ನೆಲದನಿ

ನೆಲದ ನಾದಧ್ವನಿ ಮೋರ್‍ಝಿಂಗ್ ಕಲಾವಿದ ಶಂಕ್ರಪ್ಪ ಬಾದಿಗಿ

Published

on

ನ್ನಡ ನಾಡು ಹಲವು ಸಂಸ್ಕøತಿ, ಕಲೆಗಳ ತವರೂರು. ಇಲ್ಲಿ ಅನಾದಿಕಾಲದಿಂದಲೂ ಹಲವಾರು ವಿಧವಾದ ಸಾಂಸ್ಕøತಿಕ ವೈಶಿಷ್ಟ್ಯತೆಯನ್ನು ಕಾಪಾಡಿಕೊಂಡು ಬರಲಾಗಿದೆ. ಇಲ್ಲಿನ ಕಲೆಯು ಈ ನಾಡಿನ ಹಿರಿಮೆಯನ್ನು ಜಗತ್ತಿನೆದುರು ಮೆರೆದಿರುವುದು ಕಂಡುಬರುತ್ತದೆ. ಕನ್ನಡ ನಾಡಿನಲ್ಲಿ ಜಾಗತೀಕರಣದಂಥ ಸಂದರ್ಭದಲ್ಲಿಯೂ ಕಲೆಗಳು ಜೀವಂತವಾಗಿರುವುದಕ್ಕೆ ಪ್ರಮುಖ ಕಾರಣವೆಂದರೆ, ಕಲೆಯೊಂದಿಗೆ ಭಾವನಾತ್ಮಕ ಭಾಂದವ್ಯವನ್ನು ರೂಪಿಸಿಕೊಂಡಿರುವ ಕಲಾವಿದನ ಶ್ರಮವಾಗಿದೆ. ಕಲೆಯನ್ನು ಕೇವಲ ಒಂದು ವ್ಯವಹಾರಿಕ ದೃಷ್ಟಿಯಿಂದ ನೋಡದೆ ಅದನ್ನು ತನ್ನ ಅಂತರಾಳದ ಕುಡಿಯಂಬಂತೆ ಪೋಷಿಸಿಕೊಂಡು ಬಂದಿರುವವನು ಕಲಾವಿದನಾಗಿದ್ದಾನೆ. ತಮ್ಮ ಬದುಕಿನ ಒಂದು ಭಾಗವಾಗಿ ಕಲೆಯನ್ನು ಮೈಗೊಡಿಸಿಕೊಂಡು ಬಂದಿರುವ ಕಲಾವಿದನು ಒಂದು ಕಲೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಹಂಬಲ ಹೊಂದಿರುತ್ತಾನೆ. ಕಲೆಯನ್ನೆ ಉಸಿರೆಂದುಕೊಂಡು, ಈ ಕಲೆಯ ಸಿಹಿಯನ್ನು ನಾಡಿನ ಜನತೆಗೆ ಉಣಬಡಿಸಿ ತಾವು ಮಾತ್ರ ಹಸಿದ ಹೊಟ್ಟೆಯಲ್ಲಿ ತೃಪ್ತಿಪಡುವಂತಹ ಎಷ್ಟೋ ಕಲಾವಿದರು ನಮ್ಮ ನಾಡಿನಲ್ಲಿ ಕಂಡುಬರುತ್ತಾರೆ. ಹೀಗೆ ಕಲೆಯ ಉಳಿವಿಗಾಗಿ ತನ್ನ ಬದುಕನ್ನೆ ಸಮರ್ಪಿಸಿಕೊಂಡಿರುವವರಲ್ಲಿ ಮೋರ್‍ಝಿಂಗ್ ನುಡಿಸುವ ಗಾರುಡಿಗ ಶಂಕ್ರಪ್ಪ ಬಾದಿಗಿಯವರು ಒಬ್ಬರಾಗಿದ್ದಾರೆ.

