿಂದ ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಪಡೆಯಲಾಗಿದೆ.

ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಸಾಕಷ್ಟು ಅವ್ಯವಹಾರ ನಡೆದಿರುವುದು ಕಂಡುಬಂದ ಕಾರಣ ಸೂಕ್ತ ದಾಖಲೆಗಳೊಂದಿಗೆ ದಿನಾಂಕ: 05-07-2025 ರಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ, ದಾವಣಗೆರೆ ಇವರಿಗೆ ದೂರು ನೀಡಿ, ತನಿಖೆಗೆ ಒಳಪಡಿಸುವಂತೆ ಕೋರಿದ್ದರು. ದೂರು ನೀಡಿ 3 ತಿಂಗಳು ಕಳೆದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ತನಿಖೆಯನ್ನು ಕೈಗೊಂಡ ಬಗ್ಗೆ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ದಿನಾಂಕ: 29-10-2025 ರಂದು ಜ್ಞಾಪನವನ್ನು ಸಹ ನೀಡಲಾಗಿತ್ತು.

ಆದರೆ ನಾವು ಜ್ಞಾಪನ ನೀಡಿ ಒಂದು ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳೇಶ್ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆಯಲ್ಲಿ ಸರ್ಕಾರಿ ನಿವೇಶನಗಳು ಖಾಲಿ ಇದ್ದರೆ ಅವುಗಳನ್ನು ಕೂಡಲೇ ಸರ್ಕಾರಿ ಕಚೇರಿಗಳ ಉಪಯೋಗಕ್ಕೆ ನೀಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದರು.

ಮಂಗಳವಾರ(ಡಿ.2) ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕೊರತೆಯಾಗಬಾರದು. 100 ವಿದ್ಯಾರ್ಥಿಗಳು ವಾಸಿಸುವ ಕಟ್ಟಡಕ್ಕೆ ಬದಲಾಗಿ 400 ವಿದ್ಯಾರ್ಥಿಗಳು ವಾಸ ಮಾಡುವ ಕಟ್ಟಡವನ್ನು ನಿರ್ಮಿಸಬೇಕು ಎಂದರು. ಖಬರಸ್ಥಾನಕ್ಕೆ ಮತ್ತು ಸ್ಮಶಾನಕ್ಕೆ ಜಾಗದ ಅವಶ್ಯಕತೆ ಇದ್ದರೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಅಂಗನವಾಡಿ ಕೇಂದ್ರಗಳನ್ನು ಅಲ್ಪಸಂಖ್ಯಾತರ ಸಮುದಾಯದ ಜನರು ಅಧಿಕವಾಗಿ ವಾಸಿಸುತ್ತಿರುವ ತಾಲ್ಲೂಕುಗಳು ಮತ್ತು ಗ್ರಾಮಗಳಲ್ಲಿ ತೆರೆಯುವುದು, ಇದರಿಂದಾಗಿ ಯೋಜನೆಯ ಪ್ರಯೋಜನೆಗಳು ಅವರುಗಳಿಗೆ ನೇರವಾಗಿ ಸಿಗುತ್ತವೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಶಾಲೆ, ಕಾಲೇಜು ಹಾಗೂ ಅಂಗನವಾಡಿಗಳಿಗೆ ವಕ್ಫ್ ಬೋರ್ಡ್ ಅಥವಾ ಯಾವುದೇ ಇಲಾಖೆಯ ಅಧೀನದಲ್ಲಿನ ನಿವೇಶನವಿದ್ದರೂ ಗುರುತಿಸಿ ಶಾಲೆ, ಕಾಲೇಜುಗಳ ಕಟ್ಟಡ ನಿರ್ಮಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಇಲಾಖೆಗಳಲ್ಲಿನ ಯೋಜನೆಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು.

ವಿವಿಧ ಇಲಾಖೆಯ ಅನುಪಾಲನಾ ವರದಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಭಕ್ತಮಾರ್ಕಡೇಶ್ವರ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದರು.

ಸಮಾಜದ ಧಾರ್ಮಿಕ ಮುಖಂಡರು ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ವಸತಿ ಶಾಲೆಗೆ ಸೇರಿಸುವಂತಾಗಲು ಪ್ರೇರೇಪಿಸಬೇಕು. ವಸತಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದರ ಜೊತೆಗೆ ಅಗತ್ಯ ಸೌಲಭ್ಯ ಇರುವ ಬಗ್ಗೆ ತಿಳಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಮತ ಹೊಸಗೌಡ್ರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ, ಡಿಡಿಪಿಐ ಕೊಟ್ರೇಶ್, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿರುವರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ1 day ago

ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ

ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು....

