ದಿನದ ಸುದ್ದಿ
ದಸರಾ ಹಬ್ಬ ಹಳೆ ಕರ್ನಾಟಕ ಜನರಲ್ಲಿ ‘ಹೊಸದೊಂದು ನಾಗರೀಕತೆ’ ಹುಟ್ಟು ಹಾಕಿದೆ : ಎಚ್.ಡಿ.ಕೆ
ಸುದ್ದಿದಿನ,ಮೈಸೂರು : ‘‘1610 ರಲ್ಲಿ ಶ್ರೀರಂಗಪಟ್ಟಣದಲ್ಲಿ ಆರಂಭಿಸಿದ ದಸರಾ ಮಹೋತ್ಸವ ಹಳೆ ಕರ್ನಾಟಕ ಭಾಗದ ಜನತೆಗೆ ನಾಗರಿಕತೆಯನ್ನು ತಂದುಕೊಟ್ಟಿದೆ’’ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಮರಿಸಿದರು.
ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಸನ್ನಿದಿಯಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸದ ಬಳಿಕ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ನಾಡಿನ ಜನತೆಯನ್ನು ಕುರಿತು ಮಾತನಾಡಿದರು.
‘‘ಹಳೆ ಕರ್ನಾಟಕಕ್ಕೆ ಹೋಲಿಕೆ ಮಾಡಿದಾಗ ಮೈಸೂರು ಭಾಗದಲ್ಲಿ ಮೂಲಭೂತ ಸೌಕರ್ಯಗಳು ಉತ್ತಮವಾಗಿರಲು ರಾಜರು ನೀಡಿದ ದೂರದೃಷ್ಟಿಯ ಯೋಜನೆಗಳೆ ಕಾರಣವಾಗಿದೆ. ಅವರ ಸಜ್ಜನಿಕೆಯ ಆಡಳಿತ ವೈಖರಿಯು ಈ ಭಾಗದ ಜನರಲ್ಲಿ ಹೊಸದೊಂದು ನಾಗರಿಕತೆ ಹುಟ್ಟು ಹಾಕಿದೆ’’ ಎಂದರು.
‘‘ದಸರಾ ಮಹೋತ್ಸವದ ಚಾಲನೆ ನೀಡಲು ಇಂದಿನ ಸರಕಾರ ಸುಧಾ ಮೂರ್ತಿ ಅವರನ್ನು ಆಯ್ಕೆ ಮಾಡಲು, ಅವರಲ್ಲಿರುವ ತಾಯಿ ಹೃದಯವೆ ಕಾರಣವಾಗಿದೆ. ಇಂತಹ ಸಹೃದಯ ಮಹಿಳೆ ನಾಡ ದೇವತೆಗೆ ಅಗ್ರ ಪೂಜೆ ಸಲ್ಲಿಸಿ ನಾಡಿನ ಜನತೆಗೆ ಒಳಿತು ನೀಡುವಂತೆ ಚಾಮುಂಡೇಶ್ವರಿ ಆಶೀರ್ವಾದ ಕೇಳಿದರೆ ಎಲ್ಲರಿಗೂ ಶುಭವಾಗಲಿದೆ ಎಂಬ ನಂಬಿಕೆಯಿಂದ ದಸರಾ ಮಹೋತ್ಸವದ ಉದ್ಘಾಟನೆಗೆ ಆಹ್ವಾನಿಸಲಾಗಿದೆ’’ ಎಂದು ತಿಳಿಸಿದರು.
‘‘ಅವರನ್ನು ಪ್ರತಿಯೊಬ್ಬ ಮಾನವ ಜೀವನಕ್ಕೆ ಬೇಕಿರುವುದು ತಾಯಿ ಹೃದಯ. ಅಂತೆಯೆ ಅವರು ಕೊಡಗಿನಲ್ಲಿ ನೊಂದ ಜೀವಗಳ ನೋವಿಗೆ ಮರುಗಿ ವೇದಿಕೆಯಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಬೆಂಗಳೂರು ಮೆಟ್ರೊ ರೈಲ್ವೆ ಯೋಜನೆಗೆ 200 ಕೋಟಿ ರೂ. ನೀಡಿದ್ದಾರೆ. ಕಳೆದ ವಾರ ಪೊಲೀಸ್ ಇಲಾಖೆಯ ಸೈಬರ್ ಕ್ರೈಮ್ ವಿಭಾಗವನ್ನು ಮೇಲ್ದರ್ಜೆಗೇರಿಸಲು 22 ಕೋಟಿ ರೂ.ಗಳನ್ನು ರಾಜ್ಯ ಸರಕಾರದ ಗೃಹ ಇಲಾಖೆಗೆ ನೀಡಿದ್ದಾರೆ. ಹೆಬ್ಬಾಳ ಕೆರೆಗೆ 38 ಕೋಟಿ ರೂ.ಗಳನ್ನು ನೀಡಿದ್ದಾರೆ. ಅಲ್ಲದೆ ಇದೇ ಕೆರೆ ಅಭಿವೃದ್ಧಿಗೆ ಹೆಚ್ಚುವರಿಯಾಗಿ ದೀಗ 15 ಕೋಟಿ ರೂ. ನೀಡಿದ್ದಾರೆ. ತನ್ಮೂಲಕ ಹೃದಯ ವೈಶಾಲ್ಯತೆ ಇದ್ದರೆ ನಾಡು ಕಟ್ಟಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ’’ ಎಂದು ಶ್ಲಾಘಿಸಿದರು.
‘‘ಸುಧಾಮೂರ್ತಿ ಅವರು ಇಂದು ಚಾಮುಂಡೇಶ್ವರಿ ಬಳಿ ತಮ್ಮ ಸಂಸ್ಥೆ ಸಂಸ್ಥೆ ಬೆಳವಣಿಗೆ ಕೇಳಿಲ್ಲ. ರಾಜ್ಯದ ಜನರ ಒಳತಿಗಾಗಿ ಪ್ರಾರ್ಥಿಸಿದ್ದಾರೆ. ಇದು ಅವರಲ್ಲಿರುವ ತಾಯಿ ಹೃದಯದ ಪ್ರತೀಕ. ಸುಧಾಮೂರ್ತಿ ಅವರನ್ನು ಆಯ್ಕೆ ಮಾಡಿರುವುದು ಮಹಿಳೆಯರಿಗೆ ನೀಡಿರುವ ಗೌರವವಾಗಿದೆ’’ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401