ಶಂಕ್ರಪ್ಪ ಬಾದಿಗಿಯವರು ಮೂಲತ `ಸುಡುಗಾಡು ಸಿದ್ಧ’ ಎಂಬ ಅಲೆಮಾರಿ ಜನಾಂಗದವರಾಗಿದ್ದು, ಬಳ್ಳಾರಿ ಜಿಲ್ಲೆ ಹೊಸಪೇಟೆಯ ಜಂಬುನಾಥನಹಳ್ಳಿ ಆಶ್ರಯ ಕಾಲೋನಿಯ ಟೆಂಟ್‍ಹೌಸ್‍ನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. 63 ವರ್ಷದ ಶಂಕ್ರಪ್ಪ ಬಾದಿಗಿಯವರು ಮೂರು ಜನ ಗಂಡು ಮಕ್ಕಳನ್ನು ಹೊಂದಿದ್ದು, ತಮ್ಮ ಮಕ್ಕಳಿಗೆ ಸೂಕ್ತವಾದ ಶಿಕ್ಷಣವನ್ನು ದೊರಕಿಸಿ ಕೊಡಲು ಸಾಧ್ಯವಾಗದ ಕಾರಣ ಅವರನ್ನು ಕೂಲಿ, ವ್ಯಾಪಾರದಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಶಂಕ್ರಪ್ಪ ಬಾದಿಗಿಯವರು ತಮ್ಮ ತಂದೆಯಾದ ದುರುಗಪ್ಪ ಬಾದಿಗಿಯವರಿಂದ ಬಳುವಳಿಯಾಗಿ ಬಂದ ಮೋರ್‍ಝಿಂಗ್ ವಾದ್ಯ ನುಡಿಸುವ ಕಲೆಯನ್ನು ತಮ್ಮ ಸತತವಾದ ಪ್ರಯತ್ನದಿಂದ ಕರಗತಮಾಡಿಕೊಂಡು, ಮುವತ್ತು ವರ್ಷಗಳಿಂದಲೂ ಈ ಕಲೆಯ ಉಳಿವಿಗಾಗಿ ಅವಿರತ ಪರಿಶ್ರಮವನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ.

ಶಂಕ್ರಪ್ಪ ಬಾದಿಗಿಯವರ ತಂದೆಯಾದ ದುರುಗಪ್ಪ ಬಾದಿಗಿಯವರು ಮೈಸೂರು ಮಹಾರಾಜರ ಆಸ್ಥಾನದಲ್ಲಿ ಮೋರ್‍ಝಿಂಗ್ ವಾದ್ಯವನ್ನು ನುಡಿಸುತ್ತಿದ್ದು, ಮಹಾರಾಜರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು. ಈ ವಿಶೇಷ ಕಲೆಯನ್ನು ತಮ್ಮ ಮಗನಿಗೆ ಕರಗತಗೊಳಿಸಿ ಈ ಕಲೆಯನ್ನು ಮುಂದಿನ ಪೀಳಿಗೆಗೂ ಕಾಪಾಡಿಕೊಂಡು ಹೋಗುವಂತೆ ತರಬೇತಿ ನೀಡಿದ್ದಾರೆ. ತಂದೆಯಿಂದ ಭಕ್ತಿ-ಭಾವದಿಂದ ಕರಗತ ಮಾಡಿಕೊಂಡಿರುವ ಈ ಸಂಗೀತ ಕಲೆಯನ್ನು ಉಳಿಸುವ ಹಂಬಲ ಹೊತ್ತ ಶಂಕ್ರಪ್ಪ ಬಾದಿಗಿಯವರು ತಮ್ಮ ಬಡತನದ ಬದುಕನ್ನು ಲೆಕ್ಕಿಸದೆ ಒಂದು ತಂಡವನ್ನು ರಚಿಸಿಕೊಂಡು, ಅವರಿಗೆ ಈ ಕಲೆಯ ತರಬೇತಿ ನೀಡುವ ಮೂಲಕ ತಮ್ಮದೆ ಆದ ಸಾಂಸ್ಕøತಿಕ ವೇಶ ಭೂಷಣ ತಯಾರಿಸಿಕೊಂಡು ಹಲವಾರು ಸಭೆ-ಸಮಾರಂಭಗಳಲ್ಲಿ ಈ ಕಲೆಯ ಪ್ರದರ್ಶನ ನೀಡುತ್ತ ಬಂದಿದ್ದು, ಜನರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಕೆಲವು ನಿಮಿಷಗಳ ಕಾಲ ತಮ್ಮ ಉಸಿರನ್ನು ಬಿಗಿ ಹಿಡಿದು ಈ ವಾದ್ಯವನ್ನು ನುಡಿಸುವ ಪರಿಗೆ ಕೇಳುಗರು ಆಶ್ಚರ್ಯ ಚಕಿತರಾಗುವುದರ ಜೊತೆಗೆ, ಇದರಿಂದ ಹೊರ ಹೊಮ್ಮುವ ನಾದದ ಸ್ವರಕ್ಕೆ ರೋಮಾಂಚನಗೊಳ್ಳುತ್ತಾರೆ ಪುರಂದರದಾಸರ ಕೀರ್ತನೆಗಳು, ತತ್ವಪದಗಳು ಹಾಗೂ ದೇವರ ಶ್ಲೋಕಗಳನ್ನು ಹಾಡುವ ಮೂಲಕ ಈ ವಾದ್ಯವನ್ನು ನುಡಿಸುವ ಕ್ರಮವು ಎಂಥವರನ್ನು ಕ್ಷಣಕಾಲದವರೆಗೆ ಮಂತ್ರಮುಗ್ದರನ್ನಾಗಿಸುತ್ತದೆ.

ತಮ್ಮ ಜೀವದ ಹಂಗನ್ನು ತೊರೆದು ಉಸಿರು ಬಿಗಿ ಹಿಡಿದು ವಾದ್ಯ ನುಡಿಸುವ ಈ ಕ್ರಮವು ಅವರು ಈ ಕಲೆಯಲ್ಲಿ ಹೊಂದಿರುವ ನೈಪುಣ್ಯತೆಯ ಜೊತೆಗೆ, ಕಲೆಯೊಂದಿಗಿನ ಇವರ ಭಾಂವ್ಯವನ್ನು ಸೂಚಿಸುತ್ತದೆ. ಸಂಗೀತಾ ಪರಿಕರಗಳಲ್ಲಿ ಒಂದು ವಿಶಿಷ್ಟ ಪ್ರಕಾರವಾಗಿರುವುದು ಮೋರ್‍ಝಿಂಗ್. ಭಾರತದಲ್ಲಿ ಇದರ ಮೂಲವು ದಕ್ಷಿಣ ಭಾರತ, ರಾಜಸ್ಥಾನ, ಪಾಕಿಸ್ಥಾನದ ಸಿಂಧ್‍ಪ್ರಾಂತ್ಯ ಹಾಗೂ ನೇಪಾಳದಲ್ಲಿ ಇರುವುದಾಗಿ ತಿಳಿದು ಬರುತ್ತದೆ. ಈ ಸಾಧನವನ್ನು ಇಂಗ್ಲಿಷ್ ಭಾಷೆಯಲ್ಲಿ `ಜಾಹಾರ್ಪ್’ ಎಂದು, ರಾಜಸ್ಥಾನ ಭಾಷೆಯಲ್ಲಿ `ಮೋರ್‍ಝಿಂಗ್’ ಎಂದು ಕರ್ನಾಟಕದಲ್ಲಿ `ಬಾಯಿಬಿಲ್ಲು ನೀದಸ್ವರ’ ಎಂಬುದಾಗಿಯೂ ಕರೆಯಲಾಗುತ್ತದೆ. ಇದು ತ್ರಿಶೂಲಾಕಾರದ ಚಮಟಿಗೆಯಂತೆ ಇದ್ದು, ಉಕ್ಕಿನ ಲೋಹದಿಂದ ತಯಾರಿಸಲಾಗಿದೆ. ಇದರ ಗಾತ್ರವು 10 ರಿಂದ 20 ಸೆಂ.