ದಿನದ ಸುದ್ದಿ
ಮಕ್ಕಳ ಮನಸ್ಸಿಗೆ ಮುದ ನೀಡಿದ ‘ನವ್ಯರಾಗ’
ಸುದ್ದಿದಿನ,ದಾವಣಗೆರೆ : ನಿನ್ನೆ (ಜುಲೈ 29) ಗೋಪನಾಳು ಇಂದಿರಾಗಾಂಧಿ ವಸತಿ ಶಾಲೆಯ ಆವರಣದ ತುಂಬ ಎಲ್ಲೆಲ್ಲೂ ಮಧುರ ನಿನಾದದ ಅಲೆ ಹರಡಿತ್ತು. ಮಕ್ಕಳ ಮುಖದಲ್ಲ್ಲಿ ಸಂತಸದ ನಗೆ ಹೊಮ್ಮಿತ್ತು. ಆ ಇಂಪಾದ ರಾಗಾಲಾಪನೆಯ ನವ್ಯರಾಗ ಮಕ್ಕಳಲ್ಲಿ ಹೊಸತು ಸಾಧನೆಯ ಸ್ಫೂರ್ತಿಗೂ ಕಾರಣವಾಯಿತು.
ಭಕ್ತಿಗೀತೆ, ಭಜನೆ, ಸುಗಮ ಸಂಗೀತ, ಗಮಕ ಕಲೆ ಇತ್ಯಾದಿ ಪ್ರಕಾರಗಳಲ್ಲಿ ಬಾಲ್ಯದಿಂದಲೂ ಸಂಗೀತ ಕ್ಷೇತ್ರದಲ್ಲಿ ಮಧುರ ಗಾಯಕಿ ಎಂದೇ ಗುರುತಿಸಿಕೊಂಡಿರುವ ಹರಿಹರದ ನವ್ಯಾ ಆರ್ ಭಟ್ ಅವರು ಅಂದು ಇಂದಿರಾಗಾಂಧಿ ವಸತಿ ಶಾಲೆಗೆ ಆಗಮಿಸಿ ಮಕ್ಕಳಿಗೆ ಸಂಗೀತದ ರಸದೌತಣ ನೀಡಿದರು.
ಕೆಲವು ಭಕ್ತಿಗೀತೆ ಮತ್ತು ಭಾವಗೀತೆಗಳನ್ನು ಹಾಡಿ ರಂಜಿಸುವ ಜೊತೆ ಗುರು ಬ್ರಹ್ಮ ಗುರು ವಿಷ್ಣು,,, ತಾಯಿ ಶಾರದೆ ಲೋಕಪೂಜಿತೆ,,, ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ಎಂಬಿತ್ಯಾದಿ ಗೀತೆಗಳನ್ನು ಮಕ್ಕಳಿಗೂ ಹೇಳಿಕೊಟ್ಟರು.
ತಮ್ಮ ಸಂಗೀತ ಕಲೆ ವಿಕಲ ಚೇತನ ಮಕ್ಕಳು ಹಾಗೂ ರೋಗಿಗಳ ಆರೋಗ್ಯ ಹಾಗೂ ಮಾನಸಿಕ ಸ್ಥಿತಿಯ ಸುಧಾರಣೆಗೆ ಬಳಕೆಯಾಗಬೇಕೆಂಬ ಸದುದ್ದೇಶ ಹೊಂದಿರುವ ಅವರು ಯಾವ ಸಂಭಾವನೆಯ ಆಪೇಕ್ಷೆ ಇಲ್ಲದೆ ಅಂದು ಆಗಮಿಸಿ ಮಕ್ಕಳ ಜೊತೆ ಕಾಲ ಕಳೆದು ತೆರಳಿದರು.
ಮನೆಯಿಂದ ಹೊರತಾಗಿ ವಸತಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಪದೇ ಪದೇ ಮನೆ ಮತ್ತು ಬಂಧುಗಳ ನೆನಪಾಗುವುದು ಸಹಜ. ಇದು ಕಲಿಕೆಯ ಹಿನ್ನಡೆಗೆ ಕಾರಣವಾಗುವುದಷ್ಟೇ ಅಲ್ಲದೆ ಮಕ್ಕಳ ಮನಸ್ಸಿನ ಮೇಲೂ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ. ಆದರೆ ಇಂತಹ ಸದಭಿರುಚಿಯ ಸಾಂಸ್ಕøತಿಕ ವಾತಾವರಣ ನಿರ್ಮಿಸಿಕೊಡುವುದರಿಂದ ಮಕ್ಕಳು ಕಲಿಕೆಯಲ್ಲಿ ಉತ್ಸಾಹ ಹೊಂದುತ್ತಾರೆ. ಹಾಗಾಗಿ ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಹುರುಪು ತುಂಬುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವ ನಮ್ಮ ಪರಿಶ್ರಮಕ್ಕೆ ಸಹಕರಿಸಲು ಕೋರಿ ನಾವು ಆಹ್ವಾನಿಸಿದ ಮೇರೆಗೆ ಇಂದು ಆಗಮಿಸಿದ ಗಾಯಕಿ ನವ್ಯಾ ಭಟ್ ಅವರ ಸಹಕಾರ ಶ್ಲಾಘನೀಯ ಎಂದು ಪ್ರಶಂಸಿದ ಶಾಲೆಯ ಪ್ರಾಚಾರ್ಯರಾದ ವಿ.ಸಿ ಅಂಜಿನಪ್ಪ ಶಾಲೆಯ ಪರವಾಗಿ ನವ್ಯಾ ಅವರನ್ನು ಅಭಿನಂದಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401