ದಿನದ ಸುದ್ದಿ1 day ago

ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ...

ದಿನದ ಸುದ್ದಿ3 days ago

ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ...

ದಿನದ ಸುದ್ದಿ4 days ago

ದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ:2023-24ನೇ ಸಾಲಿನಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ ಬರುವ ಸಮಸ್ಯಾತ್ಮಕ ಗ್ರಾಮಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿ 5 ತಿಂಗಳು...

ದಿನದ ಸುದ್ದಿ5 days ago

ಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು

ಸುದ್ದಿದಿನ,ದಾವಣಗೆರೆ:ನಗರದ ಜಿಎಂ ವಿಶ್ವವಿದ್ಯಾನಿಲಯದ ಜಿಎಂ ಹಾಲಮ್ಮ ಸಭಾಂಗಣದಲ್ಲಿ 1.12 2025 ರಂದು ರಂಗೋತ್ಸವ -2025 ರ ಅಂತಿಮ ಸುತ್ತು ಗ್ರ್ಯಾಂಡ್ ಫಿನಾಲೆಯನ್ನು ಏರ್ಪಡಿಸಲಾಗಿತ್ತು. ಜಿಎಂ ವಿಶ್ವವಿದ್ಯಾಲಯದ ಎಲ್ಲಾ...

ದಿನದ ಸುದ್ದಿ5 days ago

ಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ

ಸುದ್ದಿದಿನ,ದಾವಣಗೆರೆ: ದಾವಣಗೆರೆಯಲ್ಲಿ ಸರ್ಕಾರಿ ನಿವೇಶನಗಳು ಖಾಲಿ ಇದ್ದರೆ ಅವುಗಳನ್ನು ಕೂಡಲೇ ಸರ್ಕಾರಿ ಕಚೇರಿಗಳ ಉಪಯೋಗಕ್ಕೆ ನೀಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದರು. ಮಂಗಳವಾರ(ಡಿ.2) ರಂದು ಜಿಲ್ಲಾಧಿಕಾರಿಗಳ ಕಚೇರಿ...

ದಿನದ ಸುದ್ದಿ5 days ago

ದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ

ಸುದ್ದಿದಿನ,ದಾವಣಗೆರೆ:ಕಾರ್ಮಿಕರಿಗೆ ತ್ವರಿತವಾಗಿ, ಕೆಲಸದ ಸ್ಥಳಗಳಲ್ಲೇ ವೈದ್ಯಕೀಯ ಸೇವೆ ಸಿಗಬೇಕು ಎಂಬ ಉದ್ದೇಶದಿಂದ ‘ಸಂಚಾರಿ ಆರೋಗ್ಯ ಘಟಕ’ (ಮೊಬೈಲ್ ಮೆಡಿಕಲ್ ಯುನಿಟ್) ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಕಾರ್ಮಿಕರು ಇದರ...

ದಿನದ ಸುದ್ದಿ5 days ago

ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಪ್ರಸಕ್ತ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಧರ್ತಿ ಅಭಾ ಜನ ಜಾತಿಯ ಗ್ರಾಮ ಉತ್ಕರ್ಷ ಅಭಿಯಾನದಡಿ ಮೀನುಮಾರಾಟಗಾರರಿಂದ ಸಹಾಯಧನ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ....

ದಿನದ ಸುದ್ದಿ1 week ago

ಎಂನರೇಗಾ ಯೋಜನೆ : ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಹರಿಹರ ತಾಲೂಕಿನ ತೋಟಗಾರಿಕೆ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹೊಸದಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಇಚ್ಛಿಸುವ ರೈತರಿಂದ...

ದಿನದ ಸುದ್ದಿ2 weeks ago

ಅಡ್ಡ ಬಂದ ನಾಯಿ ಉಳಿಸಲು ಹೋಗಿ ಕಾರು ಪಲ್ಟಿ : ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿಧನ

ಸುದ್ದಿದಿನಡೆಸ್ಕ್:ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸಂಬಂಧಿಕರ ಮದುವೆಗೆಂದು ವಿಜಯಪುರಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ...

Trending