ಮೀ ಇರುತ್ತದೆ. ಅಂಗೈ ಮುಷ್ಟಿಯಲ್ಲಿ ಹಿಡಿಯಬಹುದಾದ ಈ ಸಾಧನದಿಂದ ಒಬ್ಬನೇ ಕಲಾವಿದನು ಲಯಬದ್ಧವಾದ ಸಪ್ತಸ್ವರಗಳನ್ನು ನುಡಿಸುತ್ತಾನೆ. ಈ ಸಾಧನವು ಉಕ್ಕಿನಿಂದ ತಯಾರಿಸಲ್ಪಟ್ಟ ಕಾರಣ ಇದನ್ನು ಪ್ರತಿದಿನ ಸ್ವಚ್ಚಗೊಳಿಸಬೇಕಾಗುತ್ತದೆ. ಇಲ್ಲದೆ ಹೋದರೆ ಇದು ತುಕ್ಕು ಹಿಡಿದು ಸ್ವರ ಹೊರ ಹೊಮ್ಮುವುದಿಲ್ಲ. ತಮಿಳುನಾಡಿನ ಚೆನೈನಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಬ್ರಿಟಿಷರು ಸಂಗ್ರಹಿಸುವ ಸಂಗೀತದ ಎಲ್ಲ ಪರಿಕರಗಳಲ್ಲಿ ಎರಡು ಮೋರ್‍ಝಿಂಗ್ ಸಾಧನೆಗಳು ಇವೆ. ಈ ವಸ್ತು ಸಂಗ್ರಹಾಲಯದಲ್ಲಿರುವ ಸಾಧನಗಳನ್ನು ಉಪಯೋಗಿಸದ ಕಾರಣ ತುಕ್ಕು ಹಿಡಿದು ಮೂಲೆಯಲ್ಲಿ ನಿರ್ಜಿವ ವಸ್ತುಗಳಂತೆ ಕುಳಿತಿವೆ. ಆದರೆ ಕರ್ನಾಟಕದಲ್ಲಿ ತನ್ನ ಜೀವಂತಿಕೆಯನ್ನು ಕಾಪಾಡಿಕೊಂಡಿರುವ ಮೋರ್‍ಝಿಂಗ್ ವಾದ್ಯವು ಶಂಕ್ರಪ್ಪ ಬಾದಿಗಿಯವರ ಪರಿಶ್ರಮದಿಂದ ತನ್ನ ಅಸ್ಮಿತೆಯನ್ನು ಕಾಪಾಡಿಕೊಂಡಿದೆ.

ಮೋರ್‍ಝಿಂಗ್ (ಬಾಯಿಬಿಲ್ಲು ನಾದಸ್ವರ) ಕಲೆಯನ್ನು ತನ್ನ ತಂದೆಯಿಂದ ಕಾಪಾಡಿಕೊಂಡು ಬಂದು, ಇದರಲ್ಲಿ ಪಾಂಡಿತ್ಯವನ್ನು ಗಳಿಸಿಕೊಂಡಿರುವ ಶಂಕ್ರಪ್ಪ ಬಾದಿಗಿಯವರು ಈ ಕಲೆಯು ಅವನತಿಯ ಹಂಚಿನಲ್ಲಿರುವ ಕಾರಣ ಇದರ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ಒಂದು ಕಡೆ ದಟ್ಟದಾರಿದ್ರ್ಯದ ಬಡತನದ ನೋವು ಇವರನ್ನು ಕಾಡಿದರೆ, ಮತ್ತೊಂದೆಡೆ ಈ ಕಲೆಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದು, ಇದನ್ನು ಮುಂದಿನ ಪೀಳಿಗೆಗೂ ಕಾಪಾಡಿಕೊಳ್ಳಬೇಕೆಂಬ ಹಂಬಲ ಇವರದಾಗಿದೆ. ಕರ್ನಾಟಕದ ಬಹುತೇಕ ಕಲಾವಿದರ ಬದುಕು ಬಡತನದ ಬವಣೆಯಲ್ಲಿ ಕಮರಿ ಹೋಗುತ್ತಿವೆ. ಇತ್ತೀಚಿಗೆ ಸರ್ಕಾರವು ಇಂತಹ ಕಲೆಯನ್ನು ಜೀವಂತಗೊಳಿಸಬೇಕೆಂಬ ದೃಷ್ಟಿಯಿಂದ ಅಪರೂಪದ ಕಲೆಗಳು ಹಾಗೂ ಕಲಾವಿದರನ್ನು ಗುರುತಿಸಿ ಸಹಾಯ ಧನ ನೀಡುವ ಮೂಲಕ ಕಲಾವಿದರಿಗೆ ಪ್ರೋತ್ಸಹ ನೀಡುವ ಕಾರ್ಯ ಮೈಗೊಡಿಸಿಕೊಂಡಿದೆ. ಆದರೆ ಶಂಕ್ರಪ್ಪನವರಿಗೆ ಕರ್ನಾಟಕದ ಸರ್ಕಾರದಿಂದ ಯಾವುದೇ ಸಹಾಯ ಧನವಾಗಲೀ ಲಭ್ಯವಾಗಿಲ್ಲ. ಇವರು ಅನಕ್ಷರತೆಯ ನಡುವೆಯೂ ಕೆಲವು ಅಧಿಕಾರಿಗಳನ್ನು ಕಾಡಿಬೇಡಿ `ಮಾಶಾಸನಕ್ಕೆ’ ಅರ್ಜಿಸಲ್ಲಿಸಿದರು ಕೂಡ ಇವರಿಗೆ ಸರ್ಕಾರದಿಂದ ಯಾವುದೇ ಅನುದಾನ ಬಂದಿರುವುದಿಲ್ಲ.ಕರ್ನಾಟಕದಲ್ಲಿ ಎಷ್ಟೋ ಕಲಾವಿದರು ಎಲೆಮರೆಯ ಕಾಯಿಯಂತೆ ಇದ್ದು ತಮ್ಮ ಕಲೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಇಂತಹ ಅಪರೂಪದ ಕಲೆಯ ಉಳಿವಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಬಡತನದ ಬೇಗೆಯಲ್ಲಿಯೂ ತಮ್ಮಲ್ಲಿರುವ ಕಲೆಯ ಪಾಂಡಿತ್ಯಕ್ಕೆ ಚ್ಯುತಿಯಾಗದ ರೀತಿಯಲ್ಲಿ ಅದನ್ನು ಪೋಷಿಸಿಕೊಂಡು ಬಂದಿದ್ದಾರೆ. ಅಂತಹವರ ಸಾಲಿನಲ್ಲಿ ಶಂಕ್ರಪ್ಪ ಬಾದಿಗಿಯವರು ಒಬ್ಬರಾಗಿದ್ದಾರೆ. ಇವರ ಸ್ಥಿತಿಯು ಇಬ್ಬಾಯಿಯ ಖಡ್ಗದ ನಡುವೆ ಸಿಕ್ಕಿಹಾಕಿಕೊಂಡಂತಿದೆ. ಒಂದು ಕಡೆ ಭಾವನಾತ್ಮಕ ಸಂಬಂಧವನ್ನು ಹೊಂದಿ ಉಳಿಸಿಕೊಂಡು ಬಂದಿರುವ ಕಲೆಯಾದರೆ, ಮತ್ತೊಂದೆಡೆ ಸಮಾಜದಲ್ಲಿ ಸ್ವಾತಂತ್ರವಾಗಿ ತನ್ನ ಕುಟುಂಬವನ್ನು ರೂಪಿಸಿಕೊಳ್ಳಬೇಕೆಂಬ ಹಂಬಲ. ಒಂದರ ಉಳಿಗಾಗಿ ಬೆನ್ನತ್ತಿ ಹೊರಟರೆ ಮತ್ತೊಂದು ಬೀದಿಪಾಲಾಗುವಂತಿದೆ. ಆದ್ದರಿಂದ ಶಂಕ್ರಪ್ಪನವರಿಗೆ ಕರ್ನಾಟಕದ ಭವ್ಯ ಸಾಂಸ್ಕಂತಿಕ ಪರಂಪರೆಗೆ ಸಾಕ್ಷಿಯಾಗಿರುವ ಕಲೆಯ ಉಳಿವಿಗಾಗಿ ಶ್ರಮಿಸಬೇಕೋ? ಕಲೆಯ ತೊರೆದು ತನ್ನ ಕೌಟುಂಬಿಕ ಜೀವನವನ್ನು ಸುಧಾರಿಸಿಕೊಳ್ಳಬೇಕೋ? ಎಂಬ ಪ್ರಶ್ನೆಯು ಅವರನ್ನು ಕಾಡುತ್ತಿದೆ. ಪ್ರಸ್ತುತದಲ್ಲಿ ಸರ್ಕಾರವು ಸಂಗೀತ ಕಲೆಗಳನ್ನು ಕಾಪಾಡುವ ಮತ್ತು ಅವುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಪ್ರತ್ಯೇಕವಾಗಿ ಸಂಗೀತ ವಿಶ್ವವಿದ್ಯಾಲಯಗಳನ್ನು ಪ್ರಾರಂಬಿಸಿದೆ. ಇಂತಹ ವಿಶ್ವವಿದ್ಯಾಲಯಗಳು ಕೇವಲ ಅಕಡೆಮಿಕ್ ಆದ ಪಠ್ಯಕ್ರಮ ಆಧಾರಿತ ಸಂಗೀತ ಶಿಕ್ಷಣವನ್ನು ನೀಡುತ್ತಿವೆ. ಇಲ್ಲಿ ಈ ಅಕಡೆಮಿಕ್ ಪಠ್ಯಕ್ರಮದ ಜೊತೆಜೊತೆಯಲ್ಲಿಯೇ ವ್ಯಕ್ತಿಯ ಬದುಕಿನ ಜೊತೆಯಲ್ಲಿಯೆ ಬೆಳೆದು ಬಂದಿರುವ ಇಂತಹ ಜನಪದ ಸಂಗೀತ ಕಲೆಗಳನ್ನು ವಿಶ್ವವಿದ್ಯಾಲಯಗಳಲ್ಲಿ ಪರಿಚಯಿಸುವುದು ಅತ್ಯಂತ ಸೂಕ್ತವಾಗಿದೆ. ಈ ವಿಶ್ವವಿದ್ಯಾಲಯಗಳು ಅಳಿವಿನ ಅಂಚಿಗೆ ತಳಲ್ಪಟ್ಟಿರುವ ಕಲೆಗಳನ್ನು ಗುರುತಿಸಿ, ಇಂತಹ ಕಲಾವಿದರಿಂದ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಕಾರ್ಯಗಾರದಂತಹ ವಿಶೇಷ ಯೋಜನೆಗಳನ್ನು ರೂಪಿಸಿಕೊಳ್ಳುವುದರಿಂದ ಕಲೆಗೂ ಮತ್ತು ಕಲಾವಿದರಿಗೂ ಸೂಕ್ತ ನ್ಯಾಯ ಒದಗಿಸಿದಂತಾಗುತ್ತದೆ. ಅಕಡೆಮಿಕ್ ಜ್ಞಾನ ಶಿಸ್ತಿಗಿಂತಲೂ ಜೀವನದ ಅನುಭವದ ಮೂಲಕ ಪಡೆದ ಶಿಕ್ಷಣ ಹೆಚ್ಚು ಸಂವೇದನಾಶೀಲವಾಗಿರುತ್ತದೆ. ಇದರಿಂದ ಸಮಾಜದಲ್ಲಿ ಉತ್ತಮ ಪರಿಸರವನ್ನು ರೂಪಿಸಬಹುದಾಗಿದೆ. ಜಾಗತೀಕರಣದ ಭರಾಟೆಯಲ್ಲಿ ತಿರಸ್ಕøತಗೊಂಡಿರುವ ದೇಶಿ ಕಲೆಗಳಿಗೂ ಮತ್ತೆ ಜೀವ ನೀಡಿದಂತಾಗುತ್ತದೆ. ಇದರಿಂದ ಕರ್ನಾಟಕದ ಅದರಲ್ಲೂ ಭಾರತದ ಸಾಂಸ್ಕøತಿಕ ವೈಭವದ ಹಿರಿಮೆಯನ್ನು ಹೆಚ್ಚಿಸಿದ ಕೀರ್ತಿಯು ಲಭಿಸುತ್ತದೆ.ಶಂಕ್ರಪ್ಪ ಬಾದಗಿಯವರು ಅತ್ಯಂತ ಕಡುಬಡತನದಲ್ಲಿಯೂ ತಮ್ಮ ಕಲೆಯ ಉಳಿವಿಗಾಗಿ ಅವಿರತ ಹೋರಾಟ ನಡೆಸುತ್ತಿದ್ದಾರೆ. ಇವರಿಗೆ ನಾಡಿನ ಜನತೆ ಹಾಗೂ ವಿವಿಧ ವರ್ಗದ ಸಹಕಾರ ಅತ್ಯಂತ ಅಗತ್ಯವಾಗಿದೆ. ಸರ್ಕಾರ ಇಂತಹ ಪ್ರತಿಭೆಗಳಿಗೆ ಸೂಕ್ತ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದೆ ಆದರೆ ಈ ಕಲೆಯು ಜೀವಂತಿಕೆಯನ್ನು ಪಡೆಯುತ್ತದೆ. ಈ ಅಪರೂಪದ ದೇಶಿ ಕಲೆಯನ್ನು ನಾಡಿನ ಜನತೆಗೆ ಪರಿಚಯಿಸುವ ಆಸಕ್ತಿ ಉಳ್ಳವರು ಶಂಕ್ರಪ್ಪ ಬಾದಿಗಿಯವರನ್ನು ಸಂಪರ್ಕಿಸಿ ಅವರಿಗೆ ಸೂಕ್ತ ವೇದಿಕೆ ಒದಗಿಸಿಕೊಟ್ಟಿದ್ದೆ ಆದರೆ ಮುಕ್ತ ಮನಸ್ಸಿನಿಂದ ತಮ್ಮ ಕಲೆಯ ಪ್ರದರ್ಶನ ನೀಡುತ್ತಾರೆ. ಆಸಕ್ತಿ ಉಳ್ಳವರು ಶಂಕ್ರಪ್ಪ ಬಾದಿಗಿಯವರ ಮೊಬೈಲ್ ನಂಬರ್: 9741618957 ಗೆ ಸಂಪರ್ಕಿಸಬಹುದು. ಇದರಿಂದ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಕೀರ್ತಿಯು ಲಭಿಸುತ್ತದೆ. ಜೊತೆಗೆ ಅಳಿವಿನ ಅಂಚಿನಲ್ಲಿರುವ ಕಲೆಯನ್ನು ನಾಡಿನ ಜನತೆಗೆ ಪರಿಚಯಿಸಿದಂತಾಗುತ್ತದೆ. ಕಲೆಯನ್ನೆ ಉಸಿರಾಗಿಸಿಕೊಂಡು ನಿಸ್ವಾರ್ಥ ಸೇವೆಸಲ್ಲಿಸುತ್ತಿರುವ ಇವರ ಬದುಕು ಕಲೆಯ ಕಳೆಗೆ ಕಮರಿ ಹೋಗುತ್ತಿದೆ. ಇಂತಹ ಕಲಾವಿದನ ಬದುಕಿಗೆ ಕಲಾಸಕ್ತರು ಪ್ರೋತ್ಸಾಹ ನೀಡಿ ಇವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದೆ. ಸರ್ಕಾರವು ಇಂತಹ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ. ಇಂದು ಪ್ರಶಸ್ತಿಗಳು ರಾಜಕೀಯ ಒತ್ತಡದಿಂದ ಅನರ್ಹರ ಪಾಲಾಗುತ್ತಿವೆ. ಇದರಿಂದ ಪ್ರಶಸ್ತಿಗಳು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿವೆ. ಇದರ ಬದಲು ಸೂಕ್ತ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಗೌರವಿಸುವುದರಿಂದ ನಮ್ಮ ನಾಡಿನ ಕಲೆಗಳಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಇದರಿಂದ ಪ್ರಶಸ್ತಿಗಳಿಗೂ ಗೌರವ ಉಳಿಯುತ್ತದೆ.

Leave a Reply

Your email address will not be published. Required fields are marked *

Trending

Exit mobile version